ವೀರಶೈವ-ಲಿಂಗಾಯತ ಗೊಂದಲ ಬೇಡ : ಪಾಟೀಲ
Team Udayavani, Aug 22, 2017, 12:45 PM IST
ಬಸವಕಲ್ಯಾಣ: ವೀರಶೈವ ಹಾಗೂ ಲಿಂಗಾಯತ ಎನ್ನುವುದು ಬೇರೆ ಬೇರೆಯಲ್ಲ. ಈ ಬಗ್ಗೆ ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡುವುದು ಬೇಡ ಎಂದು ಬಿಜೆಪಿ ಉಪಾಧ್ಯಕ್ಷ ಸುನೀಲ ಪಾಟೀಲ ಹೇಳಿದರು. ನಗರದ ಗವಿಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಗವಿಮಠ ಟ್ರಸ್ಟ್ ಹಾಗೂ ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ತಾಲೂಕು ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಸಿದ್ಧಾಂತ ಶಿಖಾಮಣಿ ನಿತ್ಯ ಪಠಣ ಹಾಗೂ
ಉಪನ್ಯಾಸ ಮಾಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಖೀಲ ಭಾರತ ವೀರಶೈವ ಮಹಾಸಭೆಗೆ ಶ್ರೀ ಭೀಮಣ್ಣ ಖಂಡ್ರೆ ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ವೀರಶೈವ, ಲಿಂಗಾಯತದ ಬಗ್ಗೆ ಸಮಾಜದಲ್ಲಿರುವ ಗೊಂದಲ ನಿವಾರಿಸುವ ಪ್ರಯತ್ನ ನಡೆದಿತ್ತು. ಅಂದು ಕೂಡಲ ಸಂಗಮದಲ್ಲಿ ಸಮಾವೇಶ ಆಯೋಜಿಸಿ ಪಂಚಾಚಾರ್ಯರ ಪರಂಪರೆ ಮತ್ತು ವಿರಕ್ತ ಪರಂಪರೆ ಮಠಾಧಿಧೀಶರನ್ನು ಒಂದೇ ವೇದಿಕೆಗೆ ಆಹ್ವಾನಿಸಿಸಲಾಗಿತ್ತು ಎಂದರು. ಡಾ| ಶಿವಲೀಲಾ ಶಾಂತಲಿಂಗ ಮಠಪತಿ ಮಾತನಾಡಿ, ವೀರಶೈವ ಲಿಂಗಾಯತ ಧರ್ಮ ಸಿಂಧೂ ನಾಗರಿಕತೆಯಷ್ಟೆ ಪ್ರಾಚೀನ. ಇತಿಹಾಸ ತಜ್ಞ ಸರ್ ಜಾನ್ ಮಾರ್ಷಲ್ ಅವರು ಈ ನಾಗರಿಕತೆಯ ನೆಲೆಗಳಲ್ಲಿ ಅನೇಕ ಚಿಕ್ಕ ಲಿಂಗಗಳನ್ನು ಶೋಧಿಸಿ ಪ್ರಪಂಚಕ್ಕೆ ಪರಿಚಯಿಸಿದ್ದು ಸಾಕ್ಷಿಯಾಗಿದೆ. ಶಿವಾಗಮಗಳು ವೀರಶೈವ ಲಿಂಗಾಯತ ಸಾಹಿತ್ಯವಾಗಿದ್ದು ಇವುಗಳ ಅಧ್ಯಯನದಿಂದ ಸತ್ಯ ಅರಿಯಲು ಸಾಧ್ಯವಿದೆ ಎಂದರು. ಸಾನ್ನಿಧ್ಯ ವಹಿಸಿದ್ದ ಶ್ರೀ ಅಭೀನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿದರು. ಪ್ರೌಢ ಶಾಲೆ ಮುಖ್ಯಗುರು ವಿಶ್ವನಾಥ ಬಿರಾದಾರ ಮಾತನಾಡಿದರು. ದಯಾನಂದ ಶೀಲವಂತ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಬಸವಂತಪ್ಪಾ ಲವಾರೆ ನಿರೂಪಿಸಿದರು. ರುದ್ರೇಶ್ವರ ಸ್ವಾಮಿ ಗೋರ್ಟಾ ವಂದಿಸಿದರು. ಸಂಸ್ಥೆಯ ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ರಮೇಶ ಸ್ವಾಮಿ, ಸರಸ್ವತಿ ಬೆಂಬಳೆ, ಶೀಲಾದೇವಿ ಲವಾರೆ, ರೇಣುಕಾ ಮಠಪತಿ, ರೇವಣಸಿದ್ದಯ್ನಾ ಮಠಪತಿ, ವೀರಣ್ಣಾ ಶೀಲವಂತ, ಮಲ್ಲಿಕಾರ್ಜುನ ನಂದಿ ಉಪಸ್ಥಿತರಿದ್ದರು.