ಕಾಡಾನೆ ದಾಳಿ: ಗ್ರಾಮಸ್ಥರು ಕಂಗಾಲು
Team Udayavani, Aug 19, 2017, 8:10 AM IST
ಸೋಮವಾರಪೇಟೆ: ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಾರ, ಕೂಗೂರು, ಹಿರಿಕರ, ದೊಡ್ಡಮಳೆ¤ ಗ್ರಾಮದಲ್ಲಿ ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ.ಪ್ರತಿದಿನ ಕೃಷಿ ಬೆಳೆಗಳನ್ನು ನಾಶಪಡಿಸುತ್ತಿವೆ. ಹಗಲಿನ ವೇಳೆ ಮಾಲಂಬಿ, ನಿಡ್ತ ಮೀಸಲು ಅರಣ್ಯದಲ್ಲಿ ವಿಶ್ರಾಂತಿ ಪಡೆದುಕೊಳ್ಳುವ ಕಾಡಾನೆಗಳು, ರಾತ್ರಿಯಾಗುತ್ತಲೆ ಗ್ರಾಮಗಳಿಗೆ ನುಗ್ಗಿ ಉಪಟಳ ನೀಡುತ್ತಿವೆ.
ಅರಣ್ಯ ಇಲಾಖಾ ಸಿಬ್ಬಂದಿಗಳು ಹಾಗು ಗ್ರಾಮಸ್ಥರು ವಾರದಲ್ಲಿ ಎರಡು ದಿನ ಪಟಾಕಿ ಸಿಡಿಸಿ, ಗ್ರಾಮದ ಸುತ್ತಮುತ್ತಲಿನಿಂದ ಕಾಡಾನೆಗಳನ್ನು ದೂರದ ಅರಣ್ಯ ಪ್ರದೇಶಕ್ಕೆ ಅಟ್ಟುವ ಪ್ರಯತ್ನ ನಡೆಯುತ್ತಿದೆ. ಆದರೆ ಗಜಪಡೆ ಗ್ರಾಮವನ್ನು ತೊರೆಯುತ್ತಿಲ್ಲ.
ನಾಟಿಯಾದ ಭತ್ತದ ಪೈರು ಬೇರು ಹಿಡಿದು ಹಸಿರು ತಿರುಗುತ್ತಿದ್ದು, ಅದನ್ನೆ ಕಾಡಾನೆಗಳು ತಿನ್ನುತ್ತಿವೆ. ತೆಂಗಿನ ಗಿಡಗಳು ಹಾಗು ಉತ್ತಮ ತಳಿಯ ಬಾಳೆಗಿಡಗಳು ಕಾಡಾನೆಗಳಿಗೆ ಆಹಾರವಾಗುತ್ತಿರುವುದರಿಂದ ಕೃಷಿಕರು ಕಂಗಾಲಾಗಿದ್ದಾರೆ.ಕೃಷಿ ಭೂಮಿಯ ಸಮೀಪ ಮರದ ಮೇಲೆ ಅಟ್ಟಣಿಕೆ ಮಾಡಿಕೊಂಡು, ರಾತ್ರಿಯಿಡಿ ಪಟಾಕಿ ಸಿಡಿಸಿ ಕಾಡಾನೆಗಳನ್ನು ಬೆದರಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಆದರೆ ಶಬ್ದಕ್ಕೂ ಕಾಡಾನೆಗಳು ಭಯಪಡುತ್ತಿಲ್ಲ ಎಂದು ಕೃಷಿಕ ಸಿ.ಎಲ್.ಮಂಜುನಾಥ್ ಹೇಳಿದರು.
ಹಿರಿಕರ ಮಂಜುನಾಥ್ ಅವರ ಬಾಳೆಗಿಡಗಳನ್ನು ನಾಶಪಡಿಸಿವೆ. ಎಚ್.ಎಂ.ಚಂದ್ರಪ್ಪ ಸೇರಿದಂತೆ ಹೆಚ್ಚಿನ ಬೆಳೆಗಾರರ ಕಾಫಿ ತೋಟಗಳಲ್ಲಿ ಗಿಡಗಳನ್ನು ಹಾನಿಪಡಿಸಿವೆ. ಕಾಡಾನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕೆಂದು ಕೃಷಿಕರು ಒತ್ತಾಯಿಸಿದ್ದಾರೆ.