ಸಾಂಪ್ರದಾಯಿಕ ಫೋಟೋ ಫಿನಿಶ್
Team Udayavani, Oct 16, 2017, 11:03 AM IST
ಸೆರಾಮಿಕ್, ವೆಟ್ರಿಫೈಡ್, ಪ್ಲಾಸ್ಟಿಕ್ ಎಮಲ್ಶನ್ಗಳ ಈ ದಿನಗಳಲ್ಲಿ ಹಲವಾರು ಉತ್ತಮ ಫಿನಿಶ್ಗಳು ಕ್ರಮೇಣ ಕಾಣೆಯಾಗುತ್ತಿವೆ. ಮೊದಲನೆಯದಾಗಿ, ಸ್ವಲ್ಪ ಶ್ರಮದಾಯಕ ಎನ್ನಬಹುದಾದ ಈ ಫಿನಿಶ್ಗಳನ್ನು ಮಾಡಲು ಕುಶಲಕರ್ಮಿಗಳ ಕೊರತೆಯೂ ಇದೆ. ಜೊತೆಗೆ ಹೊಸ ವಸ್ತುಗಳ ಥಳುಕು ಬಳಕಿನ ನಡುವೆ, ನೋಡಿ ಸವಿದಿರುವುದು ಸಪ್ಪೆ ಎನಿಸಿ, ಹಿಂದೆ ಸರಿದಿವೆ. ಆದರೆ ನೂರಾರು ವರ್ಷ ನಮ್ಮ ಹಿಂದಿನವರನ್ನು ಆರೋಗ್ಯವಾಗಿರಿಸಿದ, ಮಾದರಿ ಎನಿಸುವ ಫಿನಿಶ್ಗಳನ್ನು ಮತ್ತೆ ಪರಿಗಣಿಸುವುದು ಉತ್ತಮ.
ರೆಡ್ ಆಕ್ಸೈಡ್ ಗಿಲಾಯಿ ಒಂದು ಕಾಲದಲ್ಲಿ ಅನಿವಾರ್ಯ ಎಂದಾಗಿತ್ತು. ಈಗಲೂ ಹಳೆಯ ಕಾಲದ ಮನೆಗಳಲ್ಲಿ ಅದು ಫಳ್ಳನೆ ಹೊಳೆಯುತ್ತ ಮಿರಮಿರ ಮಿಂಚುವುದನ್ನು ನಾವು ನೋಡಬಹುದು. ಈ ಮಾದರಿಯ ಫಿನಿಶ್ಗಳು ಹೆಚ್ಚು ಬಳಸಿದಷ್ಟೂ ಮೆರುಗನ್ನು ಹೆಚ್ಚಿಸಿಕೊಳ್ಳಬಲ್ಲವು! ರೆಡ್ ಆಕ್ಸೈಡ್ ಹೆಚ್ಚು ಜನಪ್ರಿಯವಾಗಿದ್ದರೂ ಇತರೆ ಅಂದರೆ ನೀಲಿ, ರೋಸ್, ಹಳದಿ, ಹಸಿರು, ಕರಿ ಹಾಗೂ ಇವುಗಳ ಸಂಮ್ಮಿಶ್ರಣದಿಂದ ಮಾಡಬಹುದಾದ ನೂರಾರು ಬಣ್ಣಗಳ ಕಾಂಬಿನೇಷನ್ ಸಾಧ್ಯ.
ಇವನ್ನು ಮಾಮೂಲಿ ಸಿಮೆಂಟ್ನೊಂದಿಗಾದರೂ ಮಿಶ್ರಣ ಮಾಡಬಹುದು ಅಥವಾ ಹೆಚ್ಚು ಗಾಢ ಹಾಗೂ ಆಕ್ಸೈಡ್ಗೆ ಹತ್ತಿರದ ಬಣ್ಣ ಬೇಕೆಂದರೆ ಬಿಳಿ ಸಿಮೆಂಟ್ ನೊಂದಿಗೆ ಬೆರೆಸಬಹುದು. ಸೆರಾಮಿಕ್, ವಿಟ್ರಿಫೈಡ್ ಅಥವಾ ಪ್ಲಾಸ್ಟಿಕ್ ಆಧಾರಿತ ಇತರೆ ವಸ್ತುಗಳು ಒಂದು ರೀತಿಯಲ್ಲಿ ನಿರ್ಜೀವ ವಸ್ತುಗಳಾಗಿದ್ದು, ಅವುಗಳಲ್ಲಿ ಗಾಳಿ ಆಡುವುದಿಲ್ಲ. ರೆಡ್ ಆಕ್ಸೈಡ್ ಸಿಮೆಂಟ್ ಫಿನಿಶ್ನಲ್ಲಿ ಹಾಗಲ್ಲ. ಇದರಲ್ಲಿ ಸೂಕ್ಷ್ಮ ರಂಧ್ರಗಳಿದ್ದು, ಅವುಗಳ ಮೂಲಕ ಈ ವಸ್ತು ಉಸಿರಾಡುತ್ತದೆ.
ಇದು ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದ್ದು, ಮನೆಯ ಒಳಗಿನ ಹಾಗೂ ಹೊರಗಿನ ವಾತಾವರಣವನ್ನು ಸರಿದೂಗಿಸಿಕೊಂಡು ಹೋಗುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಮನೆ ಕಟ್ಟಲು ಈ ರೀತಿಯಲ್ಲಿ ಉಸಿರಾಡುವ ವಸ್ತುಗಳ ಬಳಕೆಯಿಂದ, ವಾತಾವರಣದಲ್ಲಾಗುವ ವೈಪರೀತ್ಯವನ್ನು ತೂಗಿಸಲು ಸಹಕಾರಿಯಾಗಿದ್ದು, ಮನೆಯೊಳಗೆ ಮುಗ್ಗಲು ವಾಸನೆ ಬರುವುದು, ಬೂಷ್ಟ್ ಹಿಡಿಯುವುದು ತಪ್ಪಿ, ಚೇತೋಹಾರಿಯಾದ ವಾತಾವರಣ ಉಂಟಾಗಲು ಸಹಾಯಕಾರಿಯಾಗಿರುತ್ತದೆ.
ಫ್ಲೋರ್ ಕೆಳಗಿನ ತಯಾರಿ
ಎಲ್ಲ ನೆಲಹಾಸುಗಳಿಗೂ ನೀಡುವಂತೆ, ಕೆಳಗೊಂದು ಸದೃಢ ಆಧಾರ ಕೊಡಬೇಕಾಗುತ್ತದೆ. ಈ ಸಬ್ ಫ್ಲೋರ್ ಗಟ್ಟಿಮುಟ್ಟಾಗಿದ್ದಷ್ಟೂ ನೆಲಹಾಸು ಹೆಚ್ಚು ವರ್ಷ ಬಾಳಿಕೆ ಬರುತ್ತದೆ. ನೆಲಮಹಡಿಯಲ್ಲಾದರೆ, ದಪ್ಪ ಜಲ್ಲಿ ಬಳಸಬೇಕು ಇತ್ತೀಚಿನ ದಿನಗಳಲ್ಲಿ ಮುಕ್ಕಾಲು ಇಂಚಿನ ಜಲ್ಲಿಯನ್ನೇ ಕಾಂಕ್ರಿಟ್ ತಯಾರಿಸಲು ಬಳಸುವುದು ಹೆಚ್ಚಾಗಿದೆ. 1:4:8 ಅಂದರೆ ಒಂದು ಪಾಲು ಸಿಮೆಂಟಿಗೆ ನಾಲ್ಕು ಪಾಲು ಮರಳು ಹಾಗೂ ಎಂಟು ಪಾಲು ಜೆಲ್ಲಿಕಲ್ಲು ಹಾಕಿ ಕಡೇ ಪಕ್ಷ ಆರು ಇಂಚಿನಷ್ಟು ದಪ್ಪದ ಪದರವನ್ನು ಚೆನ್ನಾಗಿ ದಮ್ಮಸ್ಸು ಮಾಡಿ ನೀಡಬೇಕು.
ಮೊದಲ ಮಹಡಿಯಲ್ಲಾದರೆ ಆರ್ಸಿಸಿ ಇರುವುದರಿಂದ. ಈ ಸಬ್ ಫ್ಲೋರ್ ಅಗತ್ಯ ಇರುವುದಿಲ್ಲ. ಸುಮಾರು ಒಂದು ಇಂಚಿನಷ್ಟು ದಪ್ಪದ ಮಡ್ಡಿ ಅಂದರೆ ಸಿಮೆಂಟ್ ಗಾರೆ ಒಂದಕ್ಕೆ ನಾಲ್ಕರ ಲೆಕ್ಕದಲ್ಲಿ ಮಿಶ್ರಣ ಮಾಡಿ ಸಮತಟ್ಟಾಗಿ ಹರಡಿ, ಮಟ್ಟಗೋಲಿನಿಂದ ಸವರಿ, ಗಾರೆ ಚೆಕ್ಕೆ ಹೊಡೆದು ಮಟ್ಟಸ ಮಾಡಿ ನಂತರ ತಯಾರಾದ ರೆಡ್ ಆಕ್ಸೈಡ್ ಸಿಮೆಂಟ್ ಮಿಶ್ರಣವನ್ನು ಲೇಪಿಸಬೇಕು. ಸುಮಾರು ಎರಡು ಮೂರು ಗಂಟೆಗಳ ನಂತರ ಇನಿಯಲ್ ಸೆಟ್ಟಿಂಗ್-ಮೊದಲ ಹಂತದ ಗಟ್ಟಿಗೊಳ್ಳುವಿಕೆ ಕೆಂಪು ಆಕ್ಸೈಡ್ ಲೇಪನಕ್ಕೆ ಆಗುತ್ತದೆ.
ನಂತರ ಕಾಲಕೆಳಗೆ ಮೃದುವಾದ ಗೋಣಿ ಚೀಲಗಳನ್ನು ಹಾಕಿಕೊಂಡು, ಮೊದಲು ಲೇಪಿಸಿದ ಕಡೆಯಿಂದ ಮಟ್ಟಸವಾಗಿ ಉಜ್ಜಿ, ನುಣುಪಾಗಿಸಬೇಕು. ಈ ಕ್ರಿಯೆಯನ್ನು ಈ ಹಿಂದೆ ಎರಡು ಮೂರು ಬಾರಿ ರಾತ್ರಿಯೆಲ್ಲ ಮಾಡಲಾಗುತ್ತಿತ್ತು. ಆದರೆ ಈಗ ಉತ್ತಮ ಗುಣ ಮಟ್ಟದ ಸಿಮೆಂಟ್ ಸಿಗುತ್ತಲಿದ್ದು, ಒಮ್ಮೆ ಸರಿಯಾಗಿ ಮಾಡಿದರೆ, ಉತ್ತಮ ಫ್ಲೋರ್ ನಮ್ಮದಾಗುತ್ತದೆ.ಎಲ್ಲ ಸಿಮೆಂಟ್ ಫಿನಿಶ್ಗಳಂತೆ, ಕೆಂಪು ಆಕ್ಸೈಡ್ ಫ್ಲೋರ್ಗೆ ಕೂಡ ಸೂಕ್ತ ಕ್ಯೂರಿಂಗ್ ಅಗತ್ಯ.
ಈ ಹಿಂದೆ ಇಪ್ಪತ್ತೂಂದು ದಿನದ ಕ್ಯೂರಿಂಗ್ ಅನಿವಾರ್ಯವಾಗಿದ್ದರೆ, ಈಗ ಕಡೇ ಪಕ್ಷ ಹತ್ತು ಹದಿನೈದು ದಿನ ಮಾಡಿದರೂ ಸಾಕಾಗುತ್ತದೆ. ಶುರುವಿನಲ್ಲಿ ಒಂದೆರಡು ಬಾರಿ ಮೇಣದ ಪಾಲಿಶ್ – ಹಾಕಿ ಉಜ್ಜುವುದರಿಂದ ಕೆಂಪು ಆಕ್ಸೈಡ್ ನೆಲಹಾಸಿಗೆಗೆ ಹೆಚ್ಚಿನ ಮೆರಗು ಬರುವುದರೊಂದಿಗೆ, ನಿಂಬೆ ಹಣ್ಣಿನ ರಸ, ಹಾಗೂ ಇತರೆ ûಾರ ಪದಾರ್ಥಗಳು ತಗುಲಿದರೂ ಕರೆಯಾಗುವುದಿಲ್ಲ. ಜೊತೆಗೆ ಮೇಂಟನೆನ್ಸ್ ಕೂಡ ಸುಲಭವಾಗುತ್ತದೆ.
ಆಕ್ಸೈಡ್ ಮಾಡುವ ವಿಧಾನ
ಉತ್ತಮ ದರ್ಜೆಯ ಆಕ್ಸೈಡ್ಗಳನ್ನು ಬಳಸುವುದು ಅನಿವಾರ್ಯ. ಈ ಹಿಂದೆ ಸಿಮೆಂಟ್ನೊಂದಿಗೆ ಸರಿಯಾಗಿ ಬೆರೆಸಲು ಕೈಗಳಲ್ಲಿ ಹಿಡಿದು ಉಜ್ಜಿ ಉಜ್ಜಿ ಚೆನ್ನಾಗಿ ಬೆರೆಯುವಂತೆ ಮಾಡಲಾಗುತ್ತಿತ್ತು. ಆದರೆ ಈಗ ಈ ಮಾದರಿಯಲ್ಲಿ ಗಂಟೆಗಟ್ಟಲೆ ಕೂತು ಬೆಸೆಯುವಂತೆ ಮಾಡುವ ಕೆಲಸಗಾರರು ಸಿಗುವುದು ವಿರಳ. ಆದುದರಿಂದ ಹೊಸ ಪದ್ಧತಿ ಜಾರಿಗೊಳಿಸಬಹುದು. ಒಂದೆರಡು ಬಾರಿ ಕರ್ಣೆಯಲ್ಲಿ ಬೆರೆಸಿ ನಂತರ ಸಣ್ಣ ರಂಧ್ರಗಳಿರುವ- ಸೊಳ್ಳೆ ಪರದೆ ಮಾದರಿಯ ಮೆಶ್ ಪರದೆಯ ಮೇಲೆ ಹಾಕಿದರೆ, ಸಿಮೆಂಟ್ ಹಾಗೂ ಆಕ್ಸೈಡ್ ಚೆನ್ನಾಗಿ ಬೆಸೆದುಕೊಳ್ಳುವುದರ ಜೊತೆಗೆ, ಉತ್ತಮ ಬಣ್ಣವನ್ನೂ ಪಡೆಯುತ್ತದೆ.
ಸಾಮಾನ್ಯವಾಗಿ ಒಂದು ಪಾಲು ಆಕ್ಸೈಡ್ಗೆ, ಎರಡು ಪಾಲು ಸಿಮೆಂಟ್ ಅನ್ನು ಬೆರೆಸಿ ಬಳಸಲಾಗುತ್ತದೆ.ಕೆಂಪು ಆಕ್ಸೈಡ್ ನೆಲ ಮಾಡುವಾಗ ಸ್ವಲ್ಪ ದಪ್ಪನಾದ ಪದರವನ್ನು ನೀಡುವುದು ಉತ್ತಮ. ಕಡೇಪಕ್ಷ ಅರ್ಧ ನೂಲು ಅಂದರೆ ಸುಮಾರು ಎರಡು ಎಂ ಎಂ ದಪ್ಪವಾದರೂ ಇರಬೇಕು. ತೀರ ಕಡಿಮೆ ಅಂದರೆ ಬಣ್ಣ ಹೊಡೆದಂತೆ ತೆಳುವಾಗಿ ಲೇಪಿಸಿ, ನೆಲ ಮಾಡಿದರೆ, ಕೆಲವೇ ವರ್ಷಗಳಲ್ಲಿ ಸವೆದು ಹೋಗಬಹುದು. ಹೆಚ್ಚು ಓಡಾಡುವ ಪ್ರದೇಶಗಳಲ್ಲಿ ಇನ್ನೂ ಒಂದೆರಡು ಎಂ ಎಂ ದಪ್ಪ ಹಾಕಿದರೆ ಉತ್ತಮ.
* ಆರ್ಕಿಟೆಕ್ಟ್ ಕೆ. ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ