ಕಾರು ಅಪಘಾತ: ಓರ್ವ ಸಾವು
Team Udayavani, Jan 10, 2017, 3:45 AM IST
ತೆಕ್ಕಟ್ಟೆ (ಕನ್ನುಕೆರೆ): ಕನ್ನುಕರೆ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸಮೀಪ ರಾ.ಹೆ 66ರಲ್ಲಿ ಕಾರೊಂದು ಡಿವೈಡರ್ ಏರಿ ವಿರುದ್ಧ ದಿಕ್ಕಿಗೆ ಬಂದು ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸಾವಿಗೀಡಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ತಡರಾತ್ರಿ ಸಂಭವಿಸಿದೆ.
ವ್ಯಾಗನರ್ ಕಾರಿನಲ್ಲಿದ್ದ ಕೇರಳ ಮೂಲದ ಶಿಬು (32) ಮೃತಪಟ್ಟವರು. ಅವರ ಜತೆ ಕಾರಿನಲ್ಲಿದ್ದ ರಿಜೇಶ್ ಹಾಗೂ ಪ್ರಮೋದ್ ಅವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಇನ್ನೋರ್ವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಕೇರಳದಿಂದ ಕುಂದಾಪುರದೆಡೆಗೆ ಸಾಗುತ್ತಿದ್ದ ಮಾರುತಿ ವ್ಯಾಗನರ್ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕವನ್ನು ಏರಿ ವಿರುದ್ಧ ದಿಕ್ಕಿಗೆ ಸಾಗಿದ ಪರಿಣಾಮವಾಗಿ ಪುಣೆಯಿಂದ ಮಂಗಳೂರಿನ ಕಡೆಗೆ ಸಾಗುತ್ತಿದ್ದ ಫಾರ್ಚೂನಾರ್ ಕಾರಿಗೆ ಢಿಕ್ಕಿ ಹೊಡೆದಿದೆ. ಘಟನೆಯ ತೀವ್ರತೆಗೆ ವ್ಯಾಗನರ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಫಾರ್ಚೂನಾರ್ ಕಾರಿನ ಬಲಭಾಗ ನಜ್ಜುಗುಜ್ಜಾಗಿದೆ. ಫಾರ್ಚೂನಾರ್ ಕಾರಿನಲ್ಲಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ .
ರಸ್ತೆಯ ಮೇಲೆ ಮಡುಗಟ್ಟಿದ ರಕ್ತ
ವ್ಯಾಗನರ್ ಕಾರಿನಲ್ಲಿ ಕೇರಳದಿಂದ ಕುಂದಾಪುರದೆಡೆಗೆ ನಾಲ್ವರು ಪ್ರಯಾಣಿಸುತ್ತಿದ್ದ ಕಾರು ಏಕಾಏಕಿ ವಿರುದ್ಧ ದಿಕ್ಕಿನೆಡೆಗೆ ಸಾಗಿ ಅವಘಡ ಸಂಭವಿಸುತ್ತಿದ್ದಂತೆ ಕಾರನಲ್ಲಿದ್ದ ಶಿಬುಸ್ಥಳದಲ್ಲಿಯೇ ಸಾವಿಗೀಡಾಗಿದರು.
ಸಾರ್ವಜನಿಕರ ಸ್ಪಂದನ: ತಡರಾತ್ರಿ ಅಪಘಾತ ಸಂಭವಿಸುತ್ತಿದ್ದಂತೆ ಇಲ್ಲಿನ ತೆಕ್ಕಟ್ಟೆ ಫ್ರೆಂಡ್ಸ್(ರಿ) ಸದಸ್ಯರು ತತ್ಕ್ಷಣವೇ ಮಾನವೀಯವಾಗಿ ಸ್ಪಂದಿಸುವ ಮೂಲಕ ಗಾಯ ಗೊಂಡವರನ್ನು ತೆಕ್ಕಟ್ಟೆ ಫ್ರೆಂಡ್ಸ್ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು.
ಸ್ಥಳಕ್ಕೆ ಕೋಟ ಪೊಲೀಸ್ ಠಾಣಾಧಿಕಾರಿ ರಾಜಗೋಪಾಲ ಹಾಗೂ ಸಿಬಂದಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.
ಮಾನವೀಯತೆ ಮೆರೆದರು
ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಅಪಘಾತದ ತೀವ್ರತೆಯನ್ನು ನೋಡುತ್ತಿರುವ ಸಂದರ್ಭದಲ್ಲಿ ರಸ್ತೆಯಲ್ಲಿ ಅಂಟಿಕೊಂಡಿರುವ ಚಿನ್ನದ ಬ್ರೇಸ್ ಲೆಟ್ ಕಂಡ ಸ್ಥಳೀಯರು ಗಮನಕ್ಕೆ ತರುವ ಮೂಲಕ ಕೋಟ ಠಾಣಾಧಿಕಾರಿಗಳಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದರು.