ಭಾರತದಲ್ಲಿ  ಮೃತ ಶರೀರದಿಂದ ಮೂತ್ರಪಿಂಡ ಕಸಿ


Team Udayavani, Apr 23, 2017, 3:45 AM IST

asfdb.jpg

ಖರೀದಿ ಶಕ್ತಿಯ ದೃಷ್ಟಿಯಿಂದ ನೋಡಿದರೆ ಭಾರತವು ಜಗತ್ತಿನಲ್ಲಿಯೇ ತೃತೀಯ ಬೃಹತ್‌ ಆರ್ಥಿಕತೆ. ಆದರೆ, ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದ ಪೈಕಿ ಆರೋಗ್ಯ ಕ್ಷೇತ್ರಕ್ಕೆ ಖರ್ಚಾಗುವುದು ಕೇವಲ ಶೇ.4 ಮಾತ್ರ; ಅದರಲ್ಲೂ ಸರಕಾರ ನಡೆಸುವ ಖರ್ಚು ಶೇ.1.3. ಭಾರತದ ಜನಸಂಖ್ಯೆಯ ಅತಿ ದೊಡ್ಡ ಭಾಗ ಬಡತನ ರೇಖೆಯ ಕೆಳಗೆ ಇರುವುದರಿಂದ ದೇಶದ ಜನರಿಗೆ ಮೂಲಭೂತ ಆರೋಗ್ಯ ಸೇವಾ ಸೌಲಭ್ಯಗಳನ್ನು ಒದಗಿಸುವ ಸವಾಲು ಸಾಕಷ್ಟು ಬೃಹದಾಕಾರದ್ದಾಗಿದೆ. 

ಭಾರತದಲ್ಲಿ ದೀರ್ಘ‌ಕಾಲಿಕ ಮೂತ್ರಪಿಂಡ ಕಾಯಿಲೆಗಳು (ಕ್ರಾನಿಕ್‌ ಕಿಡ್ನಿ ಡಿಸೀಸಸ್‌ – ಸಿಕೆಡಿ) ಕಾಣಿಸಿಕೊಳ್ಳುವ ಪ್ರಮಾಣ ತೀವ್ರಗತಿಯಲ್ಲಿ ಹೆಚ್ಚುತ್ತಿದೆ. ಪ್ರಾಥಮಿಕ ಹಂತದಲ್ಲಿ ಯಾವುದೇ ಚಿಹ್ನೆ ಮತ್ತು ಲಕ್ಷಣಗಳನ್ನು  ಪ್ರದರ್ಶಿಸದ ಸಿಕೆಡಿ, ಅಂತಿಮ ಹಂತಗಳಲ್ಲಿ ರೋಗಿ ಮತ್ತು ಅವನ ಕುಟುಂಬದ ಆರ್ಥಿಕ ಸ್ಥಿತಿಗತಿಯ ಮೇಲೆ ಭಾರೀ ಹೊರೆಯನ್ನು ಹೊರಿಸುತ್ತದೆ. ಬದಲಿ ಮೂತ್ರಪಿಂಡ ಅಳವಡಿಕೆ ಚಿಕಿತ್ಸೆ (ರೀನಲ್‌ ರಿಪ್ಲೇಸ್‌ಮೆಂಟ್‌ ಥೆರಪಿ – ಆರ್‌ಆರ್‌ಟಿ)ಯ ಲಭ್ಯತೆ ನಗರ ಮತ್ತು ಗ್ರಾಮೀಣ ವಲಯಗಳು ಹಾಗೂ ರಾಜ್ಯ – ರಾಜ್ಯಗಳ ನಡುವೆ ಬದಲಾಗುತ್ತದೆ. ನಮ್ಮ ದೇಶದ ಬಹುತೇಕ ಭಾಗಗಳಲ್ಲಿ ಕೌಶಲಪೂರ್ಣ ಮೂತ್ರಜನಕಾಂಗ ತಜ್ಞರು, ಕಸಿ ಶಸ್ತ್ರಚಿಕಿತ್ಸಾ ತಜ್ಞರು ಮತ್ತು ಸರಕಾರದ ಸೂಕ್ತ ನೆರವಿನ ಕೊರತೆ ಇದೆ. 

ಭಾರತದ ಸಿಕೆಡಿ ರೋಗಿಗಳಲ್ಲಿ ಶೇ.43 ಮಂದಿಯ ಕೌಟುಂಬಿಕ ಮಾಸಿಕ ಆದಾಯ 5,000 ರೂ.ಗಳಿಗಿಂತಲೂ ಕಡಿಮೆ ಇದೆ, ಬದಲಿ ಮೂತ್ರಪಿಂಡ ಅಳವಡಿಕೆ ಶಸ್ತ್ರಚಿಕಿತ್ಸೆ ಇಂತಹ ರೋಗಿಗಳ ಮೇಲೆ ಭಾರೀ ಆರ್ಥಿಕ ಪರಿಣಾಮವನ್ನು ಬೀರುತ್ತದೆ.
 
ಭಾರತದಲ್ಲಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳೆರಡೂ ವೈದ್ಯಕೀಯ ಸೇವಾ ಸೌಲಭ್ಯವನ್ನು ಒದಗಿಸುತ್ತವೆ. ಭಾರತದಲ್ಲಿ ಒಂದು ಅಂದಾಜಿನ ಪ್ರಕಾರ, ಒಂದು ವರ್ಷಕ್ಕೆ 3,000 ಮಂದಿ ಹೊಸ ರೋಗಿಗಳು ಸತತ ಆ್ಯಂಬ್ಯುಲೇಟರಿ ಪೆರಿಟೋನಿಯಲ್‌ ಡಯಾಲಿಸಿಸ್‌ ಚಿಕಿತ್ಸೆಗೆ ಮತ್ತು 15,000ಕ್ಕೂ ಹೆಚ್ಚು ಮಂದಿ ರೋಗಿಗಳು ಹೆಮೊಡಯಾಲಿಸಿಸ್‌ ಚಿಕಿತ್ಸೆಗೆ ಸೇರ್ಪಡೆಯಾಗುತ್ತಾರೆ. ಅಂತಿಮ ಹಂತದ ಮೂತ್ರಪಿಂಡ ಕಾಯಿಲೆ (ಇಎಸ್‌ಆರ್‌ಡಿ)ಗಳಿಗೆ ಚಿಕಿತ್ಸೆಯು ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ನಾಗರಿಕರ ಮೇಲೆ ತೀವ್ರ ಆರ್ಥಿಕ ಹೊರೆಗೆ ಕಾರಣವಾಗುತ್ತದೆ. ಬದಲಿ ಮೂತ್ರಪಿಂಡ ಅಳವಡಿಕೆಯ ವಿವಿಧ ಪ್ರಕಾರಗಳಲ್ಲಿ ಮೂತ್ರಪಿಂಡ ಕಸಿ ಚಿಕಿತ್ಸೆ (ಕೆಟಿ)ಯು ಅತಿ ಮಿತವ್ಯಯಿ ಎಂದು ಪರಿಗಣಿತವಾಗಿದೆ. 

ಮೂತ್ರಪಿಂಡ ಕಸಿ ಮತ್ತು 
ದಾನಿ ವಿಧಗಳು
ಕಸಿ ದಾನಿಗಳಲ್ಲಿ ಎರಡು ವಿಧ: 

ಸಜೀವ ಸಂಬಂಧಿಗಳು
ತಂದೆ-ತಾಯಿ, ಸಹೋದರ – ಸಹೋದರಿಯರು ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಂದ ಒದಗುವ ಮೂತ್ರಪಿಂಡವು ಕಸಿಗೆ ಸದಾ ಉತ್ತಮ ಆಯ್ಕೆಯಾಗಿದೆ. 

ಸಜೀವ ಸಂಬಂಧಿಯಿಂದ ಕಸಿಗೆ ನಿಯಮಗಳು
ಮಾನವ ಅಂಗವನ್ನು ಹೊರತೆಗೆದು ಕಸಿ ಮಾಡುವುದಕ್ಕೆ ಪರವಾನಿಗೆ ಪಡೆದುಕೊಳ್ಳಲು ಸಂಬಂಧಿತ “ಪರವಾನಿಗೆ ಸಮಿತಿ’ಗೆ ಅರ್ಜಿ ಸಲ್ಲಿಸಬೇಕು. 

ರಾಜ್ಯಮಟ್ಟದಲ್ಲಿ ಇಂತಹ ಒಂದು ಪರವಾನಿಗೆ ಸಮಿತಿ ಇರುತ್ತದೆ, ಹೆಚ್ಚುವರಿ ಪರವಾನಿಗೆ ಸಮಿತಿಗಳು ನಿಯಮಗಳಿಗೆ ಅನುಸಾರವಾಗಿ ವಿವಿಧ ಹಂತಗಳಲ್ಲಿ ಇರಬಹುದು; ಅವು:

1) ನಗರ ಪ್ರದೇಶಗಳಲ್ಲಿ, ಕಸಿ ಮಾಡಲಾಗುವ ಯಾವುದೇ ವೈದ್ಯಕೀಯ ಕೇಂದ್ರದಲ್ಲಿ ವರ್ಷವೊಂದರಲ್ಲಿ ನಡೆಯುವ ಕಸಿಗಳ ಸಂಖ್ಯೆ 25ಕ್ಕಿಂತ ಹೆಚ್ಚು ಇದ್ದರೆ, ಅಂಥಲ್ಲಿ ಪರವಾನಿಗೆ ಸಮಿತಿ ಆ ಕೇಂದ್ರದಲ್ಲಿಯೇ ಇರಬಹುದು. 

2) ಆಸ್ಪತ್ರೆಯೊಂದರಲ್ಲಿ ವರ್ಷಕ್ಕೆ ಅಂಗ ಕಸಿಗಳ ಸಂಖ್ಯೆ 25ಕ್ಕಿಂತ ಕಡಿಮೆ ಇದ್ದರೆ, ಆಗ ರಾಜ್ಯ ಅಥವಾ ಜಿಲ್ಲಾ ಮಟ್ಟದ ಪರವಾನಿಗೆ ಸಮಿತಿಯು ಪರವಾನಿಗೆ ನೀಡುತ್ತದೆ.
 
ದಾನಿಯು ರಕ್ತಸಂಬಂಧಿ ಅಲ್ಲವಾಗಿದ್ದಾಗ ಹಾಗೂ ಅಂಗದಾನವನ್ನು ಸ್ವೀಕರಿಸುವ ವ್ಯಕ್ತಿಯು ಆ ರಾಜ್ಯದವನಲ್ಲವಾಗಿದ್ದರೆ ಮತ್ತು/ಅಥವಾ ಅಂಗ ಕಸಿ ನಡೆಯುವ ಸ್ಥಳ ಅಂಗದಾನವನ್ನು ಸ್ವೀಕರಿಸುವ ವ್ಯಕ್ತಿಯ ರಾಜ್ಯವಲ್ಲವಾಗಿದ್ದರೆ, ದಾನಿಯ ಮತ್ತು/ಅಥವಾ ಅಂಗದಾನ ಸ್ವೀಕರಿಸುವ ವ್ಯಕ್ತಿಯ ರಾಜ್ಯಗಳಿಂದ “ನಿರಾಕ್ಷೇಪಣಾ ಪತ್ರ’ ಪಡೆಯಬೇಕಾಗಿದೆ. 

ಪ್ರಸ್ತಾವಿತ ದಾನಿಯ ರಕ್ತಸಂಬಂಧದ ಬಗ್ಗೆ ದಾಖಲಿತ ಗುರುತು ರೂಪದ ಸಾಕ್ಷ್ಯ ಹಾಗೂ ಆ ದಾನಿಯ ಗುರುತು ಪತ್ತೆ ಮತ್ತು ವಾಸ್ತವ್ಯದ ದಾಖಲಿತ ಗುರುತು ಮತ್ತು ಪ್ರಸ್ತಾವಿತ ದಾನಿ ಹಾಗೂ ಅಂಗದಾನ ಸ್ವೀಕರಿಸುವ ಪ್ರಸ್ತಾವಿತ ವ್ಯಕ್ತಿಗಳ ಛಾಯಾಚಿತ್ರಗಳು ಅಗತ್ಯವಾಗಿವೆ. 

ಮೃತ ಶರೀರದಿಂದ ಕಸಿ
ಮೃತ ವ್ಯಕ್ತಿಯ ಶರೀರ (ಮಿದುಳು ಮೃತಪಟ್ಟ ಎಂಬ ಪರಿಕಲ್ಪನೆ)ದಿಂದ ಮೂತ್ರಪಿಂಡಗಳನ್ನು ದಾನವಾಗಿ ಸ್ವೀಕರಿಸಿ ನಡೆಸುವ ಮೂತ್ರಪಿಂಡ ಕಸಿಯನ್ನು ಮೃತ ಶರೀರದಿಂದ ಮೂತ್ರಪಿಂಡ ಕಸಿ ಎಂದು ವ್ಯಾಖ್ಯಾನಿಸಬಹುದು. ಮಿದುಳು ಬಳ್ಳಿಯ ಸಹಿತ ಮಿದುಳಿನ ಎಲ್ಲ ಕಾರ್ಯಾಚರಣೆಗಳು ಮುಂದೆಂದೂ ಸುಸ್ಥಿತಿಗೆ ತರಲಾಗದಂತೆ ನಷ್ಟವಾಗುವುದನ್ನು ಮಿದುಳು ಮೃತಪಡುವುದು ಎನ್ನಬಹುದು. ಮಿದುಳು ಮೃತಪಟ್ಟಿರುವುದನ್ನು ಖಚಿತಪಡಿಸುವುದಕ್ಕೆ ಕೋಮಾ, ಮಿದುಳು ಬಳ್ಳಿಯ ಪ್ರತಿಸ್ಪಂದನ ಮತ್ತು ಉಸಿರಾಟ ಕ್ರಿಯೆ ಸ್ಥಗಿತಗೊಳ್ಳುವುದು ಮೂರು ಅಗತ್ಯ ಲಕ್ಷಣಗಳು. 

ಮೃತ ದಾನಿಗಳಿಂದ ಸ್ವೀಕರಿಸಲ್ಪಡುವ ಮೂತ್ರಪಿಂಡಗಳಲ್ಲಿ ಹಲವು ವಿಧಗಳಿವೆ:
ಗುಣಮಟ್ಟ ನಿರ್ಣಾಯಕ ದಾನಿಯ ಮೂತ್ರಪಿಂಡಗಳು: 60 ವರ್ಷ ವಯಸ್ಸಿಗಿಂತ ಕೆಳಗಿನ ವಯೋಮಾನದ ಮೃತವ್ಯಕ್ತಿಯಿಂದ ಪಡೆದ ಮೂತ್ರಪಿಂಡ.

ವಿಸ್ತೃತ ಗುಣಮಟ್ಟ ನಿರ್ಣಾಯಕ ದಾನಿಯ ಮೂತ್ರಪಿಂಡಗಳು: 50 ಅಥವಾ 60 ವರ್ಷ ವಯಸ್ಸಿಗಿಂತ ಮೇಲ್ಪಟ್ಟ ಮತ್ತು ಅಧಿಕ ರಕ್ತದೊತ್ತಡ, ಲಕ್ವಾದಿಂದ ಅಥವಾ ಮೂತ್ರಪಿಂಡಗಳಿಗೆ ಅಲ್ಪಸ್ವಲ್ಪ ಹಾನಿ ಉಂಟಾಗಿರುವಂತಹ ಎರಡು ಅಥವಾ ಎರಡಕ್ಕಿಂತ ಹೆಚ್ಚು ಅಪಾಯಾಂಶಗಳಿರುವ ಮೃತವ್ಯಕ್ತಿಯಿಂದ ಪಡೆದ ಮೂತ್ರಪಿಂಡಗಳು. 

ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಯಿಂದ ದಾನ ಪಡೆದ ಮೂತ್ರಪಿಂಡಗಳು: ಇವುಗಳನ್ನು ನಿಯಂತ್ರಿತ ಮತ್ತು ಅನಿಯಂತ್ರಿತ ಎಂಬ ಎರಡು ವಿಭಾಗ ಮಾಡಲಾಗಿದೆ. ಮಿದುಳು ಮೃತಪಟ್ಟ ಅಥವಾ  ಜೀವಧಾರಕ ವ್ಯವಸ್ಥೆಯನ್ನು ತೆಗೆದುಹಾಕಲಾದ ಬಳಿಕ ಹೃದಯಾಘಾತಕ್ಕೆ ಒಳಗಾಗಿ ಮೃತ ವ್ಯಕ್ತಿ ನಿಯಂತ್ರಿತ ದಾನಿ. ಆಸ್ಪತ್ರೆಗೆ ಬರುವಷ್ಟರಲ್ಲಿಯೇ ಹೃದಯಾಘಾತದಿಂದ ಮೃತಪಟ್ಟ ಅಥವಾ ತುರ್ತು ಹೃದಯಾಘಾತ ಪ್ರಥಮ ಚಿಕಿತ್ಸೆ ಫ‌ಲಿಸದೆ ಹೃದಯಾಘಾತದಿಂದ ಮೃತ ವ್ಯಕ್ತಿ ಅನಿಯಂತ್ರಿತ ದಾನಿ. ಅತಿ ಸಾಮಾಜಿಕ ಅಪಾಯಾಂಶವುಳ್ಳ ದಾನಿಗಳು: ಸೋಂಕು ರೋಗಗಳ ಪ್ರಸರಣದ ಅತೀ ಅಪಾಯ ಉಳ್ಳ ದಾನಿಗಳು. 

ಮೃತಶರೀರ ಅಂಗಾಂಗ 
ಕಸಿ ನಿಯಮಗಳು

ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಸನ್ನಿವೇಶಕ್ಕೆ ಹೊಂದಿಕೊಂಡು ಅಧಿಸೂಚನೆ ಹೊರಡಿಸಿ ಸೂಕ್ತವಾದ ಅಧಿಕೃತ ಮಂಡಳಿಗೆ ತನ್ನ ಕಾರ್ಯಗಳನ್ನು ನಡೆಸುವ ವಿಚಾರದಲ್ಲಿ ನೆರವು ಮತ್ತು ಸಲಹೆಗಳನ್ನು ನೀಡುವುದಕ್ಕಾಗಿ ಸಲಹಾ ಸಮಿತಿಯೊಂದನ್ನು ರಚಿಸಬಹುದು. 

ಸೂಕ್ತ ಅಧಿಕೃತ ಮಂಡಳಿ ನೇಮಕ ಮಾಡಿರುವ ಇಬ್ಬರು ನೋಂದಾಯಿತ ವೈದ್ಯರು (ಆರ್‌ಎಂಪಿಗಳು),   ಒಬ್ಬರು ನ್ಯೂರಾಲಜಿಸ್ಟ್‌ ಅಥವಾ ನ್ಯೂರೋಸರ್ಜನ್‌ ಮತ್ತು ಮೃತವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ (ಆರ್‌ಎಂಪಿ) ಗಳಿಂದ ಕೂಡಿರುವ ನಾಲ್ವರು ಸದಸ್ಯರ ಸಮಿತಿಯು ಮಿದುಳು ಮೃತಪಟ್ಟಿರುವುದನ್ನು ಪ್ರಮಾಣೀಕರಿಸಬೇಕಾಗಿದೆ. ನ್ಯೂರಾಲಜಿಸ್ಟ್‌ ಅಥವಾ ನ್ಯೂರೋಸರ್ಜನ್‌ ಇಲ್ಲದಿದ್ದಲ್ಲಿ, ಯಾವುದೇ ಶಸ್ತ್ರಚಿಕಿತ್ಸಾ ತಜ್ಞರು ಅಥವಾ ವೈದ್ಯರು ಹಾಗೂ ಅಧಿಕೃತ ವೈದ್ಯಕೀಯ ಆಡಳಿತಗಾರರಿಂದ ನೇಮಕಗೊಂಡ ಮತ್ತು ಸೂಕ್ತ ಅಧಿಕೃತ ಮಂಡಳಿಯಿಂದ ಅಂಗೀಕೃತಗೊಂಡ ಅರಿವಳಿಕೆ ಶಾಸ್ತ್ರಜ್ಞರು ಅಥವಾ ತುರ್ತು ನಿಗಾ ತಜ್ಞರು ಮಿದುಳು ಮೃತಪಟ್ಟಿರುವುದನ್ನು ಘೋಷಿಸುವ ಪ್ರಮಾಣಪತ್ರಕ್ಕೆ ಸಹಿ ಮಾಡಬೇಕು.  

ಮೃತ ಅಂಗ ದಾನಿ ಕಸಿ (ಡಿಡಿಟಿ) : 
ಭಾರತದ ಹಾಲಿ ಸ್ಥಿತಿಗತಿ

ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಮೃತ ಅಂಗ ದಾನಿ ಕಸಿ (ಡಿಡಿಟಿ)ಯು ಸರಕಾರಿ ಮತ್ತು ಖಾಸಗಿ ಎರಡೂ ರಂಗಗಳಲ್ಲಿ ತೆಗೆದುಕೊಳ್ಳಲಾದ ಪ್ರೋತ್ಸಾಹಕ ಕ್ರಮಗಳಿಂದಾಗಿ ಹೆಚ್ಚುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಕಸಿ ವೈದ್ಯಕೀಯ ಸೇವೆಗಳನ್ನು ಉಚಿತವಾಗಿ ಅಥವಾ ಕಡಿತಗೊಳಿಸಲಾದ ದರಗಳಲ್ಲಿ ಒದಗಿಸಲಾಗುತ್ತಿದೆ. ಖಾಸಗಿ ವೈದ್ಯಕೀಯ ಕ್ಷೇತ್ರಕ್ಕೆ ಬಂದರೆ, ಆಸ್ಪತ್ರೆ ಲಾಭರಹಿತ ಸಂಸ್ಥೆಯೇ ಅಥವಾ ಲಾಭಸಹಿತ ಸಂಸ್ಥೆಯೇ ಎಂಬುದನ್ನು ಅವಲಂಭಿಸಿ ಮೃತ ಅಂಗ ದಾನಿ ಕಸಿ ಚಿಕಿತ್ಸೆಯ ವೆಚ್ಚದಲ್ಲಿ ಭಾರೀ ವ್ಯತ್ಯಾಸ ಉಂಟಾಗುತ್ತದೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ತಮಿಳುನಾಡಿನಲ್ಲಿ ಮೃತ ಅಂಗ ದಾನಿ ಕಸಿಯಿಂದಾಗಿ ಅಂಗಾಂಗಗಳ ಅಕ್ರಮ ಮಾರಾಟ ದಂಧೆ ಇಳಿಮುಖ ಕಂಡಿದೆ. 

ಭಾರತದಲ್ಲಿ ಮೃತ ಅಂಗ ದಾನಿ ಕಸಿಗೆ ಇರುವ ಮುಖ್ಯ ಅಡ್ಡಿಯೆಂದರೆ ಮೃತ ದಾನಿಯಿಂದ ಬೇರ್ಪಡಿಸಿದ ಅಂಗಗಳನ್ನು ಸುರಕ್ಷಿತವಾಗಿ ಕಾಪಿಡುವ ಸಂಚಯ ವ್ಯವಸ್ಥೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ 1,37,572 ಮಂದಿ ರಸ್ತೆ ಅಪಘಾತಗಳಲ್ಲಿ ಸಾಯುತ್ತಾರೆ ಮತ್ತು ಇವರಲ್ಲಿ ಶೇ.70 ಮಂದಿ ಮಿದುಳು ಮೃತಪಟ್ಟವರು ಎಂದು ಘೋಷಿತರಾಗುತ್ತಾರೆ. ಇವರಿಂದ ಆರೋಗ್ಯವಂತ ಅಂಗಗಳನ್ನು ಕಸಿಗಾಗಿ ಬೇರ್ಪಡಿಸಿ ಕಾಪಿಡಬಹುದಾಗಿದೆ. 

ಕಸಿ ಸಂದರ್ಭದಲ್ಲಿ ಆಸ್ಪತ್ರೆಗಳು 
ಎದುರಿಸುವ ಸವಾಲುಗಳು

-ವೈಯಕ್ತಿಕ ಮಟ್ಟದ ಸವಾಲುಗಳು
– ನೀತಿ ಮತ್ತು ನಿಯಮಗಳು

ವೈಯಕ್ತಿಕ ಮಟ್ಟದ ಸವಾಲುಗಳು
ಅರಿವಿನ ಕೊರತೆ: ಭಾರತದಲ್ಲಿ ಅಂಗ ದಾನ ಇನ್ನೂ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುವುದಕ್ಕೆ ಅದರ ಬಗ್ಗೆ ಇರುವ ಅರಿವಿನ ಕೊರತೆಯೇ ಪ್ರಮುಖ ಕಾರಣ. ಸಾಮಾಜಿಕ – ಆರ್ಥಿಕ ಅಂಶಗಳು, ಶಿಕ್ಷಣ ಮಟ್ಟ ಮತ್ತು ಭಾಷೆಯ ಅಡೆತಡೆಗಳೂ ಅಂಗಕಸಿ ಕಾರ್ಯಕ್ರಮದ ಯಶಸ್ಸಿಗೆ ಅಡ್ಡಿ ಮಾಡುತ್ತಿವೆ. 
ಸಮಾಜ-ಸಾಂಸ್ಕೃತಿಕ ಅಂಶಗಳು: ಅಭಿವೃದ್ಧಿ ಶೀಲ ಜಗತ್ತಿನ ಅನೇಕ ಸಂಸ್ಕೃತಿ – ಸಮುದಾಯಗಳಲ್ಲಿ ಮೃತಪಟ್ಟವರ ಬಗ್ಗೆ, ಮೃತ ದೇಹದ ಬಗ್ಗೆ ಪೂಜ್ಯಭಾವನೆ ಆಳವಾಗಿ ಬೇರೂರಿದೆ. ಹೀಗಾಗಿ ಅನೇಕ ದೇಶಗಳಲ್ಲಿ ಶವಪರೀಕ್ಷೆ ನಡೆಸಲು ಪರವಾನಿಗೆ ಇಲ್ಲ, ಹೀಗಾಗಿ ಮೃತದೇಹದಿಂದ ಅಂಗಕಸಿ ಕಾಯಿದೆಯೂ ಇಲ್ಲ. ಭಾರತವು ತನ್ನದೇ ಆದ ಅಂಗಕಸಿ ಕಾಯಿದೆಯನ್ನು 1995ರಲ್ಲಿ ರಚಿಸಿ ಅನುಷ್ಠಾನಗೊಳಿಸಿದ್ದು, ವಾಣಿಜ್ಯ ಉದ್ದೇಶದ ಅಂಗದಾನವನ್ನು ನಿಷೇಧಿಸಿದೆ. 

ಪ್ರತಿರಕ್ಷಣಾ ನಿರೋಧನೆ: ಅಂಗ ಕಸಿ ನಡೆಸಿದ ಬಳಿಕ ಅಳವಡಿಸಲ್ಪಟ್ಟ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಅದರ ವಿರುದ್ಧ ಬೆಳೆಸಿಕೊಳ್ಳುವ ಪ್ರತಿರಕ್ಷಣೆಯನ್ನು ಮತ್ತು ಅಳವಡಿಸಲ್ಪಟ್ಟ ಅಂಗವನ್ನು ದೇಹ ತಿರಸ್ಕರಿಸುವುದನ್ನು ತಡೆಗಟ್ಟಲು ನೀಡಬೇಕಾಗಿರುವ ಪ್ರತಿರಕ್ಷಣಾ ನಿರೋಧಕ ಔಷಧಿಗಳು ಮತ್ತು ಪ್ರತಿಕಾಯಗಳ ಭಾರೀ ಬೆಲೆ ಅನೇಕ ರೋಗಿಗಳ ಪಾಲಿಗೆ ಕೈಗೆಟುಕದಂತಿರುತ್ತದೆ. ಇದು ಕಸಿ ಚಿಕಿತ್ಸೆ ನಡೆಸಿದರೂ ಬದುಕುಳಿಯುವವರ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ. 

ನೀತಿ ಮತ್ತು ನಿಯಮಗಳು
-ಮೂತ್ರಪಿಂಡ ಕಾಯಿಲೆಗಳು, ದಾನ, ಕಸಿ ಇತ್ಯಾದಿಗಳ ಸಂಬಂಧ ಸೂಕ್ತ ನೀತಿ ರೂಪಣೆಗಾಗಿ ದತ್ತಾಂಶ ಮಾಹಿತಿ ಕಲೆ ಹಾಕಲು ದೇಶದಲ್ಲಿ ಮೂತ್ರಪಿಂಡ ನೋಂದಣಿ ವ್ಯವಸ್ಥೆ ಇಲ್ಲ. ಬಹುತೇಕ ಅಂದಾಜು ಅಂಕಿಸಂಖ್ಯೆ, ದತ್ತಾಂಶಗಳನ್ನು ಕಾರ್ಯಾಚರಿಸುತ್ತಿರುವ ಕೆಲವೇ ಡಯಾಲಿಸಿಸ್‌ ಘಟಕಗಳಿಂದ ಪಡೆದಂಥವು ಮತ್ತು ಈ ಅಂಕಿಸಂಖ್ಯೆ, ದತ್ತಾಂಶಗಳು ಸಮಸ್ಯೆಯ ತೀವ್ರ ಸ್ವರೂಪವನ್ನು ಪ್ರತಿನಿಧಿಸುವಲ್ಲಿ ವಿಫ‌ಲವಾಗಿವೆ. 
-ಸರಕಾರದ ವತಿಯಿಂದ ಚೆನ್ನಾಗಿ ರೂಪುಗೊಂಡ ಆರೋಗ್ಯ ನೀತಿ- ನಿಯಮಗಳ ಕೊರತೆಯಿದೆ. 

ಮೃತ ವ್ಯಕ್ತಿಯಿಂದ 
ಅಂಗ ಕಸಿಗೆ ಅಡೆತಡೆಗಳು

ಮಿದುಳು ಮೃತಪಡುವ ಪರಿಕಲ್ಪನೆಯ ಬಗ್ಗೆ ಅರಿವಿನ ಕೊರತೆ, ಅಂಗಾಂಗ ದಾನದ ಬಗ್ಗೆ ತಿಳಿವಳಿಕೆಯ ಕೊರತೆ, ಮೃತ ಶರೀರದಿಂದ ಮೂತ್ರಪಿಂಡಗಳನ್ನು ಸುರಕ್ಷಿತವಾಗಿ ಹೊರತೆಗೆದು ಕಸಿ ಮಾಡುವ ಸೌಲಭ್ಯಗಳುಳ್ಳ ವೈದ್ಯಕೀಯ ಕೇಂದ್ರಗಳು ಮತ್ತು ತಜ್ಞ ವೈದ್ಯರ ಸಂಖ್ಯೆ ಕಡಿಮೆ ಇರುವುದು ಮೃತ ವ್ಯಕ್ತಿಯಿಂದ ಅಂಗ ಕಸಿಗೆ ಭಾರತದಲ್ಲಿ ಇರುವ ಪ್ರಮುಖ ಅಡ್ಡಿಗಳಾಗಿವೆ. 

ಭವಿಷ್ಯದಲ್ಲಿ 
ಆಗಬೇಕಾದುದೇನು?

-ಸಾಮಾಜಿಕ- ಆರ್ಥಿಕ ಸ್ಥಿತಿಗತಿಯನ್ನು ಉತ್ತಮಪಡಿಸಬೇಕು. 

-ಅಂತಿಮ ಹಂತದ ಮೂತ್ರಪಿಂಡ ಕಾಯಿಲೆ (ಇಎಸ್‌ಆರ್‌ಡಿ) ಗಳ ಹಾಗೂ ಕಸಿ ನೋಂದಾವಣೆ ವ್ಯವಸ್ಥೆಯನ್ನು ಜಾರಿಗೊಳಿಸುವುದು. 

-ಮೂತ್ರಪಿಂಡ ಕಾಯಿಲೆಗಳುಳ್ಳವರ ಹಿತಾಸಕ್ತಿಗಳನ್ನು ಕಾಪಾಡುವುದಕ್ಕಾಗಿ ನಾವು ಪಾರದರ್ಶಕ, ಸ್ವತಂತ್ರ ಮತ್ತು ಕಾರ್ಯಕಾರಿ ರಾಷ್ಟ್ರೀಯ ಮೂತ್ರಪಿಂಡ ಪ್ರತಿಷ್ಠಾನವೊಂದನ್ನು ಸ್ಥಾಪಿಸಬೇಕಾಗಿದ್ದು, ಇದು ಒಂದು ಸಂಘಟಿತ ಸಮೂಹವಾಗಿ ಅಗತ್ಯವುಂಟಾದಾಗ ಸರಕಾರದ ಮುಂದೆ ತನ್ನ ಅಭಿಪ್ರಾಯಗಳನ್ನು ಸಮರ್ಥವಾಗಿ ಮಂಡಿಸುವಂತಿರಬೇಕು. 

-(ಅ) ದಾನಿ ಮತ್ತು ದಾನ ಸ್ವೀಕರಿಸುವವರ ವಿಶ್ಲೇಷಣೆ, (ಬಿ) ಕಸಿಯ ಬಳಿಕ ತಪಾಸಣೆ ಮತ್ತು ಚಿಕಿತ್ಸಾ ಪ್ರಕ್ರಿಯೆಗಳು ಹಾಗೂ (ಸಿ) ದಾನಿ ಮತ್ತು ಸ್ವೀಕರಿಸಿದ ವ್ಯಕ್ತಿಯ ದೀರ್ಘ‌ಕಾಲಿಕ ಅನುಸರಣಾ ಚಿಕಿತ್ಸೆಯ ವಿಚಾರದಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಅಳವಡಿಸಬೇಕಾಗಿದೆ. 

-ಸೋಂಕುಗಳನ್ನು ತಡೆಗಟ್ಟಲು ಹೊಚ್ಚಹೊಸ ತಂತ್ರಜ್ಞಾನಗಳು: ಸೋಂಕುಗಳು ತಗಲುವ ಹಾಗೂ ಮೃತ್ಯುವಿನ ಪ್ರಮಾಣವನ್ನು ಕಡಿಮೆ ಮಾಡಲು ಅಗತ್ಯ ವೈದ್ಯಕೀಯ ಕೌಶಲಗಳನ್ನು ವೃದ್ಧಿಸಲು ಮತ್ತು ನವ ತಂತ್ರಜ್ಞಾನಗಳ ತಿಳಿವಳಿಕೆಗಾಗಿ ಸತತ ತರಬೇತಿ ಒದಗಿಸಬೇಕು. ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯಲ್ಲಿ ನವ ತಂತ್ರಜ್ಞಾನಗಳ ಬಳಕೆ ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುವ ಹಾಗೂ ಆಸ್ಪತ್ರೆ ವಾಸದ ಸಮಯವನ್ನು ಕಡಿಮೆ ಮಾಡಲು ನೆರವಾಗಬಲ್ಲುದು. 

-ಬದಲಿ ಮೂತ್ರಪಿಂಡ ಅಳವಡಿಕೆ ಚಿಕಿತ್ಸೆ (ರೀನಲ್‌ ರಿಪ್ಲೇಸ್‌ಮೆಂಟ್‌ ಥೆರಪಿ – ಆರ್‌ಆರ್‌ಟಿ) ಒಳಗೊಂಡ ರಾಷ್ಟ್ರೀಯ ವಿಮೆ ಆರಂಭ: ಬಹುತೇಕ ರೋಗಿಗಳು ಆರ್ಥಿಕ ಅಡಚಣೆಯಿಂದಾಗಿಯೇ ಮೂತ್ರಪಿಂಡ ಕಸಿ ಶಸ್ತ್ರಕ್ರಿಯೆಯನ್ನು ಮಾಡಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆಯೊಂದರ ಅಗತ್ಯವಿದೆ. ಆರ್‌ಆರ್‌ಟಿಯನ್ನು ಒಳಗೊಂಡ ವಿಮೆಯಂತಹ ಯೋಜನೆಗಳು ಆರ್ಥಿಕ ಅಡಚಣೆಯಿಂದ ಕಸಿ ಚಿಕಿತ್ಸೆಗೆ ಎರವಾಗುವುದನ್ನು ತಪ್ಪಿಸಲು ನೆರವಾಗಬಹುದು. 

-ಮೂತ್ರಪಿಂಡ ಕಾಯಿಲೆಗಳ ಕಾರಣಗಳು, ತಡೆ ಮತ್ತು ನಿರ್ವಹಣೆಯ ಬಗ್ಗೆ ತಿಳಿವಳಿಕೆ ನೀಡುವ ಸಾರ್ವಜನಿಕ ಅರಿವು ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಬೇಕು. 

-ತರಬೇತಿ ಪಡೆದ ಕಸಿ ಸಮನ್ವಯಕಾರರು ಹಾಗೂ ದಾದಿಯರ ಹೆಚ್ಚಿನ ಪ್ರಯತ್ನವು ಕಸಿ ಯೋಜನೆಯನ್ನು ಸಶಕ್ತೀಕರಣಗೊಳಿಸಬಲ್ಲುದು: ಅಂಗ ಕಸಿಯಲ್ಲಿ ಒಳಗೊಳ್ಳುವ ವ್ಯಕ್ತಿಗಳಿಗೆ ಆಪ್ತ ಸಮಾಲೋಚನೆ ಸೇವೆ ಒದಗಿಸಲು ಆಸ್ಪತ್ರೆಗಳಿಗೆ ಪ್ರೋತ್ಸಾಹ ಮತ್ತು ಸಲಹೆ ನೀಡಬೇಕು. 

-ಪ್ರತಿರಕ್ಷಣಾ ನಿರೋಧಕ ಚಿಕಿತ್ಸೆಯ ಅತೀ ವೆಚ್ಚ ಒಂದು ಪ್ರಮುಖ ಸಮಸ್ಯೆಯಾಗಿಯೇ ಉಳಿದಿದೆ: ಪ್ರತಿರಕ್ಷಣಾ ನಿರೋಧಕ ಔಷಧಿಗಳನ್ನು ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಿಸುವುದು ಮತ್ತು ಸರಕಾರಿ ಸಬ್ಸಿಡಿ ಒದಗಿಸುವುದು ಆಗ ಹೇಳಿದಂತಹ ಮೂತ್ರಪಿಂಡ ಪ್ರತಿಷ್ಠಾನದ ಒಂದು ಉದ್ದೇಶವಾಗಿರಬೇಕು. 

-ಕಾನೂನು ಬದ್ಧ ಕಸಿ ಮತ್ತು ಕಸಿ ಕಾಯಿದೆ ಕಡ್ಡಾಯವಾಗಬೇಕು. 

-ಮೃತ ದಾನಿ ಅಂಗ ಕಸಿ ಕಾರ್ಯಕ್ರಮದ ಜಾರಿ: ಮೃತ ವ್ಯಕ್ತಿಯಿಂದ ಅಂಗ ದಾನವು ನಿಸ್ವಾರ್ಥ ಉದ್ದೇಶ ಮತ್ತು ದಾನಶೀಲ ವಿಧಾನದಲ್ಲಿ ನಡೆಯಬೇಕು. 

-ಅಂಗ ಹಂಚಿಕೆ ಜಾಲ: ಎಲ್ಲ ಅಂಗಾಂಗಗಳು ಉಪಯೋಗಿಯಾಗಬೇಕು ಮತ್ತು ವ್ಯರ್ಥವಾಗಬಾರದು ಎಂಬ ತಣ್ತೀದ ಆಧಾರದಲ್ಲಿ ಇದು ಕೆಲಸ ಮಾಡಬೇಕು. ಪ್ರಸ್ತುತ ಭಾರತದಲ್ಲಿ ಕೆಲವೇ ರಾಜ್ಯಗಳಲ್ಲಿ ಸಕ್ರಿಯ ಅಂಗಾಂಗ ಹಂಚಿಕೆ ಜಾಲ ಅಸ್ತಿತ್ವದಲ್ಲಿದ್ದು ಕೆಲಸ ಮಾಡುತ್ತಿವೆ. ಭಾರತದಲ್ಲಿ ರಾಷ್ಟ್ರೀಯ ಅಂಗಾಂಗ ಕಸಿ ಯೋಜನೆ ಅನುಷ್ಠಾನಕ್ಕೆ ಬಂದ ಬಳಿಕ ರಾಷ್ಟ್ರವ್ಯಾಪಿ ಅಂಗಾಂಗ ಹಂಚಿಕೆ ಜಾಲ ಅಸ್ತಿತ್ವಕ್ಕೆ ಬರಬಹುದು ಮತ್ತು ದಾನಿ ಅಂಗಾಂಗಗಳನ್ನು ಸಮರ್ಪಕವಾಗಿ ಉಪಯೋಗ ಮಾಡುವುದಕ್ಕೆ ಸಾಧ್ಯವಾಗಬಹುದು. 

-ರಾಷ್ಟ್ರೀಯ ಕೆಪಿಡಿ ಯೋಜನೆ: ಸಜೀವ ಸಂಬಂಧಿ ದಾನಿಗಳ ಸಮೂಹವನ್ನು ವಿಸ್ತರಿಸುವುದಕ್ಕಾಗಿ ಕಸಿ ಕೇಂದ್ರಗಳು ರಾಷ್ಟ್ರೀಯ ಕೆಪಿಡಿ ಯೋಜನೆಯೊಂದರ ಆರಂಭಕ್ಕಾಗಿ ಒಗ್ಗೂಡಿ ಕೆಲಸ ಮಾಡಬೇಕು ಮತ್ತು ಸಮಾನ ಸ್ವೀಕಾರಾರ್ಹ ಹಂಚಿಕೆ ಯೋಜನೆಯನ್ನು ರೂಪಿಸಬೇಕು. ಪ್ರಾಂತೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮೂತ್ರಪಿಂಡ ವಿನಿಮಯ ಭವಿಷ್ಯದ ಕಾರ್ಯತಂತ್ರಗಳಲ್ಲಿ ಸೇರಬೇಕು. 

ಎಲ್ಲಕ್ಕಿಂತ ಮಿಗಿಲಾಗಿ, ಅಂತಿಮ ಹಂತದ ಮೂತ್ರಪಿಂಡ ಕಾಯಿಲೆಗೆ ತುತ್ತಾಗಿರುವ ರೋಗಿಗಳ ಜೀವನ ಗುಣಮಟ್ಟ ಉತ್ತಮ ಪಡಿಸಲು ಮತ್ತು ಬದುಕುಳಿಯುವ ಸಾಧ್ಯತೆಯ ವೃದ್ಧಿಗೆ ಮೂತ್ರಪಿಂಡ ಕಸಿಯೇ ಅತ್ಯುತ್ತಮ ಸಂಭಾವ್ಯ ಪರಿಹಾರ ಎಂಬುದರ ಅಗತ್ಯವನ್ನು ನಾವೆಲ್ಲ ಅರ್ಥಮಾಡಿಕೊಳ್ಳಬೇಕಾಗಿದೆ. ಅಂತಹ ನಿರ್ಬಲ ರೋಗಿಗಳಿಗೆ ಉತ್ತಮ ಗುಣಮಟ್ಟದ ಜೀವನವನ್ನು ಒದಗಿಸುವ ದಿಶೆಯಲ್ಲಿ ನಾವೆಲ್ಲ ಕೈಗೂಡಿಸಿ ಕೆಲಸ ಮಾಡೋಣ.

ಬದಲಿ ಮೂತ್ರಪಿಂಡ ಅಳವಡಿಕೆ ಚಿಕಿತ್ಸೆಯಲ್ಲಿ ಮೂತ್ರಪಿಂಡಗಳನ್ನು ಬದಲಾಯಿಸುವುದೇ ಅತ್ಯುತ್ತಮ ಆಯ್ಕೆ. ಭಾರತ ಒಂದು ಬಹುಸಂಸ್ಕೃತಿಯ, ಬಹುಧಾರ್ಮಿಕತೆಯ ದೇಶವಾಗಿದ್ದು, ಅಂಗಾಂಗ ದಾನದ ಮೂಲಕ ಇನ್ನೊಬ್ಬ ಮನುಷ್ಯನ ಜೀವವನ್ನುಳಿಸುವ ಪವಿತ್ರ ಕಾರ್ಯವನ್ನು ಯಾವುದೇ ಧರ್ಮ ವಿರೋಧಿಸುವುದಿಲ್ಲ.

ಭಾರತದ ಮೊತ್ತಮೊದಲ ಸಜೀವ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯು ತಮಿಳುನಾಡಿನ ವೆಲ್ಲೂರು ಕ್ರಿಶ್ಚಿಯನ್‌ ಮೆಡಿಕಲ್‌ ಕಾಲೇಜಿನಲ್ಲಿ 1971ರಲ್ಲಿ ನಡೆಯಿತು. ಭಾರತದಲ್ಲಿ ನ್ಯಾಯಬದ್ಧ ಅಂಗಾಂಗ ದಾನವನ್ನು ಪ್ರೋತ್ಸಾಹಿಸುವ ದಿಶೆಯಲ್ಲಿ ಮಾನವ ಅಂಗಾಂಗ ಕಸಿ ಕಾಯಿದೆ -1994 ಮೊದಲ ಹೆಜ್ಜೆಯಾಗಿತ್ತು. ದೇಶದಲ್ಲಿ ಕಳೆದ ನಾಲ್ಕು ದಶಕಗಳಲ್ಲಿ ಕಸಿ ಶಸ್ತ್ರಚಿಕಿತ್ಸೆಗಳ ಪ್ರಮಾಣ ಸ್ಥಿರ ಏರಿಕೆಯನ್ನು ಕಂಡಿದೆಯಾದರೂ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಸಾಕಷ್ಟು ಕಡಿಮೆ ಪ್ರಮಾಣದಲ್ಲಿಯೇ ಇದೆ. 

-ಡಾ| ಸುಶಾಂತ್‌ ಕುಮಾರ್‌ ಬಿ. ,   
ಕನ್ಸಲ್ಟಂಟ್‌ ನೆಫ್ರಾಲಜಿಸ್ಟ್‌
ಕೆಎಂಸಿ ಆಸ್ಪತ್ರೆ, ಮಂಗಳೂರು

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.