ರವಿ ಶ್ರೀವತ್ಸ ನಿರ್ದೇಶನದ ಚಿತ್ರದಲ್ಲಿ ರಾಗಿಣಿ!
Team Udayavani, Jul 25, 2017, 3:40 PM IST
ರಾಗಿಣಿ ಅಭಿನಯದ ಒಂದಿಷ್ಟು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಕಾಯುತ್ತಿದೆ. “ಮುಸ್ಸಂಜೆ’ ಮಹೇಶ್ ನಿರ್ದೇಶನದ “ನಾನೇ ನೆಕ್ಸ್ಟ್ ಸಿಎಂ’, ಪ್ರದೀಪ್ ರಾಜ್ ನಿರ್ದೇಶನದ “ಕಿಚ್ಚು’, ಜೀತು ನಿರ್ದೇಶನದ “ಹುಲಿದೇವರ ಕಾಡು’ ಸೇರಿದಂತೆ ಕೆಲವು ಚಿತ್ರಗಳು ಮುಗಿದಿವೆ. ಆದರೆ, ಅದ್ಯಾಕೋ ಆ ಚಿತ್ರಗಳ ಬಿಡುಗಡೆಗೆ ಮುಹೂರ್ತ ಕೂಡಿಬರುತ್ತಿಲ್ಲ.
ಹೀಗಿರುವಾಗಲೇ, ರಾಗಿಣಿ ಹೊಸದೊಂದು ಚಿತ್ರವನ್ನು ಒಪ್ಪಿಕೊಂಡಿರುವ ಸುದ್ದಿ ಬಂದಿದೆ. ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ರವಿ ಶ್ರೀವತ್ಸ. ರವಿ ಶ್ರೀವತ್ಸ ಚಿತ್ರಗಳೆಂದರೆ ಗೊತ್ತಲ್ಲ, ಪಕ್ಕಾ ಕಮರ್ಷಿಯಲ್ ಅಲ್ಲದೆ ಔಟ್ ಆ್ಯಂಡ್ ಔಟ್ ಮಾಸ್ ಚಿತ್ರಗಳಾಗಿರುತ್ತವೆ. ಈಗ ಅಂಥದ್ದೇ ಇನ್ನೊಂದು ಚಿತ್ರವನ್ನು ರವಿ, ರಾಗಿಣಿ ಅಭಿನಯದಲ್ಲಿ ಶುರು ಮಾಡಲಿದ್ದಾರೆ ಎಂಬ ಸುದ್ದಿ ಇದೆ. ಈ ಚಿತ್ರವನ್ನು ಹಿರಿಯ ನಿರ್ಮಾಪಕ ಎಂ.ಎನ್. ಕುಮಾರ್ ಅವರ ಮಗ ಯೋಗೀಶ್ ಕುಮಾರ್ ನಿರ್ಮಿಸುತ್ತಿದ್ದಾರೆ. ಇನ್ನು ಚಿತ್ರಕ್ಕೆ ಕಥೆ, ಚಿತ್ರಕಥೇ ಮತ್ತು ಸಂಭಾಷಣೆಯನ್ನು ರವಿ ಶ್ರೀವತ್ಸ ಅವರೇ ಬರೆದು ನಿರ್ದೇಶಿಸುತ್ತಿದ್ದಾರೆ.
ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆದಿದ್ದು, ರವಿ ಮತ್ತು ಯೋಗೀಶ್ ಕುಮಾರ್ ಅವರ ಇನ್ನೊಂದು ಚಿತ್ರ “ಟೈಗರ್ ಗಲ್ಲಿ’ ಬಿಡುಗಡೆಯಾದ ನಂತರ, ಇದು ಸೆಟ್ಟೇರುವ ಸಾಧ್ಯತೆ ಇದೆ.