ಗಾನ ನಮನ
Team Udayavani, Feb 18, 2017, 7:29 AM IST
ಗುರುವಾಯನಕೆರೆ ಹವ್ಯಕ ಸಭಾ ಭವನದಲ್ಲಿ ಶ್ರೀ ಪುರಂದರ ದಾಸರ ಹಾಗೂ ಶ್ರೀ ತ್ಯಾಗರಾಜರ ಸಂಸ್ಮರಣೆ ನಿಮಿತ್ತ ಈಚೆಗೆ ಗಾನ ನಮನ ಕಾರ್ಯಕ್ರಮ ನಡೆಯಿತು. ಈ ಸಮಾರಂಭದಲ್ಲಿ ತಾಲೂಕಿನ ಎಲ್ಲ ಸಂಗೀತ ಶಿಕ್ಷಕರು, ಕಲೋಪಾಸಕರು, ವಿದ್ಯಾರ್ಥಿಗಳು ಕಲೆತು ಗಾನ ನಮನಗೈದರು. ಉತ್ತರಾರ್ಧದಲ್ಲಿ ಗಾನಕೇಸರಿ ವಿ| ಕುದ್ಮಾರು ಎಸ್. ವೆಂಕಟ್ರಾಮನ್ ಅವರಿಂದ ಉನ್ನತ ಮಟ್ಟದ ಸಂಗೀತ ಕಛೇರಿ ನಡೆಯಿತು. ವಯಲಿನ್ನಲ್ಲಿ ಟಿ.ಜಿ. ಗೋಪಾಲ ಕೃಷ್ಣನ್, ಮೃದಂಗದಲ್ಲಿ ಸುನಿಲ್ ಸುಬ್ರಹ್ಮಣ್ಯ ಹಾಗೂ ಮೋರ್ಸಿಂಗ್ನಲ್ಲಿ ಬಾಲಕೃಷ್ಣ ಹೊಸಮನೆ ಕಛೇರಿಗೆ ಕಳೆ ತಂದುಕೊಟ್ಟರು.
ಪೂರ್ಣಚಂದ್ರಿಕ ರಾಗದಲ್ಲಿ ಸ್ವಂತ ರಚನೆ ಉರುವಾರುಕ ಕ್ಷೇತ್ರಾಧಿಪ, ಜಯ ಮನೋಹರಿ ರಾಗದಲ್ಲಿ ಶ್ರೀರಮ್ಯ ಚಿತ್ತ, ಸಿಂಧುಕನ್ನಡ ರಾಗದಲ್ಲಿ ನನ್ನು ಗನ್ನ ತಲ್ಲಿ, ರಾಮಪ್ರಿಯ ರಾಗದ ಸ್ವಂತ ರಚನೆ ಶ್ರೀರಾಮಪ್ರಿಯ, ಜನರಂಜನಿಯಲ್ಲಿ ಅಂಬಾ ಪಾಹಿ ರಾಜೇಶ್ವರೀ, ಆರಭಿಯ ಓ ರಾಜೀವಾಕ್ಷ, ಅಭೋಗಿಯಲ್ಲಿ ಅಪರಾಧಿ ನಾನಲ್ಲ, ಕೋಕಿಲ ಪ್ರಿಯ ರಾಗದ ದಾಶರಥೆ, ಹಿಂದೋಳ ರಾಗ ದಲ್ಲಿ ಸ್ವಂತ ರಚನೆ ದಯ ದೀದ್ ತೂಲ ಮತ್ತು ಭೈರವಿ ಕೃತಿಯೊಂದಿಗೆ ಕಛೇರಿ ಸಂಪನ್ನಗೊಂಡಿತು. ಕುದ್ಮಾರು ಅವರ ಗಾನಾಭಿವ್ಯಕ್ತಿ ಕಿವಿಗೆ ಹೇಗೆ ಸುಮಧುರವೋ ಅಂತೆಯೇ ಅವರ ಹಾವಭಾವದ ಮೂಲಕ ಒಂದು ದಿವ್ಯವಾದ ಸೌಂದರ್ಯದ ವರ್ತುಲ ನಿರ್ಮಾಣವಾಗುತ್ತದೆ.
ಸಂಸ್ಕಾರ ಭಾರತಿ ಹಳೆಕೋಟೆ ಇವರ ಆಶ್ರಯದಲ್ಲಿ ಪ್ರತೀ ವರುಷವು ಇಂತಹ ಶ್ರೇಷ್ಠ ಕಾರ್ಯಕ್ರಮಗಳು ಮೂಡಿ ಬರುತ್ತಿವೆ.
ಎ.ಡಿ. ಸುರೇಶ್