ನಿಸ್ವಾರ್ಥ ಬದುಕಿನಿಂದ ಸಂತೃಪ್ತಿ: ಡಾ| ಬಿ.ಎಂ. ಹೆಗ್ಡೆ
Team Udayavani, Feb 19, 2017, 9:02 AM IST
ಮಂಗಳೂರು: ಮನುಷ್ಯ ಸಮಾಜಮುಖೀಯಾದಾಗ ಸಮಾಜದ ಹಿತದ ಜತೆಗೆ ಆತನ ಉನ್ನತಿಯೂ ಸಾಕಾರಗೊಳ್ಳುತ್ತದೆ. ನಿಸ್ವಾರ್ಥ ಮನಸ್ಸಿನಿಂದ ಬದುಕು ಸಾಗಿಸಿದಾಗ ಜೀವನದಲ್ಲಿ ಸಂತೃಪ್ತಿಯನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಮಾಹೆಯ ವಿಶ್ರಾಂತ ಕುಲಪತಿ ಹಾಗೂ ಖ್ಯಾತ ವೈದ್ಯಕೀಯ ತಜ್ಞ ಪದ್ಮಭೂಷಣ ಡಾ| ಬಿ.ಎಂ. ಹೆಗ್ಡೆ ಹೇಳಿದರು.
ಕರ್ಣಾಟಕ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಶನಿವಾರ ಜರಗಿದ ಬ್ಯಾಂಕಿನ ಸಂಸ್ಥಾಪಕರ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದ ಅವರು ನಾನು ಎಂಬುದು ಮನುಷ್ಯನಲ್ಲಿ ಅತೃಪ್ತಿಯನ್ನು ಮೂಡಿಸುತ್ತದೆ. ನಾವು ಎಂಬುದು ನೆಮ್ಮದಿಯನ್ನು ತರುತ್ತದೆ. ಅದುದರಿಂದ ಮನಃಸ್ಥಿತಿಯನ್ನು ನಾನು ಎಂಬುದರಿಂದ ನಾವು ಎಂಬುದಕ್ಕೆ ಪರಿವರ್ತಿಸಿಕೊಳ್ಳಬೇಕು. ಇತರರನ್ನು ದ್ವೇಷಿಸಿದರೆ ಅದು ನಾವು ನಮ್ಮನ್ನು ದ್ವೇಷಿಸಿದಂತೆ. ಇದು ನಮ್ಮನ್ನು ಅಧಃ ಪತನದತ್ತ ಕೊಂಡೊಯ್ಯುತ್ತದೆ ಎಂದರು.
ಉತ್ಕೃಷ್ಟ ಪರಂಪರೆ
1924ರಲ್ಲಿ ಸ್ಥಾಪನೆಗೊಂಡ ಕರ್ಣಾಟಕ ಬ್ಯಾಂಕ್ ಸಂಸ್ಥಾಪಕರ ಆಶಯ ಗಳಿಗೆ ಅನುಗುಣವಾಗಿ ಉತ್ಕೃಷ್ಟತೆಯ ಪರಂಪರೆಯೊಂದಿಗೆ ಮುನ್ನಡೆಯುತ್ತಾ ಬಂದಿದೆ. ಗ್ರಾಹಕ ಸಂತೃಪ್ತಿಯ ಸೇವೆ ಯೊಂದಿಗೆ ಗ್ರಾಹಕರ ಪ್ರೀತಿ ವಿಶ್ವಾಸದ ಜತೆ ಅನೇಕ ಪುರಸ್ಕಾರಗಳನ್ನು ಪಡೆದು ಕೊಂಡಿದೆ. ಬ್ಯಾಂಕನ್ನು ಇನ್ನಷ್ಟು ಎತ್ತರಕ್ಕೇ ರಿಸುವ ನಿಟ್ಟಿನಲ್ಲಿ ವಿಷನ್ 2020 ಗುರಿಯನ್ನು ಇಟ್ಟುಕೊಂಡು ಸಾರ್ಥ ಕತೆಯ ಶತಮಾನನೋತ್ಸವದ ಸಂಭ್ರ ಮದೆಡೆಗೆ ಬ್ಯಾಂಕ್ ಸಾಗುತ್ತಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಅವರು ಹೇಳಿದರು.
ಬ್ಯಾಂಕಿನ ಪ್ರಗತಿಯಲ್ಲಿ ಆಡಳಿತ ವರ್ಗ, ಷೇರುದಾರರು, ಗ್ರಾಹಕರು, ಅಧಿಕಾರಿ ಮತ್ತು ನೌಕರರ ವೃಂದ ದ ಪ್ರೋತ್ಸಾಹ ಹಾಗೂ ಬೆಂಬಲವನ್ನು ಸ್ಮರಿಸಿ ಕೃತಜ್ಞತೆ ಅರ್ಪಿಸಿದರು. ಸ್ವಾಗತಿಸಿದ ಬ್ಯಾಂಕಿನ ಮುಖ್ಯ ಮಹಾ ಪ್ರಬಂಧಕ ಮಹಾಬಲೇಶ್ವರ ಎಂ.ಎಸ್. ಅವರು 2016ರ ಡಿಸೆಂಬರ್ 31ಕ್ಕೆ 57,436 ಕೋ.ರೂ. ಠೇವಣಿ ಹಾಗೂ 35,785 ಕೋ.ರೂ. ಮುಂಗಡ ಸೇರಿದಂತೆ ಬ್ಯಾಂಕಿನ ವ್ಯವಹಾರ 93,222 ಕೋ.ರೂ. ಗೆ ತಲುಪಿದ್ದು ಈ ವರ್ಷದ ಆರ್ಥಿಕ ಸಾಲಿನಲ್ಲಿ 9 ತಿಂಗಳಿನಲ್ಲಿ ಒಟ್ಟು 313.89 ಕೋ.ರೂ. ನಿವ್ವಳ ಲಾಭ ಗಳಿಸಿದೆ. ಡಿಸೆಂಬರ್ 31ಕ್ಕೆ ಬ್ಯಾಂಕ್ ತನ್ನ ಕಾರ್ಯಕ್ಷೇತ್ರವನ್ನು ದೇಶದ 21 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸಿಕೊಂಡಿದ್ದು ಒಟ್ಟು 738 ಶಾಖೆಗಳನ್ನು ಹಾಗೂ 1334 ಎಟಿಎಂಗಳನ್ನು ಹೊಂದಿದೆ ಎಂದರು.
ಬ್ಯಾಂಕಿನ ಸಿಎಸ್ಆರ್ ಚಟುವಟಿಕೆಯ ಅನ್ವಯ ಬೆಂಗಳೂರಿನ ಶ್ರೀ ಕೃಷ್ಣ ಸೇವಾಶ್ರಮ ಟ್ರಸ್ಟಿನ ಆಸ್ಪತ್ರೆ ಕಟ್ಟಡಕ್ಕೆ 20 ಲಕ್ಷ ರೂ., ಶಿವಮೊಗ್ಗದ ಹೊಯ್ಸಳ ಪ್ರತಿಷ್ಠಾನದ ಡಯಾಲಿಸಿಸ್ ಆಸ್ಪತ್ರೆಗೆ 2 ಡಯಾಲಿಸಿಸ್ ಯಂತ್ರಗಳಿಗೆ 12 ಲಕ್ಷ ರೂ. ಹಾಗೂ ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಮಂಗಳಾ ಹಿ.ಪ್ರಾ. ಶಾಲೆಯ ಮೂಲಭೂತ ಸೌಲಭ್ಯ ಅಭಿವೃದ್ಧಿಗೆ 5 ಲಕ್ಷ ರೂ. ನೆರವು ನೀಡಲಾಯಿತು. ಮಹಾಪ್ರಬಂಧಕ ಚಂದ್ರಶೇಖರ ರಾವ್ ಬಿ. ವಂದಿಸಿದರು. ಎಜಿಎಂ ರೇಣುಕಾ ಎನ್. ಬಂಗೇರ ಸಿಎಸ್ಆರ್ ಚಟುವಟಿಕೆ ಬಗ್ಗೆ ವಿವರ ನೀಡಿದರು. ಮುಖ್ಯ ಪ್ರಬಂಧಕ (ಸಾರ್ವಜನಿಕ ಸಂಪರ್ಕ) ಶ್ರೀನಿವಾಸ ದೇಶಪಾಂಡೆ ವಂದಿಸಿದರು. ಜೆನ್ನಿಫರ್ ನಿರೂಪಿಸಿದರು.
ಕರ್ಣಾಟಕ ಬ್ಯಾಂಕಿನೊಂದಿಗೆ ತನ್ನ ಸಂಬಂಧವನ್ನು ಮೆಲುಕು ಹಾಕಿದ ಡಾ| ಬಿ.ಎಂ. ಹೆಗ್ಡೆ ಅವರು ಸುಮಾರು 50 ವರ್ಷಗಳಿಂದ ತಾನು ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದೇನೆ. ಬ್ಯಾಂಕಿನ ಅಧ್ಯಕ್ಷರಾಗಿದ್ದ ಸೂರ್ಯನಾರಾಯಣ ಅಡಿಗ ಅವರು ತಾನು ಬ್ಯಾಂಕಿನಲ್ಲಿ ಖಾತೆಯನ್ನು ಆರಂಭಿಸಲು ಪ್ರೇರಣೆ ಯಿತ್ತಿದ್ದು ,ಆನೇಕ ಸಂದರ್ಭಗಳಲ್ಲಿ ಮಾರ್ಗದರ್ಶನ ನೀಡಿದ್ದರು. ಬ್ಯಾಂಕಿನ ಪ್ರಸ್ತುತ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಪಿ.ಜಯರಾಮ ಭಟ್ ಅವರ ದಕ್ಷ ಹಾಗೂ ಸಮರ್ಥ ನೇತೃತ್ವದಲ್ಲಿ ಬ್ಯಾಂಕ್ ಉನ್ನತಪಥದಲ್ಲಿ ಮುನ್ನಡೆಯುತ್ತಿದೆ ಗ್ರಾಹಕ ಸಂತೃಪಿಯ ಸೇವೆಯನ್ನು ನೀಡುತ್ತಿದೆ ಎಂದರು.