ಕುತೂಹಲ ಕೆರಳಿಸಿದ ದೋವಲ್ ಭೇಟಿ ಬಗೆಹರಿಯುವುದೇ ಬಿಕ್ಕಟು?
Team Udayavani, Jul 27, 2017, 7:43 AM IST
ಚೀನದ ಸರಕಾರಿ ಮಾಧ್ಯಮಗಳೇ ಯುದ್ದೋನ್ಮಾದದ ಮಾತುಗಳನಾಡುತ್ತಾ ಆ ದೇಶದ ವಿದೇಶಾಂಗ ನೀತಿಯನ್ನು
ನಿರ್ಧರಿಸಿತೊಡಗಿವೆ. ಆದರೆ ಭಾರತ ಈ ವಿಚಾರದಲ್ಲಿ ಅದ್ಭುತವಾದ ಸಂಯಮವನ್ನು ತೋರಿಸಿದೆ.
ದೇಶದ ಭದ್ರತಾ ಸಲಹೆಗಾರ ವಿದೇಶ ಪ್ರಯಾಣ ಕೈಗೊಳ್ಳುವುದು ಸಾಮಾನ್ಯ ಸನ್ನಿವೇಶದಲ್ಲಾದರೆ ಅಂತಹ ಪ್ರಮುಖ ವಿಚಾರವೇನೂ ಅಲ್ಲ. ಆದರೆ ದೋಕ್ಲಾಮ್ ಬಿಕ್ಕಟ್ಟಿನಿಂದಾಗಿ ಭಾರತ ಮತ್ತು ಚೀನ ನಡುವೆ ಪ್ರಸ್ತುತ ಏರ್ಪಟ್ಟಿರುವ ಪ್ರಕ್ಷುಬ್ಧ ಪರಿಸ್ಥಿತಿಯ ನಡುವೆಯೇ ಭದ್ರತಾ ಸಲಹೆಗಾರ ಅಜಿತ್ ದೋವಲ್ ಬ್ರಿಕ್ಸ್ ದೇಶಗಳ ಭದ್ರತಾ ಸಲಹೆಗಾರರ ಶೃಂಗದಲ್ಲಿ ಭಾಗವಹಿಸುವ ಸಲುವಾಗಿ ಬೀಜಿಂಗ್ಗೆ ಹೊರಟಿರುವುದು ಇಡೀ ಜಗತ್ತಿನ ಗಮನ ಸೆಳೆದ ವಿದ್ಯಮಾನವಾಗಿದೆ. ಗುರುವಾರ ಮತ್ತು ಶುಕ್ರವಾರ ದೋವಲ್ ಬೀಜಿಂಗ್ನಲ್ಲಿರುತ್ತಾರೆ. ದೋವಲ್ ಭೇಟಿಯಿಂದ ಉಭಯ ದೇಶಗಳ ನಡುವಿನ ಪ್ರಕ್ಷುಬ್ಧತೆ ನಿವಾರಣೆಯಾಗುವ ಯಾವುದಾದರೂ ಬೆಳವಣಿಗೆ ನಡೆದೀತೆ ಎನ್ನುವ ನಿರೀಕ್ಷೆ ಈ ಕುತೂಹಲಕ್ಕೆ ಕಾರಣ. ಚೀನ, ಭಾರತ ಮತ್ತು ಭೂತಾನ್ ಸೇರುವ ಸಿಕ್ಕಿಂ ರಾಜ್ಯದ ದೋಕ್ಲಾಮ್ ತ್ರಿಜಂಕ್ಷನ್ನಲ್ಲಿ ಭಾರತ ಮತ್ತು ಚೀನಿ ಸೇನೆ ಮುಖಾಮುಖೀಯಾಗಿ ಒಂದೂವರೆ ತಿಂಗಳಾಗಿದೆ. ಈ ಹಿನ್ನಲೆಯಲ್ಲಿ ದೋವಲ್ ಭೇಟಿಗೆ ಭಾರತ ಮಾತ್ರವಲ್ಲ, ಚೀನದಲ್ಲೂ ಸಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗಿರುವುದು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.
ಗಡಿ ಪ್ರಕ್ಷುಬ್ಧಗೊಂಡ ಬಳಿಕ ಚೀನ ಸರಕಾರದ ಅಧೀನದಲ್ಲಿರುವ ವಿವಿಧ ಮಾಧ್ಯಮಗಳು ನಿರಂತರವಾಗಿ
ಭಾರತವನ್ನು ಕೆರಳಿಸುವ ಕೆಲಸ ಮಾಡುತ್ತಿವೆ. ಒಂದು ಪತ್ರಿಕೆ 1962ರ ಸೋಲನ್ನು ನೆನಪಿಸಿದಾಗ ವಿತ್ತ ಸಚಿವ ಅರುಣ್ ಜೈಟ್ಲೀ ಇದಕ್ಕೆ ತಕ್ಕ ತಿರುಗೇಟು ನೀಡಿದರು. ಅನಂತರ ಚೀನದ ಮಾಧ್ಯಮ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಂಸತ್ತಿಗೆ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿತು. ಒಂದು ಮಾಧ್ಯಮವಂತೂ ಮೋದಿ ಪ್ರಧಾನಿಯಾದ ಬಳಿಕ ಹುಟ್ಟಿಕೊಂಡ ಹಿಂದು ರಾಷ್ಟ್ರೀಯವಾದವೇ ಎಲ್ಲ ಸಮಸ್ಯೆಗಳಿಗೆ ಮೂಲ ಎಂದು, ವಿವಾದಕ್ಕೆ ಭಾರತದ ರಾಜಕೀಯ ಒಡಕಿನ ಆಯಾಮ ನೀಡುವ ಪ್ರಯತ್ನ ಮಾಡಿತು. ತನ್ನ ಸೇನಾ ಬಲದ ಕುರಿತು ಚೀನ ಹೇಳಿಕೊಂಡಿರುವ ಉತ್ಪ್ರೇಕ್ಷಿತ ಮಾತುಗಳಿಗೆ ಲೆಕ್ಕವಿಲ್ಲ. ಪರ್ವತವನ್ನಾದರೂ ಕದಲಿಸಬಹುದು, ನಮ್ಮ ಸೇನೆಯ ಕೂದಲು ಕೊಂಕಿಸಲು ಸಾಧ್ಯವಿಲ್ಲ ಎಂದು ಸರಕಾರದ ಪರವಾಗಿ ಇನ್ನೊಂದು ಪತ್ರಿಕೆ ತುತ್ತೂರಿ ಊದಿತು. ಇದರ ಬೆನ್ನಿಗೆ ಮತ್ತೂಂದು ಪತ್ರಿಕೆಯಲ್ಲಿ ಚೀನದ ವಿರುದ್ಧ ಯುದ್ಧ ಮಾಡಿ ಗೆಲ್ಲುವ ಹುಸಿ ಭ್ರಮೆಯಲ್ಲಿ ಭಾರತವಿದೆ ಎಂಬ ವ್ಯಂಗ್ಯ ಲೇಖನ ಪ್ರಕಟವಾಯಿತು. ಹೀಗೆ ಚೀನದ ಸರಕಾರಿ ಮಾಧ್ಯಮಗಳೇ ಯುದ್ದೋನ್ಮಾದದ ಮಾತುಗಳನಾಡುತ್ತಾ ಆ ದೇಶದ ವಿದೇಶಾಂಗ ನೀತಿಯನ್ನು ನಿರ್ಧರಿಸಿತೊಡಗಿವೆ. ಆದರೆ ಭಾರತ ಈ ವಿಚಾರದಲ್ಲಿ ಅದ್ಭುತವಾದ ಸಂಯಮವನ್ನು ತೋರಿಸಿದೆ. ಚೀನದ ಪ್ರಚೋದನೆಗಳಿಗೆ ಅಗತ್ಯವಿರುವಾಗ ಅಗತ್ಯವಿರುವಷ್ಟು ಮಾತ್ರ ಪ್ರತಿಕ್ರಿಯಿಸಿ ಉಳಿದಂತೆ ದಿವ್ಯ ನಿರ್ಲಕ್ಷ್ಯ ತೋರಿಸುವ ಮೂಲಕ ಗೊಡ್ಡು ಬೆದರಿಕೆಗಳಿಗೆ ಸೊಪ್ಪು ಹಾಕುವುದಿಲ್ಲ ಎಂದು ಸೂಚಿಸಿದೆ.
ಭಾರತದ ಮಾಧ್ಯಮಗಳು ಕೂಡ ಈ ವಿಚಾರದಲ್ಲಿ ಅತಿರೇಕವಾಗುವಷ್ಟು ವರದಿಗಳನ್ನು ಪ್ರಕಟಿಸಿಲ್ಲ ಎನ್ನುವುದು ಗಮನಾರ್ಹ ವಿಚಾರ. ಭಾರತವೇ ದೋಕ್ಲಾಮ್ನಲ್ಲಿ ಗಡಿ ದಾಟಿ ಅತಿಕ್ರಮಣ ಮಾಡಿದೆ, ದ್ವಿಪಕ್ಷೀಯ ಮಾತುಕತೆಯೇನಿದ್ದರೂ ಸೇನೆಯನ್ನು ವಾಪಸು ಕರೆಸಿಕೊಂಡ ಬಳಿಕ ಎನ್ನುವುದು ಚೀನದ ಸ್ಪಷ್ಟ ನಿಲುವು. ದೋಕ್ಲಾಮ್ನಿಂದ ಸೇನೆ ಹಿಂದೆಗೆಯುವುದೆಂದರೆ ಚೀನಕ್ಕೆ ರಸ್ತೆ ನಿರ್ಮಿಸಲು ಅವಕಾಶ ಮಾಡಿ ಕೊಡುವುದು. ವ್ಯೂಹಾತ್ಮಕವಾಗಿ ಅತ್ಯಂತ ಮುಖ್ಯವಾಗಿರುವ ಈ ಭೂಭಾಗದಲ್ಲಿ ಚೀನ ರಸ್ತೆ ನಿರ್ಮಿಸಿದರೆ ದೇಶದ ಭದ್ರತೆಗೆ ಅಪಾಯ ಕಟ್ಟಿಟ್ಟ ಬುತ್ತಿ. ಇದರಲ್ಲಿ ಭಾರತ ಮಾತ್ರವಲ್ಲದೆ ಭೂತಾನ್ನ ಹಿತಾಸಕ್ತಿಯೂ ಅಡಗಿದೆ. ಹೀಗಾಗಿ ಯಾವ ಕಾರಣಕ್ಕೂ ರಸ್ತೆ ನಿರ್ಮಿಸಲು ಬಿಡುವುದಿಲ್ಲ ಎನ್ನುವುದು ಭಾರತದ ಬಿಗಿಪಟ್ಟು.
ಇಂತಹ ಕಗ್ಗಂಟಿನ ಸ್ಥಿತಿಯಲ್ಲಿ ದೋವಲ್ ಚೀನಕ್ಕೆ ಹೋಗುತ್ತಿದ್ದಾರೆ. ಎರಡೂ ದೇಶಗಳು ಮಣಿಯಲು ತಯಾರಿಲ್ಲದ ಕಾರಣ ಯಾವ ರೀತಿ ದೋವಲ್ ವಿವಾದವನ್ನು ಬಗೆಹರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು. ಅಂತೆಯೇ ದೋವಲ್ ಭೇಟಿ ಸೆಪ್ಟೆಂಬರ್ನಲ್ಲಿ ಬೀಜಿಂಗ್ ನಲ್ಲಿ ನಡೆಯಲಿರುವ ಬ್ರಿಕ್ಸ್ ಸಮಾವೇಶದಲ್ಲಿ ಮೋದಿ ಭಾಗವಹಿಸುವ ಸಾಧ್ಯತೆಯನ್ನೂ ನಿರ್ಧರಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್