ಮೆಜೆಸ್ಟಿಕ್ವರೆಗೆ ಬಸ್ ವ್ಯವಸ್ಥೆ ಕೊಟ್ಟ ಸರ್ಕಾರ
Team Udayavani, Mar 24, 2017, 11:37 AM IST
ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಅಹೋರಾತ್ರಿ ಧರಣಿ ವಾಪಸ್ ಪಡೆದ ಕಾರಣ ಅವರು ತಮ್ಮ ತಮ್ಮ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ಗುರುವಾರ ರಾತ್ರಿ ಸರ್ಕಾರವೇ 16 ಬಸ್ಗಳನ್ನು ಒದಗಿಸಿತ್ತು.
ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಬಿಡಲು ಬಸ್ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಉಸ್ತುವಾರಿಗಾಗಿ ಪೊಲೀಸ್ ಸಿಬ್ಬಂದಿಯನ್ನೂ ನಿಯೋಜಿಸಲಾಗಿತ್ತು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರು ಬಸ್ಗಳಲ್ಲಿ ಉಚಿತವಾಗಿ ಫ್ರೀಡಂ ಪಾರ್ಕ್ನಿಂದ ಮೆಜೆಸ್ಟಿಕ್, ರೈಲ್ವೆ ನಿಲ್ದಾಣಗಳ ಕಡೆಗೆ ತೆರಳಲು ಅವಕಾಶ ಒದಗಿಸಲಾಗಿತ್ತು. ಸಂಜೆ ಪ್ರತಿಭಟನೆ ವಾಪಸ್ ಪಡೆಯುವ ಮಾಹಿತಿ ಸಿಗುತ್ತಿದ್ದಂತೆ ಗುಂಪು ಗುಂಪುಗಳಲ್ಲಿ ಮಹಿಳೆಯರು ಊರುಗಳತ್ತ ತೆರಳಿದರು.
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಒಮ್ಮೆಲೆ ಹದಿನಾರು ಬಸ್ಗಳಲ್ಲಿ ಊರುಗಳತ್ತ ತೆರಳಿದ್ದರಿಂದ ಶೇಷಾದ್ರಿ ರಸ್ತೆ ಸೇರಿ ಸುತ್ತಮುತ್ತಲ ಸಂಚಾರ ದಟ್ಟಣೆ ಉಂಟಾಗಿತ್ತು. ಸಂಜೆ 6 ರಿಂದ 8 ಗಂಟೆವೆಗೆ ಟ್ರಾಫಿಕ್ ಜಾಮ್ ಉಂಟಾಗಿ ಕೆಲಕಾಲ ವಾಹನ ಸವಾರರು ಪರದಾಡುವಂತಾಯಿತು.