ಬೆರಳು ತೋರುವ ಪಥದರ್ಶಕರು ಬೇಕಾಗಿದ್ದಾರೆ


Team Udayavani, Oct 12, 2017, 11:02 AM IST

Agriculture.jpg

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಕಳಂಜ ಯುವಕ ಮಂಡಲಕ್ಕೀಗ ಅರುವತ್ತ ನಾಲ್ಕು ವರುಷ! ಆರಂಭದ ಹೆಸರು “ಯುವಕರ ಸಂಘ’. ಕೃಷಿ ಚಟುವಟಿಕೆಗಳಿಗೆ ರೂಪುಗೊಂಡಿದ್ದ “ಯಂಗ್‌ ಫಾರ್ಮರ್ಸ್‌ ಕ್ಲಬ್‌ ‘ಮಿಳಿತವಾಗಿ ಯುವಕ ಕೃಷಿಕರ ಕೂಟವಾಯಿತು. ದಶಕದ ಬಳಿಕ “ಯುವಕ ಮಂಡಲ’ವೆಂದು ನಾಮಕರಣ. ಕೃಷಿ ಮತ್ತು ಪ್ರಕೃತ ಸಾಮಾಜಿಕ ಬದುಕು ಪಲ್ಲಟವಾಗುತ್ತಾ ಬಂದಂತೆ ಉದ್ದೇಶಗಳೂ ಪಲ್ಲಟಗೊಂಡುವು.

ಪ್ರಕೃತ ಕ್ರೀಡೆ, ಸೇವೆಗಳಲ್ಲಿ ತೊಡಗಿಸಿಕೊಂಡಿದೆ. ಯುವಕ ಕೃಷಿಕರ ಕೂಟವು ಗ್ರಾಮೀಣ ಬದುಕಿನ ಅಂಗ. ಬೆರಳು ತೋರುವ ಮಾರ್ಗದರ್ಶಕ. ಹೊಸತರ ಅನ್ವೇಷಕ. ತಂತ್ರಜ್ಞಾನದ ದರ್ಶಕ. ಮಾಹಿತಿಗಳ ವಿತರಕ. ಹೀಗೆ ಕೃಷಿ ಬದುಕಿನ ಸುತ್ತ ಯುವಕರ ಕೂಟವೊಂದು ಆಸಕ್ತಿ ವಹಿಸಿರುವುದು ಒಂದು ಕಾಲಘಟ್ಟದ ಬೆರಗು. ಯುವಕ ಸಂಘಗಳು ಕೃಷಿ, ಪರಿಸರದತ್ತ ಸಶಕ್ತವಾದರೆ ಗ್ರಾಮೀಣ ಭಾರತದ ಚಿತ್ರವನ್ನು ಬದಲಿಸಬಹುದು ಎನ್ನುವ  ಭರವಸೆಯನ್ನು ಕಳಂಜದ ಕೃಷಿ ಕೂಟವು ಸ್ಥಾಪಿಸಿತ್ತು. ಆರಂಭದ ದಿನಮಾನಗಳಿಗೆ ಹಿರಿಯ ಕೃಷಿಕ
ಕೋಟೆ ರಾಧಾಕೃಷ್ಣರು ದನಿಯಾಗುತ್ತಾರೆ.

ಕೋಟೆಯವರಿಗೆ ಈಗ ಎಂಬತ್ತೈದು ವರುಷ. ಯುವಕ ಕೃಷಿಕರ ಕೂಟವು ಸ್ಥಾಪಿತವಾಗುವಾಗ ಅವರಿಗೆ ಇಪ್ಪತ್ತೂಂದು. ಕಲಿಯ ಬೇಕೆಂಬ ತುಡಿತವಿದ್ದರೂ ಕಲಿಕಾ ಸಂಪನ್ಮೂಲಗಳ ಅಲಭ್ಯತೆ. ಕೃಷಿ ಕಾಯಕಕ್ಕೆ ಶ್ರೀಕಾರ. ಕೃಷಿಕರ ಕೂಟದಲ್ಲಿ ಸದಸ್ಯನಾಗಿ, ಅಧ್ಯಕ್ಷನಾಗಿ ವಿವಿಧ ಜವಾಬ್ದಾರಿಗಳ ನಿಭಾವಣೆ. ಕೃಷಿಯೊಂದಿಗೆ ಸಾಮಾಜಿಕ ಬದುಕಿನ ಸ್ಪರ್ಶ. ಹೀಗಾಗಿ ಬದ್ಧತೆಯು ಕೃಷಿ ಬದುಕಿನೊಂದಿಗೆ ಹೊಸೆಯಿತು. ಕೃಷಿ ಕೂಟದ ಕೃಷಿ ಕಾಳಜಿ ಮತ್ತು ಕೂಟದ ಕಾರ್ಯಹೂರಣಗಳನ್ನು ಕೋಟೆಯವರು ತೆರೆದಿಟ್ಟರು -1953, ಜುಲೈ ಒಂದರಂದು ಸ್ಥಾಪನೆ. ಪಂಚಾಯತ್‌ ಅಧ್ಯಕ್ಷ ಎನ್‌. ವೆಂಕಟಸುಬ್ರಾಯರಿಂದ ಉದ್ಘಾಟನೆ. ಈ ಸಮಾರಂಭದ ಅಧ್ಯಕ್ಷರು ವಾರಣಾಶಿ ಗಣಪಯ್ಯನವರು. ಸಂಘದ ಪ್ರಥಮ ಅಧ್ಯಕ್ಷ ಕೃಷಿಕರಾದ ಕೋಟೆ ಲಕ್ಷ್ಮೀನಾರಾಯಣ. ಉಪಾಧ್ಯಕ್ಷ ಕೆದ್ಲ ನಾರಾಯಣ ಭಟ್‌. ಕಾರ್ಯದರ್ಶಿ ಕೆ.ಎಸ್‌.ನಾರಾಯಣಯ್ಯ 
ಹಸ್ತಪ್ರತಿಯಲ್ಲಿ ಪ್ರಕಾಶಿತವಾಗುತ್ತಿದ್ದ ಮುಖವಾಣಿ “ಗ್ರಾಮ ಬಂಧು’ವಿನ ಸಂಪಾದಕರು ಕೋಟೆ ವಸಂತಕುಮಾರ್‌. ಆರಂಭ ದಲ್ಲಿ ಹೆಗಲು ನೀಡಿದ್ದ ಬಹುತೇಕ ಹಿರಿಯರು ದೂರವಾಗಿದ್ದಾರೆ.

ಭತ್ತದ ಕೃಷಿಯು ಪ್ರಧಾನ. ಮನೆಯೊಳಗೆ ಭತ್ತ ತುಂಬಿದಾಗ ಖುಷಿ. ವರುಷಪೂರ್ತಿ ಉಣ್ಣಲು ತೊಂದರೆಯಿಲ್ಲ ಎನ್ನುವ ಸಂತೃಪ್ತಿ. ಆಗ ಗದ್ದೆಯನ್ನು ಗೇಣಿಗೆ ಕೊಡುವ ಕ್ರಮವಿತ್ತು. ಈಗಿ ನಂತೆ ಅಡಿಕೆ ತೋಟಗಳು ವ್ಯವಸ್ಥಿತವಾಗಿ ಎದ್ದಿರಲಿಲ್ಲ. ಇಳಿಜಾರು, ಕಣಿವೆಯಾಕಾರದ ಪ್ರದೇಶದಲ್ಲಿ ಅಡಿಕೆ ತೋಟ. ಎಲ್ಲೆಂದರಲ್ಲಿ ಗಿಡವನ್ನು ನೆಟ್ಟು ಬಿಟ್ಟರೆ ಆಯಿತು. ಉಜಿರುಕಣಿಗಳು ಕೂಡ ವ್ಯವಸ್ಥಿತವಾಗಿರಲಿಲ್ಲ. ಅಡಿಕೆ ಬಂದಷ್ಟು ಲಾಭ. ಆಗ (1960) ಕಿಲೋಗೆ ಅರುವತ್ತು ರೂಪಾಯಿ. ಬದುಕಿನ ಆವಶ್ಯಕತೆಗಳೂ ಸಂತೃಪ್ತಿಯ ವ್ಯಾಪ್ತಿಯೊಳಗಿದ್ದುವು.

ಯುವಕ ಕೃಷಿಕರ ಕೂಟವು ಮಣ್ಣಂಗಳ ಈಶ್ವರ ಭಟ್ಟರಲ್ಲಿಗೆ ಪ್ರವಾಸ ಏರ್ಪಡಿಸಿತ್ತು. ಅವರು ಕಲ್ಲು ಪಣೆಯನ್ನು ಸಮತಟ್ಟು ಗೊಳಿಸಿ ಅಡಿಕೆ ತೋಟವನ್ನು ಎಬ್ಬಿಸಿ ಯಶಸ್ಸಾಗಿದ್ದರು. ಬೀಜದ ಆಯ್ಕೆಯಲ್ಲಿಂದ ಸಸಿಯ ಆರೈಕೆ ವರೆಗಿನ ಜ್ಞಾನವು ಅವರಿಂದ ಸಿಕ್ಕಿತ್ತು. ಈ ಜ್ಞಾನದಂತೆ ತೋಟದ ವಿನ್ಯಾಸವನ್ನು ಮೊದಲಿಗೆ ಅನು ಷ್ಠಾನಿಸಿದವರು ನಮ್ಮೂರಿನ ಕೆ.ಎಸ್‌.ನಾರಾಯಣಯ್ಯನವರು. ಅಚ್ಚುಕಟ್ಟಾಗಿ ನಾಲ್ಕು ನೂರು ಅಡಿಕೆ ಗಿಡಗಳನ್ನು ಆರೈಕೆ ಮಾಡಿ ದ್ದರು. ಆಗ ಲಭಿಸಿದ ಐದು ಖಂಡಿ ಉತ್ಪತ್ತಿಯು ದೊಡ್ಡ ಸುದ್ದಿ. ಬಾಲ್ಯದಲ್ಲಿದ್ದಾಗ ಪೈಲೂರು ನಾರಾಯಣ, ಕೃಷ್ಣಯ್ಯ
ಸಹೋದರರಲ್ಲಿ ಕಸಿ ಮಾವಿನ ಹಣ್ಣುಗಳನ್ನು ಸೇವಿಸಿದ ನೆನಪು ಹಸಿಯಾಗಿದೆ. ಕಸಿ ಗಿಡಗಳನ್ನು ಬೆಳೆಸಬೇಕೆಂಬ ಯೋಚನೆಗೆ ಕೃಷಿಕರ ಕೂಟದ ಎಲ್ಲರ ಸಹಮತವಿತ್ತು. ಊರಲ್ಲಿ ಕಾಡುಮಾವು, ಮುಂಡಪ್ಪ ಎನ್ನುವ ಮಾವಿನ ತಳಿಗಳಿದ್ದುವಷ್ಟೇ. ಚಿಕ್ಕು ಹಣ್ಣಿನ ಹೆಸರು ಕೇಳಿ ತಿಳಿದಿತ್ತೇ ವಿನಾ ತಿಂದುದು ಇಲ್ಲವೇ ಇಲ್ಲ. ಹೀಗೆ ಕಸಿ ಮಾವಿನ ಹಣ್ಣುಗಳು ಎಲ್ಲರ ಮನದೊಳಗೆ ಇಳಿದಿದ್ದುವು! 

ಉಡುಪಿ ಸನಿಹದ ಕಾಪು ಮುದ್ದಣ್ಣ ನರ್ಸರಿಯು ಕಸಿ ಗಿಡಗಳನ್ನು ಪೂರೈಸುತ್ತಿತ್ತು. ಸದಸ್ಯರ ತಂಡ ನರ್ಸರಿಗೆ ಭೇಟಿಯಿತ್ತು ನಮ್ಮೂರಿಗೆ ಒಗ್ಗಬಹುದಾದ ಹಣ್ಣಿನ ಗಿಡಗಳನ್ನು ಆಯ್ಕೆ ಮಾಡಿತ್ತು. ಮಾವು, ಚಿಕ್ಕು, ಸಿಹಿ ಅಂಬಟೆ, ಸಂಪಿಗೆ.. ಹೀಗೆ ಅಪರೂಪದ ಗಿಡಗಳು ಕಳಂಜಕ್ಕೆ ಬಂದುವು. ಕೃಷಿಕರ ಕೂಟದ ವ್ಯಾಪ್ತಿಯು ಕಳಂಜವಾದರೂ ಸುತ್ತಲಿನ ಗ್ರಾಮಗಳ ಕೃಷಿಕರೂ ಸಾಥ್‌ ಆಗಿದ್ದರು. ಕಸಿ ಆಸಕ್ತಿಗೆ ಕೋಟೆ ಸೀತಾರಾಮಯ್ಯನವರು ಬೆಂಬಲ ನೀಡಿದ್ದರು. ಹೀಗೆ ತರಿಸಿದ ಗಿಡಗಳೆಲ್ಲಾ ಮರಗಳಾಗಿವೆ. ಹೊಟ್ಟೆಯನ್ನು ತಂಪು ಮಾಡಿವೆ. ಈಗ ಯಾರ ಲ್ಲೆಲ್ಲ ಬೆಳೆದ ಕಸಿ ಮಾವಿನ ಮರಗಳಿವೆಯೋ, ಅವೆಲ್ಲ ಯುವಕ ಕೃಷಿಕರ ಕೂಟದ ಸಾಹಸದ ಫ‌ಲ. 1975ರಲ್ಲಿ ವಿಟ್ಲ ಸಿಪಿಸಿಆರ್‌ಐ ಸಂಸ್ಥೆಯಿಂದ ಮಂಗಳ ತಳಿಯ ಇನ್ನೂರು ಅಡಿಕೆ  ಬೀಜಗಳನ್ನು ತಂದು ಆರೈಕೆ ಮಾಡಿ ಬೆಳೆಸಿದೆ. ಮಂಗಳ ತಳಿ ಎನ್ನುವುದು ಸಂಶೋಧಿತ ತಳಿ.

ಬೇಗ ಫ‌ಸಲು ಕೊಡುವ, ರೋಗನಿರೋಧಕ ತಳಿ. ಗಿಡಗಳು ಚೆನ್ನಾಗಿ ಬಲಿತುವು. ಮೂರೇ ವರುಷದಲ್ಲಿ ಇಳುವರಿ! ಅದರ ಬೀಜಕ್ಕೆ ಬೇಡಿಕೆಯಿತ್ತು. 5ನೇ ವರುಷದ ಇಳುವರಿಯಲ್ಲಿ ಆಸಕ್ತರಿಗೆ ಆಯ್ದ ಬೀಜಗಳನ್ನು ನೀಡಿದೆ. ಸುಮಾರು ಹತ್ತು ವರುಷಗಳ ಕಾಲ ಫ‌ಸಲು ಚೆನ್ನಾಗಿ ಬಂತು. ನಂತರ ಮರವೇ ಸೊರಗುತ್ತಾ ಬಂತು. ಇಳುವರಿಯೂ ಹೇಳುವಷ್ಟು ಹೆಚ್ಚಾಗಲಿಲ್ಲ. ಸ್ಥಳೀಯ ತಳಿಗಳ ಇಳುವರಿಗೆ ಸರಿಸಮವಾಯಿತು. ಜತೆಗೆ ರೋಗವೂ ವಕ್ಕರಿಸಿತು! ಅನಂತರದ ದಿನಗಳಲ್ಲಿ ಬಿಡುಗಡೆಗೊಂಡ ಸುಧಾರಿತ ತಳಿಗಳು ಕೃಷಿಕರ ಸ್ವೀಕೃತಿ ಪಡೆದಿದ್ದುವು. ಪ್ರತೀ ಶನಿವಾರ ಯುವಕ ಕೃಷಿಕರ ಕೂಟದ ಸಭೆ. ಒಂದೊಂದು ಸಭೆಯು ಕೂಡ ಮಾಹಿತಿ ಪೂರ್ಣ. ಕಾಡು ಹರಟೆಯಿಲ್ಲ. ಕೃಷಿ ಮಾಹಿತಿಗಳ ವಿನಿಮಯ. ಹೊಸ ವಿಚಾರಗಳ ಅಪ್‌ಡೇಟ್‌. ಆಗೆಲ್ಲ ಮರದ ದಿಬ್ಬದಲ್ಲಿ, ಮಡಕೆಯಲ್ಲಿ ಜೇನು ಕೃಷಿ. ಕಾಡಿ ನಿಂದ ಎರಿಸಹಿತ ಜೇನನ್ನು ಕೆಲವರು ತಂದು ಕೊಡುತ್ತಿದ್ದರು. ಎರಿಯನ್ನು ಹಿಂಡಿದಾಗ ಅದರಲ್ಲಿರುವ ಮೊಟ್ಟೆಗಳು ನಾಶ ವಾಗುತ್ತಿರುವುದನ್ನು ನೋಡಿ ಮನ ಕರಗಿತು! ಅದು ಹಿಂಸಾತ್ಮಕ ವಾದ ಪಾಪದ ಕೆಲಸ! ಅದೇ ಸಮಯಕ್ಕೆ ಜೇನು ಸಂಘದವರು ಜೇನು ಪೆಟ್ಟಿಗೆಗಳನ್ನು ನೀಡಿದರು. ಜೇನು ಕೃಷಿಯ ಮಾಹಿ ತಿಯೂ ಕೂಟದ ಸಭೆಯಲ್ಲಿ ಸಿಕ್ಕಿತು. ಕೃಷಿಕರ ಕೂಟವು ಕೃಷಿಗೆ, ಕೃಷಿಕರಿಗೆ ಕೈತಾಂಗು ಆಗಿ, ಮಾರ್ಗದರ್ಶಕನಂತೆ ಕೆಲಸ ಮಾಡಿದೆ. ಕೃಷಿಕರ ಕೂಟವಾದರೂ ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ ವಿಚಾರಗಳತ್ತಲೂ ಆಸಕ್ತವಾಗಿತ್ತು.

ಕೃಷಿಕರ ಕೂಟವು ಕೃಷಿಯ ಅಭಿವೃದ್ಧಿ ಮಾತ್ರವಲ್ಲದೆ ಕೃಷಿ ಪರಿಕರಗಳನ್ನು ಬಾಡಿಗೆ ನೆಲೆಯಲ್ಲಿ ನಾಲ್ಕೈದು ದಶಕದ ಹಿಂದೆಯೇ ನೀಡಿತ್ತು ಎನ್ನುವುದು ಇಲ್ಲಿ ಗಮನಾರ್ಹ. “”ಖಾಸಗಿ ಸಮಸ್ಯೆಗಳಿಗೆ ಅವರವರೇ ಪರಿಹಾರ ಕಂಡುಹಿಡಿಯಬೇಕಾಗಿತ್ತು” ರಾಧಾಕೃಷ್ಣರ ಮಾತಿನ ಮಧ್ಯೆ ನುಸುಳಿದ ವಾಕ್ಯ. ಖಾಸಗಿ ಸಮಸ್ಯೆಗಳು ಸಾರ್ವತ್ರಿಕವಾಗುತ್ತಿರಲಿಲ್ಲ. ಇಂದು ಖಾಸಗಿ, ಸಾರ್ವಜನಿಕ ಎನ್ನುವ ಪದಗಳ ವ್ಯತ್ಯಾಸಗಳು ಪಲ್ಲಟವಾಗಿವೆ.

ಪಡಿತರ ಸಾಮಗ್ರಿ ವಿತರಣೆ, ಜವುಳಿ ವ್ಯಾಪಾರ, ಜೇನು ತರಬೇತಿ, ಗಿಡಮೂಲಿಕೆಗಳ ಪರಿಚಯ, ಸಾವಯವ ಕೃಷಿ, ಜಲಮರುಪೂರಣ, ಶ್ರಮದಾನ, ಕ್ರೀಡೆ, ಪ್ರವಾಸ, ಭಜನೆ ಹೀಗೆ ಗ್ರಾಮೀಣ ಭಾರತದ ಅಭಿವೃದ್ಧಿಯ ದೂರದೃಷ್ಟಿಯನ್ನಿರಿಸಿ ಕೊಂಡ ಕೃಷಿಕರೇ ರೂಪಿಸಿದ ಸಂಸ್ಥೆಗಳ ಚಟುವಟಿಕೆಗಳು ಸುದ್ದಿಯಾಗುವುದಿಲ್ಲ, ಸದ್ದಾಗುವುದಿಲ್ಲ. ಕನ್ನಾಡಿನ ಹಳ್ಳಿಗಳಲ್ಲಿ ಅಜ್ಞಾತವಾಗಿ ಸಕ್ರಿಯವಾಗಿರುವ ಇಂತಹ ಸದ್ದಾಗದ ವ್ಯವಸ್ಥೆಗಳೇ ಗ್ರಾಮೀಣತೆಯ ಉಸಿರು. ಯುವಕ ಕೃಷಿಕ ಕೂಟವು ಈಗ ಯುವಕ ಮಂಡಲವಾಗಿದೆ. ಸರಕಾರಿ ವ್ಯವಸ್ಥೆಯೊಳಗೆ ಈಜು 
ವುದು ಅನಿವಾರ್ಯ. ಮಂಡಲ ಪಂಚಾಯತ್‌ಗಳು ಹಳ್ಳಿಯ ಬೇಕು ಬೇಡಗಳ ಜವಾಬ್ದಾರಿ ಹೊತ್ತ ಬಳಿಕ ಸ್ಥಳೀಯ ಸಂಘಟನೆಗಳ ಕಾರ್ಯಹೂರಣಗಳನ್ನು ಬದಲಿಸುವುದು ಕಾಲದ ಅನಿವಾರ್ಯತೆ.

ಇದು ಕಳಂಜ ಮಾತ್ರವಲ್ಲ ಎಲ್ಲೆಡೆಯ ಪಾಡು, ಹಾಡು. “”ನಮ್ಮೂರಿನ ಪ್ರತಿಷ್ಠಿತ ವ್ಯಕ್ತಿಗಳು ಯುವಕ ಮಂಡಲದಲ್ಲೇ ಬೆಳೆದಿದ್ದಾರೆ ಎನ್ನಲು ಹೆಮ್ಮೆಯಾಗುತ್ತದೆ, ಸ್ಥಳೀಯ ಬೊಮ್ಮಣ್ಣ ಮಜಲು ಎನ್ನುವಲ್ಲಿ ಕಾಲು ಸಂಕವೊಂದರ ನಿರ್ಮಾಣದ ನೇತೃತ್ವವನ್ನು ಯುವಕ ಮಂಡಲ ವಹಿಸಿತ್ತು” ಎನ್ನುವ ಖುಷಿಯನ್ನು ಹಂಚಿಕೊಳ್ಳುತ್ತಾ, “”ಯುವಕಮಂಡಲದಂತಹ ಮನಸ್ಸುಗಳನ್ನು ಕಟ್ಟುವ ಸಂಘಟನೆಯಲ್ಲಿ ರಾಜಕೀಯ ನುಸುಳಬಾರದು” ಎನ್ನುತ್ತಾರೆ ಅಧ್ಯಕ್ಷ ಲಕ್ಷ್ಮೀಶ.

ಕೃಷಿಕರ ಕೂಟದಂತಹ ಬದ್ಧತೆಯ ಸಂಘಟನೆಗಳು ಕನ್ನಾಡಿನ ಹಳ್ಳಿಗಳಲ್ಲಿವೆ. ಸಂಸ್ಥೆಗಳ ಏಳ್ಗೆಯಲ್ಲಿ ಸಮರ್ಪಿತ ಮನಸ್ಸುಗಳ ಕಾಯಕ ದಾಖಲಾಗುವುದಿಲ್ಲ. ಒಂದು ಕಾಲಘಟ್ಟದಲ್ಲಿ ಕೃಷಿ ಬದುಕಿಗೆ ಮಾರ್ಗದರ್ಶಕ ಸ್ಥಾನದಲ್ಲಿ ನಿಂತು ಪಥದರ್ಶನ ತೋರುತ್ತಿದ್ದ ಮನಸ್ಸುಗಳ ಸೃಷ್ಟಿಯಾಗಬೇಕಾಗಿದೆ. ಸಾಧ್ಯವೋ, ಅಸಾಧ್ಯವೋ ಎನ್ನುವುದು ಬೇರೆ ಮಾತು. ಈಗ ಆ ಸ್ಥಾನ ಬರಿದಾಗಿದೆ. ಹಾಗಾಗಿ ಕೃಷಿ ಬದುಕಿನ ಸುಭಗತೆಗೆ ಬೆರಳು ತೋರುವ ಪಥದರ್ಶಕರು ಬೇಕಾಗಿದ್ದಾರೆ!

ಟಾಪ್ ನ್ಯೂಸ್

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

e-10.jpg

ಆರಾಧನೆಗೆ ಥಳಕು ಹಾಕಿದ ಹಲಸು

z-20.jpg

ಮೇಳಗಳ ಮಾಲೆಗೆ ಈಗ ಕಾಡು ಹಣ್ಣು

b-11.jpg

ಜಾಲತಾಣ ಗುಂಪುಗಳ ಅಗೋಚರ ಕ್ಷಮತೆ

ankana-1.jpg

ತಳಿ ತಿಜೋರಿ ತುಂಬಲು ಇ-ಸ್ನೇಹಿತರ ಸಾಥ್‌

1.jpg

ಊಟದ ಬಟ್ಟಲಿಗೆ ತಟ್ಟಲಿರುವ ಅನ್ನದ ಬರದ ಬಿಸಿ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.