ಭಾಷಣಕ್ಕಷ್ಟೇ ಸೀಮಿತವಾಯ್ತೆ ಬಿಜೆಪಿ ಬರ ಅಧ್ಯಯನ!
Team Udayavani, Jan 10, 2017, 1:02 PM IST
ಚಿತ್ರದುರ್ಗ: ಬರದಿಂದ ತತ್ತರಿಸುತ್ತಿರುವ ಜಿಲ್ಲೆಯಲ್ಲಿ ಸೋಮವಾರ ಬಿಜೆಪಿ ವತಿಯಿಂದ ಮತ್ತೂಮ್ಮೆ ನಡೆದ ಬರ ಅಧ್ಯಯನ ಪರಿಶೀಲನೆಯೋ ಅಥವಾ ಬಹಿರಂಗ ಸಭೆಯೋ ಎಂಬ ಅನುಮಾನ ಮೂಡಿಸಿತು. ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಬರ ಅಧ್ಯಯನ ಕಾಟಾಚಾರಕ್ಕೆ ನಡೆಯಿತೇ ಎಂಬ ಪ್ರಶ್ನೆಯೂ ಮೂಡಿತು.
ರೈತರ ಬಳಿ ತೆರಳಿ ವಾಸ್ತವ ಸ್ಥಿತಿಗತಿ ಅರಿಯುವ ಕೆಲಸ ಮಾಡದೆ “ಬಂದ ಪುಟ್ಟ ಹೋದ ಪುಟ್ಟ’ ಎಂಬಂತಾಯಿತು. ಹಿರಿಯೂರು ತಾಲೂಕಿನ ಬಬ್ಬೂರಿನಲ್ಲಿ ಕುಡಿಯವ ನೀರಿನ ಅಭಾವ, ಜಾನುವಾರುಗಳು ಮೇವು, ನೀರಿಗಾಗಿ ಅನುಭವಿಸುತ್ತಿರುವ ತೊಂದರೆ ಹಾಗೂ ರೈತರ ಸಮಸ್ಯೆಗಳನ್ನು ಆಲಿಸಬೇಕಿತ್ತು.
ಆದರೆ ಇದು ವೇದಿಕೆ ಕಾರ್ಯಕ್ರಮಕ್ಕಷ್ಟೇ ಸೀಮಿತಗೊಂಡಿತು. ಬೆಳಗ್ಗೆ 10:30 ಗಂಟೆಗೆ ನಿಗದಿಯಾಗಿದ್ದ ರೈತರೊಂದಿಗಿನ ಸಂವಾದ ಕಾರ್ಯಕ್ರಮ ಆರಂಭಗೊಂಡಿದ್ದು ಮಧ್ಯಾಹ್ನ 12:15ಕ್ಕೆ. ಕಾರ್ಯಕ್ರಮ ಮುಗಿಯುವಾಗ ಮಧ್ಯಾಹ್ನ 1:30 ಆಗಿತ್ತು.
ಸಂವಾದದಲ್ಲಿ ಪ್ರಶ್ನೆ ಕೇಳಿದ್ದು ಬಿಜೆಪಿ ಕಾರ್ಯಕರ್ತರು!: ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆ ಕೇಳಿದ್ದು ರೈತರ ಬದಲಾಗಿ ಬಿಜೆಪಿ ಕಾರ್ಯಕರ್ತರಾದ ಹೇಮಂತ್ ಗೌಡ, ತಿಮ್ಮರಾಜ್ ಯಾದವ್, ಮಹೇಶ್ವರಪ್ಪ, ಬೇಲಪ್ಪ ಮತ್ತಿತರರು! ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಕಡಿಮೆ ಪಡಿತರ ನೀಡಿಕೆ, ಫಸಲ್ ಬಿಮಾ ಯೋಜನೆ, ಕೃಷಿ ಹೊಂಡ ಮುಚ್ಚಲು ಅಧಿಕಾರಿಗಳು ತಾಕೀತು ಮಾಡುತ್ತಿರುವ ಬಗ್ಗೆ ಬಿಜೆಪಿ ಕಾರ್ಯಕರ್ತರೇ ಪ್ರಶ್ನೆಗಳನ್ನು ಕೇಳುವ ಮೂಲಕ ಅಚ್ಚರಿ ಮೂಡಿಸಿದರು.
ಅಲ್ಲಿಗೆ ಬರ ಅಧ್ಯಯನ ಮತ್ತು ರೈತರೊಂದಿಗಿನ ಸಂವಾದ ಅರ್ಧದಷ್ಟು ಮುಗಿದಂತಾಗಿತ್ತು. ಬಬ್ಬೂರಿನಿಂದ ಪ್ರಯಾಣ ಬೆಳೆಸಿದ ಬಿಜೆಪಿ ಬರ ಅಧ್ಯಯನ ತಂಡ ಚಳ್ಳಕೆರೆ ನಗರಕ್ಕೆ ಹೋಗುವ ಮಾರ್ಗದಲ್ಲೇ ಬರುವ ಸಾಣಿಕೆರೆ ಗೋಶಾಲೆಗೆ ಭೇಟಿ ನೀಡಿತು.
ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಸೋಮಗುದ್ದು ಗ್ರಾಮದ ರೈತನ ಮನೆಗೆ ಭೇಟಿ ನೀಡಿ ಮೃತ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿತು. ಒಣಗಿದ ತೋಟಗಳ ವೀಕ್ಷಿಸದ ತಂಡ: ನಂತರ ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿಗೆ ಭೇಟಿ ನೀಡಿದರೂ ಅಲ್ಲಿ ರೈತರೊಂದಿಗೆ ನಡೆಯಬೇಕಿದ್ದ ಸಂವಾದ ರದ್ದಾಯಿತು.
ಸಮೀಪದಲ್ಲೇ ಇದ್ದ ಕೋನಸಾಗರ ಗ್ರಾಮದ ಕೆರೆ ವೀಕ್ಷಣೆ ಕಾರ್ಯವೂ ಆಗಲಿಲ್ಲ. ಜಿಲ್ಲೆಯಲ್ಲೇ ಮೊಳಕಾಲ್ಮೂರು ತಾಲೂಕು ಅತ್ಯಂತ ಬರಪೀಡಿತ ಪ್ರದೇಶವಾಗಿದ್ದು, ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಆದರೂ ಅಲ್ಲಿ ಬರ ಅಧ್ಯಯನ ಸಮರ್ಪಕವಾಗಿ ಆಗಲಿಲ್ಲ. ಭರಮಸಾಗರ, ಲಕ್ಷ್ಮೀಸಾಗರ ಭಾಗದಲ್ಲಿ ಕೊಳವೆಬಾವಿಗಳು ವಿಫಲವಾಗಿ ತೋಟಗಳು ಒಣಗಿ ಹೋಗಿವೆ.
ಒಣಗಿದ ತೋಟಗಳ ವೀಕ್ಷಣೆಯನ್ನು ಬಿಜೆಪಿ ತಂಡ ಮಾಡಲೇ ಇಲ್ಲ. ನಾಯಕನಹಟ್ಟಿ, ತುರುವನೂರು, ಕೂನಬೇವು ಗ್ರಾಮಗಳಿಗೆ ಭೇಟಿ ಪೂರ್ಣಗೊಳ್ಳುವಾಗ ರಾತ್ರಿ 7:15 ಆಗಿತ್ತು. ಚಿತ್ರದುರ್ಗ ನಗರದ ಗಾಯತ್ರಿ ಕಲ್ಯಾಣಮಂಟಪದಲ್ಲಿ ರಾತ್ರಿ 7:30ಕ್ಕೆ ನಿಗದಿಯಾಗಿದ್ದ ಆಗ್ನೇಯ ಶಿಕ್ಷಕರ ಕ್ಷೇತ್ರದ ಪ್ರಚಾರ ಸಭೆಗೆ ಯಡಿಯೂರಪ್ಪನವರು 7:40ಕ್ಕೆ ಆಗಮಿಸಿದರು.
ಒಟ್ಟಾರೆ ಬೆಳಗ್ಗೆ 10:30ರಿಂದ ಸಂಜೆ 6:30 ಗಂಟೆವರೆಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಬರ ಅಧ್ಯಯನ ತಂಡ ಬರ ಅಧ್ಯಯನ ನಡೆಸಬೇಕಿತ್ತು. ಆದರೆ ಕೇವಲ ಭಾಷಣ, ವಿಧಾನ ಪರಿಷತ್ ಉಪ ಚುನಾವಣಾ ಪ್ರಚಾರಕ್ಕಷ್ಟೇ ಸೀಮಿತಗೊಂಡಿತು.
* ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ