ಉಪ್ಪುಂದ: ನಗ -ನಗದಿಗಾಗಿ ಮನೆಗೆ ನುಗ್ಗಿ ಜಾಲಾಡಿದರು
Team Udayavani, Mar 22, 2017, 12:03 PM IST
ಮರವಂತೆ (ಉಪ್ಪುಂದ): ಉಪ್ಪುಂದದ ಬಳಿ ರಾ.ಹೆದ್ದಾರಿ 66ರ ಸಮೀಪದಲ್ಲಿ ಇರುವ ಡಾ| ಕೆ.ಆರ್. ನಂಬಿಯಾರ್ ಅವರ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ನಗ -ನಗದಿಗಾಗಿ ಮನೆಯನ್ನು ಜಾಲಾಡಿರುವ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.
ಡಾ| ಕೆ.ಆರ್.ನಂಬಿಯಾರ್ ಮತ್ತು ಅವರ ಪತ್ನಿ ಲತಿಕಾ ಇಬ್ಬರೇ ಮನೆಯಲ್ಲಿ ವಾಸಿಸುತ್ತಿದ್ದು , ವಾರದ ಹಿಂದೆ ಅವರು ಹುಟ್ಟೂರು ಕೇರಳಕ್ಕೆ ಹೋಗಿದ್ದು, ಅಲ್ಲಿಂದ ಸಿಂಗಾಪುರ ಪ್ರವಾಸಕ್ಕೆ ತೆರಳಿದ್ದರು. ಹೋಗುವಾಗ ಅವರು ಮನೆ ಕೆಲಸದವರಿಗೆ ತೋಟಗಳಿಗೆ ನೀರು ಬಿಡಲು ಹಾಗೂ ನಾಯಿಗೆ ಊಟ ಹಾಕಲು ಹೇಳಿ ಮನೆಯ ಹೊರಗಿನ ಅಡುಗೆ ಕೋಣೆಯೊಂದರ ಬೀಗ ನೀಡಿ ತೆರಳಿದ್ದರು. ಮಂಗಳವಾರ ಬೆಳಗ್ಗೆ ಕೆಲಸದಾಕೆ ಬಂದಾಗ ಹಿಂದುಗಡೆ ಬಾಗಿಲು ಮುರಿದಿರುವುದನ್ನು ಕಂಡು ಅನುಮಾನಗೊಂಡು ಈ ಕುರಿತು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಬೈಂದೂರು ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಮನೆಯಲ್ಲಿ ಕಳವು ನಡೆದಿದೆ ಎಂದು ತಿಳಿದಾಗ ನಂಬಿಯಾರ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ಮೊಬೈಲ್ ಸಂಪರ್ಕಕ್ಕೆ ಸಿಗದೇ ಇರುವುದರಿಂದ ಅವರ ಸಂಬಂಧಿಗಳಾದ ನಾವುಂದ ನಿವಾಸಿ ಕೆ.ವಿ. ನಂಬಿಯಾರ್ ಮತ್ತು ಕೆ.ಪಿ. ನಂಬಿಯಾರ್ ಅವರಿಗೆ ಮಾಹಿತಿ ನೀಡಲಾಯಿತು. ಹಾಗೂ ಅವರ ಸಮ್ಮುಖದಲ್ಲಿ ಪೊಲೀಸ್ ಅಧಿಕಾರಿಗಳು ಮನೆ ಒಳಗೆ ಹೋಗಿ ನೋಡಿದಾಗ ಮನೆಯ ಕೋಣೆಯ ಒಳಗಿರುವ ಕಪಾಟು, ಹಲವಾರು ಡ್ರವರ್ಗಳನ್ನು ಜಾಲಾಡಿರುವುದು ಕಂಡುಬಂದಿದೆ. ಹಾಗೂ ಕಪಾಟಿನ ಒಳಗಿರುವ ಬಟ್ಟೆಗಳನ್ನು ಹೊರಕೆಹಾಕಿ ಹಣ ಒಡವೆಗಳಿಗಾಗಿ ಹುಡುಕಾಟ ನಡೆಸಲಾಗಿದೆ.