ಶುಕ್ರವಾರ ಸಂಯುಕ್ತಾ ನಟನೆಯ “ಕಾಫಿ ತೋಟ’ ಮತ್ತು ಮಾರಿಕೊಂಡವರು ರಿಲೀಸ್
Team Udayavani, Aug 17, 2017, 5:53 PM IST
ಆಗಾಗ ನಟ-ನಟಿಯರಿಗೆ ಈ ತರಹದ ಸಂದರ್ಭ ಎದುರಾಗುತ್ತಲೇ ಇರುತ್ತದೆ. ಈ ಹಿಂದೆ ಮುರುಳಿ, ವಿಜಯರಾಘವೇಂದ್ರ ಅವರಿಗೆ ಇಂತಹ ಸಂದರ್ಭ ಎದುರಾಗಿತ್ತು. ಈಗ ಸಂಯುಕ್ತಾ ಹೊರನಾಡು ಅವರಿಗೂ ಆ ತರಹದ ಒಂದು ಸಂದರ್ಭ ಬಂದಿದೆ. ಅಷ್ಟಕ್ಕೂ ಆ ಸಂದರ್ಭ ಏನೆಂದರೆ ಒಂದೇ ದಿನ ಸಂಯುಕ್ತಾ ನಟಿಸಿದ ಎರಡು ಸಿನಿಮಾ ಬಿಡುಗಡೆಯಾಗುತ್ತಿವೆ. ಹಾಗಾಗಿ, ಸಂಯುಕ್ತಾಗೆ ಡಬಲ್ ಖುಷಿ. ಹೌದು, ಈ ವಾರ ಸಂಯುಕ್ತಾ ಹೊರನಾಡು ನಟಿಸಿರುವ “ಕಾಫಿ ತೋಟ’ ಹಾಗೂ “ಮಾರಿಕೊಂಡವರು’ ಚಿತ್ರ ಈ ಶುಕ್ರವಾರ ತೆರೆಕಾಣುತ್ತಿದೆ. ಎರಡೂ ಸಿನಿಮಾಗಳಲ್ಲೂ ಸಂಯುಕ್ತಾಗೆ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ.
ಟಿ.ಎನ್.ಸೀತಾರಾಂ ನಿರ್ದೇಶನದ “ಕಾಫಿ ತೋಟ’ದಲ್ಲಿ ಸಂಯುಕ್ತಾ ಲಾಯರ್ ಆಗಿ ನಟಿಸಿದ್ದು, ಇದೊಂದು ಒಳ್ಳೆಯ ಅನುಭವಂತೆ. ಇನ್ನು, “ಮಾರಿಕೊಂಡವರು’ ಚಿತ್ರದಲ್ಲಿ ಸಂಯುಕ್ತಾ, “ಲಕ್ಷ್ಮೀ’ ಎಂಬ ಪಾತ್ರ ಮಾಡಿದ್ದು, ತುಂಬಾ ದ್ವಂದ್ವ ಇರುವ ಪಾತ್ರವಂತೆ. ಬಾಡಿ ಲಾಂಗ್ವೇಜ್ನಲ್ಲೇ ಎಲ್ಲವನ್ನು ಹೇಳುವಂತಹ ಪಾತ್ರವಾದ್ದರಿಂದ ಇದೊಂದು ವಿಭಿನ್ನ ಅನುಭವ ಕೊಟ್ಟಿದೆ ಎನ್ನುವುದು ಸಂಯುಕ್ತಾ ಮಾತು.
ಎರಡೂ ಚಿತ್ರಗಳನ್ನು ಜನ ಇಷ್ಟಪಡುತ್ತಾರೆಂಬ ನಂಬಿಕೆ ಸಂಯುಕ್ತಾ ಅವರಿಗಿದೆ. ಟಿ.ಎನ್.ಸೀತಾರಾಂ ಅವರ “ಕಾಫಿ ತೋಟ’ ಒಂದು ಸಸ್ಪೆನ್ಸ್-ಥ್ರಿಲ್ಲರ್ ಚಿತ್ರವಾದರೆ, “ಮಾರಿಕೊಂಡವರು’, ದೇವನೂರು ಮಹಾದೇವ ಅವರ ಮೂರು ಕಥೆಗಳ ಸಂಗಮ. ಹಾಗಾಗಿ, ಎರಡು ವಿಭಿನ್ನ ಚಿತ್ರಗಳಲ್ಲಿ ನಟಿಸಿದ ಖುಷಿ ಸಂಯುಕ್ತಾ ಅವರಿಗಿದೆ.