ಬೀದಿ ಬದಿಗೆ ಕಲೆಯ ಬಲೆ
Team Udayavani, Mar 24, 2017, 3:50 AM IST
ನಗರಗಳ ಬೀದಿಗೋಡೆಗಳೆಂದರೆ ಕೇವಲ ಜಾಹೀರಾತುಗಳ, ಕೋಮು ಪ್ರಚೋದನೆಗಳ ಪೋಸ್ಟರ್ಗಳಿಗೆ ಸೀಮಿತವಾದುದಲ್ಲ, ಅದನ್ನು ಕಲಾತ್ಮಕ ಭಿತ್ತಿಯಾಗಿ ಪರಿವರ್ತಿಸಬಹುದೆಂಬುದನ್ನು ಮಂಗಳೂರಿನ ರಾಮಕೃಷ್ಣ ಮಠದ ಏಕಗಮ್ಯಾನಂದ ಮಹಾರಾಜ್ ಮತ್ತು ಆದಿತತ್ವ ಕಲಾತಂಡ ಸಾಬೀತು ಪಡಿಸಿದೆ.
ನಗರದ ಸೊಬಗು ಹೆಚ್ಚಾಗಬೇಕಾದರೆ ನಗರದ ಭಿತ್ತಿಗಳು ಅಂದವಾಗಿ ಶೃಂಗಾರಗೊಂಡಿರಬೇಕು. ಮಂಗಳೂರು ನಗರದ ವೆನ್ಲಾಕ್ ಆಸ್ಪತ್ರೆ ಹಾಗೂ ಸರಕಾರಿ ಕಾಲೇಜಿನ ಮುಂಭಾಗದ ಗೋಡೆಗಳಲ್ಲಿ ಕಲಾವಿದ ವಿಕ್ರಮ್ ಶೆಟ್ಟಿ ಹಾಗೂ ಶೈಲೇಶ್ ಕೋಟ್ಯಾನ್ ನೇತೃತ್ವದ ಆದಿತತ್ವ ಕಲಾತಂಡವು ಬಣ್ಣಗಳ ತೋರಣ ಕಟ್ಟಿ ವಿಶೇಷ ಮೆರುಗನ್ನು ನೀಡಿದೆ. ಮಹಾಲಸ ಕಲಾಶಿಕ್ಷಣ ಸಂಸ್ಥೆಯ ಸೌಮ್ಯಾ ಭಟ್, ಕಮಿಲ್ರಾಜ್, ಶರತ್ ಕುಲಾಲ್, ಶಾಶ್ವತ್ ಕಿಣಿ ಹಾಗೂ ಇನ್ನೊಂದಷ್ಟು ಯುವ ಕಲಾವಿದರು ಈ ಭಿತ್ತಿಬಣ್ಣದ ಸಂಭ್ರಮದಲ್ಲಿ ಕುಂಚ, ವರ್ಣಗಳನ್ನೆಳೆದವರು. ತುಳುನಾಡಿನ ಸಂಸ್ಕೃತಿ, ಪದ್ಧತಿ, ಪ್ರಕೃತಿಯ ವಿವಿಧ ಪ್ರಕಾರಗಳನ್ನು ಈ ಗೋಡೆಯಲ್ಲಿ ಬಣ್ಣಗಳಲ್ಲಿ ಚಿತ್ರಿಸಿ ರಸ್ತೆಯನ್ನು ಕಲಾತ್ಮಕವಾಗಿ ಅನಾವರಣಗೊಳಿಸಿದುದರಿಂದ ಈ ರಸ್ತೆಯು ಶುಚಿತ್ವದ ಹೊದಿಕೆಯಿಂದ ಕಂಗೊಳಿಸುತ್ತಿದೆ. ತುಳುನಾಡಿನ ಯಕ್ಷಗಾನ, ಕಂಬಳ, ದೈವಾರಾಧನೆ, ಗುತ್ತಿನಮನೆ, ಮೀನುಗಾರಿಕೆ ಮುಂತಾದ ವಿಷಯಗಳೇ ಇಲ್ಲಿನ ಗೋಡೆಗಳಲ್ಲಿ ಕಲಾಕೃತಿಗಳಾಗಿವೆ. ನೀರು, ಕಾಡು, ನದಿ, ಪಶ್ಚಮಘಟ್ಟದ ಬಗ್ಗೆ ಅರಿವು, ಜಾಗೃತಿ ಮೂಡಿಸುವಂತಹ ಚಿತ್ತಾರಗಳೂ ಇವೆ. ಜತೆಗೆ ಮದ್ಯಪಾನ ಮಾಡದಂತೆ, ಪರಿಸರ ಮಾಲಿನ್ಯವಾಗದಂತೆ ಒಂದಷ್ಟು ಎಚ್ಚರಿಕೆಯ ಹಿತವಾಕ್ಯಗಳು, ಸಂದೇಶಗಳು ಗೋಡೆಯನ್ನಲಂಕರಿಸಿವೆ. ಬಾಲಕಾರ್ಮಿಕರ ಶೋಷಣೆ, ಶಬ್ದಮಾಲಿನ್ಯ, ಶಿಕ್ಷಣ ವಂಚಿತ ಬಾಲಕರು, ನೀರು ಪೋಲಾಗದಂತೆ ಜಾಗೃತಿ ವಹಿಸಬೇಕಾದಂತಹ ವಿಚಾರಗಳು ಕಲಾಕೃತಿಗಳಿಗೆ ಪೂರಕವಾಗುವಂತೆ ಹೊಂದಾಣಿಕೆಯಲ್ಲಿವೆ.
ಈ ಒಂದು ರಸ್ತೆ ಸುವ್ಯವಸ್ಥೆ-ಶುಚಿತ್ವಕ್ಕೆ ಮಾದರಿಯಾಗಿದ್ದು ನಗರದ ಎಲ್ಲ ರಸ್ತೆಗಳ ಭಿತ್ತಿಗಳೂ ಇದೇ ರೀತಿ ಚಿತ್ತಾರಗಳ ಶೃಂಗಾರವಾದರೆ ಸ್ವತ್ಛ ಭಾರತವೆಂಬ ಪರಿಕಲ್ಪನೆಯು ಸಾರ್ಥಕಗೊಂಡು ಫಲಪ್ರದವಾದೀತು. ಕಲಾವಿದ ವಿಕ್ರಮ್ ಶೆಟ್ಟಿಯವರು ಈ ಹಿಂದೆಯೂ ಮಂಗಳೂರಿನ ವಿವಿಧ ಗೋಡೆಗಳಲ್ಲಿ ಶಿಕ್ಷಣಕ್ಕೆ, ಆರೋಗ್ಯಕ್ಕೆ, ಸಮಾಜದ ಸ್ವಾಸ್ಥ್ಯಕ್ಕೆ ಅನುಗುಣವಾಗುವಂತಹ ಚಿತ್ತಾರಗಳನ್ನು ರಚಿಸಿ ತನ್ನ ಕಲಾಪ್ರಜ್ಞೆಯನ್ನು ಅರಳಿಸಿರುವವರು. ಇದೀಗ ಮಿತ್ರ ಶೈಲೇಶ ಕೋಟ್ಯಾನ್ ಜತೆಗೆ ಒಂದಷ್ಟು ಯುವ ಕಲಾವಿದರನ್ನು ಸೇರಿಸಿಕೊಂಡು ಆದಿತತ್ವ ಎಂಬ ಕಲಾ ಸಂಘಟನೆಯನ್ನು ಹುಟ್ಟು ಹಾಕಿ ಮಂಗಳೂರು ಹಾಗೂ ಬೆಂಗಳೂರು ಮಹಾನಗರದ ಗೋಡೆಗಳಲ್ಲಿ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸುವಂತಹ ಹಾಗೂ ಸಮಾಜದ ಒಳಿತಿಗೆ ಪೂರಕವಾಗುವಂತಹ ಕಲಾಕೃತಿಗಳನ್ನು ರಚಿಸಬೇಕೆಂಬ ಯೋಜನೆಯನ್ನು ಹಾಕಿಕೊಂಡಿದ್ದಾರೆ.
ಇದರ ಜತೆಗೆ ಆಡಳಿತ ವರ್ಗ ಈ ಕಲಾತ್ಮಕ ಯೋಜನೆಗೆ ಸ್ಪಂದಿಸದಿದ್ದಲ್ಲಿ ಮತ್ತೆ ಈ ಕಲಾಕೃತಿಗಳ ಮೇಲೆ ಒಂದಷ್ಟು ಪೋಸ್ಟರ್ಗಳು ಆಕ್ರಮಿಸಿಕೊಳ್ಳಬಹುದು. ಆದುದರಿಂದ ನಗರ ಪಾಲಿಕೆಯು ಈ ಭಿತ್ತಿ ಚಿತ್ತಾರಗಳ ಮೇಲೆ ಪೋಸ್ಟರ್ ಹಚ್ಚದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
ದಿನೇಶ್ ಹೊಳ್ಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ