ಕನ್ನಡ ಹೀರೋಗಳ ಪರದೇಸಿ ವ್ಯಾಮೋಹ!


Team Udayavani, Oct 21, 2017, 2:05 PM IST

21-STATE-29.jpg

ಒಳ್ಳೇ ಹೀರೋಯಿನ್‌ ಹುಡುಕ್ತಿದ್ದೀವಿ- ನಿರ್ಮಾಪಕ
ತಮಿಳು, ತೆಲುಗಿಂದ ಯಾರನ್ನಾದರೂ ಕರ್ಕಂಡ್‌ ಬರೋಣ- ನಿರ್ದೇಶಕ
ಹಿಂದಿ ಹೀರೋಯಿನ್ಸ್‌ ಸಿಗ್ತಾರಾ ನೋಡ್ರೀ – ಹೀರೋ
ನಮ್‌ ಹೀರೋಗಳಿಗೆ ಇದ್ದಕ್ಕಿದ್ದ ಹಾಗೆ ಪರದೇಸಿ ವ್ಯಾಮೋಹ ಶುರುವಾಗಿದೆ. ಈ ಫ‌ರಂಗಿ ಕಾಯಿಲೆ ಎಷ್ಟರ ಮಟ್ಟಿಗೆ ವ್ಯಾಪಿಸಿದೆ ಎಂದರೆ ಕನ್ನಡದ ನಾಯಕಿಯರನ್ನು ಹಾಕ್ಕೊಳ್ಳೋಣ ಅಂದರೆ ಹೆಚ್ಚಿನ ಹೀರೋಗಳು ಒಪ್ಪೋದೇ ಇಲ್ಲ. ನಮೆನಿಲ್ಲ ಸಾರ್‌, ಹೀರೋ ಹೇಳಿದ್ದಾರೆ ಅಂತ ನಿರ್ದೇಶಕರು ಕೈ ಚೆಲ್ಲುತ್ತಾರೆ. ನಮ್‌ ಹೀರೋಯಿನ್ಸು ಗಾಂಚಲಿ ಮಾಡ್ತಾರೆ ಅಂತ ನಿರ್ಮಾಪಕರು ಗುಟ್ಟಾಗಿ ದೂರುತ್ತಾರೆ. ಅಲ್ಲಾ ಸಾರ್‌, ಹೊರಗಡೆಯಿಂದ ಕರ್ಕಂಡ್‌ ಬಂದ್ರೆ ಕಿರಿಕ್‌ ಮಾಡಲ್ಲ, ಪ್ರೊಫೆಷನಲ್ಲಾಗಿರ್ತಾರೆ ಅಂತ ಇನ್ಯಾರೋ ಗೊಣಗುತ್ತಾರೆ.ಅದು ಯಾರ ನಿರ್ಧಾರವೋ ಗೊತ್ತಿಲ್ಲ. ಕನ್ನಡದ ಹುಡುಗಿಯರಿಗೆ ಇಲ್ಲಿ ಕೆಲಸ ಸಿಗುವುದಿಲ್ಲ. ಒಂದೆರಡು ಸಿನಿಮಾಗಳ ನಂತರ ಅವರತ್ತ ತಿರುಗಿಯೂ ನೋಡದ ಹೀರೋಗಳಿದ್ದಾರೆ. ಹಾಗಂತ ಹೀರೋಯಿನ್ನುಗಳೇ ಮುಖ್ಯ. ಅದ್ಭುತ ಪಾತ್ರ ಅಂತೇನೂ ಅಲ್ಲ.  ಪರಭಾಷೆ ಹೀರೋಯಿನ್ನು ಕರಕೊಂಡು ಬರೋದು ಹೀರೋಗಳಿಂದ ಹಿಡಿದು ನಿರ್ಮಾಪಕರ ತನಕ ಪ್ರಸ್ಟೀಜ್‌ ಪ್ರಶ್ನೆಯಂತೆ. ಈ ಬಿಳಿತೊಗಲಿನ ವ್ಯಾಮೋಹಿಗಳ ನಡುವೆ ಕನ್ನಡದ ನಟಿಯರು ಕಂಗಾಲಾಗಿದ್ದಾರೆ.

ಇತ್ತೀಚೆಗೆ ಶುರುವಾದ ಎಲ್ಲಾ ಸಿನಿಮಾಗಳಲ್ಲೂ ತೆಲುಗು, ತಮಿಳು ನಾಯಕಿಯರೇ. ಲೆಕ್ಕಹಾಕುತ್ತಾ ಹೋದರೆ 20 ಪ್ಲಸ್‌ ಪರಭಾಷಾ ನಾಯಕಿಯರು ಬಂದಿದ್ದಾರೆ. ಬರುತ್ತಲೇ ಇದ್ದಾರೆ.
ಯಾಕೆ ಹೀಗೆ?
ಈ ವರದಿ ಓದಿ

ಎಲ್ಲಿಂದಲೋ ಬಂದವರು…!
ಕನ್ನಡದಲ್ಲಂತೂ ಈಗ ಪರಭಾಷೆ ನಟಿಯರೇ ತುಂಬಿಕೊಂಡಿದ್ದಾರೆ. ದಿನ ಕಳೆದಂತೆ ಅವರ ಆಗಮನವಾಗುತ್ತಲೇ ಇದೆ. ಕಳೆದ ಐದಾರು ತಿಂಗಳ ಬೆಳವಣಿಗೆಯನ್ನು ಗಮನಿಸಿದರೆ, ಇಲ್ಲಿನ ಬಹುತೇಕ ಸ್ಟಾರ್ ಸಿನಿಮಾಗಳಲ್ಲಿ ಹೊರಗಿನ ಬೆಡಗಿಯರ ಗೆಜ್ಜೆ ಸದ್ದೇ ಜಾಸ್ತಿಯಾಗಿದೆ. ಎಷ್ಟೇ ಆಗಲಿ, ಕನ್ನಡಿಗರದ್ದು ವಿಶಾಲ ಹೃದಯ. ಇಲ್ಲಿ ಎಲ್ಲರಿಗೂ ಜಾಗ ಕೊಡ್ತಾರೆ. ಎಲ್ಲರನ್ನೂ ಪ್ರೀತಿಯಿಂದ ನೋಡಿಕೊಳ್ತಾರೆ. ಹಾಗೆ, ಸಿನಿಮಾ ವಿಷಯದಲ್ಲೂ ಸಹ ಕನ್ನಡಿಗರು ಹೊರಗಿನಿಂದ ಬಂದಂತಹ ಅತಿಥಿ ನಟಿಯರನ್ನೆಲ್ಲಾ ಪ್ರೀತಿಯಿಂದ ನೋಡಿ, ಶಿಳ್ಳೆ ಹಾಕಿ ಚಪ್ಪಾಳೆಯನ್ನೂ ತಟ್ಟಿದ್ದಾರೆ. ಕನ್ನಡದ ಟಾಪ್‌ ಸ್ಟಾರ್ಗಳಾದ ಶಿವರಾಜ್‌ಕುಮಾರ್‌, ಸುದೀಪ್‌, ದರ್ಶನ್‌,ಪುನೀತ್‌ರಾಜ್‌ಕುಮಾರ್‌, ಯಶ್‌, ಗಣೇಶ್‌ ಸೇರಿದಂತೆ ಪ್ರೇಮ್‌, ದಿಗಂತ್‌, ದುನಿಯಾ ವಿಜಯ್‌ ಹೀಗೆ ಇನ್ನೂ ಅನೇಕ ಸ್ಟಾರ್‌ ನಟರೊಂದಿಗೆ ಪರಭಾಷೆ ನಟಿಯರು ಹೆಜ್ಜೆ ಹಾಕಿದ್ದಾರೆ. ಕನ್ನಡದಲ್ಲಿ ಸ್ಟಾರ್‌ ನಟನೊಬ್ಬ ಚಿತ್ರವೊಂದು ಸೆಟ್ಟೇರುತ್ತಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ, ಆ ಚಿತ್ರಕ್ಕೆ ಪರಭಾಷೆಯ ಸ್ಟಾರ್‌ನಟಿಯೊಬ್ಬರು ಫಿಕ್ಸ್‌ ಆಗಿರುತ್ತಾರೆ ಎಂದರ್ಥ. ಅಂತಹ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಸ್ಟಾರ್‌ ನಟರ ಚಿತ್ರಗಳಿಗೆ ಬಹುತೇಕ ಹೊರಗಿನ ನಟಿಮಣಿಗಳಿಗೆ ಮಣೆ ಹಾಕುವ ವಾಡಿಕೆ ಜೋರಾಗಿಯೇ ಇದೆ. ಅಂಥದ್ದೊಂದು ಜರ್ನಿ ನೋಡಿದಾಗ, ಕನ್ನಡದಲ್ಲಿರುವ ಬಹುತೇಕ ಸ್ಟಾರ್‌ನಟರೊಂದಿಗೆ ಆಮದು ನಟಿಯರ ತಿಲ್ಲಾನ ಸಖತ್‌ ಆಗಿಯೇ ಇದೆ.

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ “ಬೃಂದಾವನ’ ಚಿತ್ರದಲ್ಲಿ ಕಾರ್ತಿಕಾ ನಾಯರ್‌ ನಾಯಕಿಯಾಗಿದ್ದರು. ಮಲಯಾಳಂನ ಹಿರಿಯ ನಟಿ ರಾಧಾ ಅವರ ಮಗಳೀಕೆ. ಕನ್ನಡಕ್ಕೆ ಎಂಟ್ರಿಕೊಟ್ಟ ಮೊದಲ ಸಲವೇ ಸ್ಟಾರ್‌ನಟನೊಂದಿಗೆ ಹೆಜ್ಜೆ ಹಾಕಿದ್ದು ವಿಶೇಷ. ಇನ್ನು, “ಐರಾವತ’ ಚಿತ್ರಕ್ಕೂ ಊರ್ವಶಿ ರೌತೆಲ ಎಂಬ ಮುಂಬೈ ಬೆಡಗಿ ನಾಯಕಿಯಾಗಿದ್ದರು. ಈ ಚಿತ್ರಗಳು ತೆರೆಕಂಡಿದ್ದಾಗಿದೆ. ಈಗ ಚಿತ್ರೀಕರಣದಲ್ಲಿರುವ “ಜಗ್ಗುದಾದ’ ಚಿತ್ರಕ್ಕೆ ದೀಕ್ಷಾ ಸೇs… ನಾಯಕಿ. ಈಕೆ ತೆಲುಗು ಚಿತ್ರರಂಗದ ಬೆಡಗಿ. ಇದು ಕನ್ನಡದ ಮೊದಲ ಚಿತ್ರ. ಇನ್ನಷ್ಟೇ ಚಿತ್ರೀಕರಣಕ್ಕೆ ಚಾಲನೆ ಸಿಗಬೇಕಿರುವ “ಚಕ್ರವರ್ತಿ’ ಚಿತ್ರಕ್ಕೆ ಅಂಜಲಿ ನಾಯಕಿಯಾಗಿದ್ದಾರೆ. ತಮಿಳು ಹಾಗು ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಅಂಜಲಿ ಕೊಂಚ ಮಟ್ಟಿಗೆ ಸುದ್ದಿಯಲ್ಲಿರೋ ನಟಿ. ಇವರಿಗೆ ಇದು ಮೊದಲ ಕನ್ನಡದ ಚಿತ್ರ. ಅಲ್ಲಿಗೆ ದರ್ಶನ್‌ ಅಭಿನಯದ ನಾಲ್ಕೂ ಚಿತ್ರಗಳಿಗೆ ಪರಭಾಷೆ ನಟಿಯರೇ ನಾಯಕಿಯರು ಎಂಬುದನ್ನು ಗಮನಿಸಬೇಕಾದ ಅಂಶ. ಇನ್ನೂ ದರ್ಶನ್‌ ಅಭಿನಯಿಸಿರುವ ಅನೇಕ ಚಿತ್ರಗಳಲ್ಲಿ ಪರಭಾಷೆ ನಟಿಯರು ಬಂದು ನಟಿಸಿ ಹೋಗಿದ್ದಾರೆ. ಅವರನ್ನೆಲ್ಲಾ ಲೆಕ್ಕ ಹಾಕಿದರೆ, ಸಂಖ್ಯೆ ಎರಡಂಕಿ ದಾಟಬಹುದು.

ಸುದೀಪ್‌ ಅಭಿನಯದ ಚಿತ್ರಗಳಲ್ಲೂ ಪರಭಾಷೆ ನಟಿಯರು ಬಂದಿದ್ದಾರೆ. “ಬಚ್ಚನ್‌’ ಚಿತ್ರದಲ್ಲಿ ಕೇರಳದ ಹುಡುಗಿ ಜಾಕಿ ಭಾವನಾ, ಮುಂಬೈ ಬೆಡಗಿ ಪಾರುಲ್‌ ಯಾದವ್‌ ಸ್ಟೆಪ್‌ ಹಾಕಿದ್ದರೆ, “ಕೋಟಿಗೊಬ್ಬ’ ಚಿತ್ರದಲ್ಲಿ ನಿತ್ಯಾಮೆನನ್‌ ಇದ್ದಾರೆ. ಈಗ ಸೆಟ್ಟೇರಲಿರುವ “ಹೆಬ್ಬಲಿ’ ಚಿತ್ರದಲ್ಲಿ ಅಮಲಾ ಪೌಲ್‌ ನಾಯಕಿಯಾಗಿದ್ದಾರೆ. ಕೇರಳದ ಬೆಡಗಿ ಅಮಲಾ ಪೌಲ್‌ ತೆಲುಗು, ಮಲಯಾಳಂ ಹಾಗು ತಮಿಳು ಚಿತ್ರರಂಗದಲ್ಲಿ ತಮ್ಮದೊಂದು ಛಾಪು ಮೂಡಿಸಿದ್ದಾರೆ. ಸುದೀಪ್‌ ಜತೆ ಅಮಲಾ ಪವಲ್‌ಗೆ ಇದು ಮೊದಲ ಕನ್ನಡದ ಚಿತ್ರ.

ಇನ್ನು, ಪುನೀತ್‌ರಾಜ್‌ಕುಮಾರ್‌ ಜತೆ ಸಾಕಷ್ಟು ಪರಭಾಷೆ ನಟಿಯರು ನಟಿಸಿದ್ದಾರೆ. “ರಾಜ್‌’ ದಿ ಶೋ ಮ್ಯಾನ್‌ ಚಿತ್ರದಲ್ಲಿ ನಿಶಾ ಕೊಠಾರಿ ನಟಿಸಿದ್ದರು. ವಾರಣಾಸಿಯ ಈ ಹುಡುಗಿ ತೆಲುಗು, ತಮಿಳು ಹಾಗು ಹಿಂದಿಯಲ್ಲೂ ಸುದ್ದಿ ಮಾಡಿದವಳು. “ಜಾಕಿ’ ಚಿತ್ರದಲ್ಲಿ ಕೇರಳದ ಭಾವನಾ ಕಾಣಿಸಿಕೊಂಡಿದ್ದರು. “ಪವರ್‌’ ಚಿತ್ರದಲ್ಲಿ ತೆಲುಗು ನಟಿ ತ್ರಿಷಾ ಜೋಡಿಯಾಗಿದ್ದರು. “ರಣವಿಕ್ರಮ’ ಚಿತ್ರದಲ್ಲಿ ಕೇರಳದ ಅದಾಶರ್ಮ ನಟಿಸಿದ್ದರು. ತೆಲುಗು, ಹಿಂದಿ ಹಾಗು ತಮಿಳಿನಲ್ಲಿ ನಟಿಸಿದ್ದ ಅದಾ ಶರ್ಮಗೆ “ರಣವಿಕ್ರಮ’ ಮೊದಲ ಕನ್ನಡದ ಚಿತ್ರ. ಈಗ ಚಿತ್ರೀಕರಣದಲ್ಲಿರುವ “ರಾಜಕುಮಾರ’ ಚಿತ್ರಕ್ಕೆ ತಮಿಳಿನ ಪ್ರಿಯಾ ಆನಂದ್‌ ನಾಯಕಿಯಾಗಿದ್ದಾರೆ. ತೆಲುಗು, ತಮಿಳು ಹಾಗು ಹಿಂದಿ ಚಿತ್ರಗಳಲ್ಲಿ ನಟಿಸಿದ್ದ ಪ್ರಿಯಾ ಆನಂದ್‌ಗೆ “ರಾಜಕುಮಾರ’ ಮೊದಲ ಕನ್ನಡ ಚಿತ್ರ.

ವಾರಣಾಸಿಯ ಮತ್ತೂಬ್ಬ ನಟಿ ಶಾನ್ವಿ, ಯಶ್‌ ಅಭಿನಯದ “ಮಾಸ್ಟರ್‌ಪೀಸ್‌’ ಹಾಗು ಚಿರಂಜೀವಿ ಸರ್ಜಾ ಅಭಿನಯದ “ಚಂದ್ರಲೇಖ’ ಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲದೆ, ರಮೇಶ್‌ ಅರವಿಂದ್‌ ನಿರ್ದೇಶನದ, ಗಣೇಶ್‌ ಅಭಿನಯದ “ಗಂಡೆಂದ್ರೆ ಗಂಡು’ ಚಿತ್ರದಲ್ಲೂ ಶಾನ್ವಿ ನಾಯಕಿ ನಟಿಸುತ್ತಿದ್ದಾರೆ.  ಅಷ್ಟೇ ಅಲ್ಲ, ರವಿಚಂದ್ರನ್‌ ಪುತ್ರ ಮನೋರಂಜನ್‌ ಅಭಿನಯದ ‘ಸಾಹೇಬ’ ಚಿತ್ರಕ್ಕೂ ಶಾನ್ವಿ ನಾಯಕಿ ಎಂಬುದು ವಿಶೇಷ. ಈಗಾಗಲೇ ತೆಲುಗು, ತಮಿಳಿನಲ್ಲಿ ಈಗಾಗಲೇ ಜೋರು ಸೌಂಡು ಮಾಡಿರುವ ಶಾನ್ವಿ, ಕನ್ನಡದಲ್ಲೂ ಗಟ್ಟಿಯಾಗಿ ನೆಲೆಯೂರಿದ್ದಾರೆ. ಗಣೇಶ್‌ ಅಭಿನಯದ “ಸ್ಟೈಲ್‌ಕಿಂಗ್‌’ ಚಿತ್ರದಲ್ಲಿ ಮಲಯಾಳಂನ ರಮ್ಯಾ ನಂಬೀಸನ್‌ ನಟಿಸಿದರೆ, “ಬುಗುರಿ’ ಚಿತ್ರದಲ್ಲಿ ಮುಂಬೈ ಬೆಡಗಿ ರಿಚಾಪನಾಯ್‌ ನಟಿಸಿದ್ದರು.

ಶಿವರಾಜ್‌ಕುಮಾರ್‌ ಅಭಿನಯದ “ಸಂತೆಯಲ್ಲಿ ನಿಂತ ಕಬೀರ’ ಚಿತ್ರದಲ್ಲಿ ಸನೂಷಾ ಸಂತೋಷ್‌ ಎಂಬ ಮಲಯಾಳಂ ನಟಿಯು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. “ಶ್ರೀಕಂಠ’ ಚಿತ್ರಕ್ಕೂ ಮಲಯಾಳಂನ ಚಾಂದಿನಿ ಶ್ರೀಧರನ್‌ ನಟಿಸುತ್ತಿದ್ದಾರೆ. ಇವುಗಳ ಜತೆಯಲ್ಲಿ ಶಿವರಾಜ್‌ಕುಮಾರ್‌ ಅಭಿನಯದ “ಸನ್‌ ಆಫ್ ಬಂಗಾರದ ಮನುಷ್ಯ’ ಚಿತ್ರದಲ್ಲೂ ಮಲಯಾಳಂನ ವಿದ್ಯಾ ಪ್ರದೀಪ್‌ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ನೂರು ಚಿತ್ರಗಳಲ್ಲಿ ಕಾಮಿಡಿಯನ್‌ ಆಗಿಯೇ ಗುರುತಿಸಿಕೊಂಡಿದ್ದ ಶರಣ್‌, ಹೀರೋ ಆಗಿ ಗುರುತಿಸಿಕೊಂಡಿರೋದು ಹೊಸ ಕಥೆ ಅಲ್ಲ. ಆದರೆ, ಅವರು ಹೀರೋ ಆಗಿ ನಟಿಸಿರುವ ಬಹುತೇಕ ಚಿತ್ರಗಳಲ್ಲಿ ಪರಭಾಷೆ ನಟಿಯರು ನಟಿಸಿದ್ದಾರೆ ಎಂಬುದು ಸುದ್ದಿ. ಅವರ “ಅಧ್ಯಕ್ಷ’ ಚಿತ್ರಕ್ಕೆ ಮುಂಬೈನ ಹೀಬಾ ಪಟೇಲ್‌ ನಾಯಕಿಯಾಗಿದ್ದರು. “ವಿಕ್ಟರಿ’ ಚಿತ್ರದಲ್ಲಿ ಶಿಮ್ಲಾ ಮೂಲದ ಅಸ್ಮಿತಾ ಸೂದ್‌ ನಟಿಸಿದ್ದರು. ಈಗ “ರಾಜ್‌ವಿಷ್ಣು’ ಚಿತ್ರದಲ್ಲಿ ಮರಾಠಿ ಬೆಡಗಿ ವೈಭವಿ ಶಾಂಡಿಲ್ಯ ನಟಿಸಲಿದ್ದಾರೆ.

ಪ್ರೇಮ್‌ ಅಭಿನಯದ “ಚಂದ್ರ’ ಚಿತ್ರದ ಮೂಲಕ ತೆಲುಗು, ತಮಿಳು ನಟಿ ಶ್ರಿಯಾಸರಣ್‌ ಬಂದಿದ್ದರು. “ಮಸ್ತ್ಮೊಹಬ್ಬತ್‌’ ಚಿತ್ರಕ್ಕೆ ಮಲಯಾಳಂನ ಪೂನಂ ಭಾಜ್ವ ಕಾಣಿಸಿಕೊಂಡಿದ್ದರು. ಹೊಸಬರ “ಪ್ರೀತಿಯಲ್ಲಿ ಸಹಜ’ ಚಿತ್ರದಲ್ಲೂ ಕಾಶ್ಮೀರಿ ಚೆಲುವೆ ಅಕ್ಸಾಭಟ್‌ ಎಂಬ ಹುಡುಗಿ ನಾಯಕಿಯಾಗಿದ್ದರು. ಪ್ರಜ್ವಲ್‌ ದೇವರಾಜ್‌ ಅಭಿನಯದ  “ನೀನಾದೆ ನಾ..’ ಚಿತ್ರದಲ್ಲೂ ನಾರ್ತ್‌ ಇಂಡಿಯನ್‌ ಬೆಡಗಿ ಪ್ರಿಯಾಂಕ ಖಂಡ್ವಾಲ್‌ ನಟಿಸಿದ್ದರು. ಇದಷ್ಟೇ ಅಲ್ಲ, “ಉಪ್ಪಿ-2′ ಚಿತ್ರದಲಿ ಉಪೇಂದ್ರ ಅವರೊಂದಿಗೆ  ವಿದೇಶಿ ಬೆಡಗಿ ಕ್ರಿಸ್ಟಿನಾ ಅಕೀವಾ ನಟಿಸಿದ್ದರು. ಕೋಮಲ್‌ ಅಭಿನಯದ ಕೆಲ ಚಿತ್ರಗಳಲ್ಲೂ ಪರಭಾಷೆ ನಟಿಯರಿದ್ದರು. ಅದರಲ್ಲೂ “ಗೋವಿಂದಾಯ ನಮಃ’ ಚಿತ್ರದ ಮೂಲಕ ಬಂದ ಮುಂಬೈನ ಪಾರುಲ್‌ ಯಾದವ್‌, ಇಲ್ಲೇ ಗಟ್ಟಿ ನೆಲೆ ಕಂಡಿದ್ದನ್ನಿಲ್ಲಿ ಗಮನಿಸಬೇಕು. ಈಗಷ್ಟೇ ಸೆಟ್ಟೇರಿರುವ ಸೆಟ್ಟೇರಬೇಕಿರುವ ಸ್ಟಾರ್‌ ಚಿತ್ರಗಳಲ್ಲೂ ಪರಭಾಷೆ ನಟಿಯರು ನಟಿಸುವುದು ಪಕ್ಕಾ ಆಗಿದೆ.

ಈ ಸುದ್ದಿಯನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿದರೆ, ಇಲ್ಲಿ ನಟಿಸಿರುವ ಪರಭಾಷೆ ನಟಿಯರೆಲ್ಲರೂ ಬಹುತೇಕ ಸ್ಟಾರ್ನೊಂದಿಗೆ ಕಾಣಿಸಿಕೊಂಡಿರುವುದೇ ಹೆಚ್ಚು. ಆದರೆ, ಹೊರಗಿನಿಂದ ಬಂದ ಅವರೆಲ್ಲರೂ ರಿಪೀಟ್‌ ಆಗಿರುವುದು ತುಂಬಾ ಕಡಿಮೆ ಎಂಬುದನ್ನಿಲ್ಲಿ ಗಮನಿಸಲೇಬೇಕು. ಸದ್ಯಕ್ಕೆ ಕಣ್ಣಿಗೆ ಕಾಣುವ ಹಾಗು, ಇತ್ತೀಚೆಗಷ್ಟೇ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಪರಭಾಷೆ ನಟಿಯರ ಸುದ್ದಿ ಇದು. ಇನ್ನು ಆನೇಕ ನಟರ, ಯುವ ನಟರ ಹಾಗು ಹೊಸಬರ ಚಿತ್ರಗಳಲ್ಲಿ ಅದೆಷ್ಟೂ ಪರಭಾಷೆ ನಟಿಯರು ಬಂದು ನಟಿಸುತ್ತಿದ್ದಾರೋ ಗೊತ್ತಿಲ್ಲ. ಹಾಗೊಮ್ಮೆ ಎಲ್ಲವನ್ನೂ ಲೆಕ್ಕ ಮಾಡಿದರೆ, ಬರೋಬ್ಬರಿ ಪರಭಾಷೆ ನಟಿಯರ ಸಂಖ್ಯೆ 50 ರ ಗಡಿ ಮುಟ್ಟಿದರೆ ಅಚ್ಚರಿ ಇಲ್ಲ!

ಇಲ್ಲಿಂದ ಹೋಗಿ ಅಲ್ಲಿ  ಬಿಜಿಯಾದವರು…
ಕೆಲವೊಮ್ಮೆ ಅಂಥದ್ದೊಂದು ಪವಾಡಗಳು ನಡೆಯುತ್ತವೆ. ಅದೂ ಚಿತ್ರರಂಗದಲ್ಲಿ ಆಗೋದು ತುಂಬಾ ಕಡಿಮೆಯೇ. ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌ನಟಿ ಎನಿಸಿಕೊಂಡವರು. ಒಮ್ಮೆ ಇದ್ದಕ್ಕಿದ್ದಂತೆಯೇ ಪರಭಾಷೆಯಲ್ಲಿ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು, ಅಲ್ಲೇ ಸಾಕಷ್ಟು ಬಿಜಿಯಾದಂತಹ ಉದಾಹರಣೆಗಳು ಸಾಕಷ್ಟಿವೆ. ಹಾಗೆ ಅಂತಹ ಕೆಲವರನ್ನು ಹೆಸರಿಸುವುದಾದರೆ, ಪ್ರಣೀತಾ ಅಪ್ಪಟ ಕನ್ನಡದ ಹುಡುಗಿ ಅವರು, ಇಲ್ಲಿ ದರ್ಶನ್‌, ದುನಿಯಾ ವಿಜಯ್‌, ಉಪೇಂದ್ರ, ಅಜೇಯ್‌ರಾವ್‌, ಗಣೇಶ್‌, ಪ್ರಜ್ವಲ್‌ ಸೇರಿದಂತೆ ಇತರೆ ನಟರೊಂದಿಗೆ ನಟಿಸಿ ಸುದ್ದಿಯಾದವರು. ಕನ್ನಡದಲ್ಲಿ ಬಿಜಿಯಾಗಿದ್ದರೂ, ಅವರಿಗೆ ಪರಭಾಷೆ ಕೈ ಬೀಸಿ ಕರೆಯಿತು. ಅಲ್ಲೂ ಒಂದು ಕೈ ನೋಡಿ ಬರೋಣ ಅಂತ ಬಲಗಾಲಿಟ್ಟು ಹೋದ ಪ್ರಣೀತಾ, ಅಲ್ಲಿನ ಸ್ಟಾರ್‌ ನಟರೊಂದಿಗೆ ಸ್ಟೆಪ್‌ ಹಾಕಿ ಅಲ್ಲೇ ಸೆಟ್ಲ ಆಗಿಬಿಟ್ಟರು. ಸದ್ಯಕ್ಕೆ ತೆಲುಗು ಹಾಗು ತಮಿಳಿನಲ್ಲಿ ಪ್ರಣೀತಾ ಬಿಜಿ. ಹಾಗೆ ನೋಡಿದರೆ, ಕನ್ನಡದ ಹುಡುಗಿ ಪ್ರಣೀತಾ, ಕನ್ನಡಕ್ಕಿಂತ ಪರಭಾಷೆಯಲ್ಲೇ ಹೆಚ್ಚು ಬಿಜಿಯಾಗಿರೋದು ನಿಜ. ಇಲ್ಲಿ ಅವಕಾಶವಿದೆಯಾದರೂ, ಇಲ್ಲಿ ಬಂದು ಮಾಡುವಷ್ಟರ ಮಟ್ಟಿಗೆ ಫ್ರೀ ಅವರಿಲ್ಲ. ಇಲ್ಲಿಂದ ಅನ್ಯ ಭಾಷೆಯ ಚಿತ್ರರಂಗಕ್ಕೆ ಹೋಗಿ ಜಾಗ ಮಾಡಿಕೊಳ್ಳುವುದಿದೆಯಲ್ಲ ಅದು ನಿಜಕ್ಕೂ ಹರಸಾಹಸವೇ ಸರಿ.

ಕೃತಿಕರಬಂದ ಎಂಬ ಮುದ್ದು ಮೊಗದ ಚೆಲುವೆ ಕೂಡ ಕನ್ನಡದಲ್ಲೇ ಇದ್ದವರು. ಇಲ್ಲಿ ಅವರು ಬಿಜಿಯಾಗಿದ್ದಂತೂ ಹೌದು, ಶಿವರಾಜ್‌ಕುಮಾರ್‌, ಯಶ್‌, ಚಿರಂಜೀವಿ ಸರ್ಜಾ, ಉಪೇಂದ್ರ, ಪ್ರಜ್ವಲ್‌, ಪ್ರೇಮ್‌, ದುನಿಯಾ ವಿಜಯ್‌, ನೆನಪಿರಲಿ ಪ್ರೇಮ್‌ ಹೀಗೆ ಕನ್ನಡದಲ್ಲಿ ಹದಿಮೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಗುರುತಿಸಿಕೊಂಡಿದ್ದ ಕೃತಿಕರಬಂದ ಈಗಲೂ ಕನ್ನಡದಲ್ಲಿ ಬಿಜಿ ನಟಿಯೇ. ಆದರೆ, ಪರಭಾಷೆ ಕೃತಿಯ ಅಂದವನ್ನು ನೋಡಿದ್ದೇ ತಡ, ಕೈ ಬೀಸಿತು. ಸಿಕ್ಕ ಅವಕಾಶವನ್ನು ಕಣ್ಣಿಗೊತ್ತಿಕೊಂಡ ಕೃತಿಕರಬಂದ, ಅತ್ತ ತಮ್ಮ ಹೆಜ್ಜೆ ಇಟ್ಟರು. ಈಗ ಟಾಲಿವುಡ್‌, ಕಾಲಿವುಡ್‌, ಮಾಲಿವುಡ್‌ ಹಾಗು ಬಾಲಿವುಡ್‌ನ‌ಲ್ಲೂ ಕೃತಿ ಬಿಜಿ. ಸದ್ಯಕ್ಕೆ ನಾಲ್ಕು ಭಾಷೆಯ ಚಿತ್ರಗಳಲ್ಲೂ ನಟಿಸುವ ಮೂಲಕ ತಮ್ಮ ಸಿನಿಜರ್ನಿಯನ್ನು ಮುಂದುವರೆಸಿದ್ದಾರೆ.

ಕನ್ನಡದ ಸಹೋದರಿ ನಟಿಯರು ಎನಿಸಿಕೊಂಡಿರುವ ಸಂಜನಾ ಗಾರ್ಲಾನಿ ಹಾಗು ನಿಕ್ಕಿ ಗಾರ್ಲಾನಿ ಕೂಡ ಈಗ ಮಲಯಾಳಂ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಹೆಚ್ಚು ಓಡಾಡುತ್ತಿದ್ದಾರೆ. ಸಂಜನಾ “ಗಂಡ ಹೆಂಡತಿ’ ಬಳಿಕ ಜೋರು ಸುದ್ದಿ ಮಾಡಿದ್ದೇನೋ ನಿಜ. ಆದರೆ, ಅದಾದ ಮೇಲೆ ಸಂಜನಾ ಪವಾಡ ಅಷ್ಟಾಗಿ ನಡೆಯಲಿಲ್ಲ. ಎಲ್ಲೋ ಒಂದಷ್ಟು ಕನ್ನಡದ ಚಿತ್ರಗಳಲ್ಲಿ ಕಾಣಿಸಿಕೊಂಡರಾದರೂ, ಅವರಿಗೆ ಹೆಚ್ಚು ಜಾಗ ಸಿಕ್ಕಿದ್ದು, ತೆಲುಗು ಇಂಡಸ್ಟ್ರಿಯಲ್ಲಿ. ಈಗಲೂ ಸಹ ಸಂಜನಾ, ಟಾಲಿವುಡ್‌ ಹಾಗು ಸ್ಯಾಂಡಲ್‌ವುಡ್‌ ಎರಡನ್ನೂ ನಂಬಿಕೊಂಡಿದ್ದಾರೆ. ಅಲ್ಲಿ ಸಿಕ್ಕರೆ ಅಲ್ಲಿ, ಇಲ್ಲಿ ಸಿಕ್ಕರೆ ಇಲ್ಲಿ ಎಂಬಂತೆ ಎರಡು ಇಂಡಸ್ಟ್ರಿಯಲ್ಲೂ ಕಾಲಿಟ್ಟು, ಸೇಫ್ ಗೇಮ್‌ ಆಡುತ್ತಿದ್ದಾರೆ. 

ಇವರ ಸಹೋದರಿ ನಿಕ್ಕಿ ಗಾರ್ಲಾನಿ ಕನ್ನಡದಲ್ಲಿ ಗಟ್ಟಿ ನೆಲೆ ಕಾಣುತ್ತಾರೆ ಎಂದೇ ಹೇಳಲಾಗಿತ್ತು. ಯಾಕೆಂದರೆ, ಅಕ್ಕನಿಗಿಂತಲೂ ಸೌಂದರ್ಯವತಿ. ಮಾತಲ್ಲೂ ಅಷ್ಟೇ ಚಾಣಾಕ್ಷೆ. ನಟನೆಯಲ್ಲೂ ಅಲ್ಲಗಳೆಯುವಂತಿಲ್ಲ. ಕನ್ನಡದ “ಅಜಿತ್‌’ ಚಿತ್ರದ ಬಳಿಕ ನಿಕ್ಕಿಯನ್ನು ಒಂದಷ್ಟು ಚಿತ್ರಗಳು ಹುಡುಕಿ ಬಂದದ್ದೇನೋ ನಿಜ. ಆದರೆ, ನಿಕ್ಕಿ ಒಪ್ಪಿದ್ದು ಮಾತ್ರ “ಜಂಬೂ ಸವಾರಿ’ಯಷ್ಟೇ. ಅದು ಬಿಟ್ಟರೆ, “ಸಿದ್ಧಾರ್ಥ’ ಚಿತ್ರದಲ್ಲಿ ಗೆಸ್ಟ್‌ ಆಗಿ ಕಾಣಿಸಿಕೊಂಡರು. “ಪರವಶನಾದೆನು’ ಎಂಬ ಚಿತ್ರದಲ್ಲಿ ನಟಿಸಿದರೂ ಆ ಚಿತ್ರ ರಿಲೀಸ್‌ ಆಗುವ ಸೂಚನೆ ನೀಡಲಿಲ್ಲ. ಆದರೆ, ನಿಕ್ಕಿ ಮಾತ್ರ ಕನ್ನಡ ನಂಬಿ ಕೂರಲಿಲ್ಲ. ಮೊದಲಿನಿಂದಲೂ ನಿಕ್ಕಿಗೆ ಮಲಯಾಳಂ ಚಿತ್ರರಂಗ ಗೊತ್ತು. ಅವರು ತಮ್ಮ ಸಿನಿ ಜರ್ನಿ ಶುರುಮಾಡಿದ್ದೇ ಮಲಯಾಳಂ ಚಿತ್ರದಿಂದ. ಸೋ, ಅಲ್ಲಿ ಯಥೇತ್ಛವಾಗಿ ಅವಕಾಶ ಹುಡುಕಿ ಬಂದವು. ಅತ್ತ, ತೆಲುಗು, ತಮಿಳಿನಿಂದಲೂ ನಿಕ್ಕಿಗೆ ಅವಕಾಶ ಹರಿದು ಬಂತು. ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂಬ ಗಾದೆಯ ಮಾತಂತೆ, ನಿಕ್ಕಿ ಅವಕಾಶ ಸಿಕ್ಕೊಡೆ ತೂರಿಕೊಳ್ಳಬೇಕು ಅಂತ ಅತ್ತ ಕಾಲಿಟ್ಟರು. ಅಲ್ಲೇ ಬಿಜಿಯಾದರು.

ಸಂಚಿತಾ ಶೆಟ್ಟಿ ಎಂಬ ಕನ್ನಡದ ಮತ್ತೂಬ್ಬ ನಟಿ ಬಹುಶಃ ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. “ಮುಂಗಾರು ಮಳೆ’ ಚಿತ್ರದ ಹಾಡೊಂದರಲ್ಲಿ ಕುಣಿದು ಕುಪ್ಪಳಿಸಿದ್ದ ಈ ಹುಡುಗಿ ಯಾರ ಕಣ್ಣಿಗೂ ಬೀಳಲಿಲ್ಲ. ಆ ಬಳಿಕ “ಮಿಲನ’ ಚಿತ್ರದಲ್ಲೂ ಒಂದು ಪಾತ್ರ ನಿರ್ವಹಿಸಿದ್ದರು. ಅಲ್ಲು ಸುದ್ದಿಯಾಗಲಿಲ್ಲ. ಸ್ವತಂತ್ರವಾಗಿ “ಉಡ’ ಹಾಗು “ಭಯ ಡಾಟ್‌.ಕಾಮ್‌’ ಎಂಬ ಚಿತ್ರದಲ್ಲೂ ನಟಿಸಿದರೂ ಸಂಚಿತಾಶೆಟ್ಟಿಯನ್ನು ಯಾರೂ “ಕ್ಯಾಮಾ’ ಅನ್ನಲಿಲ್ಲ. ಇನ್ನೂ ರಿಲೀಸ್‌ ಆಗದ “ಬದ್ಮಾಶ್‌’ ಎಂಬ ಚಿತ್ರದಲ್ಲಿ ಸಂಚಿತಾ ಶೆಟ್ಟಿ ಇದ್ದಾರೆ. ಉಳಿದಂತೆ, ಸಂಚಿತಾಶೆಟ್ಟಿ ಒಮ್ಮೆಲೆ ಮುಖ ಮಾಡಿದ್ದು, ತಮಿಳು ಚಿತ್ರರಂಗದತ್ತ, ಅಲ್ಲೊಂದು ಅವಕಾಶ ಕೈ ಬೀಸಿದ್ದೇ ತಡ ಅತ್ತ ಮುಖ ಮಾಡಿದರು. ಒಂದಷ್ಟು ಚಿತ್ರಗಳನ್ನು ಮಾಡುತ್ತಾ ಬಂದ ಅವರು “ಸೂದುಕುವಂ’ ಎಂಬ ಸೂಪರ್‌ಹಿಟ್‌ ತಮಿಳು ಚಿತ್ರದ ಭಾಗವಾದರು. ಆ ಚಿತ್ರ ಸೂಪರ್‌ಹಿಟ್‌ ಆಗಿದ್ದೇ ತಡ, ಸಂಚಿತಾಶೆಟ್ಟಿ ಲೈಫ‌ು ಸೂಪರ್‌ ಆಯ್ತು. ಈಗ ತಮಿಳು, ತೆಲುಗು ಚಿತ್ರಗಳಲ್ಲಿ ಅವರು ಫ‌ುಲ್‌ ಬಿಜಿ.

ಮತ್ತೂಬ್ಬ ಬೆಂಗಳೂರಿನ ಹುಡುಗಿ ನಂದಿತಾ ಶ್ವೇತಾ. ಈ ಹುಡುಗಿ ಹೆಚ್ಚು ಮಂದಿಗೆ ಪರಿಚಯ ಇರಲಿಕ್ಕಿಲ್ಲ. ಯಾಕೆಂದರೆ, ನಂದಿತಾ ಮಾಡಿದ್ದು ಕನ್ನಡದಲ್ಲೇ ಒಂದೇ ಒಂದು ಚಿತ್ರ. ಅದು “ನಂದ ಲವ್ಸ್‌ ನಂದಿತಾ’. ಯೋಗಿ ಚಿತ್ರದ ಹೀರೋ. ಇದು ಶತದಿನ ಕಂಡ ಚಿತ್ರ. ಆದರೆ, ದುರಾದೃಷ್ಟ. ನಂದಿತಾಳನ್ನು ಹುಡುಕಿ ಮತ್ಯಾವುದೇ ಕನ್ನಡ ಚಿತ್ರ ಹುಡುಕಿ ಬರಲಿಲ್ಲ. ಹಾಗಂತ ನಂದಿತಾ ಸುಮ್ಮನೆ ಕೂರಲಿಲ್ಲ. ಕನ್ನಡದಲ್ಲಿ ಅವಕಾಶ ಎದುರು ನೋಡಿದರಾದರೂ, ಇಲ್ಲಿದ್ದರೆ ಭವಿಷ್ಯ ರೂಪಿಸಿಕೊಳ್ಳೋದು ಕಷ್ಟ ಅಂತ ಮನದಟ್ಟು ಮಾಡಿಕೊಂಡು, ಮೆಲ್ಲನೆ ಚೆನ್ನೈಗೆ ಹಾರಿದರು. ನಂದಿತಾ ಶ್ವೇತಾಳ ಅದೃಷ್ಟ ಅಲ್ಲೇ ಇತ್ತು ಅಂತ ಕಾಣುÕತ್ತೆ. ನೋಡ ನೋಡುತ್ತಿದ್ದಂತೆಯೇ ಕನ್ನಡದ ನಂದಿತಾ ತಮಿಳು ಚಿತ್ರಗಳಲ್ಲಿ ಬಿಜಿಯಾಗತೊಡಗಿದರು. ಯಾವ ಕ್ಷಣದಲ್ಲಿ ಕಾಲಿವುಡ್‌ಗೆ ಕಾಲಿಟ್ಟರೋ, ಇಲ್ಲೀತನಕ ನಂದಿತಾ ಬರೋಬ್ಬರಿ ಹದಿನಾಲ್ಕು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ತಮಿಳು ಚಿತ್ರಗಳಲ್ಲಿ ಬಿಜಿ ನಟಿಯಾಗಿಯೂ ಗುರುತಿಸಿಕೊಂಡಿದ್ದಾರೆ.

ಹರಿಪ್ರಿಯಾ ಎಂಬ ಕನ್ನಡತಿ ಕೂಡ ಆರಂಭದಲ್ಲಿ ಇಲ್ಲಿ “ಮನಸುಗಳ ಮಾತು ಮಧುರ’ “ಈ ಸಂಭಾಷಣೆ’ ಚಿತ್ರಗಳಲ್ಲಿ ನಟಿಸಿ ತಕ್ಕಮಟ್ಟಿಗೆ ಸೈ ಎನಿಸಿಕೊಂಡರಾದರೂ, ಇಲ್ಲೇಕೋ ಅವರಿಗೆ ಗೀಟಲಿಲ್ಲ! ಹಾಗಾಗಿ, ಬೇರೆ ಚಿತ್ರರಂಗದಲ್ಲಾದರೂ ಅವಕಾಶ ಸಿಗಬಹುದೇ ಎಂದು ಕಣ್ಣುದಿಟ್ಟಿಸಿ ನೋಡುತ್ತಿದ್ದರು. ಆ ಸಮಯದಲ್ಲೇ ಕನ್ನಡದಲ್ಲಿ ಒಂದಷ್ಟು ಅವಕಾಶಗಳು ಬಂದವು. ಆದರೆ, ಹೇಳಿಕೊಳ್ಳುವಂತಹ ಸಕ್ಸಸ್‌ ಸಿಗಲಿಲ್ಲ. ಮೊದಲೇ ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಪುನಃ ಅವಕಾಶಕ್ಕಾಗಿ ಎದುರು ನೋಡುತ್ತಿದ್ದರು. ಅವಕಾಶ ಸಿಕು¤ ಪುರ್ರನೆ ಹಾರಿದರು. ಮಲಯಾಳಂ, ತೆಲುಗು, ತಮಿಳು ಚಿತ್ರಗಳಲ್ಲಿ ಮಾಡುವ ಮೂಲಕ ಅಲ್ಲೇ ಬಿಜಿಯಾಗಿದ್ದರು. ಈಗ ಪುನಃ ಕನ್ನಡಕ್ಕೆ ಮರಳಿದ್ದಾರೆ. ಸದ್ಯ “ನೀರ್‌ದೋಸೆ’ ಹಾಕುತ್ತಿದ್ದಾರೆ.

ನಿತ್ಯಾಮೆನನ್‌ ಎಂಬ ನಗುಮೊಗದ ಚೆಲುವೆ ಕೂಡ ಕನ್ನಡದವರೇ. ಬೆಂಗಳೂರಲ್ಲಿ ಹುಟಿ ಬೆಳೆದ ನಿತ್ಯಾ ಇಲ್ಲಿ ಐದು ಚಿತ್ರಗಳಲ್ಲಿ ನಟಿಸಿದ್ದಾರೆ. “ಜೋಶ್‌’, “ಮೈನಾ’ ಎಂಬಂತಹ ಶತದಿನದ ಚಿತ್ರ ಕೊಟ್ಟಿದ್ದಾರೆ. ಈಗ ಸುದೀಪ್‌ ಜತೆಯಲ್ಲಿ “ಕೋಟಿಗೊಬ್ಬ-2′ ಚಿತ್ರದಲ್ಲೂ ನಟಿಸಿದ್ದಾರೆ. ಕನ್ನಡದಲ್ಲಿ ಐದಾರು ಚಿತ್ರಗಳಲ್ಲಿ ಮಾತ್ರ ಕಾಣಿಸಿಕೊಂಡ ನಿತ್ಯಾಮೆನನ್‌, ಮಲಯಾಳಂ, ತೆಲುಗು ಹಾಗು ತಮಿಳು ಚಿತ್ರಗಳಲ್ಲಿ ಕಾಣಿಸಿಕೊಂಡಿರುವುದೇ ಹೆಚ್ಚು. ಸದ್ಯಕ್ಕೆ ಮೂರು ಪರಭಾಷೆಗಳಲ್ಲಿ ನಿತ್ಯಾಮೆನನ್‌ ಬಿಜಿ.

ಇಂತಿಪ್ಪ, ಇಲ್ಲಿ ಒಂದಷ್ಟು ಸದ್ದು ಮಾಡಿ, ಸದ್ದು ಮಾಡದೇ ಅಲ್ಲಿಗೆ ಹೋದವರ ಕಥೆ ಇದು. ಕನ್ನಡದವರಾಗಿದ್ದರೂ, ಅಲ್ಲಿ ಗಟ್ಟಿಯಾಗಿ ನೆಲೆ ಕಾಣುತ್ತಿದ್ದಾರೆ. ಹಾಗಂತ ಅವರಿಗೆ ಕನ್ನಡ ಚಿತ್ರರಂಗದ ಮೇಲೆ ಪ್ರೀತಿ ಕಡಿಮೆಯಾಗಿಲ್ಲ. ಅವಕಾಶ ಸಿಕ್ಕರೆ ಈಗಲೂ ಬಂದು ನಟಿಸೋಕೆ ರೆಡಿ. ಆದರೆ, ಅವರು ಫ್ರೀ ಇರಬೇಕಲ್ವಾ?

ಅಲ್ಲಿಂದ ಬಂದು ಇಲ್ಲಿ ಬಿಜಿಯಾದವರು…
ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರೆ ಲೈಫ‌ುಸೂಪರ್‌ ಆಗಿರುತ್ತೆ. ಈ ಮಾತು ಸಿನಿಮಾದವರಿಗಂತೂ ಸರಿಯಾಗಿ ಅನ್ವಯಿಸುತ್ತೆ. ಕನ್ನಡದಲ್ಲಿ ಪರಭಾಷೆ ನಟಿಯರ ಆಗಮನ ಆಗುತ್ತಲೇ ಇರುತ್ತೆ. ಬರ್ತಾರೆ, ನಟಿಸ್ತಾರೆ, ಹೋಗ್ತಾರೆ ಇದು ಕಾಮನ್‌. ಆದರೆ, ಎಲ್ಲಿಂದಲೋ ಬಂದು ಇಲ್ಲಿ, ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು, ಇಲ್ಲೇ ಗಟ್ಟಿಯಾಗಿ ನೆಲೆಯೂರುವುದು ತುಂಬಾ ಕಷ್ಟ. ಆದರೂ, ಇಲ್ಲಿ ಒಂದಷ್ಟು ಪರಭಾಷೆ ನಟಿಯರು ಬಂದು ಸ್ಟಾರ್‌ಗಳ ಜತೆ ಕುಣಿದು, ಕುಪ್ಪಳಿಸುವ ಮೂಲಕ ಇಲ್ಲೇ ಬಿಜಿಯಾಗಿದ್ದಾರೆ. ಶಾನ್ವಿ ಬಗ್ಗೆ ಹೇಳುವುದಾದರೆ, “ಚಂದ್ರಲೇಖ’ ಚಿತ್ರದ ಮೂಲಕ ಕನ್ನಡಕ್ಕೆ ಬಂದರು. ಇಲ್ಲಿನವರ ಮನಗೆದ್ದರು. ಮೆಲ್ಲನೆ ಕನ್ನಡ ಚಿತ್ರಗಳ ಅವಕಾಶ ಪಡೆದರು. ಬಿಜಿಯಾದರು. “ಮಾಸ್ಟರ್‌ಪೀಸ್‌, “ಭಲೇಜೋಡಿ’ ನಂತರ “ಗಂಡೆಂದ್ರೆ ಗಂಡು’ ಹಾಗು “ಸಾಹೇಬ’ ಎಂಬ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇನ್ನೂ ಒಂದಷ್ಟು ಚಿತ್ರಗಳ ಮಾತುಕತೆ ನಡೆಯುತ್ತಿದೆ. ಅಲ್ಲಿಗೆ ವಾರಣಾಸಿ ಬೆಡಗಿ ಇಲ್ಲಿ ಬಿಜಿ.

ಮಲಯಾಳಂ ಬೆಡಗಿ ಭಾವನಾ ಇಲ್ಲಿಗೆ ಬರುವ ಮುನ್ನ ಮಲಯಾಳಂನಲ್ಲಿ ಸ್ಟಾರ್‌ ನಟಿ. ಪುನೀತ್‌ ಜತೆ “ಜಾಕಿ’ ಚಿತ್ರದಲ್ಲಿ ನಟಿಸಿದ್ದೇ ತಡ, ಭಾವನಾ ಫ‌ುಲ್‌ ಬಿಜಿಯಾಗಿಬಿಟ್ಟರು. ಸುದೀಪ್‌ ಜತೆಯಲ್ಲಿ “ವಿಷ್ಣುವರ್ಧನ’, ಉಪೇಂದ್ರ ಅವರೊಂದಿಗೆ “ಟೋಪಿವಾಲ’ ಪುನಃ ಪುನೀತ್‌ ಜತೆ “ಮೈತ್ರಿ’, ಗಣೇಶ್‌ ಜತೆ “ಮಿ.420′, ಈಗ “ಚೌಕ’ ಚಿತ್ರದಲ್ಲೂ ಬಿಜಿ.

ಮುಂಬೈನ ಪಾರುಲ್‌ಯಾದವ್‌ “ಗೋವಿಂದಾಯ ನಮಃ’ ಚಿತ್ರ ಮಾಡಿದ್ದೇ ತಡ, ಅವರಿಗೆ ಅದೃಷ್ಟ ಒಲಿದು ಬಂತು. ಆ ಚಿತ್ರದ ಬಳಿಕ ಬರೋಬ್ಬರಿ 12 ಕನ್ನಡ ಚಿತ್ರಗಳಲ್ಲಿ ನಟಿಸಿದರು. ಈಗಲೂ ಕನ್ನಡದ ಅನೇಕ ಚಿತ್ರಗಳಿಗೆ ಪಾರುಲ್‌ ಸಹಿ ಹಾಕುವ ಮೂಲಕ ಬಿಜಿಯಾಗಿದ್ದಾರೆ. ಇವರೊಂದಿಗೆ ಇನ್ನೂ ಅನೇಕ ಪರಭಾಷೆ ನಟಿಯರು ಬಂದು, ಅಲ್ಲೊಂದು ಇಲ್ಲೊಂದು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರೂ ಇಲ್ಲಿ ಗಟ್ಟಿ ನೆಲೆ ಕಂಡರೆ ಅಚ್ಚರಿ ಇಲ್ಲ.

ಇಲ್ಲೇ ಇದ್ದು ಬಿಜಿಯಾದವರು…
ಕನ್ನಡದ ನಟಿಯರು ಯಾವುದರಲ್ಲೂ ಕಮ್ಮಿ ಇಲ್ಲ ಎಂಬುದನ್ನು ಈಗಾಗಲೆ ಸಾಬೀತುಪಡಿಸಿದ್ದಾರೆ. ಇಲ್ಲಿ ಗಟ್ಟಿನೆಲೆ ಕಂಡುಕೊಂಡಿರುವ ಬೆರಳೆಣಿಕೆ ನಟಿಮಣಿಗಳು, ಬೇರೆ ಕಡೆಯಿಂದ ಅವಕಾಶ ಹುಡುಕಿ ಬಂದರೂ ಅತ್ತ ಹೋಗಿಲ್ಲ ಎಂಬುದೇ ಖುಷಿಯ ವಿಷಯ. ಕಾರಣ, ಇಲ್ಲಿದ್ದುಕೊಂಡೇ ಅವರೆಲ್ಲರೂ ಬಿಜಿಯಾಗಿದ್ದಾರೆ. ಆ ಪೈಕಿ ರಾಧಿಕಾ ಪಂಡಿತ್‌ ಮೊದಲ ಸಾಲಿನಲ್ಲಿ ಕಂಡುಬರುತ್ತಾರೆ. ಆರಂಭದಿಂದಲೂ ಇಂದಿನವರೆಗೂ ಅದೇ ಗೆಲುವನ್ನು ಕಾಪಾಡಿಕೊಂಡು ಬಂದಿರುವ ಇತ್ತೀಚಿನ ದಿನಗಳಲ್ಲಿ ಏಕೈಕ ನಟಿಯೆಂದರೆ ಅದು ರಾಧಿಕಾಪಂಡಿತ್‌. ಕನ್ನಡದ ಬಹುತೇಕ ಸ್ಟಾರ್ ಜತೆಯಲ್ಲೇ ನಟಿಸಿರುವ ಈಗಲೂ ನಟಿಸುತ್ತಿರುವ ರಾಧಿಕಾಪಂಡಿತ್‌, ಸದ್ಯದ ಮಟ್ಟಿಗೆ ಫ‌ುಲ್‌ ಬಿಜಿ ನಟಿ. ಕೊಂಚವೂ ಬಿಡುವಿಲ್ಲದೆ, ಆರಂಭದಿಂದಲೂ ಅದೇ ಬೇಡಿಕೆಯನ್ನು ಉಳಿಸಿಕೊಂಡಿರುವ ನಟಿ ಎಂಬ ಖ್ಯಾತಿ ಪಡೆದಿದ್ದಾರೆ. ಅಮೂಲ್ಯ ವಿಷಯದಲ್ಲೂ ಇದೇ ಮಾತು. ಆಮೂಲ್ಯ ಸಹ ಸ್ಟಾರ್ ನಟರೊಂದಿಗೇ ಸಿನಿಮಾ ಮಾಡಿಕೊಂಡು ಬಂದವರು. ಗೆಲುವು ಕೊಡುತ್ತಲೇ ಇಲ್ಲಿ ಗಟ್ಟಿ ನೆಲೆ ಕಂಡುಕೊಂಡವರು. ಪ್ರಿಯಾಮಣಿ ಕೂಡ ಸ್ಟಾರ್‌ ನಟರ ಜತೆ ನಟಿಸುತ್ತಲೇ ತಮ್ಮ ಛಾಪು ಮೂಡಿಸಿದ್ದಾರೆ. ರಾಗಿಣಿಗೂ ಇದೇ ಮಾತು ಅನ್ವಯಿಸುತ್ತದೆ. ಉಳಿದಂತೆ ಕನ್ನಡದ ನಟಿಯರಾದ ಸಂಯುಕ್ತಾ ಬೆಳವಾಡಿ, ಶ್ರುತಿಹರಿಹರನ್‌, ವೈಶಾಲಿ ದೀಪಕ್‌, ಪೂಜಾಗಾಂಧಿ, ಶುಭಾಪೂಂಜಾ, ಮೇಘನಾರಾಜ್‌, ದುನಿಯಾ ರಶ್ಮಿ, ಮಯೂರಿ, ಸೋನುಗೌಡ, ಶ್ವೇತಾಶ್ರೀವಾತ್ಸವ್‌, ಸುಕೃತಾವಾಗ್ಲೆ, ಈ ನಟಿಯರ ಜತೆಯಲ್ಲಿ ಹೊಸ ನಟಿಯರೆಲ್ಲ ಸಿಕ್ಕ ಸಿಕ್ಕ ಸಿನಿಮಾ ಒಪ್ಪಿಕೊಂಡು, ಇಲ್ಲೇ ಗಟ್ಟಿ ನೆಲೆ ಕಾಣುವ ಉತ್ಸಾಹದಲ್ಲಿದ್ದಾರೆ.

ಇದ್ದೂ  ಇಲ್ಲದಂತಾಗಿರೋರು!
ಕೆಲವೊಮ್ಮೆ ಹಾಗಾಗುತ್ತೆ. ಆರಂಭದಲ್ಲಿದ್ದ ವೇಗ ಒಂದೆರೆಡು ಸಿನಿಮಾ ನಂತರ ಇರೋದೇ ಇಲ್ಲ. ಕನ್ನಡದಲ್ಲಿ ಸಾಕಷ್ಟು ನಟಿಯರಿದ್ದಾರೆ. ಸಣ್ಣಪುಟ್ಟ ಚಿತ್ರಗಳನ್ನು ಮಾಡುತ್ತ, ಸಿಕ್ಕ ಪಾತ್ರಗಳಲ್ಲೇ ತೃಪ್ತಿಪಟ್ಟುಕೊಂಡು ತಕ್ಕಮಟ್ಟಿಗೆ ಗುರುತಿಸಿಕೊಂಡಿರುವ ಅದೆಷ್ಟೋ ಕನ್ನಡದ ನಟಿಯರು ಈಗ ಅಕ್ಷರಶಃ ಅವಕಾಶಗಳಿಂದ ವಂಚಿತರಾಗಿದ್ದಾರೆ. ಹಾಗೆ ನೋಡಿದರೆ, ಯಾವುದೇ ಸಿನಿಮಾ ಸಿಕ್ಕರೂ ಮಾಡಿಬಿಡೋಣ ಎಂಬಷ್ಟರ ಮಟ್ಟಿಗೆ ಕೆಲ ಕನ್ನಡದ ನಟಿಯರು ಕಾಯುತ್ತಿದ್ದಾರೆ. ಆರಂಭದ ದಿನಗಳಲ್ಲಿ ಜೋರು ಸುದ್ದಿ ಮಾಡಿದವರು, ಸಿಕ್ಕ ಸಿಕ್ಕ ಸಿನಿಮಾಗಳನ್ನೆಲ್ಲಾ ಒಪ್ಪಿಕೊಂಡು ಇನ್ನೇನೋ ಆಗಿಬಿಡುತ್ತಾರೆ ಅಂದುಕೊಂಡವರೆಲ್ಲರೂ ಈಗ ಅವಕಾಶಗಳಿಂದ ದೂರ ಉಳಿದಿದ್ದಾರೆ. ಹಲೋ, ಮೇಡಮ್‌ ಎಲ್ಲಿದ್ದೀರಾ, ಏನ್ಮಾಡ್ತಾ ಇದ್ದೀರಾ, ಫ‌ುಲ್‌ ಬಿಝಿನಾ? ಇಂಥದ್ದೊಂದು ಪ್ರಶ್ನೆಯನ್ನ ನಮ್ಮ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಆರಂಭದಲ್ಲೇ ಸಖತ್‌ “ಶೈನ್‌’ ಆದ ಬಹಳಷ್ಟು ಕನ್ನಡ ನಟಿಮಣಿಗಳನ್ನು ಕೇಳಿದರೆ ಅವರಿಂದ ಬರುವ ಉತ್ತರವೇನು ಗೊತ್ತಾ? “ಸದ್ಯಕ್ಕೆ ಮನೆಯಲ್ಲಿದ್ದೇನೆ, ಎಕ್ಸಾಂಗೆ ಪ್ರಿಪೇರ್‌ ಆಗ್ತಾ ಇದ್ದೇನೆ, ಸ್ವಂತಧ್ದೋಂದು ಕಂಪೆನಿ ಶುರು ಮಾಡಿಕೊಂಡಿದ್ದೇನೆ. ಸಣ್ಣಗಾಗುತ್ತಿದ್ದೇನೆ, ಸಿನಿಮಾ ಆಸಕ್ತಿಯನ್ನೇ ಬಿಟ್ಟು ಬಿಟ್ಟಿದ್ದೇನೆ, ಒಳ್ಳೆಯ ಅವಕಾಶಗಳಿಗೆ ಕಾಯುತ್ತಿದ್ದೇನೆ…’ ಎಂಬಿತ್ಯಾದಿ ತರಹೇವಾರಿ ಉತ್ತರಗಳು ಅವಕಾಶ ವಂಚಿತ ನಮ್ಮ ಕನ್ನಡ ನಟಿಯರಿಂದ ಕೇಳಿಬರುತ್ತವೆ. ಒಂದು ಲೆವೆಲ್‌ಗೆ ಗುರುತಿಸಿಕೊಂಡಿದ್ದರೂ ಅಂತಹ ನಟಿಯರಿಗೆ ಯಾವುದೇ ಅವಕಾಶ ಹುಡುಕಿ ಬಂದಿಲ್ಲವೆಂಬುದೇ ಬೇಸರದ ಸಂಗತಿ. ಒಂದಷ್ಟು ಚಿತ್ರ ಮಾಡಿ ಸಕ್ಸಸ್‌ಫ‌ುಲ್‌ ನಟಿ ಎನಿಸಿಕೊಂಡವರ ಕಲರ್‌ಫ‌ುಲ್‌ ಬದುಕಲ್ಲೀಗ ಹೇಳಿಕೊಳ್ಳುವಂತಹ ರಂಗಿಲ್ಲ ಎಂಬುದು  ನಿಜ. ಕನ್ನಡದಲ್ಲಿ ಹಾಗೆ ದುರ್ಬೀನು ಹಾಕಿ ನೋಡಿದರೆ ಹೆಸರಿರುವಂತಹ ಸುಮಾರು ಮೂವತ್ತೈದಕ್ಕೂ ಹೆಚ್ಚು ಯುವ ನಟಿಯರು ಕಣ್ಮುಂದೆ ಬಂದು ಹೋಗುತ್ತಾರೆ. ಐಂದ್ರಿತಾ ರೇ, ಹರ್ಷಿಕಾಪೂಣಚ್ಚ, ನೀತು, ರೂಪಿಕಾ, ರಾಧಿಕಾ ಕುಮಾರಸ್ವಾಮಿ, ತೇಜಸ್ವಿನಿ, ಮೇಘನಾಗಾಂವ್ಕರ್‌, ದೀಪಿಕಾ ಕಾಮಯ್ಯ, ದೀಪಿಕಾದಾಸ್‌, ಮಾನಸಿ, ಮಾನ್ಸಿ, ಕಾರುಣ್ಯರಾವ್‌,ಪ್ರಜ್ಞಾ, ಸುಷ್ಮಾ,ಸ್ಮಿತಾ, ರಿಷಿಕಾ ಸಿಂಗ್‌, ನಮ್ರತಾ ಹೆಗಡೆ, ನಿಧಿಸುಬ್ಬಯ್ಯ, ಅನಿತಾ ಭಟ್‌, ದೀಪಾಗೌಡ, ಚಂದ್ರಮುಖೀ, ಪ್ರಾಣಸಖೀ ಖ್ಯಾತಿಯ ಭಾವನಾ ಸೇರಿದಂತೆ ಇನ್ನೂ ಅನೇಕ ನಟಿಯರು ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಆದರೆ, ಯಾವ ಸಿನಿಮಾಗಳೂ ಇಲ್ಲದೆ ವಂಚಿತರಾಗುವ ಮೂಲಕ ತಮ್ಮ ಸಿನಿಜರ್ನಿಯ ಹಿಂದಿನ ನೆನಪುಗಳನ್ನು ಮೆಲುಕುಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದೇನೆ ಇರಲಿ, ಗ್ಲಾಮರ್‌ಗೆ ಯಾವತ್ತಿದ್ದರೂ ಬೆಲೆ ಇದ್ದೇ ಇರುತ್ತೆ. ಆದರೆ, ಸಿನಿಮಾ ವಿಷಯದಲ್ಲಿ ಮಾತ್ರ ಅದರ ಅವಧಿ ಮೂರ್‍ನಾಲ್ಕು ವರ್ಷಗಳು ಮಾತ್ರ. ಆ ಅವಧಿಯಲ್ಲೇ ಏನಿದ್ದರೂ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಮಾಡಿದ ಸಿನಿಮಾಗಳನ್ನು ನೋಡಿಕೊಂಡಿರಬೇಕಾದೀತು!

ಬರಹ: ವಿಜಯ್‌ ಭರಮಸಾಗರ; ಚಿತ್ರಗಳು: ಸಂಗ್ರಹ

ಟಾಪ್ ನ್ಯೂಸ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.