ಇಂದು ಡಾ.ರಾಜ್ 89ನೇ ಹುಟ್ಟುಹಬ್ಬ
Team Udayavani, Apr 24, 2017, 11:19 AM IST
ಇಂದು ಮೇರು ಕಲಾವಿದ ಡಾ.ರಾಜಕುಮಾರ್ ಅವರ 89 ನೇ ಹುಟ್ಟುಹಬ್ಬ. ಅಭಿಮಾನಿಗಳ ಪಾಲಿನ ದೊಡ್ಡ ಹಬ್ಬ. ಬೆಳಗ್ಗೆಯಿಂದಲೇ ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಸಮಾಧಿ ಬಳಿ ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಲಿದ್ದಾರೆ. ರಾಜ್ಕುಟುಂಬ ವರ್ಗ ಕೂಡಾ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಲಿದೆ.
ಇದೇ ವೇಳೆ ಡಾ.ರಾಜಕುಮಾರ್ ಅಭಿಮಾನಿಗಳ ಸಂಘದಿಂದ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದಲ್ಲದೇ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಜ್ ಹುಟ್ಟುಹಬ್ಬ ಆಚರಿಸಲಿದೆ. ಬೆಳಗ್ಗೆ 11 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ರಾಜ್ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಹಿರಿಯ ಕಲಾವಿದೆ ಲಕ್ಷ್ಮೀ ಚಾಲನೆ ನೀಡಲಿದ್ದಾರೆ.
ಶಾಸಕ ಆರ್.ವಿ.ದೇವರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಅಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಪ್ರಧಾನ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವರಾದ ಅನಂತಕುಮಾರ್ ಹಾಗೂ ಕೆ.ಜೆ.ಜಾರ್ಜ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುತ್ತಿದ್ದಾರೆ.
ಡಾ.ರಾಜ್ ಸ್ಮಾರಕ ಬಳಿ ಟಗರು ಮೇಕಿಂಗ್ ವಿಡಿಯೋ ಬಿಡುಗಡೆ
ಡಾ. ರಾಜ್ ಹುಟ್ಟುಹಬ್ಬವಾದ ಇಂದು “ಟಗರು’ ಚಿತ್ರದ ಮೇಕಿಂಗ್ ವೀಡಿಯೋ ಬಿಡುಗಡೆ ಮಾಡುವುದಕ್ಕೆ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಮತ್ತು ನಿರ್ದೇಶಕ ಸೂರಿ ತೀರ್ಮಾನಿಸಿದ್ದಾರೆ. ಜೊತೆಗೆಹಿರಿಯ ನಟ-ನಿರ್ಮಾಪಕ ದ್ವಾರಕೀಶ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಗುತ್ತದೆ.
ಇದರ ಜೊತೆಗೆ, ಶಿವರಾಜಕುಮಾರ್ ಅಭಿಮಾನಿಗಳ ಸಂಘದಿಂದ ಗೋಸೇನೆ ಪ್ರಾರಂಭಿಸಲಾಗುತ್ತದೆ. 10 ಲೋಡ್ ಮೇವನ್ನು ಚಾಮರಾಜನಗರ ಜಿಲ್ಲೆಗೆ ಕಳುಹಿಸಲಾಗುತ್ತದೆ. ಶಿವರಾಜಕುಮಾರ್ ಅವರು ಹಸು-ಕರುವಿಗೆ ಹುಲ್ಲು ತಿನ್ನಿಸುವುದರ ಮೂಲಕ ಚಾಲನೆ ನೀಡಲಿದ್ದಾರೆ.
ಇಂದು ರಾಜ್ಯಪ್ರಶಸ್ತಿ ಪ್ರದಾನ
ಕಳೆದ ವರ್ಷ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮುಂದಿನ ವರ್ಷದಿಂದ ಡಾ.ರಾಜಕುಮಾರ್ ಹುಟ್ಟುಹಬ್ಬದಂದು (ಏ.24) ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಘೋಷಿಸಿದ್ದರು. ಅದರಂತೆ 2016ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಇಂದು ಡಾ.ರಾಜ್ಕುಮಾರ್ ಹುಟ್ಟುಹಬ್ಬದಂದು ನಡೆಯಲಿದೆ. ವಸಂತನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಿಎಂ ಪ್ರಶಸ್ತಿ ನೀಡಲಿದ್ದಾರೆ.
ಇಂದು ರಾಜ್ಕುಮಾರ ಟಿಕೆಟ್ನಲ್ಲಿ ರಿಯಾಯಿತಿ
ಪುನೀತ್ ರಾಜಕುಮಾರ್ ಅವರ “ರಾಜ್ಕುಮಾರ’ ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಡಾ.ರಾಜ್ಕುಮಾರ್ ಹುಟ್ಟುಹಬ್ಬ ಪ್ರಯುಕ್ತ “ರಾಜ್ಕುಮಾರ’ ಚಿತ್ರತಂಡ ಪ್ರೇಕ್ಷಕರಿಗೆ ಟಿಕೆಟ್ ಬೆಲೆಯಲ್ಲಿ ಶೇ 50 ರಿಯಾಯಿತಿ ನೀಡುವ ಮೂಲಕ ಸಿನಿಮಾವನ್ನು ಮತ್ತಷ್ಟು ಮಂದಿಗೆ ತಲುಪಿಸಲು ಹೊರಟಿದೆ. ಇಂದು “ರಾಜ್ಕುಮಾರ’ ಚಿತ್ರದ ಎಲ್ಲಾ ಪ್ರದರ್ಶನಗಳ ಟಿಕೆಟ್ ಬೆಲೆಯಲ್ಲೂ ಶೇ.50 ರಿಯಾಯಿತಿ ನೀಡಿದೆ.
ಇದು ರಾಜ್ಯದ ಎಲ್ಲಾ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ಅನ್ವಯಿಸಲಿದ್ದು, ಮಲ್ಟಿಪ್ಲೆಕ್ಸ್ಗಳಿಗೆ ಮಾತ್ರ ಇದು ಅನ್ವಯವಾಗುವುದಿಲ್ಲ. ಅಭಿಮಾನಿಗಳಿಗೆ ರಾಜ್ ಹುಟ್ಟುಹಬ್ಬ ದಿನ ರಿಯಾಯಿತಿ ದರದಲ್ಲಿ ಸಿನಿಮಾ ತೋರಿಸುವ ಬಗ್ಗೆ ಮಾತನಾಡುವ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು, “ಡಾ.ರಾಜ್ ಅವರ ಆದರ್ಶಗಳನ್ನಿನ್ನಿಟ್ಟುಕೊಂಡು ನಾವು “ರಾಜ್ಕುಮಾರ’ ಸಿನಿಮಾ ಮಾಡಿದ್ದೇವೆ. ಇಂದು ರಾಜ್ ಅವರ ಹುಟ್ಟುಹಬ್ಬ. ಅವರ ಆದರ್ಶವನ್ನು ಅಭಿಮಾನಿಗಳು ಮೈಗೂಡಿಸಿಕೊಳ್ಳಬೇಕೆಂಬ ಉದ್ದೇಶದಿಂದ ಟಿಕೆಟ್ ಬೆಲೆಯಲ್ಲಿ ಶೇ 50 ರಿಯಾಯಿತಿ ನೀಡಿದ್ದೇವೆ’ ಎನ್ನುತ್ತಾರೆ.