ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಲು ಶೋಭಾ ಕರೆ
Team Udayavani, Aug 16, 2017, 11:30 AM IST
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ನೀಡಿರುವ ಸಂಕಲ್ಪದಿಂದ ಸಿದ್ಧಿ ಎಂಬ ಕರೆಯಂತೆ ನಾವು ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಸಂಕಲ್ಪ ತೊಡುವಂತೆ ರಾಜ್ಯ ಬಿಜೆಪಿ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಸ್ವಾತಂತ್ರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಧ್ವಜಾರೋಹಣದ ಬಳಿಕ ಅವರು ಮಾತನಾಡಿದರು. ಚೀನಾವು ಇಡೀ ವಿಶ್ವಕ್ಕೆ ಬೆದರಿಕೆ ಒಡ್ಡುತ್ತಿದೆ. ಅಲ್ಲಿ ಚುನಾವಣೆ ನಡೆಯುವ ಎಲ್ಲಾ ಸಂದರ್ಭದಲ್ಲೂ ಭಾರತದೊಂದಿಗೆ ಕಾಲುಕೆರೆದು ಜಗಳಕ್ಕೆ ಬರುವ ಮೂಲಕ ಗಡಿಯಲ್ಲಿ ದಾಳಿ ನಡೆಸುತ್ತಿದೆ.
ಇದೀಗ ಡೋಕ್ಲಾಮ್ನಲ್ಲಿ ಕುತಂತ್ರ ನಡೆಸುತ್ತಿದೆ. ಹೀಗಾಗಿ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಸಂಕಲ್ಪ ತೊಟ್ಟು ಆ ದೇಶಕ್ಕೆ ತಕ್ಕ ಪಾಠ ಕಲಿಸಬೇಕು ಎಂದರು. ಇಂದು ನಮ್ಮ ಪೂಜಾ ಕೋಣೆಯವರೆಗೂ ಚೀನಾದ ಉತ್ಪನ್ನಗಳು ತಲುಪಿವೆ. ಆದರೆ ಅದೇ ಚೀನಾ ನಮ್ಮ ದೇಶದ ಗಡಿಭಾಗದಲ್ಲಿ ನಮ್ಮ ಭೂಭಾಗವನ್ನು ಆಕ್ರಮಿಸಲು ಯತ್ನಿಸುತ್ತಿದೆ.
ಆದ್ದರಿಂದ ಬಿಜೆಪಿ ಮತ್ತು ಸಂಘಪರಿವಾರದ ಸಂಕಲ್ಪದಂತೆ ನಾವು ಚೀನಾದ ವಸ್ತುಗಳನ್ನು ಬಹಿಷ್ಕರಿಸಿ ಮತ್ತೂಮ್ಮೆ ಸ್ವದೇಶಿ ಚಿಂತನೆಯನ್ನು ರೂಢಿಸಿಕೊಳ್ಳುಬೇಕಿದೆ ಎಂದು ತಿಳಿಸಿದರು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ನಗರ ಬಿಜೆಪಿ ಅಧ್ಯಕ್ಷ ಪಿ.ಎನ್.ಸದಾಶಿವ, ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಭಾರತಿ ಶೆಟ್ಟಿ, ಬಿಬಿಎಂಪಿ ಸದಸ್ಯೆ ಹೇಮಲತಾ ಸತೀಶ್ ಶೇಟ್ ಮತ್ತಿತರರು ಪಾಲ್ಗೊಂಡಿದ್ದರು.