ಭಯ ಬಿಡಿ, ಪೊಲೀಸರೊಂದಿಗೆ ಕೈ ಜೋಡಿಸಿ
Team Udayavani, Jul 22, 2017, 1:52 PM IST
ದಾವಣಗೆರೆ: ಪೊಲೀಸರೊಂದಿಗೆ ನಾಗರಿಕರು ಉತ್ತಮ ಸಂಬಂಧ ಇಟ್ಟುಕೊಂಡಲ್ಲಿ ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ಸುಲಭ ಎಂದು ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕ ಎಂ.ಎ. ಸಲೀಂ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ತ್ರಿಶೂಲ್ ಕಲಾಭವನದಲ್ಲಿ ಸುಧಾರಿತ ಗಸ್ತು ನಾಗರಿಕ ಸದಸ್ಯರ ಸಭೆ ಉದ್ಘಾಟಿಸಿ, ಮಾತನಾಡಿದ ಅವರು, ದಾವಣಗೆರೆಯನ್ನ ಮಾದರಿ ನಗರ ಮಾಡುವಲ್ಲಿ ನಾಗರಿಕರ ಪಾತ್ರ ಹಿರಿದಾಗಿದೆ. ಅಪರಾಧ ಚಟುವಟಿಕೆಗೆ ಕಡಿವಾಣ ಹಾಕಿ, ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಾರ್ವಜನಿಕರ ಸಹಕಾರ ಅತೀ ಅಗತ್ಯ ಎಂದರು. ಪೊಲೀಸರ ಕೆಲಸ ನಾಗರಿಕರಿಗೆ ಭದ್ರತೆ ಒದಗಿಸಿ, ಕಾನೂನು ಸುವ್ಯವಸ್ಥೆ ಕಾಪಾಡುವುದೇ ಆಗಿದೆ. ಆದರೆ, ನಾಗರಿಕರು ಪೊಲೀಸರನ್ನು ಕಂಡರೆ ಈಗಲೂ ಭಯ ಪಡುವ ಸ್ಥಿತಿ ಇದೆ. ಅನೇಕ ಸಮಯದಲ್ಲಿ ನಾಗರಿಕರು ಸಣ್ಣ ಸಹಾಯಕ್ಕೂ ಸಹ ಮುಂದೆ ಬರುವುದಿಲ್ಲ. ಮಹಜರು ಮಾಡುವಾಗ, ಸಾಕ್ಷಿ ಹೇಳುವಾಗ, ಅಪರಾಧ ಚಟುವಟಿಕೆ ಕುರಿತು ಮಾಹಿತಿ ನೀಡುವಾಗ ನಾಗರಿಕರು ಹಿಂಜರಿಯುತ್ತಾರೆ. ಈ ಮನೋಭಾವ ದೂರಾಗಬೇಕಿದೆ ಎಂದು ಹೇಳಿದರು.
ಬ್ರಿಟೀಷರ ಕಾಲದಲ್ಲಿ ಜಾರಿಯಾದ ಪೊಲೀಸ್ ವ್ಯವಸ್ಥೆ ನಾಗರಿಕರಲ್ಲಿನ ಭಯಕ್ಕೆ ಕಾರಣವಾಗಿದೆ. ಬ್ರಿಟೀಷರು ತಮ್ಮ ಸಾಮ್ರಾಜ್ಯದ ವಿರುದ್ಧ ಯಾರೂ ದನಿ ಎತ್ತಬಾರದು. ಹೋರಾಟ ರೂಪಿಸಬಾರದು ಎಂಬ ಕಾರಣಕ್ಕೆ ಪೊಲೀಸರನ್ನು ಉಗ್ರವಾದಿಗಳಂತೆ ಬಿಂಬಿಸಿ, ಪೊಲೀಸರ ಬಗ್ಗೆ ಭಯ ಹುಟ್ಟುವಂತೆ ನೋಡಿಕೊಳ್ಳುತ್ತಿದ್ದರು. ಅದೇ ಇಂದೂ ಸಹ ಮುಂದುವರಿದಿದೆ. ಇದೀಗ ಈ ನಾಗರಿಕ ಸಮಿತಿ ಮೂಲಕ ಅದನ್ನು ದೂರಮಾಡುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.
ಈ ಹಿಂದೆ ಸಹ ಈ ವ್ಯವಸ್ಥೆ ಇತ್ತು. ಆದರೆ, ದೊಡ್ಡ ಪ್ರಮಾಣದಲ್ಲಿ ಇರಲಿಲ್ಲ. ಇದೀಗ 2-3 ಹಳ್ಳಿಗೆ, ನಗರ ಪ್ರದೇಶಗಳಲ್ಲಿ 300 ಮನೆಗೆ ಒಬ್ಬರನ್ನು ಗಸ್ತಿಗೆ ನೇಮಿಸಲಾಗಿದೆ. ಇದರಿಂದ ನಾಗರಿಕರು ಪೊಲೀಸ್ ಜೊತೆಗೆ ಬೆರೆಯಲು, ಸಲಹೆ, ಸಹಕಾರ ನೀಡಲು
ಅನುಕೂಲವಾಗಲಿದೆ. ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅತಿ ಬೇಗ 27 ಪೊಲೀಸ್ ಠಾಣೆಗಳಲ್ಲಿ ಸಮಿತಿ ರಚಿಸುವ ಮೂಲಕ ಉತ್ತಮ ಕಾರ್ಯ ನಿರ್ವಹಿಸಿದ್ದಾರೆಂದು ಅವರು ಶ್ಲಾಘಿಸಿದರು.
ಇತೀ¤ಚಿನ ದಿನಗಳಲ್ಲಿ ಅಪರಾಧಿಗಳು ಸಹ ತಮ್ಮ ಕಾರ್ಯವೈಖರಿ ಬದಲಾಯಿಸಿಕೊಂಡಿದ್ದಾರೆ. ಮೊದಲಿನಂತೆ ಮನೆಗಳ್ಳತನ ಮಾಡುವ ಗೋಜಿಗೆ ಅವರು ಹೋಗುತ್ತಿಲ್ಲ. ಇದೀಗ ಸರಗಳ್ಳತನ ಪ್ರಕರಣ ಹೆಚ್ಚುತ್ತಿವೆ. ಇವನ್ನು ತಡೆಯುವ ನಿಟ್ಟಿನಲ್ಲಿ ನಾಗರಿಕರು
ಸಹಕಾರ ನೀಡಬೇಕು. ಬೆಲೆ ಬಾಳುವ ಒಡವೆ ಧರಿಸುವಾಗ ಎಚ್ಚರಿಕೆ ವಹಿಸಿ. ಅನುಮಾನಾಸ್ಪದವಾಗಿ ಸಂಚರಿಸುವವರ ಕುರಿತು ಮಾಹಿತಿ ನೀಡಿ ಎಂದು ಅವರು ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಯಶೋದ ಎಸ್. ವಂಟಗೋಡಿ, ನಗರ ಉಪಾಧೀಕ್ಷಕ ಬಾಬು, ಸಿಪಿಐ ಉಮೇಶ್ ಇದ್ದರು. ನಂತರ ನಡೆದ ಸಂವಾದದಲ್ಲಿ ನಾಗರಿಕರು ತಮ್ಮ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ಒಂದೂವರೆ ತಾಸು ವಿಳಂಬ
ಪೊಲೀಸ್ ಇಲಾಖೆ ಕರೆದಿದ್ದ ನಾಗರಿಕ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಜನರು ಸಂವಾದಕ್ಕೆ ಒಂದೂವರೆ ತಾಸು ಕಾಯಬೇಕಾಯಿತು. ಸಭೆ ಬೆಳಗ್ಗೆ 10 ಗಂಟೆಗೆ ಸಭೆ ನಿಗದಿಯಾಗಿತ್ತು. ಆದರೆ, ಆರಂಭವಾಗಿದ್ದು 11.30ಕ್ಕೆ. ಪ್ರಾರ್ಥನೆ, ಸ್ವಾಗತ, ಉದ್ಘಾಟಕರ ಭಾಷಣ ಹೀಗೆ ವೇದಿಕೆಯ ಪ್ರಕ್ರಿಯೆ ಮುಗಿಯುವ ವೇಳೆಗೆ 12 ಗಂಟೆ ದಾಟಿತು. ನಂತರ ಸಂವಾದಕ್ಕೆ ಅವಕಾಶ ಮಾಡಿಕೊಡಲಾಯಿತು.
ಅಭಯ ಶೀಘ್ರಾರಂಭ
ಒಂಟಿಯಾಗಿ ವಾಸ ಮಾಡುವ ಹಿರಿಯ ನಾಗರಿಕರಿಗೆ ರಕ್ಷಣೆ ಕೊಡುವ ಉದ್ದೇಶದಿಂದ ಅಭಯ ಎಂಬ ಹೊಸ ಯೋಜನೆ ಜಾರಿ ಮಾಡಲಿದ್ದೇವೆ. ಇದರಡಿ ನಿಗದಿತ ಸಮಯಕ್ಕೆ ಪೊಲೀಸರು ಗುರುತಿಸಲ್ಪಟ್ಟ ಹಿರಿಯ ನಾಗರಿಕರನ್ನು ಭೇಟಿಮಾಡಿ, ಭದ್ರತೆ ಒದಗಿಸಲಿದ್ದಾರೆ.
ಎಂ.ಎ. ಸಲೀಂ, ಪೂರ್ವ ವಲಯ ಐಜಿಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ
ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮ್ಮದ್ ಅಮಾನತು
Election Campaign: ಮೋದಿಯವರಿಂದ ಮಹಿಳಾ ಶಕ್ತಿಗೆ ಮುನ್ನುಡಿ
Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ
Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ