ಕಾರ್ ಬೂಟ್! ನಿಮ್ಮದೇ ಸಂತೆ, ನೀವೇ ವ್ಯಾಪಾರಿ!
Team Udayavani, Jul 1, 2017, 5:18 PM IST
ಬೆಂಗ್ಳೂರು ನಗರದಲ್ಲಿ ಇದೇ ಮೊದಲ ಬಾರಿಗೆ ಹೊಸ ಪರಿಕಲ್ಪನೆಯ ಮಾರಾಟ ಮೇಳವೊಂದು ಜರುಗುತ್ತಿದೆ. ಅದೇ “ಕಾರ್ಬೂಟ್ ಸೇಲ್’! ಹಳೆಯ ವಸ್ತುಗಳನ್ನು ಮಾರಲು ಆನ್ಲೈನ್ ತಾಣಗಳನ್ನೇ ನೆಚ್ಚಿಕೊಳ್ಳುವ ಅಗತ್ಯ ಇನ್ನಿಲ್ಲ. ಸಂತೆಯಲ್ಲಿ, ನೀವೇ ನಿಂತು ಮಾರಬಹುದು. ನಿಮ್ಮ ಮನೆಯಲ್ಲಿ ನೀವು ಹೆಚ್ಚು ಉಪಯೋಗಿಸದ ವಸ್ತುಗಳು ಯಾವುದಾದರೂ ಇದ್ದರೆ ಇಲ್ಲಿ ಒಳ್ಳೆಯ ಮೊತ್ತಕ್ಕೆ ಮತ್ತೂಬ್ಬರಿಗೆ ದಾಟಿಸಬಹುದು. ಪುಸ್ತಕಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಪೀಠೊಪಕರಣಗಳು- ಹೀಗೆ ಯಾವುದೇ ವಸ್ತುಗಳನ್ನೂ ಇಲ್ಲಿ ಕೊಂಡುಕೊಳ್ಳಲು ಗ್ರಾಹಕರು ಬರುತ್ತಾರೆ. ಅಂದಹಾಗೆ, ಇಲ್ಲಿ ಮಾರಾಟ ಮಾಡುವುದಕ್ಕೆ ಯಾವುದೇ ಸ್ಟಾಲ್ ಅಥವಾ ಮಳಿಗೆಗಳ ಅಗತ್ಯವೂ ಇಲ್ಲ.
ಏನಿದು ಕಾರ್ಬೂಟ್ ಸೇಲ್?
ಕಾರ್ನ ಹಿಂದಿನ ಭಾಗವನ್ನು ಡಿಕ್ಕಿ ಎನ್ನುತ್ತೇವಲ್ಲ, ಅದನ್ನು “ಬೂಟ್’ ಎಂದು ಕರೆಯುವುದು ನಿಮಗೂ ಗೊತ್ತೇ ಇರುತ್ತದೆ. ಕಾರಿನ ಡಿಕ್ಕಿಯಲ್ಲಿ ವಸ್ತುಗಳನ್ನು ತುಂಬಿಕೊಂಡು ರಸ್ತೆ ಬದಿ ಮಾರುವುದರಿಂದಾಗಿ ಈ ಮೇಳಕ್ಕೆ “ಕಾರ್ಬೂಟ್ ಸೇಲ್’ ಎನ್ನುವರು. ಐರೋಪ್ಯ ದೇಶಗಳಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಈ “ಕಾರ್ಬೂಟ್ ಸೇಲ್’ ಪರಿಕಲ್ಪನೆ ಭಾರತದಲ್ಲಿ ಇತ್ತೀಚಿಗಷ್ಟೆ ಪ್ರಖ್ಯಾತಿ ಪಡೆಯುತ್ತಿದೆ. ಇಲ್ಲಿ ನಿಮ್ಮ ವಸ್ತುಗಳನ್ನು ಮಾರಾಟ ಮಾಡುವ ಮುನ್ನ ಕೆಲವು ಸೂಚನೆಗಳನ್ನು ಪಾಲಿಸಿದರೆ ನಿಮ್ಮ ಕೆಲಸ ಇನ್ನೂ ಸಲೀಸು.
ಉಪಯೋಗವೇನು?
ಪ್ರತಿ ಬಾರಿ ಹೆಚ್ಚು ದುಡ್ಡು ತೆತ್ತು ದುಬಾರಿ ಬೆಲೆಯ ವಸ್ತುಗಳನ್ನು ಕೊಂಡುಕೊಲುÛವ ಬದಲು, ಬಳಸಿದ ವಸ್ತುವೇ ಆದರೂ ಉತ್ತಮ ಸ್ಥಿತಿಯಲ್ಲಿದ್ದರೆ, ಕೊಳ್ಳುವುದರಲ್ಲಿ ತಪ್ಪೇನು? ಎಲ್ಲಾ ಕಡೆಯಿಂದಲೂ ಲಾಭವೇ. ಮಾರಾಟಗಾರನಿಗೆ ವಸ್ತುಗಳಿಂದ ತುಂಬಿ ತುಳುಕುತ್ತಿರುವ ಮನೆಯಲ್ಲಿ ಸ್ವಲ್ಪ ಜಾಗ ಉಳಿಸಿದಂತೆಯೂ ಆಗುತ್ತದೆ. ಜೊತೆಗೆ ಗ್ರಾಹಕನಿಗೆ ಅದೇ ವಸ್ತುವಿಗೆ ಮಾರುಕಟ್ಟೆಯಲ್ಲಿ ಅದರ ಎಷ್ಟೋ ಪಟ್ಟು ಹೆಚ್ಚಿನ ಮೊತ್ತ ಕೊಟ್ಟು ಖರೀದಿಸುವುದೂ ತಪ್ಪುತ್ತದೆ.
1. ಬೆಳಗ್ಗೆ ಬೇಗ ಸ್ಥಳಕ್ಕೆ ಬನ್ನಿ
ಒಳ್ಳೆಯ ವಸ್ತುಗಳು ಬೇಗ ಖಾಲಿಯಾಗುವುದರಿಂದ ಬೆಳಗ್ಗೆ ಬೇಗ ಬಂದವರಿಗೆ ಉತ್ತಮ ವಸ್ತುಗಳು ಸಿಗುತ್ತವೆ. ಆದ್ದರಿಂದ ಗ್ರಾಹಕರು ಎಷ್ಟು ಬೇಗ ಬರುತ್ತಾರೋ ಅಷ್ಟು ಒಳ್ಳೆಯದು.
2. ಪ್ರಸೆಂಟೇಷನ್ ಚೆನ್ನಾಗಿರಲಿ
ಮಾರಾಟಗಾರರು ತಾವು ತಂದ ವಸ್ತುಗಳನ್ನು ಪ್ರದರ್ಶಿಸಲು ಟೇಬಲ್, ನೆಲಹಾಸು ಇತ್ಯಾದಿ ಸಾಮಗ್ರಿಗಳನ್ನು ತರುವುದು ಒಳ್ಳೆಯದು. ಆಗ ಹೆಚ್ಚಿನ ಗಿರಾಕಿಗಳ ಗಮನ ಸೆಳೆಯಬಹುದು.
3. ಬೆಲೆ ಮುಂಚೆಯೇ ನಿಗದಿಪಡಿಸಿ
ನೀವು ಮಾರಾಟ ಮಾಡುತ್ತಿರುವ ವಸ್ತುವಿನ ಮೌಲ್ಯವನ್ನು ನಿಗದಿ ಪಡಿಸಿ ಲೇಬಲ್ ಬರೆದು ಅಂಟಿಸಿ.
4. ಚೇಂಜ್ ಬೇಕು!
ಮಾರಾಟಗಾರರು ತಮ್ಮೊಡನೆ ಚಿಲ್ಲರೆಯನ್ನು ತರುವುದು ಉತ್ತಮ. ಮಾರಾಟ ಶುರುವಾದ ನಂತರ ಚಿಲ್ಲರೆಗಾಗಿ ಪರದಾಡುವುದು ತಪ್ಪುತ್ತದೆ.
5. ಕಂಪನಿ ಇರಲಿ…
ಮಾರಾಟಗಾರರು ಈ ಮೇಳಕ್ಕೆ ಬರುವಾಗ ತಮ್ಮೊಡನೆ ಪರಿಚಿತರನ್ನು ಕರೆತರುವುದು ಉತ್ತಮ. ನೆರವಿಗೆ ಅಪರಿಚಿತರನ್ನು ಕೇಳುವುದು ಸರಿ ಬರಲಿಕ್ಕಿಲ್ಲ.
6. ಮಳೆಗೆ ಸಿದ್ಧವಿರಿ
ಬೆಂಗಳೂರಿನಲ್ಲಿ ಮಳೆ ಯಾವಾಗ ಬರುತ್ತದೆ ಎಂದು ಹೇಳುವುದು ಕಷ್ಟವಾದ್ದರಿಂದ ಮಾರಾಟಗಾರರು ಛತ್ರಿ, ಪ್ಲಾಸ್ಟಿಕ್ ಹೊದಿಕೆಯನ್ನು ತರಬಹುದು.
7. ಸ್ವತ್ಛ ಬೆಂಗಳೂರು
ಮಾರಾಟವಾಗದೇ ಉಳಿದ ವಸ್ತುಗಳನ್ನು ಮನೆಗೆ ಕೊಂಡೊಯ್ಯಿರಿ. ಮತ್ತು ನಿಮ್ಮ ಮಾರಾಟ ಸ್ಥಳದಲ್ಲಿ ಯಾವುದೇ ಕಸ ಅಥವಾ ಗಲೀಜಿದ್ದಲ್ಲಿ ಅದನ್ನು ಸ್ವತ್ಛ ಮಾಡಿ ಹೋಗಿ.
8. ಜಾಗೃತೆ
ನಿಮ್ಮ ವಸ್ತುಗಳು ಮತ್ತು ಹಣದ ಕುರಿತು ಎಚ್ಚರವಿರಲಿ. ಹಣವನ್ನು ಯಾರಿಗೂ ಕಾಣದಂತೆ ಗುಪ್ತ ಸ್ಥಳದಲ್ಲಿರಿಸಿ. ಜನಜಂಗುಳಿ ತುಂಬುವುದರಿಂದ ಕಳವಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.
ಎಲ್ಲಿ?: ಶಿರೂರು ಪಾರ್ಕ್ ಮೈದಾನ, ಮಂತ್ರಿ ಮಾಲ್ ಬಳಿ, ಮಲ್ಲೇಶ್ವರಂ
ಯಾವಾಗ?: ಜುಲೈ 8
ಜಾಲತಾಣ: carbootsale.in/