ಲೀನವಾಗುತ್ತಿದೆ ಅಮೂಲ್ಯ ಶಿಲಾ ಶಾಸನಗಳು
Team Udayavani, Apr 22, 2017, 3:05 PM IST
ತೆಕ್ಕಟ್ಟೆ: ಇಲ್ಲಿನ ಬೇಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಗ್ರಾಣಿಬೆಟ್ಟು ಸುತ್ತಮುತ್ತಲ ಪರಿಸರದಲ್ಲಿದೆ ಪುರಾತನ ಜೈನರ ಕಾಲದ ಶಾಸನ. ಇಲ್ಲಿನ ಕೃಷಿ ಭೂಮಿ ಹಾಗೂ ಮಠದ ಕೆರೆಯ ಮಧ್ಯದಲ್ಲಿ ಶತಮಾನದ ಜೈನರ ಕಾಲದ ಶಿಲಾ ಶಾಸನಗಳು ಕಾಲನ ಭೂ ಗರ್ಭ ಸೇರುತ್ತಿದ್ದು ಜೈನರ ಆಳ್ವಿಕೆಯ ವೈಭವವನ್ನು ಸಾರಿ ಹೇಳುತ್ತಿದೆ.
ಈ ಶಿಲಾ ಶಾಸನಗಳಲ್ಲಿ ಏನಿದೆ ?
ಇಲ್ಲಿನ ಉಗ್ರಾಣಿಬೆಟ್ಟು ಸುತ್ತಮುತ್ತಲ ಪರಿಸರದ ಫಲವತ್ತಾದ ಕೃಷಿ ಭೂಮಿಯ ನಡುವೆ ಆಳೆತ್ತರದಲ್ಲಿ ನಿಂತಿರುವ ಶತಮಾನಕ್ಕೂ ಹಳೆಯದಾದ ಜೈನರ ಅತ್ಯಮೂಲ್ಯ ಈ ಶಿಲಾಶಾಸನದ ನಡುವೆ ಆಕರ್ಷಕ ಬಲರಾಮ ಮೂರ್ತಿ ಹಾಗೂ ಬಲಭಾಗದಲ್ಲಿ ಸೂರ್ಯ ಮತ್ತು ಎಡಭಾಗದಲ್ಲಿ ಚಂದ್ರನ ಚಿತ್ರವನ್ನು ಕೆತ್ತಲಾಗಿದ್ದು ಕೆಲವೊಂದು ಚಿತ್ರಗಳು ಅಸ್ಪಷ್ಟವಾಗಿ ಗೋಚರವಾಗುತ್ತಿವೆ ಅಲ್ಲದೆ ಇಲ್ಲಿಗೆ ಸಮೀಪದ ಮಠದ ಕೆರೆಯ ಮಧ್ಯದಲ್ಲಿರುವ ಆಳೆತ್ತರದ ಶಿಲಾ ಶಾಸನದ ನಡುವೆ ಶಿವಲಿಂಗ, ಬಸವ, ದೀಪ , ಸೂರ್ಯ , ಚಂದ್ರ ಹಾಗೂ ಕೈಯಲ್ಲಿ ಕತ್ತಿ ಹಿಡಿದು ನಿಂತಿರುವಂತಹ ವ್ಯಕ್ತಿ ಚಿತ್ರಣ ಕೆತ್ತಲ್ಪಟ್ಟಿದೆ ಹಾಗೂ ಇದರ ಸಮೀಪದಲ್ಲಿಯೇ ಮರದ ಬುಡದಲ್ಲಿ ಜೈನರ ಕಾಲಕ್ಕೆ ಸೇರಿದ ನಾಗನ ಶಿಲೆಗಳು ಜೈನರ ಪುರಾತನ ಹಿನ್ನೆಲೆಯನ್ನು ಹೊಂದಿರುವಂತೆ ಕೆಲವೊಂದು ಕುರುಹುಗಳು ಕಾಣಸಿಗುತ್ತವೆ .
ರಕ್ಷಿಸಬೇಕಾಗಿದೆ ಶಾಸನ !
ಅತ್ಯಮೂಲ್ಯ ಮಾಹಿತಿಗಳು ಅಡಕವಾಗಿರುವ ಇಂತಹ ಶಾಸನವನ್ನು ಪ್ರಾಚ್ಯ ಇಲಾಖೆಯವರು ಅಧಿಕಾರಿಗಳು ಅಧ್ಯಯನಗೈದು ಮಹತ್ವದ ಮಾಹಿತಿಯನ್ನು ಕ್ರೋಢೀಕರಿಸುವ ಮೂಲಕ ಇಂತಹ ಶಾಸನದ ರಕ್ಷಣೆಯ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ.
ನಿರ್ಲಕ್ಷಕ್ಕೆ ಒಳಗಾದ ಕೆರೆ !
ಅಪಾರ ಪ್ರಮಾಣದ ನೀರಿನ ಸೆಲೆಯನ್ನು ಹೊಂದಿದ್ದ ಪ್ರಸಿದ್ಧ ಕೆರೆ ಹಿಂದೆ ನೂರಾರು ಎಕರೆ ಕೃಷಿಕರ ಪಾಲಿಗೆ ವರವಾಗಿದ್ದು ಪ್ರಸ್ತುತ ಸಂಪೂರ್ಣ ನಿರ್ಲಕ್ಷéಕ್ಕೆ ಒಳಗಾಗಿದೆ. ಸುಮಾರು 19 ಸೆಂಟ್ಸ್ ವಿಸ್ತೀರ್ಣದಲ್ಲಿರುವ ಪುರಾತನ ಮಠದ ಕೆರೆ ಮಾಯವಾಗುವ ಸ್ಥಿತಿಯಲ್ಲಿದ್ದು ಸಂಬಂಧಪಟ್ಟ ಅಧಿಕಾರಿಗಳು ಕೆರೆಯ ರಕ್ಷಣೆಗೆ ಮುಂದಾಗುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಆರಾಧಿಸುವ ಸಂಪ್ರದಾಯ
ಉಗ್ರಾಣಿಬೆಟ್ಟನ ಪರಿಸರದಲ್ಲಿ ಶತಮಾನಕ್ಕೂ ಹಳೆಯದಾದ ಜೈನರ ಅತ್ಯಮೂಲ್ಯ ಶಿಲಾಶಾಸನಗಳು ಗದ್ದೆಯ ಮಧ್ಯದಲ್ಲಿವೆ. ಅಲ್ಲದೆ ಈ ಶಿಲಾ ಶಾಸನದಲ್ಲಿ ಕೆತ್ತಲಾಗಿರುವ ಬಲರಾಮ ಮೂರ್ತಿಗೆ ಇಲ್ಲಿನ ಕೃಷಿಕರು ನಂಬಿಕೆಯಂತೆ ಕೃಷಿ ಕಾಯಕ ಆರಂಭವಾಗುವ ಮೊದಲು ಭತ್ತದ ಸಸಿ (ಕುಂದಾಪ್ರ ಕನ್ನಡದಲ್ಲಿ ಅಗೆ)ಯನ್ನು ಶಾಸನದ ಮೇಲೆ ಹೂವಿನಂತಿರಿಸಿ ಆರಾಧಿಸುವ ಸಂಪ್ರದಾಯ ಇಂದಿಗೂ ನಡೆದುಕೊಂಡು ಬಂದಿರುವುದೇ ಇಲ್ಲಿನ ವಿಶೇಷ.
ಸುಧಾಕರ ಶೆಟ್ಟಿ ಉಗ್ರಾಣಿಬೆಟ್ಟು ಬೇಳೂರು, ಕೃಷಿಕ
ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ
ಚಿತ್ರಗಳು: ಅನಂತ ತೆಕ್ಕಟ್ಟೆ