ತೋಟದಲ್ಲೇ ತರಾವರಿ ಮಾವು ಖರೀದಿ
Team Udayavani, Apr 24, 2017, 12:27 PM IST
ಬೆಂಗಳೂರು: ನಗರ ಪ್ರದೇಶದ ಮಾವು ಪ್ರಿಯರು ತಮಗೆ ಬೇಕಾದ ತಳಿಯ ಗುಣಮಟ್ಟದ ಮಾವಿನ ಹಣ್ಣುಗಳನ್ನು ಮಾವಿನ ತೋಟಗಳಲ್ಲೇ ಆರಿಸಿ, ಖರೀದಿಸುವ ವಿಶೇಷ ಕಾರ್ಯಕ್ರಮ “ಮ್ಯಾಂಗೋ ಪಿಕ್ಕಿಂಗ್ ಟೂರಿಸಂ’ಗೆ ಭಾನುವಾರ ಚಾಲನೆ ದೊರೆಯಿತು.
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಆಯೋಜಿಸಿದ್ದ ಈ ವರ್ಷದ ಮೊದಲ “ಮ್ಯಾಂಗೋ ಪಿಕ್ಕಿಂಗ್ ಟೂರಿಸಂ’ಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಭಾನುವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಡಿಕಲ್ ಗ್ರಾಮದ ಪ್ರಗತಿಪರ ಮಾವು ಬೆಳೆಗಾರ ರಾಮಚಂದ್ರಶೆಟ್ಟಿ ಅವರ ಮಾವಿನ ತೋಟಕ್ಕೆ ಸುಮಾರು 110 ಗ್ರಾಹಕರನ್ನು ಎರಡು ಬಸ್ಗಳಲ್ಲಿ ಕರೆದೊಯ್ಯಲಾಯಿತು.
ಕೆಲವರು ವೈಯಕ್ತಿಕ ಆಸಕ್ತಿಯಿಂದ ಕುಟುಂಬ ಸಮೇತರಾಗಿ ಸ್ವಂತ ವಾಹನಗಳಲ್ಲಿ ನೇರವಾಗಿ ತೋಟಗಳಿಗೆ ತೆರಳಿದ್ದರು. ತಮ್ಮದೇ ತೋಟ ಎಂಬಂತೆ ಇಡೀ ತೋಡ ಸುತ್ತಾಡಿ, ತಮಗೆ ಬೇಕಾದ ಮಾವಿನ ಕಾಯಿ, ಹಣ್ಣುಗಳನ್ನು ಹುಡುಕಿ, ಆರಿಸಿಕೊಂಡು ಕಿತ್ತು ತಿಂದಂದ್ದು ಮಾತ್ರವಲ್ಲ, ಸಾಕಷ್ಟು ಮಾವನ್ನು ಖರೀದಿಸಿದ್ದು ವಿಶೇಷ.
ಕಬ್ಬನ್ಪಾರ್ಕ್ನ ಬ್ಯಾಂಡ್ ಸ್ಟಾಂಡ್ ಸಮೀಪ ಭಾನುವಾರ ಬೆಳಗ್ಗೆ “ಮ್ಯಾಂಗೋ ಪಿಕ್ಕಿಂಗ್ ಟೂರಿಸಂ’ಗೆ ನಿಗಮದ ಅಧ್ಯಕ್ಷ ಎಲ್. ಗೋಪಾಲಕೃಷ್ಣ ಮತ್ತು ವ್ಯವಸ್ಥಾಪಕ ನಿರ್ದೇಶಕ ಕದಿರೇಗೌಡ ಅವರು ಚಾಲನೆ ನೀಡಿದರು. ಜತೆಗೆ ಗ್ರಾಹಕರಿಗೆ ಅಗತ್ಯ ಮಾಹಿತಿ ನೀಡುವ ಉದ್ದೇಶದಿಂದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕದಿರೇಗೌಡ ಹಾಗೂ ಚಿಕ್ಕಬಳ್ಳಾಪುರದ ಉಪನಿರ್ದೇಶಕಿ ಗಾಯತ್ರಿ ಅವರು ಗ್ರಾಹಕರೊಂದಿಗೆ ತೋಟಕ್ಕೆ ಪ್ರಯಾಣ ಬೆಳೆಸಿದ್ದು ವಿಶೇಷವಾಗಿತ್ತು.
ಗ್ರಾಹಕರು ಯಾವ ಮಾವನ್ನು ಆಯ್ಕೆ ಮಾಡಬೇಕು. ಮಾವು ಸುಲಭವಾಗಿ ಹಣ್ಣಾಗಲು ಯಾವ ರೀತಿಯಲ್ಲಿ ಬೆಳವಣಿಗೆ ಹೊಂದಿರಬೇಕು. ಯಾವ ತಳಿಯ ಹಣ್ಣಿನ ರಚನೆ ಹೇಗಿರುತ್ತದೆ, ಅದನ್ನು ಗುರುತಿಸುವುದು ಹೇಗೆ ಎಂಬಿತ್ಯಾದಿ ಮಾಹಿತಿಗಳನ್ನು ಒದಗಿಸುವ ಮೂಲಕ ನಿಗಮದ ಅಧಿಕಾರಿಗಳು ಗ್ರಾಹಕರಿಗೆ ಸಹಕರಿಸಿದರು. ಅವರೊಂದಿಗೆ ತೋಟದ ಮಾಲೀಕ ರಾಮಚಂದ್ರಶೆಟ್ಟಿ ಅವರು ನೆರವಾದರು.
ಗ್ರಾಹಕರು ದಿಲ್ ಖುಷ್: ತೋಟದಲ್ಲಿಯೇ ತಮಗೆ ಇಷ್ಟವಾದ ಹಣ್ಣು ಕೀಳಲು ಅವಕಾಶ ಸಿಕ್ಕ ಖುಷಿಯಲ್ಲಿದ್ದ ಗ್ರಾಹಕರಿಗೆ ಮಾರುಕಟ್ಟೆ ದರಕ್ಕಿಂತ ಶೇ.10ರಷ್ಟು ಕಡಿಮೆ ದರದಲ್ಲಿ ಮಾವು ಖರೀದಿ ಅವಕಾಶ ಕಲ್ಪಿಸಿದ್ದರಿಂದ ಮತ್ತಷ್ಟು ಖುಷಿಯಾದರು. ಆಲ್ಫಾನ್ಸೊ, ಮಲ್ಲಿಕಾ, ರಸಪುರಿ, ಬಂಗನಪಲ್ಲಿ ಮತ್ತಿತರ ತಳಿಯ ರಸಾಯನಿಕ ಮುಕ್ತ ಹಣ್ಣುಗಳನ್ನು ಖರೀದಿಸಿದರು.
ಪ್ರವಾಸ ತೆರಳಿದ ಪ್ರತಿ ಗ್ರಾಹಕರು ಕನಿಷ್ಠ 6ರಿಂದ 8 ಕೆ.ಜಿ.ಹಣ್ಣು ಖರೀದಿಸುವುದು ಕಡ್ಡಾಯವೆಂಬ ನಿಯಮವಿದ್ದು, ಒಂದೇ ದಿನ ಸುಮಾರು ಒಂದು ಟನ್ ಮಾವು ಮಾರಾಟ ನಡೆಯಿತು. ಜತೆಗೆ ರೈತರೇ ತಮ್ಮ ತೋಟದಲ್ಲಿ ಗ್ರಾಹಕರಿಗೆ ಊಟದ ವ್ಯವಸ್ಥೆ ಮಾಡಿದ್ದರು. ಹೀಗಾಗಿ ನಗರದ ಮಂದಿ ತೋಟದಲ್ಲಿ ಮಧ್ಯಾಹ್ನದ ಊಟ ಸವಿಯುವ ಮೂಲಕ ಸಂತಸಪಟ್ಟರು.
ಬುಧವಾರ ರಾಮನಗರಕ್ಕೆ
ಕಳೆದ ವರ್ಷ ವಾರಾಂತ್ಯದಲ್ಲಿ ಮಾತ್ರ ಮ್ಯಾಂಗೋ ಪಿಕಿಂಗ್ ಟೂರಿಸಂ ಆಯೋಜಿಸಲಾಗಿತ್ತು. ಆದರೆ ಈ ಬಾರಿ ವಾರದ ದಿನಗಳಲ್ಲೂ ಪ್ರವಾಸಕ್ಕೆ ಬೇಡಿಕೆ ಬಂದಿದೆ. ಹೀಗಾಗಿ ಏ.26ರ ಬುಧವಾರ ರಾಮನಗರದ ತೋಟಕ್ಕೆ ಮ್ಯಾಂಗೊ ಪಿಕ್ಕಿಂಗ್ ಟೂರಿಸಂ ಆಯೋಜಿಸಲಾಗಿದೆ. ಜತೆಗೆ ಶನಿವಾರ ಮತ್ತು ಭಾನುವಾರ (ಏ.29 ಮತ್ತು 30) ರಂದು ಶ್ರೀನಿವಾಸಪುರಕ್ಕೆ ಗ್ರಾಹಕರನ್ನು ಕರೆದೊಯ್ಯುವುದಾಗಿ ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷ ಕದಿರೇಗೌಡ ತಿಳಿಸಿದರು.
ನೀವೂ ಟೂರಿಗೆ ಹೋಗಬೇಕಾ?
ಮ್ಯಾಂಗೊ ಪಿಕ್ಕಿಂಗ್ ಟೂರಿಸಂ ಜೂನ್ವರೆಗೆ ನಡೆಯಲಿದ್ದು, ಆಸಕ್ತ ರೈತರು ತಮ್ಮ ತೋಟಗಳಲ್ಲಿ ಆಯೋಜನೆ ಮಾಡಲು ನಿಗಮಕ್ಕೆ ಕೋರಿಕೆ ಸಲ್ಲಿಸಿದಲ್ಲಿ ಅಂತಹ ತೋಟಗಳಿಗೆ ಗ್ರಾಹಕರನ್ನು ಕರೆತರುವ ವ್ಯವಸ್ಥೆ ಮಾಡಲಾಗುವುದು. ಮ್ಯಾಂಗೋ ಪಿಕ್ಕಿಂಗ್ ಟೂರಿಸಂಗೆ ತೆರಳಲು ಆಸಕ್ತಿ ಇರುವ ಗ್ರಾಹಕರು, ನಿಗಮದ ವೆಬ್ಸೈಟ್ನಲ್ಲಿ ಯಾವ ದಿನ ಟೂರಿಸಂ ಇದೆ ಎಂಬುದನ್ನು ಖಚಿತಪಡಿಸಿಕೊಂಡು, ಆನ್ಲೈನ್ ಮೂಲಕವೇ 100 ರೂ. ಪಾವತಿಸುವ ಮೂಲಕ ನೋಂದಣಿ ಮಾಡಿಕೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ