ಸತ್ಯಭಾಮ ಹೇಳ್ತಾರೆ ಗೇರುಪಾಠ
Team Udayavani, Jan 16, 2017, 3:45 AM IST
ಇಲ್ಲಿದೆ ಆರೇಳು ತಳಿಗಳ ಗೇರು ಮರಗಳು. ಸಮೃದ್ಧ ಗೇರು ಕೃಷಿಗೆ ಮಾದರಿಯಾಗಿ ಈಗ ಎಲ್ಲ ಮರಗಳೂ ಹೂ, ಹಣ್ಣು, ಕಾಯಿಗಳಿಂದ ಕೊಂಬೆಗಳು ಬಾಗುತ್ತಿವೆ. ಇಂತಹ ಕೃಷಿಯನ್ನು ಮಾಡಿರುವವರು ಏಕಾಂಗಿ ಮಳೆ ಸತ್ಯಭಾಮಾ. ಬಂಟ್ವಾಳ ತಾಲೂಕಿನ ಮಂಚಿಯಲ್ಲಿದೆ ಅವರ ಸಾಧನೆಯ ಗೇರು ಕೃಷಿ.
ಐದು ವರ್ಷಗಳ ಹಿಂದೆ ಸತ್ಯಭಾಮಾ ಮೂರು ಎಕರೆ ಕಾಲಿ ಗುಡ್ಡದಲ್ಲಿ ಗೇರು ಕೃಷಿ ಮಾಡಲು ಯೋಚಿಸಿದಾಗ ಪುತ್ತೂರಿನ ಗೇರು ಅಭಿವೃದ್ಧಿ ಮಂಡಳಿ ಮಾಹಿತಿ ಒದಗಿಸಿತು. ಕೃಷಿ ವಿಜಾnನಿ ಗಂಗಾಧರ ನಾಯಕ್ ಸ್ವತಃ ಸ್ಥಳಕ್ಕೆ ಬಂದು ಕೃಷಿಯ ಮಾರ್ಗದರ್ಶನ ಮಾಡಿದರು. ಐವತ್ತು ಸಾವಿರ ರೂ.ಗಳ ಸಹಾಯಧನವನ್ನೂ ಒದಗಿಸಿದರು. ಉಳ್ಳಾಲ, ಉಳ್ಳಾಲ-2, ಉಳ್ಳಾಲ-4, ಭಾಸ್ಕರ, ವೆಂಗೊರ್ಲ, ಆರ್ಐ ತಳಿಗಳ ಎಂಟು ನೂರು ಗಿಡಗಳ ನಾಟಿಯೂ ನಡೆಯಿತು.
ಗಿಡದಿಂದ ಗಿಡಕ್ಕೆ ಮೂರು ಮೀಟರ್ ಸಾಲಿನಿಂದ ಸಾಲಿಗೆ ಆರು ಮೀಟರ್ ಅಂತರ ವಿಡಲಾಗಿದೆ. ಜೂನ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಎರಡು ಕಂತುಗಳಾಗಿ ರಸಗೊಬ್ಬರ ಪೂರೈಸುವುದು. ಕೆಳಭಾಗದ ಕೊಂಬೆ ಮತ್ತು ಮೇಲಿನ ಚಿಗುರನ್ನು ತೆಗೆದು ಗಿಡ ವಿಶಾಲವಾಗಿ ಹರಡುವಂತೆ ಮಾಡುವುದು ಕೃಷಿಯಲ್ಲಿ ಪ್ರತಿ ವರ್ಷವೂ ಪಾಲಿಸಲೇಬೇಕಾದ ನಿಯಮಗಳು.
ಮೊದಲನೆಯ ವರ್ಷವೇ ಗಿಡ ಹೂ ಬಿಟ್ಟಿದೆ. ಒಂದು ಕ್ವಿಂಟಾಲು ಕಚ್ಚಾ ಗೇರುಬೀಜ ದೊರಕಿದೆ ಎನ್ನುತ್ತಾರೆ ಸತ್ಯಭಾಮಾ. ನಾಲ್ಕನೆಯ ವರ್ಷ ಬಂದ ಫಸಲು ಹದಿನೈದು ಕ್ವಿಂಟಾಲು. ಈ ಸಲವೂ ಸಮೃದ್ಧವಾಗಿ ಹೂಗಳಿವೆ. ಮೂವತ್ತು ಕ್ವಿಂಟಾಲು ಫಸಲು ಬರಬಹುದು. ಮುಂದೆ ಸರಾಸರಿ ಒಂದು ಮರದಿಂದ ಹತ್ತು ಕಿಲೋ ಪ್ರಕಾರ ಎಂಭತ್ತು ಕ್ವಿಂಟಾಲು ಬೆಳೆ ಕೊಯ್ಯುವ ನಿರೀಕ್ಷೆ ಅವರದು. ಪ್ರತೀ ಮರಕ್ಕೂ 900 ಗ್ರಾಮ್ ಯೂರಿಯಾ, 150 ಗ್ರಾಮ್ ಪೊಟಾಷ್, 300 ಗ್ರಾಮ್ ರಾಕ್ ಫಾಸೆ#àಟ್ ಗೊಬ್ಬರಗಳನ್ನು ಎರಡು ಕಂತುಗಳಾಗಿ ಪೂರೈಸುತ್ತಾರೆ. ಹೂ ಬಿಡುವ ಸಮಯದಲ್ಲಿ ಟಿ ಸೊಳ್ಳೆ ಮತ್ತು ಚಿಗುರಿನ ರಸ ಹೀರುವ ಕೀಟಗಳ ನಿಯಂತ್ರಣಕ್ಕೆ ಕರಾಟೆ ಎಂಬ ಸಸ್ಯ ಸ್ನೇಹಿ ಔಷಧವನ್ನು ಸಿಂಪಡಿಸುತ್ತಾರೆ.
ಮೂರು ಸಲ ಔಷಧ ಸಿಂಪಡನೆ ಅನಿವಾರ್ಯ. ಇಬ್ಬನಿ ಮತ್ತು ಮೋಡ ಹೆಚ್ಚಿದ್ದರೆ ಇನ್ನೊಂದು ಸಲ ಸಿಂಪಡಿಸುವುದು ಅಗತ್ಯವಂತೆ. ಈ ಔಷಧ ಇಂಡೋಸಲ್ಫಾನ್ನಂತೆ ಜೇನ್ನೊಣಗಳಿಗೆ, ಇತರ ಜೀವಿಗಳಿಗೆ ಹಾನಿಕರವಲ್ಲ ಎನ್ನುತ್ತಾರೆ ಸತ್ಯಭಾಮಾ.
ಇನ್ನು ಗೇರು ತೋಟದಲ್ಲಿ ಕಾಡುಕಂಟಿಗಳಿಲ್ಲ. ಉದುರಿದ ಹಣ್ಣುಗಳನ್ನು ಆಯ್ದುಕೊಳ್ಳಲು ಸುಲಭವಾಗಿದೆ. ಸತ್ಯಭಾಮಾ ಅವರು ಗೇರು ಹಣ್ಣುಗಳಿಂದ ತಯಾರಿಸಿದ ಹಲ್ವ ಮತ್ತು ಷರಬತ್ತು ಯಾವುದರಿಂದ ತಯಾರಿಸಿದ್ದು ಎಂದು ತಿಳಿಯದಷ್ಟು ರುಚಿಕರವಾಗಿದ್ದವು. ಗೇರು ಮಂಡಳಿಯ ಸಭೆಗಳಲ್ಲಿ ಅವರ ಈ ತಯಾರಿಕೆಗಳನ್ನು ಅತಿಥಿಗಳಿಗೂ ಹಂಚಿದ್ದಾರೆ. ಗೇರು ಹಣ್ಣುಗಳಿಗೂ ಉತ್ತಮ ಗಿರಾಕಿ ಇದೆ. ಕಳೆದ ವರ್ಷ ಕಚ್ಚಾ ಬೀಜಕ್ಕೆ ಕಿಲೋಗೆ 117 ರೂ. ಗಳ ಗರಿಷ್ಠ ದರ ಸಿಕ್ಕಿದೆ. ಈ ವರ್ಷ 30 ಕ್ವಿಂಟಾಲು ಬೆಳೆ ಕೈಗೆ ಬರುವ ನಿರೀಕ್ಷೆ ಇದೆ. ಸತ್ಯಭಾಮಾ ಮೂವರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದಾರೆ. ಒಬ್ಬನೇ ಮಗ ಬೆಂಗಳೂರಿನಲ್ಲಿ ಎಂಜಿನಿಯರ್. ಆದರೂ ಕೃಷಿಯಿಂದಲೇ ಮಕ್ಕಳ ಶ್ರೇಯಸ್ಸನ್ನು ಸಾಧಿಸಿರುವ ಅವರು ಹತ್ತು ಮಿಶ್ರ ತಳಿಯ ದನಗಳನ್ನು ಸಾಕಿ ದಿನಕ್ಕೆ ಎಂಭತ್ತು ಲೀಟರ್ ಹಾಲು ಮಾರಾಟ ಮಾಡುತ್ತಿದ್ದಾರೆ. ಮಂಚಿ ಹಾಲು ಸಂಘಕ್ಕೆ ಹಾಲು ಪೂರೈಸುವವರಲ್ಲಿ ದ್ವಿತೀಯ ಸ್ಥಾನ ಗಳಿಸಿ ಸನ್ಮಾನವನ್ನು ಪಡೆದಿದ್ದಾರೆ. ಗೇರು ಮಂಡಳಿ ಕೂಡ ಅವರ ಸಾಧನೆಗೆ ಗೌರವ ಸಲ್ಲಿಸಿದೆ. ಕಸಿ ತಳಿಯ ಇನ್ನೊಂದು ವೈಶಿಷ್ಟ್ಯವೆಂದರೆ ಬಹು ಬೇಗನೆ ವರ್ಷದ ಫಸಲು ಸಿಗುತ್ತದೆಯಂತೆ. ಮಾಹಿತಿಗೆ 8971284717. ರಾತ್ರಿ 7ರಿಂದ 8.
– ಪ. ರಾಮಕೃಷ್ಣ ಶಾಸ್ತ್ರೀ