ಈ ವರ್ಷ ಜಾರಿಯಾಗುವ ಜಿಎಸ್ಟಿ ಪದ್ಧತಿ ಗುಣಾವಲೋಕನ
Team Udayavani, Jan 24, 2017, 12:57 AM IST
ಭಾಗ 1
ಜಿಎಸ್ಟಿ ಮೌಲ್ಯ ವರ್ಧಿತ ತೆರಿಗೆಯ ತತ್ವದ ಮೇಲೆ ನಿಂತಿದೆ. ಅಂದರೆ ಪ್ರತಿಯೊಂದು ಹಂತದಲ್ಲಿಯೂ ಮೌಲ್ಯವರ್ಧನೆಯಾದ ಮೊತ್ತದ ಮೇಲೆ ಮಾತ್ರವೇ ಕರ ಬೀಳುತ್ತದೆ. ಸರಕಿನ ಒಟ್ಟು ಮೌಲ್ಯದ ಮೇಲೆ ತೆರಿಗೆ ಬೀಳುವುದಿಲ್ಲ. ಇದು ಹಲವು ತೆರಿಗೆಗಳ ಬದಲು ಒಂದೇ ತೆರಿಗೆ ವಿಧಿಸಿ ಇಡೀ ತೆರಿಗೆ ವ್ಯವಸ್ಥೆ ಸರಳಗೊಳಿಸುವ ಸೂತ್ರ.
ಹಲವು ಸುತ್ತಿನ ದೇಶವ್ಯಾಪಿ ಚರ್ಚೆಗಳ ಬಳಿಕ ಜಿಎಸ್ಟಿ ಕಾನೂನು ಕೊನೆಗೂ ಈ ವರ್ಷ ಜಾರಿಗೆ ಬರಲಿದೆ ಎನ್ನುವುದು ಬಹುತೇಕ ಖಚಿತವಾಗಿದೆ. ಜಿಎಸ್ಟಿ ಎಂದರೇನು? ಅದು ಯಾವ ರೀತಿ ಕೆಲಸ ಮಾಡುತ್ತದೆ ಎನ್ನುವ ತಾಂತ್ರಿಕ ಮಾಹಿತಿಯೇ ಬಹಳಷ್ಟು ಜನರಿಗೆ ಗೊತ್ತಿಲ್ಲ. ಆ ಬಗ್ಗೆ ಒಂದಿಷ್ಟು ಮಾಹಿತಿ:
ಜಿಎಸ್ಟಿ ಹಿನ್ನೆಲೆ
ನಾವು ನೀಡುವ ತೆರಿಗೆಯನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು. ಮೊದಲನೆಯದು ಆದಾಯದ ಮೇಲೆ ನೇರವಾಗಿ ನೀಡುವ ನೇರ ತೆರಿಗೆಯಾದರೆ ಎರಡನೆಯದ್ದು ಸರಕು ಹಾಗೂ ಸೇವೆಗಳನ್ನು ಖರೀದಿಸುವಾಗ ಪರೋಕ್ಷವಾಗಿ ನೀಡುವ ಪರೋಕ್ಷ ತೆರಿಗೆ.
ಈ ಪರೋಕ್ಷ ತೆರಿಗೆಯಲ್ಲಿ ಹಲವು ವಿಧಗಳು. ಸೆಂಟ್ರಲ್ ಎಕ್ಸೆ„ಸ್, ಹೆಚ್ಚುವರಿ ಎಕ್ಸೈಸ್, ಕಸ್ಟಮ್ಸ್ ಡ್ಯೂಟಿ, ಹೆಚ್ಚುವರಿ ಕಸ್ಟಮ್ಸ್ ಡ್ಯೂಟಿ, ಸೇಲ್ಸ್ಟ್ಯಾಕ್ಸ್/ವ್ಯಾಟ್, ಮನೋರಂಜನೆ ತೆರಿಗೆ, ಲಗ್ಸುರಿ ಟ್ಯಾಕ್ಸ್, ಲಾಟರಿ ತೆರಿಗೆ, ಪರ್ಚೇಸ್ ಟ್ಯಾಕ್ಸ್, ಎಂಟ್ರಿ ಟ್ಯಾಕ್ಸ್, ಆಕ್ಟ್ರಾಯ್ಗೂ ಸೇವಾ ಕ್ಷೇತ್ರದಲ್ಲಿ ಪ್ರತ್ಯೇಕವಾಗಿ ಹೇರಲಾದ ಸೇವಾ ತೆರಿಗೆ ಅಥವಾ ಸರ್ವಿಸ್ ಟ್ಯಾಕ್ಸ್. ಅಷ್ಟೇ ಅಲ್ಲದೆ ಅವೆಲ್ಲವುಗಳ ಮೇಲೆ ಫ್ರೀ ಆಫರ್ನಂತೆ ಬರುವ ಸೆಸ್ ಸರ್ಚಾರ್ಜುಗಳು ಒಂದು ಉದ್ದದ ಪಟ್ಟಿಯೇ ಇದೆ. ಇದರಲ್ಲಿ ಕೇಂದ್ರ ಹಾಗೂ ರಾಜ್ಯ-ಎರಡೂ ಸರಕಾರಗಳು ಹೇರುವ ತೆರಿಗೆಗಳು ಒಳಗೊಂಡಿವೆ.
ಜಿಎಸ್ಟಿಯಿಂದ ಲಾಭ
ರಾಷ್ಟ್ರವ್ಯಾಪಿ ಏಕರೂಪಿ ಮಾರುಕಟ್ಟೆ, ಏಕರೂಪಿ ಕರವ್ಯವಸ್ಥೆ, ತೆರಿಗೆಗಳ ಪ್ರಮಾಣದಲ್ಲಿ ಕಡಿತ, ಜಾಸ್ತಿ ಜನರನ್ನು ಒಳಗೊಂಡ ಕರ ಪಾವತಿ, ಅತಿ ಕಡಿಮೆ ವಿನಾಯಿತಿ, ಸುಲಭ -ಸರಳವಾಗಿ ಅರ್ಥವಾಗುವಂತಹ ಕರ ಕಾನೂನು, ಕಡಿಮೆ ವ್ಯಾಜ್ಯಗಳು, ಅನುಷ್ಠಾನದಲ್ಲಿ ಸರಳತೆ – ಇವೇ ಕೆಲವು ಜಿಎಸ್ಟಿ ತೆರಿಗೆ ಪದ್ಧತಿ ಲಾಭಗಳು. ಜಿಎಸ್ಟಿ ಪದ್ಧತಿಯನ್ನು ಹಾಗೂ ಅದರ ಇನ್ನಿತರ ಲಾಭವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬೇಕಾದರೆ ಮೊತ್ತ ಮೊದಲು ಶಾಸ್ತ್ರೀಯವಾದ ತೆರಿಗೆ ಪದ್ಧತಿ ಹೇಗೆ ಕೆಲಸ ಮಾಡುತ್ತದೆ, ಅದರಲ್ಲಿನ ಸಮಸ್ಯೆಗಳೇನು ಹಾಗೂ ಜಿಎಸ್ಟಿ ಪದ್ಧತಿಯಲ್ಲಿ ಅದನ್ನು ಯಾವ ರೀತಿ ನಿವಾರಿಸಲಾಗಿದೆ ಎನ್ನುವ ವಿಷಯ ತಿಳಿದುಕೊಳ್ಳಬೇಕು.
ಶಾಸ್ತ್ರೀಯ ಕರ ಪದ್ಧತಿ
ಮೊತ್ತ ಮೊದಲನೆಯದಾಗಿ ಶಾಸ್ತ್ರೀಯವಾದ ಕರ ಪದ್ಧತಿಯಲ್ಲಿ ಒಂದು ಸರಕಿನ ಬೆಲೆ ಯಾವ ರೀತಿ ಏರುತ್ತಲೇ ಹೋಗುತ್ತದೆ ಎನ್ನುವುದನ್ನು ಲೆಕ್ಕ ಹಾಕಿ ನೋಡಿ:
ಒಂದು ಕಂಪನಿ ಸಿದ್ಧ ಉಡುಪಿನ ಉದ್ಯಮದಲ್ಲಿ ಇದೆ ಎಂದಿಟ್ಟುಕೊಳ್ಳಿ. ಆ ಕಂಪನಿ ರೂ 100 ಕೊಟ್ಟು ಅದಕ್ಕೆ ಬೇಕಾದ ಬಟ್ಟೆ ಖರೀದಿ ಮಾಡುತ್ತಾರೆ ಹಾಗೂ ಅದರ ಮೇಲೆ ಶೇ. 10 ಕರ ಪಾವತಿ ಮಾಡುತ್ತಾರೆ. ಅಂದರೆ
ಹಂತ 1: 100+ಶೇ. 10 = ರೂ. 110, ಅವರ ಖರೀದಿ ಬೆಲೆ ಈಗ ಆ ಸಿದ್ಧ ಉಡುಗೆಯೆ ಕಂಪನಿ ಅದನ್ನು ಸಿದ್ಧ ಉಡುಗೆಯಾಗಿ ಪರಿವರ್ತಿಸಿ ಖರ್ಚು ಲಾಭ ಇತ್ಯಾದಿಯೆಂದು ಅದರ ಮೇಲೆ ಮತ್ತೂಂದು ರೂ. 100 ರೂಪಾಯಿ ಹೇರುತ್ತಾರೆ. ಈ ರೂ. 100 ಅವರ ಪಾಲಿನ ವಾಲ್ಯೂ ಎಡಿಷನ್ ಅಥವಾ ಮೌಲ್ಯವರ್ಧನೆ. ಈಗ ಆ ಉಡುಪಿನ ಮೇಲೂ ಶೇ. 10 ತೆರಿಗೆ ಬೀಳುತ್ತದೆ ಎಂದಿಟ್ಟುಕೊಳ್ಳಿ. ಅಂದರೆ
ಹಂತ 2: ಆ ಉಡುಪಿನ ಮಾರಾಟ ಬೆಲೆ ರೂ. 110+100=210+ಶೇ. 10 = ರೂ 231 ಆಗುತ್ತದೆ. ಈಗ ಅದು ಮುಂದಿನ ಹಂತಕ್ಕೆ ಹೋಗಿ ಅಂಗಡಿಗಳಲ್ಲಿ ಮಾರಾಟಕ್ಕೆ ನಿಲ್ಲುವಾಗ ವರ್ತಕರ ಖರ್ಚು, ಲಾಭಾಂಶ (ಮೌಲ್ಯವರ್ಧನೆ) ರೂ. 19 ಸೇರಿಸಲ್ಪಟ್ಟು ರೂ. 250ಕ್ಕೆ ಮಾರಾಟಕ್ಕೆ ನಿಲ್ಲುತ್ತದೆ. ಇದರ ಮೇಲೂ ಶೇ. 10 ಕರ ಹೇರಿದಾಗ ಒಟ್ಟು ಗ್ರಾಹಕ ಬೆಲೆ ರೂ. 275 ಆಗುತ್ತದೆ.
ಹಂತ 3: 231+19=250+ ಶೇ. 10 = ರೂ. 275, ಇದು ಗ್ರಾಹಕರ ಬೆಲೆ. ಇಲ್ಲಿ ಒಂದು ಬಟ್ಟೆ ಉಡುಪಾಗಿ ಪರಿವರ್ತನೆಗೊಂಡು ಮಾರಾಟವಾಗಿ ಗ್ರಾಹಕರ ಕೈ ಸೇರುವಾಗಿನ ಈ ಒಟ್ಟಾರೆ ವ್ಯವಹಾರದಲ್ಲಿ ಮೂರೂ ಹಂತಗಳನ್ನು ಸೇರಿಸಿದರೆ ಒಟ್ಟು ತೆರಿಗೆ ರೂ. 56 (10+21+25) ಆಗುತ್ತದೆ. ನಾವು ಗಮನಿಸಬೇಕಾದ ಮುಖ್ಯ ಅಂಶವೇನೆಂದರೆ ಇಲ್ಲಿ ತೆರಿಗೆಯ ಮೇಲೆ ತೆರಿಗೆ ಬೀಳುತ್ತದೆ. ಕಳೆದ ಹಂತದಲ್ಲಿ ನೀಡಿದ ತೆರಿಗೆಯ ಮೇಲೂ ಇನ್ನೊಮ್ಮೆ ತೆರಿಗೆ ಬೀಳುತ್ತದೆ. ಈ ರೀತಿ ಹಲವು ಹಂತಗಳಲ್ಲಿ ತೆರಿಗೆ ಬೀಳುವ ಕಾರಣ ಒಂದು ಸರಕು ಅಂತಿಮ ಗ್ರಾಹಕನ ಕೈಗೆ ಸೇರುವಾಗ ತೆರಿಗೆಯ ಪ್ರಮಾಣ ಸಿಕ್ಕಾಬಟ್ಟೆ ಹೆಚ್ಚಳವಾಗುತ್ತದೆ. ಜಾಸ್ತಿ ಹಂತಗಳನ್ನು ದಾಟಿ ಸರಕು ಗ್ರಾಹಕನಿಗೆ ತಲುಪಿದಷ್ಟೂ ತೆರಿಗೆಯ ಪ್ರಮಾಣ ಜಾಸ್ತಿಯಾಗುತ್ತಲೇ ಹೋಗುತ್ತದೆ. ಇದು ಶಾಸ್ತೀಯ ತೆರಿಗೆ ಪದ್ಧತಿಯಲ್ಲಿನ ಸಮಸ್ಯೆ ನಂಬರ್ 1.
ಇದರಲ್ಲಿನ ಸಮಸ್ಯೆ ನಂಬರ್ 2 ಏನೆಂದರೆ ಇಲ್ಲಿ ಯಾವುದೇ ಹಂತದಲ್ಲಿ ಆದರೂ ತೆರಿಗೆ ವಂಚನೆ ಮಾಡುವುದು ಅತಿ ಸುಲಭ. ಗ್ರಾಹಕನ ಕೈಯಿಂದ ವಸೂಲಿ ಮಾಡುವ ಶೇ. 10 ತೆರಿಗೆಯನ್ನು ವರ್ತಕನು ಸರಕಾರಕ್ಕೆ ಕಟ್ಟುವನೇ ಇಲ್ಲವೇ ಎನ್ನುವುದು ನಮಗೆ ತಿಳಿಯುವುದಿಲ್ಲ. ಹಾಗೆಯೇ ವರ್ತಕನ ಕೈಯಿಂದ ಸಿದ್ಧ ಉಡುಪಿನ ತಯಾರಕ ಕಂಪನಿ ವಸೂಲಿ ಮಾಡುವ ಶೇ. 10 ತೆರಿಗೆ ಸರಕಾರಕ್ಕೆ ಸೇರುತ್ತದೆಯೇ ಎನ್ನುವುದೂ ಒಂದು ಪ್ರಶ್ನೆಯೇ. ಅದೇ ರೀತಿ ತಯಾರಕರು ಬಟ್ಟೆ ಮಾರುವವರಿಗೆ ನೀಡುವ ಶೇ. 10 ಕೂಡ ಸ್ವಾಹಾ ಆಗುವ ಎಲ್ಲ ಸಂಭಾವ್ಯಗಳೂ ಇವೆ. ರಾಮನ ಲೆಕ್ಕ ಕೃಷ್ಣನ ಲೆಕ್ಕ ಎಂಬೆರಡು ಲೆಕ್ಕ ಪುಸ್ತಕಗಳನ್ನು ಇಟ್ಟು ಇವೆಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಲು ಬರುತ್ತದೆ.
ಈ ಎರಡೂ ವಿಚಾರಗಳ ಒಟ್ಟು ತಾತ್ಪರ್ಯ ಏನೆಂದರೆ ಗ್ರಾಹಕರು ನೀಡುವ ಮೊತ್ತ ಹೆಚ್ಚಳವಾಗುತ್ತಲೇ ಹೋದರೂ ಸಹ ಆ ಮೌಲ್ಯ ಸರಕಾರದ ಖಜಾನೆ ಸೇರದೆ ಲಾಭ ಬಡುಕರ ಜೇಬು ಸೇರಿ ಕಾಳಧನವಾಗಿ ಶೇಖರವಾಗುತ್ತದೆ. ಇದು ನಮ್ಮ ದೇಶದಲ್ಲಿ ನಡೆಯುತ್ತಾ ಬಂದಿರುವ ಸಮಸ್ಯೆ ನಂಬರ್ 2.
ಜಿಎಸ್ಟಿ ಪದ್ದತಿ
ಜಿಎಸ್ ತೆರಿಗೆ ಮೌಲ್ಯ ವರ್ಧಿತ ತೆರಿಗೆಯ ತತ್ವದ ಮೇಲೆ ನಿಂತಿದೆ. ಮೌಲ್ಯ ವರ್ಧಿತ ತೆರಿಗೆ ಅಥವಾ ವಾಲ್ಯೂ ಆಡ್ಡೆಡ್ ಟಾಕ್ಸ್ ಅಂದರೆ ಪ್ರತಿಯೊಂದು ಹಂತದಲ್ಲಿಯೂ ಮೌಲ್ಯ ವರ್ಧನೆಯಾದ (ಬೆಲೆ ಹೆಚ್ಚಳ) ಮೊತ್ತದ ಮೇಲೆ ಮಾತ್ರವೇ ಕರ ಬೀಳುತ್ತದೆ. ಸರಕಿನ ಒಟ್ಟು ಮೌಲ್ಯದ ಮೇಲೆ ತೆರಿಗೆ ಬೀಳುವುದಿಲ್ಲ. ಅಂದರೆ ಪ್ರತಿ ಹಂತದಲ್ಲಿಯೂ ತೆರಿಗೆಯ ಮೇಲೆ ತೆರಿಗೆ ಬೀಳುವ ಸಮಸ್ಯೆ ಇಲ್ಲಿಗೆ ಪರಿಹಾರವಾದಂತಾಯಿತು. ಯಾರು ಒಂದು ಸರಕಿನ ಮೇಲೆ ಎಷ್ಟರ ಮಟ್ಟಿಗೆ ಮೌಲ್ಯ ವರ್ಧನೆ (ಬೆಲೆ ಹೆಚ್ಚಳ) ಮಾಡುತ್ತಾರೆಯೋ ಅಷ್ಟರ ಮೇಲೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ. ಇದರಿಂದ ಒಟ್ಟಾರೆ ತೆರಿಗೆಯ ಪ್ರಮಾಣದಲ್ಲಿ ಭಾರಿ ಇಳಿಕೆ ಕಾಣಬಹುದು. ಮೇಲಿನ ಉದಾಹರಣೆ ತೆಗೆದುಕೊಂಡಲ್ಲಿ ಪ್ರತಿ ಹಂತದಲ್ಲಿ ಮೌಲ್ಯವರ್ಧನೆ ಆಗಿರುವುದು ಮತ್ತು ಅದರ ಮೇಲಿನ ಶೇ. 10 ತೆರಿಗೆ ಈ ಕೆಳಗಿನಂತಿದೆ:
ಹಂತ 1: ಬಟ್ಟೆಯ ಬೆಲೆ ರೂ. 100 ಮತ್ತು ಶೇ. 10 ತೆರಿಗೆ ರೂ. 10
ಹಂತ 2: ಉಡುಪಿನ ಮೇಲಿನ ಮೌಲ್ಯ ವರ್ಧನೆ = ರೂ. 100 ಮತ್ತು ಅದರ ಮೇಲಿನ ಶೇ. 10 ತೆರಿಗೆ = ರೂ. 10
ಹಂತ 3: ವರ್ತಕನ ಮೌಲ್ಯ ವರ್ಧನೆ ರೂ 19 ಹಾಗೂ ಅದರ ಮೇಲಿನ ಶೇ. 10 ತೆರಿಗೆ – ರೂ. 1.90
ಹಾಗಾಗಿ, ಒಟ್ಟು ತೆರಿಗೆ = 10+10+1.90= ರೂ. 21.90. ಶಾಸ್ತ್ರೀಯ ತೆರಿಗೆ ಪದ್ಧತಿಯಲ್ಲಿ ಇದು ರೂ. 56 ಆಗಿದ್ದುದನ್ನು ಗಮನಿಸಬೇಕು. ಮೌಲ್ಯ ವರ್ಧಿತ ತೆರಿಗೆಯಲ್ಲಿ ಗ್ರಾಹಕನಿಗೆ ಈ ರೀತಿ ಭಾರೀ ಉಳಿತಾಯವಾಗುತ್ತದೆ. ಸರಕಿನ ಮಾರಾಟ ಬೆಲೆ ರೂ. 275ರಿಂದ ರೂ. 240.90ಕ್ಕೆ ಇಳಿಕೆಯಾಗುತ್ತದೆ. ಇದರಿಂದ ಬಹು ಹಂತದ ತೆರಿಗೆಯಾದ ನಮ್ಮ ಸಮಸ್ಯೆ ನಂಬರ್ 1ಗೆ ಪರಿಹಾರ ಕಂಡಂತಾಯಿತು.
ಇನ್ನು ಉಳಿದದ್ದು ಸಮಸ್ಯೆ ನಂಬರ್ 2. ಪ್ರತಿ ಹಂತದಲ್ಲಿ ಪಡಕೊಂಡ ತೆರಿಗೆ ಸರಕಾರದ ಬೊಕ್ಕಸಕ್ಕೆ ಕಡ್ಡಾಯವಾಗಿ ಹೋಗುವುದಕ್ಕೆ ದಾರಿ ಯಾವುದು? ಇದನ್ನು ಖಚಿತಪಡಿಸಿಕೊಳ್ಳವುದು ಮೌಲ್ಯವರ್ಧಿತ ತೆರಿಗೆ ಪದ್ಧತಿಯಲ್ಲಿ ಒಂದು ಸುಲಭ ಸೂತ್ರ ಅಳವಡಿಸಲಾಗಿದೆ. ಅದೇನೆಂದರೆ ಪ್ರತಿ ಹಂತದಲ್ಲಿಯೂ ಮೊದಲು ಸರಕಿನ ಮಾರಾಟ ಬೆಲೆಯ ಮೇಲೆ ತೆರಿಗೆ ಹಾಕಿ ಅದರಿಂದ ತಾವು ಹಿಂದಿನ ಹಂತದಲ್ಲಿ ಖರೀದಿ ಸಮಯದಲ್ಲಿ ಪಾವತಿ ಮಾಡಿದ ತೆರಿಗೆಯನ್ನು ಕಳೆಯುವ ಮೂಲಕ ನಿವ್ವಳ ತೆರಿಗೆ ಪಾವತಿ ಮಾಡುವ ವಿಧಾನವನ್ನು ಇಲ್ಲಿ ಉಪಯೋಗಿಸಲಾಗುತ್ತದೆ. ಇಲ್ಲಿ ಪ್ರತಿಯೊಬ್ಬನೂ ಹಿಂದಿನ ಹಂತದಲ್ಲಿ ನೀಡಿರುವ ತೆರಿಗೆಯನ್ನು ದಾಖಲೆ ಸಮೇತ ತಾನು ಈಗ ಕಟ್ಟಬೇಕಾದ ತೆರಿಗೆಯೊಂದಿಗೆ ಲಿಂಕ್ ನೀಡುವುದರಿಂದ ಸರಕಾರಕ್ಕೆ ಎಲ್ಲರೂ ಪಾವತಿ ಮಾಡಿದ ತೆರಿಗೆಯ ವಿವರಗಳೂ ಕೇಂದ್ರೀಯ ಕಂಪ್ಯೂಟರಿನಲ್ಲಿ ಲಭ್ಯವಾಗುತ್ತದೆ. ಹಾಗಾಗಿ ಯಾರೊಬ್ಬರೂ ತೆರಿಗೆ ಪಡೆದುಕೊಂಡು ಸರಕಾರಕ್ಕೆ ಕಟ್ಟದೇ ಹೋದರೆ ಅದು ಕರ ಇಲಾಖೆಯ ಕಂಪ್ಯೂಟರಿನಲ್ಲಿ ಹಾಗೆಯೇ ಕಾಣಿಸಿಕೊಳ್ಳುತ್ತದೆ. ಈ ಮೂಲಕ ತೆರಿಗೆ ವಂಚನೆಯನ್ನು ಸುಲಭವಾಗಿ ಕಂಡು ಹಿಡಿಯಲು ಸಾಧ್ಯವಾಗುತ್ತದೆ. ಪ್ರತಿಯೊಂದು ಹಂತದವರೂ ತಮ್ಮ ಹಿಂದಿನ ಹಂತದವರ ಮೇಲೆ ಸ್ವಾಭಾವಿಕವಾಗಿಯೇ ನಿಯಂತ್ರಣ ಇಟ್ಟುಕೊಳ್ಳುವುದೇ ಇದರ ಸುಲಭ ಅನುಷ್ಠಾನಸ ಒಳಗುಟ್ಟು.
ಈ ರೀತಿ ಜಿಎಸ್ಟಿ ಪದ್ಧತಿಯಲ್ಲಿ ಹಲವು ತೆರಿಗೆಗಳ ಬದಲು ಒಂದೇ ಸಿಂಗಲ್ ತೆರಿಗೆ ವಿಧಿಸಿ ಇಡೀ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ಹಾಗೂ ಸುಲಭವಾಗಿ ಅನುಷ್ಠಾನಕ್ಕೆ ತರುವ ಸೂತ್ರ ಅಡಗಿದೆ. ಅಷ್ಟು ಮಾತ್ರವಲ್ಲದೆ, ಶಾಸ್ತ್ರೀಯ ಪದ್ಧತಿಯಲ್ಲಿರುವ ಎರಡು ಸಮಸ್ಯೆಗಳಿಗೂ ಇಲ್ಲಿ ಪರಿಹಾರ ಕಂಡುಕೊಳ್ಳಲಾಗಿದೆ. ಈಕಾರಣಕ್ಕಾಗಿಯೇ ಜಿಎಸ್ಟಿ ತೆರಿಗೆಯನ್ನು ಜಗತ್ತಿನಾದ್ಯಂತ ಹಾಡಿ ಹೊಗಳಲಾಗುತ್ತದೆ.
(ಮುಂದುವರಿಯುವುದು…)
– ಜಯದೇವ ಪ್ರಸಾದ ಮೊಳೆಯಾರ ; [email protected]
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್