ಮತ್ತೆ ಬಣ್ಣ ಹಚ್ಚಲಿರುವ ರಮ್ಯ
Team Udayavani, Sep 20, 2017, 10:33 AM IST
ಕಳೆದ ಕೆಲವು ವರ್ಷಗಳಿಂದ ಚಿತ್ರರಂಗದಿಂದ ದೂರವೇ ಉಳಿದಿರುವ ರಮ್ಯ ಮತ್ತೆ ಬಣ್ಣ ಹಚ್ಚುವ ಸಾಧ್ಯತೆ ಇದೆ. ರಮ್ಯ ಅವರನ್ನು ವಾಪಸ್ಸು ಕರೆತರುವ ಪ್ರಯತ್ನ ಮಾಡುತ್ತಿರುವುದು ನಾಗಶೇಖರ್. ರಮ್ಯ ಅವರನ್ನು ಕರೆತರುತ್ತಿರುವುದು, “ನವೆಂಬರ್ನಲ್ಲಿ ನಾನು ಅವಳು’ ಚಿತ್ರಕ್ಕಲ್ಲ. “ಮಹೇಂದರ್ ಮನಸ್ಸಲ್ಲಿ ಮಮ್ತಾಜ್’ ಎಂಬ ಹೊಸ ಚಿತ್ರಕ್ಕೆ. ಇದುವರೆಗೂ ನಟ ಮತ್ತು ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ನಾಗಶೇಖರ್, ಇದೀಗ ನಿರ್ಮಾಪಕರಾಗುತ್ತಿದ್ದಾರೆ.
ಈ ಚಿತ್ರದಲ್ಲಿ ರಮ್ಯ ಅವರಿಗೆ ಒಂದು ವಿಶೇಷ ಪಾತ್ರವಿದ್ದು, ಅವರನ್ನು ಮನವೊಲಿಸಿ ವಾಪಸ್ಸು ಕರೆದುಕೊಂಡು ಬರವ ವಿಶ್ವಾಸದಲ್ಲಿದ್ದಾರೆ ನಾಗಶೇಖರ್. ಹಾಗಂತ ಚಿತ್ರವನ್ನು ನಿರ್ದೇಶಿಸುತ್ತಿರುವುದು ಅವರಲ್ಲ, ನಿರ್ದೇಶಕ ಎಸ್. ಮಹೇಂದರ್. ಮಹೇಂದರ್ ಹೇಳಿದ ಒಂದು ಕಥೆ ಕೇಳಿ ಫಿದಾ ಆಗಿರುವ ನಾಗಶೇಖರ್, ಆ ಕಥೆಯನ್ನು ಇಟ್ಟುಕೊಂಡು ಚಿತ್ರ ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ.
ನಿರ್ದೇಶನದ ಜವಾಬ್ದಾರಿಯನ್ನು ಎಸ್. ಮಹೇಂದರ್ ಅವರಿಗೇ ವಹಿಸಿದ್ದಾರೆ. ಈಗಾಗಲೇ ಈ ಕಥೆಯನ್ನು ಗಣೇಶ್ ಅವರಿಗೆ ಹೇಳಲಾಗಿದ್ದು, ಅವರು ನಟಿಸುವ ಸಾಧ್ಯತೆ ಇದೆ. ಇನ್ನು ಅವರಿಗೆ ನಾಯಕಿಯಾಗಿ ಪಾಕಿಸ್ತಾನದ ನಟಿಯೊಬ್ಬಳು ನಟಿಸುತ್ತಿದ್ದಾಳಂತೆ. ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಈ ಚಿತ್ರದ ಚಿತ್ರೀಕರಣ ಸಕಲೇಶಪುರ ಮುಂತಾದ ಕಡೆ ನಡೆಯಲಿದೆ.
ಈ ಚಿತ್ರವು ನಾಗಶೇಖರ್ ಅವರ ಹುಟ್ಟುಹಬ್ಬವಾದ ನವೆಂಬರ್ 11ರಂದು ಪ್ರಾರಂಭವಾಗಲಿದ್ದು, ಈ ಚಿತ್ರದಲ್ಲಿ ನಾಗಶೇಖರ್ ಅವರ ತಂಡದ ಖಾಯಂ ಸದಸ್ಯರೆನಿಸಿಕೊಂಡಿರುವ ಛಾಯಾಗ್ರಾಹಕ ಸತ್ಯ ಹೆಗಡೆ, ಸಂಕಲನಕಾರ ಜೋ.ನಿ. ಹರ್ಷ, ಕಲಾ ನಿರ್ದೇಶಕ ಅರುಣ್ ಸಾಗರ್ ಇಲ್ಲೂ ಮುಂದುವರೆದಿದ್ದಾರೆ. ಇನ್ನು ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದು, ಚಿತ್ರದ ಇತರೆ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದೆ.