ಒಂದು ವರ್ಷದಲ್ಲಿ ದ.ಕ. ಹೊಗೆಮುಕ್ತ ಜಿಲ್ಲೆ
Team Udayavani, Jul 24, 2017, 8:35 AM IST
ಬಂಟ್ವಾಳ: ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮೂಲಕ ದಕ್ಷಿಣ ಕನ್ನಡ ಮುಂದಿನ ಒಂದು ವರ್ಷ ದಲ್ಲಿ ಹೊಗೆಮುಕ್ತ ಜಿಲ್ಲೆಯಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ರವಿವಾರ ಬಂಟ್ವಾಳದ ಬಂಟರ ಭವನ ದಲ್ಲಿ ನಡೆದ ಉಜ್ವಲ ಯೋಜನೆ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2011ರ ಗಣತಿ ಆಧಾರದಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿರುವ 44,000 ಫಲಾನುಭವಿಗಳಲ್ಲಿ 4,200 ಮಂದಿಗೆ ಗ್ಯಾಸ್ ಹಂಚಲಾಗಿದೆ. ಉಳಿಕೆ 40,000 ಮಂದಿಗೆ ಮುಂದಿನ ಎರಡು ತಿಂಗಳೊಳಗೆ ಗ್ಯಾಸ್ ವಿತರಣೆ ಆಗಲಿದೆ. ಪ್ರಸ್ತುತ ಅರ್ಜಿ ಸಲ್ಲಿಸಿದ ಎಲ್ಲ ಅರ್ಹ ಫಲಾನುಭವಿಗಳಿಗೆ ಉಜ್ವಲ ಪ್ಲಸ್ ಯೋಜನೆಯಲ್ಲಿ ಮುಂದಿನ ದೀಪಾವಳಿ ಒಳಗೆ ಅನಿಲ ಸಂಪರ್ಕ ದೊರೆಯಲಿದೆ ಎಂದರು.
ಸುಳ್ಯ ಶಾಸಕ ಎಸ್. ಅಂಗಾರ ಮಾತನಾಡಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್ಡಿಎ ಆಡಳಿತ ಸಂದರ್ಭ ಅಡುಗೆ ಅನಿಲ ಮುಕ್ತವಾಗಿ ದೊರೆಯುತ್ತಿದೆ. ಯುಪಿಎ ಆಡಳಿತದಲ್ಲಿ ಕಾಳಧನ ನೀಡಿ ಅನಿಲ ಪಡೆಯುವಂತಹ ಸಂಕಷ್ಟ ಎದುರಾಗಿತ್ತು ಎಂದು ಸ್ಮರಿಸಿದರು.
ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜನಹಿತಕ್ಕಾಗಿ ಈ ಪ್ರಮಾಣದಲ್ಲಿ ಗ್ಯಾಸ್ ವಿತರಣೆ ಮಾಡುತ್ತಿರುವುದು ಸಂಸದ ನಳಿನ್ ಕುಮಾರ್ ಕಟೀಲು ಅವರ ರಾಜ್ಯ ಮಟ್ಟದ ದಾಖಲೆ ಎಂದರು.
ಪ್ರಧಾನ ಮಂತ್ರಿಯವರ ದ.ಕ. ಜಿಲ್ಲಾ ಉಜ್ವಲ ಯೋಜನೆ ನೋಡಲ್ ಅಧಿಕಾರಿ ಯನ್. ನವೀನ್ ಕುಮಾರ್ ಪ್ರಸ್ತಾವನೆಗೈದರು.
ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾ ಧ್ಯಕ್ಷೆ ಕಸ್ತೂರಿ ಪಂಜ, ಕ್ಯಾಂಪ್ಕೋ ಮಾಜಿ ನಿರ್ದೇಶಕ ಸಂಜೀವ ಮಠಂದೂರು, ಮಾಜಿ ಶಾಸಕರಾದ ಕೆ. ಪದ್ಮನಾಭ ಕೊಟ್ಟಾರಿ, ಎ. ರುಕ್ಮಯ ಪೂಜಾರಿ, ಎಚ್ಪಿಸಿಎಲ್ ಪ್ರಬಂಧಕ ರಮೇಶ್ ವೇದಿಕೆಯಲ್ಲಿದ್ದರು.
ಪ್ರಗತಿಪರ ಕೃಷಿಕ ರಾಜೇಶ್ ನಾೖಕ್ ಉಳಿಪಾಡಿ ಗುತ್ತು ಸ್ವಾಗತಿಸಿದರು. ಬಂಟ್ವಾಳ ಪುರಸಭಾ ಸದಸ್ಯ ಬಿ. ದೇವದಾಸ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ದೇಶದ ಮಹಿಳೆಯರ ಉಜ್ವಲ ಭವಿಷ್ಯ ಗಮನದಲ್ಲಿ ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ರೂಪಿಸಿರುವ ಉಚಿತ ಅನಿಲ ಸಂಪರ್ಕ ವನ್ನು ಮಹಿಳೆಯರು ಪಡೆಯಬೇಕು. ಕಟ್ಟಿಗೆ ಒಲೆಯಿಂದ ಮಹಿಳೆಯರ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುವುದರಿಂದ ಬಡವರಿಗೆ ಉಚಿತ ಅನಿಲ ಸಂಪರ್ಕ ಯೋಜನೆ ರೂಪಿಸಲಾಗಿದೆ. ಯೋಜನೆ ಯಲ್ಲಿ ಒಂದು ಸಿಲಿಂಡರ್, ರೆಗ್ಯು ಲೇಟರ್, ಸುರಕ್ಷಾ ಪೈಪ್, ಸ್ಟವ್ ಉಚಿತವಾಗಿ ಸಿಗಲಿದೆ. ಜಿಲ್ಲೆಯ ಮೊದಲ ಹೊಗೆಮುಕ್ತ ಗ್ರಾಮಕ್ಕೆ ಒಂದು ಲಕ್ಷ ರೂ. ಬಹುಮಾನ ನೀಡಲಾಗುವುದು.
– ನಳಿನ್ ಕುಮಾರ್
ಮನೆಮನೆಗೆ ಸೌಲಭ್ಯ
ಯೋಜನೆಯನ್ನು 2016ರ ಮೇ 1ರಂದು ಉತ್ತರ ಪ್ರದೇಶದ ಬಲಿಯ ದಲ್ಲಿ ಉದ್ಘಾಟಿಸಲಾಗಿದೆ.
ಕರ್ನಾಟಕದಲ್ಲಿ 2017 ಜೂ. 17ರಂದು ಹುಬ್ಬಳ್ಳಿಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಜಿಲ್ಲೆಯಲ್ಲಿ 46 ವಿತರಕರ ಮೂಲಕ ಪ್ರತಿ ಮನೆಗೆ ಸೌಲಭ್ಯ ತಲುಪಿಸಿ ಅವರೇ ಮನೆಮಂದಿಗೆ ಪ್ರಾತ್ಯಕ್ಷಿಕೆ ನೀಡುವ ಕ್ರಮ ಕೈಗೊಂಡಿದೆ. ವಿಳಾಸ, ಮೊಬೈಲ್ ಸಂಖ್ಯೆ ನಮೂದಿಸದ ಮಂದಿ ಅದನ್ನು ಸರಿಯಾಗಿ ನೀಡುವ ಮೂಲಕ ಸೇವೆ ಯನ್ನು ಕ್ಲಪ್ತ ಸಮಯದಲ್ಲಿ ನೀಡಲು ಸಹಕರಿಸಿ ಎಂದು ಮನವಿ ಮಾಡಿದರು.
ಎಲ್ಪಿಜಿ ಗ್ರಾಹಕರಿಗೆ ವಿಮಾ ಸುರಕ್ಷೆ ಒದಗಿಸಲಾಗುತ್ತದೆ. ಗ್ಯಾಸ್ಕಿಟ್ ದುರಂತದ ಸಾವು ಸಂಭವಿಸಿದಲ್ಲಿ 6 ಲಕ್ಷ ರೂ. ಪ್ರತೀ ವ್ಯಕ್ತಿಗತ ಪರಿಹಾರ, ಪ್ರತೀ ದುರ್ಘಟನೆಗೆ 30 ಲಕ್ಷ ರೂ. ವರೆಗೆ ವೈದ್ಯಕೀಯ ಚಿಕಿತ್ಸಾ ವಿಮಾ ಕವರ್, ಗರಿಷ್ಠ 2 ಲಕ್ಷ ರೂ. ವರೆಗೆ ವ್ಯಕ್ತಿಗತ ಹಾಗೂ 25,000 ರೂ. ವೈದ್ಯಕೀಯ ಪರಿಹಾರ ಸಿಗಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು