ತಾಲೂಕಿನ ವಿವಿಧ ಗ್ರಾ.ಪಂ. ವ್ಯಾಪ್ತಿಯಲ್ಲಿ ಜಲಕ್ಷಾಮ ಭೀತಿ
Team Udayavani, Mar 19, 2017, 4:19 PM IST
ಕುಂದಾಪುರ: ಬೇಸಗೆ ಆರಂಭವಾಗುತ್ತಿದ್ದಂತೆ ನೀರಿನ ಸಮಸ್ಯೆ ಆರಂಭವಾಗಿದೆ. ಬಿಸಿಲ ಧಗೆ ದಿನದಿಂದ ದಿನಕ್ಕೆ ಏರುತ್ತಿದ್ದರೆ ಎಲ್ಲೆಲ್ಲೂ ನೀರಿನ ದಾಹ ಕಂಡು ಬಂದಿದೆ. ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ತಾಲೂಕಿನ ಅನೇಕ ಚೆಕ್ ಡ್ಯಾಂಗಳಲ್ಲಿ ನೀರಿನ ಬರ ಕಂಡು ಬಂದರೆ ಕೆಲವು ಚೆಕ್ ಡ್ಯಾಂಗಳ ಹಲಗೆಗಳನ್ನು ಸರಿಯಾಗಿ ಹಾಕದೇ ನೀರು ಸೋರಿಕೆಯಾಗಿ ಈ ಪ್ರದೇಶದ ಅಂತ ರ್ಜಲ ಮಟ್ಟ ಕುಸಿದು ಹೋಗಿದೆ. ಗ್ರಾ.ಪಂ.ಗಳಲ್ಲಿ ಜಲಕ್ಷಾಮ ಎದುರಾಗಿದ್ದು, ತಾಲೂಕಿನ ಅನೇಕ ಗ್ರಾ.ಪಂ.ಗಳಲ್ಲಿ ಟ್ಯಾಂಕರ್ ನೀರು ಪೂರೈಕೆಗೆ ಬೇಡಿಕೆ ಬಂದಿದೆ.
ನದಿ ಪಾತ್ರಗಳಲ್ಲಿ ಉಪ್ಪು ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿ ಕಾಡ ತೊಡಗಿದೆ. ಗ್ರಾಮೀಣ ಪ್ರದೇಶದಲ್ಲಿ ಬಾವಿ , ಕೆರೆಗಳು ಬತ್ತಿಹೋಗಿ ಬೋರ್ವೆಲ್ಗಳಿಂದ ನೀರು ಪಡೆಯಲಾಗದ ಜನರು ನೀರಿಗೋಸ್ಕರ ಹಪ ಹಪಿಸುತ್ತಿದ್ದಾರೆ. ಕುಂದಾಪುರ ತಾಲೂಕಿನ 56 ಗ್ರಾ.ಪಂ.ಗಳಲ್ಲಿ ಬಹುತೇಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಸುವಂತೆ ಆಯಾ ಗ್ರಾ.ಪಂ. ಪಿಡಿಒಗಳು ತಾ.ಪಂ.ನಲ್ಲಿ ತಮ್ಮ ವ್ಯಾಪ್ತಿಯ ನೀರಿನ ಬೇಡಿಕೆಯನ್ನು ನೀಡಿದ್ದಾರೆ.
ಟ್ಯಾಂಕರ್ ಮೂಲಕ
ನೀರು ಸರಬರಾಜು
ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಬಹಳಷ್ಟು ಬೇಗನೆ ಎದುರಾಗುವ ಸಾಧ್ಯತೆ ಇದ್ದು ತಾಲೂಕಿನ ಬಹುತೇಕ ಗ್ರಾ.ಪಂ.ಗಳು ಟ್ಯಾಂಕರ್ ಮೂಲಕ ನೀರನ್ನು ಒದಗಿಸುವಂತೆ ತಾಲೂಕು ಟಾಸ್ಕ್ಪೋರ್ಸ್ ಸಮಿತಿಗೆ ನೀಡಿದ್ದಾರೆ. ಕೊಲ್ಲೂರು, ಅಂಪಾರು, ಮೂಡುಬಗೆ, ಕಿರಿಮಂಜೇಶ್ವರ, ಶಂಕರನಾರಾಯಣ, ಹಟ್ಟಿಯಂಗಡಿ, ಖಂಬದಕೋಣೆ ಈಗಾಗಲೇ ಬೇಡಿಕೆ ಯನ್ನು ನೀಡಿದೆ. ಕಳೆದ ವರ್ಷ ಮಾರ್ಚ್ ಕೊನೆಯ ವಾರದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಆರಂಭಿಸಿದ್ದು, ಮೇ 19ರ ತನಕ ನೀರು ಸರಬರಾಜಾಗಿತ್ತು. ಒಟ್ಟು 37 ಗ್ರಾ.ಪಂ. ಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿತ್ತು. ಗುಲ್ವಾಡಿ ಗ್ರಾ.ಪಂ. ವ್ಯಾಪ್ತಿಯ ಮಾವಿನಕಟ್ಟೆ, ಅಬ್ಬಿಗುಡ್ಡಿ, ದುರ್ಗಾನಗರ, ಉದಯ ನಗರ, ದಾಸರಬೆಟ್ಟು, ಸೌಕೂರು, ಮದಗ, ಕೌಂಜೂರುಗಳಲ್ಲಿ, ಗುಜ್ಜಾಡಿ ಗ್ರಾ.ಪಂ. ವ್ಯಾಪ್ತಿಯ ನಾಯಕವಾಡಿ ಜನತಾ ಕಾಲೋನಿ, ಮಂಕಿ ಶಾಲೆಯ ಬಳಿ ಹಾಗೂ ಜನತಾ ಕಾಲನಿ, ಕೊಡಪಾಡಿ, ಗುಜ್ಜಾಡಿ ಕಳಿಹಿತ್ಲು, ಹೊಸಾಡು ಗ್ರಾ.ಪಂ. ವ್ಯಾಪ್ತಿಯ ಭಗತ್ನಗರ, ಮಂಚುಗೋಡು, ಖಂಬದಕೋಣೆ ಗ್ರಾ.ಪಂ. ವ್ಯಾಪ್ತಿಯ ಹಳಗೇರಿ, ಹೇರಂಜಾಲು, ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಜನ್ಸಾಲೆ, ಹೊಂಬಾಡಿ ಗ್ರಾ.ಪಂ. ವ್ಯಾಪ್ತಿಯ ಗುಡ್ಡೆಯಂಗಡಿ, ಯಡಾಡಿಗಳಲ್ಲಿ ಅತಿ ಹೆಚ್ಚು ಟ್ಯಾಂಕರ್ ನೀರು ಸರಬರಾಜಾಗಿತ್ತು. ಈ ಬಾರಿ ಬಹುತೇಕ ಎಪ್ರಿಲ್ ಮೊದಲ ವಾರದಲ್ಲಿ ನೀರು ಸರಬರಾಜು ಆರಂಭವಾಗಲಿದೆ.
ಕಿಂಡಿ ಅಣೆಕಟ್ಟುಗಳಲ್ಲಿ
ನೀರು ಸೋರಿಕೆ
ಅಂಪಾರು ಮೂಡುಬಗೆಯ ಶೇಡಿನ ಕೊಡ್ಲು ನಲ್ಲಿ ನಿರ್ಮಿಸಲಾಗಿರುವ ಕಿಂಡಿ ಅಣೆಕಟ್ಟುವಿನಲ್ಲಿ ಈ ಬಾರಿ ನೀರು ಸೋರುವಿಕೆಯಿಂದಾಗಿ ಅಣೆಕಟ್ಟು ಬರಿದಾಗಿದೆ ಅಣೆಕಟ್ಟು ಪ್ರದೇಶದಲ್ಲಿ ನೀರು ಬರಿದಾಗಿರು ವುದರಿಂದ ಪರಿಸರದ ಜಲ ಮೂಲಗಳು ಬತ್ತಿಹೋಗಲು ಆರಂಭವಾಗಿ ರುವುದರಿಂದ ಈ ಬೇಸಗೆಯಲ್ಲಿ ಇಲ್ಲಿನ ಕೆರೆ ಬಾವಿಗಳು ಬತ್ತುವ ಸಾಧ್ಯತೆ ಇದೆ. ಇದರಿಂದಾಗಿ ಕುಡಿಯುವ ನೀರ ಅಭಾವ ಈ ಗ್ರಾಮಗಳಲ್ಲಿ ಕಂಡುಬರುವ ಸಾಧ್ಯತೆ ಇದೆ.
ಕೃಷಿ ತೋಟಗಳು ಒಣಗಿ ಹೋಗುವ ಸಾಧ್ಯತೆ ಇದೆ. ಹೇರಳವಾಗಿ ಸಿಗುತ್ತಿದ್ದ ನೀರನ್ನು ನಿರ್ಲಕ್ಷ್ಯದಿಂದ ಹರಿಯ ಬಿಟ್ಟಿರುವುದು ಇನ್ನಷ್ಟು ಅಪಾಯಕ್ಕೆ ತಂದೊಡ್ಡುವ ಭೀತಿ ಇದೆ. ಬೆಳ್ವೆ ಗ್ರಾಮದ ಗುಮ್ಮೊಲದಲ್ಲಿ ನಿರ್ಮಿಸಲಾಗಿರುವ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಸೋರಿಕೆಯಿಂದ ಪರಿಸರದಲ್ಲಿ ನೀರು ಶೇಖರಣೆ ಕಡಿಮೆಯಾಗಿ ಅಂತರ್ಜಲ ಇಂಗಿಹೋಗಿದೆ.
ಬೇಸಗೆ ಹತ್ತಿರ ಬಂದಂತೆ ನೀರಿನ ಬರ ಎದ್ದು ಕಾಣುತ್ತಿದೆ. ತಾಲೂಕಿನ ವಿವಿಧ ಗ್ರಾ.ಪಂ.ಗಳಿಂದ ಕುಡಿಯುವ ನೀರಿನ ಬೇಡಿಕೆ ಬಂದಿದೆ. ಈ ಕುರಿತು ಪ್ರತಿ ವಾರ ಸಮತಿ ಸಭೆ ಕರೆದು ಅತಿ ತುರ್ತಾಗಿ ನೀರಿನ ಆವಶ್ಯಕತೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗುವುದು. ಅಲ್ಲದೇ ತಾಲೂಕು ವ್ಯಾಪ್ತಿಯಲ್ಲಿ ಬೋರ್ವೆಲ್ ಹಾಗೂ ಪೈಪ್ಲೈನ್ ವಿಸ್ತರಣೆ ಕಾಮಗಾರಿ, ಬಾವಿ ಹಾಗೂ ಕೆರೆಗಳ ಹೂಳೆತ್ತುವಿಕೆ ಮೊದಲಾದ ಕಾಮಗಾರಿಗಳಿಗೆ ಹೆಚ್ಚಿನ ಪ್ರಾಶಸ್ತÂ ನೀಡಲಾಗುವುದು.
– ಜಿ.ಎಂ. ಬೋರ್ಕರ್, ತಹಶೀಲ್ದಾರರು ಕುಂದಾಪುರ
– ಉದಯ ಆಚಾರ್ ಸಾಸ್ತಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..