ಕಸಕ್ಕೆ ಕನಲುವ ಕನ್ನಹಳ್ಳಿ ನಾಗರಿಕರು
Team Udayavani, Apr 21, 2017, 11:39 AM IST
ಬೆಂಗಳೂರು: ಜನರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಿದರೆ ನಮ್ಮ ತಕರಾರಿಲ್ಲ. ಸ್ಥಳೀಯರ ಆರೋಗ್ಯಕ್ಕೇ ಸಂಚಕಾರ ತರುವ ಕೆಲಸವಾದರೆ ನಾವು ಸಹಿಸುವುದಿಲ್ಲ. ಅಷ್ಟೇ ಅಲ್ಲ, ಅವೈಜ್ಞಾನಿಕವಾಗಿ ಕಸವನ್ನು ಸಂಸ್ಕರಣೆ ಮಾಡಿದರೆ ಒಂದು ದಿನವೂ ಘಟಕ ನಡೆಯಲು ನಾವು ಬಿಡುವುದಿಲ್ಲ.
ಇದು, ಮಾಗಡಿ ರಸ್ತೆಯ ಕನ್ನಹಳ್ಳಿ ಹಾಗೂ ಸೀಗೇಹಳ್ಳಿಯಲ್ಲಿರುವ ತ್ಯಾಜ್ಯ ಸಂಸ್ಕರಣೆ ಘಟಕದ ಸುತ್ತಲ ನಾಗರಿಕರ ಸ್ಪಷ್ಟೋಕ್ತಿ. ನಗರದಲ್ಲಿ ತ್ಯಾಜ್ಯ ಸಮಸ್ಯೆ ನಿವಾರಿಸುವ ಉದ್ದೇಶದಿಂದ ಮಾಗಡಿ ರಸ್ತೆ ಭಾಗದಲ್ಲಿ ಘಟಕಗಳ ಸ್ಥಾಪನೆಗೆ ಬಿಬಿಎಂಪಿ ಮುಂದಾಗಿತ್ತು. ಘಟಕದಲ್ಲಿ ತ್ಯಾಜ್ಯ ಸಂಸ್ಕರಣೆಯಿಂದ ಬಯೋಗ್ಯಾಸ್ ತಯಾರಿಸಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ರಿಯಾಯಿತಿ ದರದಲ್ಲಿ ಪೂರೈಕೆ ಮಾಡುವ ಭರವಸೆಯನ್ನೂ ಸ್ಥಳೀಯರಿಗೆ ನೀಡಲಾಗಿತ್ತು.
ಆದರೆ, ತ್ಯಾಜ್ಯ ಸಂಸ್ಕರಿಸಿ ಬಯೋಗ್ಯಾಸ್ ಉತ್ಪಾದಿಸುವ ಬದಲಿಗೆ ಸಾವಯವ ಗೊಬ್ಬರ ತಯಾರಿಕೆ ಆರಂಭವಾಗಿತ್ತು. ಗುತ್ತಿಗೆ ಪಡೆದ ಸಂಸ್ಥೆಯು ಸಮರ್ಪಕವಾಗಿ ಘಟಕ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಸಮಸ್ಯೆ ತಲೆದೋರಿದೆ. ಕನ್ನಹಳ್ಳಿ ಘಟಕವನ್ನು ಸೂಕ್ತ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಪ್ರದೇಶದಲ್ಲಿ ಸಹಿಸಲುಅಸಾಧ್ಯವಾದ ದುರ್ವಾಸನೆ ಆವರಿಸಿತು. ಇದರಿಂದ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಯಿತು.
ಆ ಹಿನ್ನೆಲೆಯಲ್ಲಿ ಕನ್ನಹಳ್ಳಿ ಹಾಗೂ ಸೀಗೇಹಳ್ಳಿ ಘಟಕಗಳನ್ನು ಸ್ಥಗಿತಗೊಳಿಸಬೇಕೆಂಬ ಸ್ಥಳೀಯರ ಒತ್ತಾಯ ತೀವ್ರಗೊಳ್ಳುತ್ತಿದ್ದು, ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹಾಗಾಗಿ ಪಾಲಿಕೆಯು ಘಟಕಗಳಲ್ಲಿನ ಸಮಸ್ಯೆಗಳನ್ನು ನಿವಾರಿಸಿ ಸ್ಥಳೀಯರಲ್ಲಿ ವಿಶ್ವಾಸ ಮೂಡಿಸುವ ಮೂಲಕ ಘಟಕಗಳಲ್ಲಿ ಮತ್ತೆ ತ್ಯಾಜ್ಯ ಸಂಸ್ಕರಣೆಗೆ ಚಾಲನೆ ನೀಡಲು ಪ್ರಯತ್ನ ನಡೆಸುತ್ತಿದೆ.
ಖಾಸಗಿಯವರಿಂದಲೂ ತೊಂದರೆ!: ಕನ್ನಹಳ್ಳಿ ಹಾಗೂ ಸೀಗೇಹಳ್ಳಿ ಸುತ್ತಮುತ್ತಲಿನ ಭಾಗಗಳಲ್ಲಿ ಬಿಬಿಎಂಪಿ ಘಟಕಗಳೊಂದಿಗೆ ಕೆಲ ಖಾಸಗಿಯವರೂ ತ್ಯಾಜ್ಯ ಸಂಸ್ಕರಣೆ ಘಟಕ ಸ್ಥಾಪಿಸಿದ್ದಾರೆ. ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶ ವಿಷಮಯವಾಗುತ್ತಿದೆ. ಅಂತರ್ಜಲ ಕಲುಷಿತವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ವ್ಯಕ್ತಿಯೊಬ್ಬರು ನಡೆಸುತ್ತಿರುವ ಕಂಪನಿಯಲ್ಲಿ ರಾಸಾಯನಿಕಗಳ ಸಂಸ್ಕರಣೆ ಕೈಗೊಳ್ಳುತ್ತಿರುವುದರಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಆರೋಪಿಸಿರುವ ಸ್ಥಳೀಯರು ಬುಧವಾರ ತ್ಯಾಜ್ಯ ಸಾಗಣೆ ಕಾಂಪ್ಯಾಕ್ಟರ್ನ ಗಾಜು ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರಲ್ಲಿ ಬೆಂಕಿಯ ಭೀತಿ: ಕನ್ನಹಳ್ಳಿ ತ್ಯಾಜ್ಯ ಸಂಸ್ಕರಣೆ ಘಟಕದ ಹೊರ ಭಾಗದಲ್ಲಿ ಭಾರಿ ಪ್ರಮಾಣದ ಆರ್ಡಿಎಫ್ ಶೇಖರಿಸಿರುವುದರಿಂದ ಬೇಸಿಗೆಯಲ್ಲಿ ಬೆಂಕಿ ಅವಘಡಗಳು ಸಂಭವಿಸುತ್ತಿವೆ. ಇದೀಗ ನಗರದಲ್ಲಿ ಬಿಸಿಲಿನ ತಾಪವೂ ಏರುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಘಟಕದಲ್ಲಿ ಬೆಂಕಿ ಕಾಣಿಸಿಕೊಳ್ಳುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ. ಈಗಾಗಲೇ ಘಟಕದಲ್ಲಿ ಎರಡು ಬಾರಿ ಬೆಂಕಿ ಕಾಣಿಸಿಕೊಂಡು ಸುತ್ತಮುತ್ತಲಿನ ಭಾಗಗಳಲ್ಲಿ ದಟ್ಟ ಹೊಗೆ ಅವರಿಸಿತ್ತು. ಇದರಿಂದ ಜನರು ತೊಂದರೆ ಅನುಭವಿಸುವಂತಾಗಿತ್ತು. ಅದಾದ ನಂತರವೂ ಪಾಲಿಕೆ ಅಕಾರಿಗಳು ಎಚ್ಚೆತ್ತುಕೊಳ್ಳದ ಕಾರಣ ಮತ್ತೆ ಬೆಂಕಿ ಅವಘಡ ಸಂಭವಿಸುವ ಆತಂಕ ಸ್ಥಳೀಯರಲ್ಲಿ ಮೂಡಿದೆ.
ಸಂಸ್ಕರಣೆ ವಿಧಾನ ಹೇಗೆ?: ಕನ್ನಹಳ್ಳಿ ಘಟಕವನ್ನು 24 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು, 500 ಟನ್ ಸಂಸ್ಕರಣೆ ಸಾಮರ್ಥ್ಯ ಹೊಂದಿದೆ. ಇಲ್ಲಿ ತ್ಯಾಜ್ಯವನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ. ಘಟಕದ ಪ್ರವೇಶ ದ್ವಾರದಲ್ಲೇ ದೊಡ್ಡ ಕಾಂಕ್ರಿಟ್ ಪಿಟ್ ನಿರ್ಮಿಸಲಾಗಿದ್ದು, ಮೂರು ದಿನಗಳ ತ್ಯಾಜ್ಯ ಶೇಖರಣಾ ಸಾಮರ್ಥ್ಯ ಹೊಂದಿದೆ. ಇಲ್ಲಿ ಸುರಿಯಲಾಗುವ ತ್ಯಾಜ್ಯವನ್ನು ಹಿಟಾಚಿ ಯಂತ್ರದ ಮೂಲಕ 200 ಮಿ.ಮೀ ಶುದ್ದೀಕರಣ ಟ್ರಾಮೆಲ್ಗೆ (ವೃತ್ತಾಕಾರವಾಗಿ ತಿರುಗುವ ಜರಡಿ) ಸುರಿಯಲಾಗುತ್ತದೆ.
ಟ್ರಾಮೆಲ್ನಲ್ಲಿ ತ್ಯಾಜ್ಯವನ್ನು ಪ್ರತ್ಯೇಕಿಸಿದ ನಂತರ 100 ಮಿ.ಮೀ. ಗಾತ್ರದ ಟ್ರಾಮೆಲ್ನಲ್ಲಿ ಶೋಸಿದ ಬಳಿಕ ಉಳಿಕೆಯನ್ನು ನಿರ್ದಿಷ್ಟ ಸ್ಥಳದಲ್ಲಿ ಸುರಿಯಲಾಗುತ್ತದೆ. ಹೀಗೆ ಸುರಿಯಲಾದ ತ್ಯಾಜ್ಯವನ್ನು ಏಳು ದಿನ ಸಂಸ್ಕರಿಸಿ ಏಳು ಪ್ರತ್ಯೇಕ ಪ್ಲಾಟ್ಫಾರಂನಲ್ಲಿ ಸುರಿಯಲಾಗುತ್ತದೆ. ಜತೆಗೆ ಪ್ರತಿ ಏಳು ದಿನಕ್ಕೊಮ್ಮೆ ಮಿಶ್ರಣ ಮಾಡಲಾಗುತ್ತದೆ. ಇದೇ ರೀತಿ ನಾಲ್ಕು ವಾರ ಮಿಶ್ರಣ ಮಾಡಿದ ನಂತರ ಕ್ಯೂರಿಂಗ್ ಪಿಟ್ನಲ್ಲಿ ಏಳು ದಿನ ಇಡಲಾಗುತ್ತದೆ. ಬಳಿಕ ಇದನ್ನು 32 ಮಿ.ಮೀ. ಟ್ರಾಮೆಲ್ನಲ್ಲಿ ಜರಡಿ ಹಿಡಿದು ನಂತರ ಆ ಮಿಶ್ರಣವನ್ನು 16 ಮಿ.ಮೀ. ಟ್ರಾಮೆಲ್ನಲ್ಲಿ ಜರಡಿ ಹಿಡಿಯಲಾಗುತ್ತದೆ. ಇಲ್ಲಿ ಅಂತಿಮವಾಗಿ ಸಾವಯವ ಗೊಬ್ಬರ ಹೊರಬರುತ್ತದೆ. ನಂತರ ಅದನ್ನು ಮಾರಾಟ ಮಾಡಲಾಗುತ್ತದೆ.
ವೈಜ್ಞನಿವಾಗಿ ತ್ಯಾಜ್ಯ ವಿಲೇವಾರಿ ಮಾಡುವ ಬಗ್ಗೆ ಅಕಾರಿಗಳು ಹತ್ತಾರು ಭರವಸೆ ನೀಡಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಸಮರ್ಪಕವಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಘಟಕ ಕಾರ್ಯನಿರ್ವಹಣೆಗೆ ಅವಕಾಶ ನೀಡದಿರಲು ತೀರ್ಮಾನಿಸಿದ್ದೇವೆ.
-ಚನ್ನಪ್ಪ, ಘಟಕ ವಿರೋ ಹೋರಾಟಗಾರರ
ದುರ್ವಾಸನೆ ಯಿಂದ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ. ಮನೆಗೆ ಬರುವ ಅತಿಥಿಗಳು ಒಂದು ದಿನವೂ ಉಳಿದುಕೊಳ್ಳುವುದಿಲ್ಲ. ದುರ್ವಾಸನೆ ಕಾರಣಕ್ಕೆ ಈ ಭಾಗದಲ್ಲಿ ನಿವೇಶನ ಕೊಳ್ಳಲು ಯಾರೊಬ್ಬರೂ ಮುಂದಾಗುತ್ತಿಲ್ಲ.
-ಮಾರುತಿ, ಕೆಂಚನಪುರ
ಬಿಬಿಎಂಪಿ ಅಕಾರಿಗಳು ಮೊದಲಿಗೆ ಘಟಕ ಸ್ಥಾಪನೆ ಮಾಡುವ ವೇಳೆ ಗ್ಯಾಸ್ ತಯಾರಿಸಿ ಸ್ಥಳೀಯರಿಗೆ ಅರ್ಧ ದರಕ್ಕೆ ನೀಡುವುದಾಗಿ ನಂಬಿಸಿದರು. ಆದರೆ, ನಂತರ ದಲ್ಲಿ ತ್ಯಾಜ್ಯದಿಂದ ಗೊಬ್ಬರ ಮಾಡುತ್ತಿದ್ದಾರೆ. ಇದರಿಂದ ಸ್ಥಳೀಯರಿಗೆ ತೀವ್ರ ತೊಂದರೆಯಾಗುತ್ತಿದೆ.
-ನಾಗಪ್ಪ, ಕನ್ನಹಳ್ಳಿ ನಿವಾಸಿ
* ವೆಂ.ಸುನೀಲ್ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ