ಬಂಟ್ವಾಳ: 252 ಕೋ.ರೂ. ವೆಚ್ಚದ ಯೋಜನೆಗೆ ಸಿಎಂ ಶಿಲಾನ್ಯಾಸ
Team Udayavani, Oct 23, 2017, 9:49 AM IST
ಬಿ.ಸಿ.ರೋಡ್: ಬಂಟ್ವಾಳ ವಿಧಾನಸಭಾ ಕ್ಷೇತ್ರದ 252 ಕೋ. ರೂ. ವೆಚ್ಚದ ಹತ್ತು ಕಾಮಗಾರಿಗಳ ಉದ್ಘಾಟನೆ, ಆರು ಕಾಮಗಾರಿಗಳಿಗೆ ಶಿಲಾನ್ಯಾಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಿದರು. ಅರಣ್ಯ ಸಚಿವ ಬಿ.ರಮಾನಾಥ ರೈ ಎಲ್ಲ ಯೋಜನೆಗಳ ಕುರಿತು ಮುಖ್ಯಮಂತ್ರಿಯವರಿಗೆ ವಿವರಣೆ ನೀಡಿದರು.
ಬಂಟ್ವಾಳ ಪುರಸಭಾ ವ್ಯಾಪ್ತಿಯ 52.79 ಕೋ. ರೂ. ವೆಚ್ಚದಲ್ಲಿ ಸಮಗ್ರ ನೀರು ಸರಬರಾಜು ಯೋಜನೆ, ಕನ್ಯಾನ, ಕರೋಪಾಡಿ, ಕೊಳ್ನಾಡು, ವಿಟ್ಲಪಟ್ನೂರು ಗ್ರಾಮಗಳ 79 ಜನವಸತಿ ಪ್ರದೇಶಗಳಿಗೆ 25.82 ಕೋ.ರೂ. ವೆಚ್ಚದ ಕುಡಿಯುವ ನೀರಿನ ಯೋಜನೆ , ಸಂಗಬೆಟ್ಟು, ಕುಕ್ಕಿಪಾಡಿ, ಚೆನ್ನೈತ್ತೋಡಿ, ರಾಯಿ, ಅರಳ, ಪಂಜಿಕಲ್ಲು, ಅಮಾrಡಿ, ಕಳ್ಳಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ 34. 95 ಕೋ. ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, 10.7 ಕೋ.ರೂ. ವೆಚ್ಚದ ಕೆ.ಎಸ್.ಆರ್.ಟಿ.ಸಿ. ನೂತನ ಬಸ್ ನಿಲ್ದಾಣ, 10 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾದ ಬಂಟ್ವಾಳ ಮಿನಿ ವಿಧಾನಸೌಧ, 6.15 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾದ 100 ಹಾಸಿಗೆಗಳ ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಹಾಗೂ ನೂತನ ಕಟ್ಟಡ, ಬಿ.ಸಿ.ರೋಡ್ನಲ್ಲಿ 5.16 ಕೋ.ರೂ. ವೆಚ್ಚದಲ್ಲಿ ಮೆಸ್ಕಾಂ ಕಟ್ಟಡ, 3 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾದ ಬಂಟ್ವಾಳದ ಸುಸಜ್ಜಿತ ನೂತನ ನಿರೀಕ್ಷಣ ಮಂದಿರ, ಬಂಟ್ವಾಳದ ನೇತ್ರಾವತಿ ನದಿ ತೀರದಲ್ಲಿ 35 ಲ.ರೂ. ವೆಚ್ಚದಲ್ಲಿ ಸಸ್ಯೋದ್ಯಾನ, ಬಂಟ್ವಾಳ ತಾಲೂಕಿನ ನೂತನ ಪ್ರಾದೇಶಿಕ ಸಾರಿಗೆ ಕಚೇರಿಗೆ ಅವರು ಚಾಲನೆ ನೀಡಿದರು.
ಇದೇ ಸಂದರ್ಭ ಕಡೇಶಿವಾಲಯ- ಅಜಿಲಮೊಗರು ಸಂಪರ್ಕದ 31 ಕೋ.ರೂ. ವೆಚ್ಚದ ಸೌಹಾರ್ದ ಸೇತುವೆ ಯೋಜನೆಗೆ, ಸರಪಾಡಿ, ನಾವೂರು, ಬಡಗಕಜೆಕಾರು, ಕಾವಳಪಡೂರು, ಕಾವಳಮೂಡೂರು, ಪಿಲಾತಬೆಟ್ಟು , ಉಳಿ ಗ್ರಾ.ಪಂ. ವ್ಯಾಪ್ತಿಯ 97 ಪ್ರದೇಶಗಳಿಗೆ ನೀರು ಒದಗಿಸುವ 29.93 ಕೋ.ರೂ. ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ, ಮಾಣಿ, ಪೆರಾಜೆ, ಅನಂತಾಡಿ, ನೆಟ್ಲ ಮುಟ್ನೂರು, ಕಡೇಶ್ವಾಲ್ಯ, ಬರಿಮಾರು ಗ್ರಾ.ಪಂ. ವ್ಯಾಪ್ತಿಯ 51 ಜನವಸತಿ ಪ್ರದೇಶಗಳಿಗೆ 16.46 ಕೋ.ಊರ. ವೆಚ್ಚದ ಯೋಜನೆ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ, ನರಿಕೊಂಬು, ಬಾಳ್ತಿಲ, ಗೊಳ್ತಮಜಲು, ಗ್ರಾ.ಪಂ. ವ್ಯಾಪ್ತಿಯ ಪ್ರದೇಶಗಳಿಗೆ ನೀರು ಒದಗಿಸುವ 16.97 ಕೋ.ರೂ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ., 5 ಕೋ. ರೂ. ವೆಚ್ಚದ ಪಂಜೆ ಮಂಗೇಶರಾಯ ಸ್ಮಾರಕ ಭವನ ನಿರ್ಮಾಣ, ಅರಳ ಗ್ರಾಮದ ಮುಲಾರ ಪಟ್ನದಲ್ಲಿ 4.85 ಕೋ.ರೂ. ವೆಚ್ಚದ ಕಿಂಡಿ ಅಣೆಕಟ್ಟು ಯೋಜನೆಗೆ ಇದೇ ಸಂದರ್ಭದಲ್ಲಿ ಶಿಲಾನ್ಯಾಸ ನೆರವೇರಿಸಿದರು.
ಮಿನಿ ವಿಧಾನಸೌಧ ಉದ್ಘಾಟನೆ
ಮೊದಲಿಗೆ ಮುಖ್ಯಮಂತ್ರಿಯವರು ಬಿ.ಸಿ.ರೋಡ್ ಮಿನಿ ವಿಧಾನ ಸೌಧವನ್ನು ಉದ್ಘಾಟಿಸಿದರು, ಬಳಿಕ ಮೆಸ್ಕಾಂ ನೂತನ ಕಟ್ಟಡ, ಬಂಟ್ವಾಳದ ಸಸ್ಯೋದ್ಯಾನ, ನಿರೀಕ್ಷಣ ಮಂದಿರ, ನೂರು ಹಾಸಿಗೆಗಳ ಮೇಲ್ದರ್ಜೆಗೇರಿಸಿದ ಬಂಟ್ವಾಳದ ಆಸ್ಪತ್ರೆ, ಜಕ್ರಿಬೆಟ್ಟು ಸಮಗ್ರ ಕುಡಿಯುವ ನೀರಿನ ಯೋಜನೆ, ಬಿ.ಸಿ.ರೋಡ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣವನ್ನು ಉದ್ಘಾಟಿಸಿದರು.
ಬಂಟ್ವಾಳ ನಗರ ಠಾಣೆಯಿಂದ ಮಂಗಳೂರಿಗೆ ವರ್ಗಾವಣೆಗೊಂಡಿದ್ದ ಎಸ್ಐ ರಕ್ಷಿತ್ ಆಕ್ರೋಶಿತರನ್ನು ವಿಚಾರಿಸಿ ವಿಷಾದ ವ್ಯಕ್ತ ಮಾಡುವುದರ ಜತೆಗೆ, ಇದು ನಿಮ್ಮದೇ ಕಾರ್ಯ, ನೀವೇ ನಿಭಾಯಿಸಿ, ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಿ ಎನ್ನುವ ಮೂಲಕ ಸಮಾಧಾನ ಮಾಡಿದರು.
ಹೊರಬದಿಯ ನಾಮಫಲಕ ಅನಾವರಣ ಮಾಡಿಸಿ ಜನರನ್ನು ಹೊರಗೆ ಸಾಗಿಸುವಲ್ಲಿ ಹರಸಾಹಸ ಪಡಬೇಕಾಯಿತು. ಬಂಟ್ವಾಳದಲ್ಲಿ ಪಂಜೆ ಮಂಗೇಶರಾಯರ ಸ್ಮಾರಕ ಭವನಕ್ಕೆ ಶಿಲಾನ್ಯಾಸ ಮಾಡಿದರು. ಉಳಿದ ಎಲ್ಲ ಯೋಜನೆಗಳಿಗೆ ಮುಖ್ಯ ಸಭಾಂಗಣದ ಬಳಿಯಲ್ಲಿ ಅಳವಡಿಸಿದ ನಾಮ ಫಲಕಗಳ ತೆರೆಯನ್ನು ತಾಂತ್ರಿಕ ಕ್ರಮದಲ್ಲಿ ಸರಿಸಿ ಉದ್ಘಾಟನೆ, ಅನಾವರಣ ಮಾಡಿದರು.
ಸಚಿವರಾದ ರೋಶನ್ ಬೇಗ್, ಎಚ್.ಸಿ.ಮಹಾದೇವಪ್ಪ, ಪ್ರಮೋದ್ ಮಧ್ವರಾಜ್, ಈಶ್ವರ ಖಂಡ್ರೆ, ಡಿ.ಕೆ. ಶಿವಕುಮಾರ್, ಯು.ಟಿ.ಖಾದರ್, ಜಯಚಂದ್ರ, ಕೆಎಸ್ಆರ್ಟಿಸಿ ಚಯರ್ ಮೆನ್ ಗೋಪಾಲ ಪೂಜಾರಿ, ಐವನ್ ಡಿ’ಸೋಜಾ, ಅಭಯಚಂದ್ರ ಜೈನ್, ಶಕುಂತಳಾ ಟಿ. ಶೆಟ್ಟಿ, ಜೆ. ಆರ್. ಲೊಬೊ, ಬಿ.ಎ. ಮೊದಿನ್ ಬಾವ, ಮಂಗಳೂರು ಮೇಯರ್ ಕವಿತಾ ಸನಿಲ್, ಪ್ರಮುಖರಾದ ಕೃಪಾ ಅಮರ್ ಆಳ್ವ, ಬಿ.ಎಚ್. ಖಾದರ್, ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಟಾಸ್ ಅಲಿ, ಪುರಸಭಾ ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ ಭಾಗವಹಿಸಿದ್ದರು.
ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ, ಎಪಿಎಂಸಿ ಅಧ್ಯಕ ಕೆ.ಪದ್ಮನಾಭ ರೈ, ಜನಜಾಗೃತಿ ವೇದಿಕೆ ಅಧ್ಯಕ್ಷ ಎನ್.ಪ್ರಕಾಶ್ ಕಾರಂತ, ಗಣೇಶ ಶೆಟ್ಟಿ ಗೋಳ್ತಮಜಲು, ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಪ್ರಮುಖರಾದ ಮಧುಸೂದನ ಶೆಣೈ, ಯೂಸುಫ್ ಕರಂದಾಡಿ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಜಿ.ಪಂ. ಸದಸ್ಯರಾದ ಎಂ.ಎಸ್. ಮಹಮ್ಮದ್, ಬಿ. ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ , ಮಮತಾ ಡಿ.ಎಸ್. ಗಟ್ಟಿ, ಮಂಜುಳಾ ಮಾವೆ, ಕೊಂಕಣಿ ಅಕಾಡೆಮಿಯ ಆರ್.ಪಿ.ನಾಯಕ್, ಇಬ್ರಾಹಿಂ ಕೋಡಿಜಾಲ್, ಕಾಂಗ್ರೆಸ್ ಪಕ್ಷದ ತಾ.ಪಂ. ಜನ ಪ್ರತಿನಿಧಿಗಳು , ಗ್ರಾ.ಪಂ. ಜನ ಪ್ರತಿನಿಧಿಗಳು,ಸಹಿತ ಇತರ ಪ್ರಮುಖರು ಎಲ್ಲ ಯೋಜನೆಗಳ ಉದ್ಘಾಟನೆ ಸಂದರ್ಭ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್, ಅಪರ ಜಿಲ್ಲಾಧಿಕಾರಿ ಕುಮಾರ್ ಸಹಿತ ಜಿಲ್ಲಾ ಮಟ್ಟದ ಅಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ವೈಶಿಷ್ಟ್ಯ ಪೂರ್ಣ ಮೆರವಣಿಗೆ
ಬಜ್ಪೆ ವಿಮಾನ ನಿಲ್ದಾಣದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಬಂಟ್ವಾಳಕ್ಕೆ ಆಗಮಿಸಿದ ಮುಖ್ಯಮಂತ್ರಿಗಳನ್ನು ಬಿ.ಸಿ.ರೋಡ್ ಕೈಕಂಬದಲ್ಲಿ ಸಹಸ್ರಾರು ಸಂಖ್ಯೆಯ ಸಾರ್ವಜನಿಕರು ಎದುರ್ಗೊಂಡು ಮಾಲಾರ್ಪಣೆ ಮೂಲಕ, ಕರಾವಳಿ ಕರ್ನಾಟಕದ ಗಂಡು ಕಲೆ ವೀರ ರಸ ಪ್ರಚೋದನೆಯ ಚೆಂಡೆ ನಾದ, ಬಿ.ಎ. ಬ್ಯಾಂಡ್ ವಾದನ, ಜಿಲ್ಲೆಯ ಹೆಸರಾಂತ ಹುಲಿ ವೇಷ, ಕಲ್ಲಡ್ಕದ ಶಿಲ್ಪಾ ಗೊಂಬೆ ಬಳಗದ ನೃತ್ಯ ಸಂಯೋಜನೆ,ಕೀಲು ಕುದುರೆ, ರಾಜರಾಣಿ ಕುಣಿತ, ಹತ್ತು ತಲೆಯ ರಾವಣ ವೇಷಭೂಷಣದ ಇತರ ಗೊಂಬೆ ಕುಣಿತಗಳ ಮೆರವಣಿಗೆಯಲ್ಲಿ ಸ್ವಾಗತಿಸಿ ಕರೆತರಲಾಯಿತು. ಕೈಕಂಬದಲ್ಲಿ ಜಿಲ್ಲಾಡಳಿತದಿಂದ ಒದಗಿಸಲಾದ ಬಸ್ಸನ್ನು ಏರಿದ ಮುಖ್ಯಮಂತಿಗಳು ಎಲ್ಲ ಕಡೆಗೂ ಇದೇ ಬಸ್ನಲ್ಲಿ ಸಂಚರಿಸಿದರು.
ನೂಕುನುಗ್ಗಲು
ಸಿಎಂ ಮಿನಿ ವಿಧಾನ ಸೌಧ ಉದ್ಘಾಟಿಸಲು ಬಂದಾಗ ಅಪಾರ ಜನಸಾಗರ ಒಳಗೆ ನುಗ್ಗಿದಾಗ ಪೊಲೀಸರಿಗೆ ಅವರನ್ನು ನಿಯಂತ್ರಿಸುವುದೇ ಕಷ್ಟವಾಗಿ ಒಂದು ಹಂತದಲ್ಲಿ ಪೊಲೀಸರು ಲಾಠಿ ಬೀಸುವ ಮೂಲಕ ಹೊರ ಬದಿಯ ಗೇಟನ್ನು ಮುಚ್ಚಿದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಸುಧೀರ್ ರೆಡ್ಡಿ, ಎಎಸ್ಪಿ ಡಾ| ನಾಗರಾಜ್ ಕಟ್ಟು ನಿಟ್ಟಿನ ಕ್ರಮಕ್ಕೆ ಪೊಲೀಸ್ ಸಿಬಂದಿಗೆ ನಿರ್ದೇಶಿಸಿದರು.
ಒತ್ತಡಕ್ಕೆ ಒಡೆದ ಬಾಗಿಲ ಪಟ್ಟಿ
ಮಿನಿ ವಿಧಾನಸೌಧ ಮುಖದ್ವಾರದಲ್ಲೂ ಒತ್ತಡದಿಂದ ದ್ವಾರದ ಬಾಗಿಲಿನ ದಾರಂದ ಪಟ್ಟಿ ಒಡೆದಿತ್ತು. ಸುರಕ್ಷಾ ಸಿಬಂದಿ ಘಟನೆಯ ಬಳಿಕ ಮಿನಿ ವಿಧಾನ ಸೌಧ ಒಳಗಿನ ಜನರನ್ನು ಸಂಪೂರ್ಣ ಹೊರಗೆ ಕಳುಹಿಸಿ ಮುಖ್ಯಮಂತ್ರಿಯವರನ್ನು ಹೊರಗೆ ಕರೆತಂದರು.