ಭಟ್ಟರಿಗೆ ದೆವ್ವ ಹಿಡಿದಿದೆಯಾ!
Team Udayavani, Jul 27, 2017, 11:59 AM IST
“ಈ ಭಟ್ರಿಗೆ ದೆವ್ವ ಹಿಡಿದಿದೆಯಾ? ಅವರೇನು ಲೂಸ್ ಆಗಿದ್ದಾರಾ? ಅವರ ಮೇಡಮ್ಗೆ ಫೋನ್ ಮಾಡಿ ವಿಚಾರಿಸ್ಲಾ? …’ ಹೀಗೆ ನೂರು ಯೋಚನೆ ಬಂತಂತೆ ಗಣೇಶ್ಗೆ. ಅದಕ್ಕೆ ಕಾರಣ, “ಮುಗುಳು ನಗೆ’ ಚಿತ್ರಕ್ಕೆ ಯೋಗರಾಜ್ ಭಟ್ ಅವರು ಬರೆದ ಟೈಟಲ್ ಸಾಂಗ್. ಈ ಹಾಡು ಕೇಳಿ, ಫುಲ್ ಖುಷಿಯಾಗಿರುವ ಗಣೇಶ್, ಹಾಡಿನ ಸಾಲುಗಳನ್ನು ಪದೇಪದೇ ನೆನಪಿಸಿಕೊಳ್ಳುತ್ತಾರೆ.
ಕಣ್ಣಾಲಿಯಾ ಜಲಪಾತವಾ ಬಂಧಿಸಲು ನೀ ಯಾರು?
ನೀ ಮಾಡುವಾ ನಗೆಪಾಟಲು ಖಂಡಿಸಲು ನಾ ಯಾರು?
ಸಂತೋಷಕು, ಸಂತಾಪಕು ಇರಲಿ ಬಿಡು ಒಂದೇ ಬೇರು
ಕಂಗಳಲಿ ಬಂದಾ ಮಳೆಗೆ
ಕೊಡೆ ಹಿಡಿವ ಆಸೆಯೆ ನಿನಗೆ
ಅತ್ತು ಬಿಡು ಒಮ್ಮೆ ಜೊತೆಗೆ
ನಗಬೇಡ ಹೀಗೆ …
ಈ ಸಾಲುಗಳನ್ನು ಉದಾಹಿರಸುವ ಅವರು, “ಯೋಗರಾಜ್ ಭಟ್ ಯಾವಾಗಲೂ ಹೇಳುತ್ತಿರುತ್ತಾರೆ, ಟಪ್ಪಾಂಗುಚ್ಚಿ ಹಾಡುಗಳನ್ನು ಬರೆಯೋದು ಸುಲಭ, ಮೆಲೋಡಿ ಹಾಡುಗಳನ್ನು ಬರೆಯೋದು ಕಷ್ಟ ಅಂತ. ಅವರು ಹೇಳುವ
ಪ್ರಕಾರ, ಮೆಲೋಡಿ ಹಾಡು ಬರೆಯುವುದು, ಒಟ್ಟಿಗೆ 12 ಮಕ್ಕಳನ್ನು ಹೆತ್ತಷ್ಟು ಕಷ್ಟವಂತೆ. ಆದರೂ ಬಹಳ ಚೆನ್ನಾಗಿ ಬರೆದಿದ್ದಾರೆ. ಇನ್ನು ಹರಿ ಬಹಳ ಚೆಂದ ಟ್ಯೂನ್ ಕೊಟ್ಟಿದ್ದಾರೆ. ಸಾಮಾನ್ಯವಾಗಿ ವಕೌಟ್ ಮಾಡಿದಾಗ ಫಾಸ್ಟ್ ಹಾಡುಗಳನ್ನು ಕೇಳುತ್ತಾರೆ. ನಾನಂತೂ ಈ ಹಾಡನ್ನ ಪದೇಪದೇ ಕೇಳುತ್ತಿದ್ದೀನಿ’ ಎನ್ನುತ್ತಾರೆ ಗಣೇಶ್.
ಅಂದಹಾಗೆ, ಗಣೇಶ್ ಮಾತಾಡಿದ್ದು ಚಿತ್ರದ ಟೈಟಲ್ ಸಾಂಗ್ ಬಿಡುಗಡೆಯ ಸಂದರ್ಭದಲ್ಲಿ. ಬುಧವಾರ ಈ ಹಾಡನ್ನು ಅನಂತ್ನಾಗ್, ಜಯಂತ್ ಕಾಯ್ಕಿಣಿ ಮತ್ತು ಮನೋಮೂರ್ತಿ ಬಿಡುಗಡೆ ಮಾಡಿದರು. ಇದು ಬಿಡುಗಡೆಯಾಗುತ್ತಿರುವ
ಚಿತ್ರದ ಐದನೇ ಹಾಡು. ಇದಕ್ಕೂ ಮುನ್ನ “ಹೊಡಿ ಒಂಭತ್ತ್ …’ ಎಂಬ ಹಾಡು ಹುಬ್ಬಳ್ಳಿಯಲ್ಲಿ, “ರೂಪಸಿ …’ ಎಂಬ ಎರಡನೆಯ ಹಾಡನ್ನು ಗಣೇಶ್ ಪತ್ನಿ ಶಿಲ್ಪ ಹುಟ್ಟುಹಬ್ಬದ ಸಂದರ್ಭದಲ್ಲಿ, “ನಿನ್ನಾ ಸ್ನೇಹ ದಿಂದ …’ ಎಂಬ ಹಾಡನ್ನು ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ, “ಕೆರೆ ಏರಿ ಮೇಲೆ …’ ಎಂಬ ನಾಲ್ಕನೆಯ ಹಾಡನ್ನು ಕೋರಮಂಗಲದ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಬಿಡುಗಡೆ ಮಾಡಲಾಗಿದೆ.
ಈಗ ಐದನೇ ಹಾಡನ್ನು ಬಿಡುಗಡೆ ಮಾಡಲಾಗಿದ್ದು, 30ಕ್ಕೆ ದೊಡ್ಡ ಸಮಾರಂಭ ಮಾಡಿ, ಹಾಡುಗಳನ್ನು ಬಿಡುಗಡೆ ಮಾಡಲಾಗುತ್ತದಂತೆ.