ನಾಗ ಈಗ ಕಾಟನ್ಪೇಟೆ ಪೊಲೀಸರ ವಶಕ್ಕೆ
Team Udayavani, Jun 24, 2017, 11:11 AM IST
ಬೆಂಗಳೂರು: ಬ್ಲ್ಯಾಕ್ ಆ್ಯಂಡ್ ವೈಟ್ ದಂಧೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಾಗರಾಜ್ ಸೇರಿದಂತೆ ನಾಲ್ವರನ್ನು ಕಾಟನ್ಪೇಟೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನಾಗರಭಾವಿ ನಿವಾಸಿ ಉದ್ಯಮಿ ಕಲ್ಯಾಣ್ ಎಂಬುವರು ಕೆಂಗೇರಿ ಠಾಣೆಯಲ್ಲಿ ದಾಖಲಿಸಿದ್ದ 3.80 ಲಕ್ಷ ವಂಚಿಸಿದ ಪ್ರಕರಣ ಸಂಬಂಧ ಕಾಟನ್ ಪೇಟೆ ಪೊಲೀಸರು, ಬಾಡಿವಾರೆಂಟ್ ಮೂಲಕ ಪಾಲಿಕೆ ಮಾಜಿ ಸದಸ್ಯ ನಾಗರಾಜ್, ಈತನ ಮಕ್ಕಳಾದ ಶಾಸ್ತ್ರೀ, ಗಾಂಧಿ ಹಾಗೂ ಬೆಂಬಲಿಗ ಶರವಣನನ್ನು ಮೂರು ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ನಾಗರಾಜ್, ಕಲ್ಯಾಣ್ ಅವರಿಗೆ ವಂಚಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. “ಶರವಣ ಎಂಬುವವನ ಮೂಲಕ ಕಲ್ಯಾಣ್ ನನಗೆ ಪರಿಚಯವಾಗಿದ್ದ. ಶರವಣ ನೋಟು ಬದಲಾವಣೆ ಮಾಡಿಸುವ ಆಸೆ ತೋರಿಸಿ ತನ್ನ ಬಳಿಗೆ ಆತನನ್ನು ಕರೆ ತಂದ. ಮೇ 24ರಂದು ಹಣ ಬದಲಾವಣೆ ಹೆಸರಿನಲ್ಲಿ ಕಲ್ಯಾಣ್ರಿಂದ 3.80 ಲಕ್ಷ ಪಡೆದು, ನಂತರ ಮಾರಕಾಸ್ತ್ರ ಮತ್ತು ಗನ್ ತೋರಿಸಿ ಪ್ರಾಣ ಬೆದರಿಕೆ ಹಾಕಿದ್ದೇವು. ಹಣ ಕೊಡದೇ ಕಳುಹಿಸಿದ್ದೇವು,’ ಎಂದು ಒಪ್ಪಿಕೊಂಡಿದ್ದಾನೆ.
ಈ ವೇಳೆ ಈಗಾಗಲೇ ಇತರೆ ಬ್ಲ್ಯಾಕ್ ಆ್ಯಂಡ್ ವೈಟ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ತನ್ನ ನಾಲ್ವರು ಸಹಚರರ ಹೆಸರನ್ನು ಆರೋಪಿ ಬಾಯಿ ಬಿಟ್ಟಿದಾಗಿ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಶನಿವಾರದವರೆಗೂ ನಾಗರಾಜ್ ಮತ್ತು ಮಕ್ಕಳು ಕಾಟನ್ ಪೇಟೆ ಪೊಲೀಸರ ವಶದಲ್ಲಿದ್ದು, ನಂತರ ಮಲ್ಲೇಶ್ವರ ಮತ್ತು ಕಾಮಾಕ್ಷಿಪಾಳ್ಯ ಪೊಲೀಸರು ವಿಚಾರಣೆಗೆ ವಶಕ್ಕೆ ಪಡೆಯಲಿದ್ದಾರೆ.