ದ.ಕ.ದಲ್ಲಿ ಬಿಜೆಪಿಯಿಂದ ಹೊಸದಿಲ್ಲಿ ತಂತ್ರಗಾರಿಕೆ?
Team Udayavani, Aug 10, 2017, 8:10 AM IST
ಮಂಗಳೂರು: ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹೊಸದಿಲ್ಲಿಯ ಪ್ರಯೋಗವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಾಡಲಿದೆಯೇ… ಹೀಗೊಂದು ಮಾತು ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಎಪ್ರಿಲ್ನೊಳಗೆ ಚುನಾವಣೆ ನಡೆಯಲಿದೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಳಮಟ್ಟದಲ್ಲಿ ಚುನಾವಣಾ ಸಿದ್ಧತೆಯ ಕಹಳೆ ಮೊಳಗಿಸಿವೆ.
ಜಿಲ್ಲೆಯ ಕಾಂಗ್ರೆಸ್ನಲ್ಲಿ ಒಂದೆರಡು ಕ್ಷೇತ್ರಗಳನ್ನು ಬಿಟ್ಟರೆ ಉಳಿದಂತೆ ಅಭ್ಯರ್ಥಿಗಳು ಈಗಾಗಲೇ ಬಹುತೇಕ ಖಚಿತಗೊಂಡಿದ್ದು ಅವರ ಗೆಲುವಿಗೆ ಕಾರ್ಯಕರ್ತರನ್ನು ಪ್ರೇರೇಪಿಸುವ ಕಾರ್ಯವೂ ಪಕ್ಷದ ಜಿಲ್ಲಾ, ಬ್ಲಾಕ್ ಮಟ್ಟದ ನಾಯಕರು ಆರಂಭಿಸಿ ದ್ದಾರೆ. ಬಿಜೆಪಿಯಲ್ಲೂ ಚುನಾವಣೆಗೆ ತಳಮಟ್ಟದಲ್ಲಿ ಪಕ್ಷ ಸಂಘಟನೆ ಕಾರ್ಯ ನಡೆಯುತ್ತಿದೆಯಾದರೂ ಅಭ್ಯರ್ಥಿಗಳ ಕುರಿತಂತೆ ಒಂದು ರೀತಿಯ ಅಸ್ಪಷ್ಟತೆ ಎದ್ದು ಕಾಣುತ್ತಿದೆ. ಇದಕ್ಕೆ ಮುಖ್ಯ ಕಾರಣ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ತನ್ನ ಮೂಲಗಳ ಮೂಲಕ ನಡೆಸುತ್ತಿರುವ ಆಂತರಿಕ ಸಮೀಕ್ಷೆ ಹಾಗೂ ಹೊಸದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪ್ರಯೋಗಿಸಿ ಯಶಸ್ವಿಯಾದ ಹೊಸ ಮುಖಗಳಿಗೆ ಅವಕಾಶ.
ಶಾ ತಂತ್ರದಡಿಯಲ್ಲಿ ಈಗಾಗಲೇ ತನ್ನ ಚಾಣಾಕ್ಷ ಕಾರ್ಯತಂತ್ರದ ಮೂಲಕ ರಾಷ್ಟ್ರದ ಬಹುತೇಕ ರಾಜ್ಯಗಳನ್ನು ಬಿಜೆಪಿಗೆ ಸೆಳೆದು ಕೊಂಡಿರುವ ಅಮಿತ್ ಶಾ ಕರ್ನಾಟಕ ವನ್ನು ಮುಂದಿನ ಕಾರ್ಯಕ್ಷೇತ್ರ ವಾಗಿರಿಸಿ ಕೊಂಡಿದ್ದಾರೆ. ಮಿಷನ್ 150 ಗುರಿ ಇರಿಸಿ ಕೊಂಡು ಇದರ ಸಾಕಾರಕ್ಕೆ ರಾಜ್ಯ ಘಟಕ ವನ್ನು ಕಾರ್ಯಕ್ಷೇತ್ರಕ್ಕಿಳಿಸಿದ್ದಾರೆ. ದ.ಕ.ಜಿಲ್ಲೆಯಲ್ಲೂ ಬಿಜೆಪಿಯಲ್ಲಿ ತಳಮಟ್ಟದಲ್ಲಿ ಪಕ್ಷದ ಸಂಘಟನೆ ಚುರುಕುಗೊಂಡಿದೆ. ಎಲ್ಲ ಕ್ಷೇತ್ರಗಳಲ್ಲೂ ವಿಸ್ತಾರಕರ ಮಾರ್ಗದರ್ಶನದಲ್ಲಿ ಮನೆಮನೆ ಭೇಟಿ ಕಾರ್ಯ ನಡೆದಿದೆ. ಪಕ್ಷ ನಿರ್ಧರಿಸುವ ಯಾವುದೇ ಅಭ್ಯರ್ಥಿ ಇರಲಿ ಅವರ ಗೆಲುವಿಗೆ ಶ್ರಮಿಸುವ ಭೂಮಿಕೆಯನ್ನು ಕಾರ್ಯಕರ್ತರಲ್ಲಿ ಸಿದ್ಧಪಡಿಸಲಾಗುತ್ತಿದೆ.
ದ.ಕ. ಜಿಲ್ಲೆ ಕರ್ನಾಟಕದಲ್ಲಿ ಬಿಜೆಪಿಗೆ ಭದ್ರ ನೆಲೆ ಇರುವ ಜಿಲ್ಲೆಗಳಲ್ಲೊಂದು. ಪಕ್ಷದ ಮೂಲಗಳ ಪ್ರಕಾರ ಅಮಿತ್ ಶಾ ಅವರು ಜಿಲ್ಲೆಯಲ್ಲಿ ಯಾರಿಗೂ ಸುಳಿವು ನೀಡದೆ ಖಾಸಗಿ ಏಜೆನ್ಸಿಯ ಮೂಲಕ ಈಗಾಗಲೇ ಒಂದು ಸುತ್ತಿನ ಆಂತರಿಕ ಸಮೀಕ್ಷೆ ನಡೆಸಿದ್ದಾರೆ. ಇನ್ನೈದು ತಿಂಗಳುಗಳಲ್ಲಿ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ನಡೆಯಲಿರುವುದರಿಂದ ಅಮಿತ್ ಶಾ ಅವರು ಸದ್ಯಕ್ಕೆ ತನ್ನ ಗಮನವನ್ನು ಈ ರಾಜ್ಯಗಳಿಗೆ ಕೇಂದ್ರೀಕರಿಸಿದ್ದಾರೆ. ಇದೇ ವೇಳೆ ಕರ್ನಾಟಕವನ್ನು ದೃಷ್ಟಿಯಲ್ಲಿರಿಸಿಕೊಂಡು ತಂತ್ರಗಾರಿಕೆಗಳನ್ನು ರೂಪಿಸುವ ಕಾರ್ಯವೂ ನಡೆಯುತ್ತಿದೆ. ಆ. 12ರಿಂದ 3 ದಿನ ಶಾ ಅವರು ಕರ್ನಾಟಕ ಪ್ರವಾಸವನ್ನು ಕೈಗೊಳ್ಳುತ್ತಿದ್ದು ಇದರಲ್ಲಿ ಪಕ್ಷದ ರಣನೀತಿಯ ಬಗ್ಗೆ ಒಂದು ಚಿತ್ರಣವನ್ನು ಸೂಚ್ಯವಾಗಿ ನೀಡುವ ಸಾಧ್ಯತೆಗಳಿವೆ.
ಹೊಸದಿಲ್ಲಿ ತಂತ್ರಕ್ಕೆ ಅವಕಾಶ
ದ.ಕ. ಜಿಲ್ಲೆಯ 8 ಕ್ಷೇತ್ರಗಳ ಪೈಕಿ ಬಿಜೆಪಿ ಸುಳ್ಯ ಕ್ಷೇತ್ರ ದಲ್ಲಿ ಮಾತ್ರ ಶಾಸಕರನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಆ ಕ್ಷೇತ್ರವನ್ನು ಹೊರತುಪಡಿಸಿ ಉಳಿದಂತೆ ಹೊಸ ಅಭ್ಯರ್ಥಿಗಳ ಆಯ್ಕೆಗೆ ಅವಕಾಶಗಳಿವೆ. ಇದು ಹೊಸದಿಲ್ಲಿ ತಂತ್ರಗಾರಿಕೆಯನ್ನು ದಕ್ಷಿಣ ಜಿಲ್ಲೆಯಲ್ಲಿ ಪ್ರಯೋಗಿಸಲು ಅನುಕೂಲ ಮಾಡಿಕೊಟ್ಟಿದೆ. ಎಲ್ಲ ಕ್ಷೇತ್ರಗಳಲ್ಲೂ ಆದಷ್ಟು ಹೊಸಮುಖಗಳನ್ನು ಈ ಬಾರಿ ಕಣಕ್ಕಿಳಿಸುವ ಇರಾದೆಯನ್ನು ಪಕ್ಷದ ವರಿಷ್ಠ ಮಂಡಳಿ ವ್ಯಕ್ತಪಡಿಸಿದೆ ಎನ್ನಲಾಗಿದೆ.
ಮಂಗಳೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಬಂಟ್ವಾಳ, ಪುತ್ತೂರು ಹಾಗೂ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಆಕಾಂಕ್ಷಿ ಗಳು ಆಂತರಿಕ ಸಮೀಕ್ಷೆಯ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ನೆಲೆಯಲ್ಲಿ ಕಾರ್ಯಕರ್ತರ ಪಾಳೆಯ ಹಾಗೂ ಸಾಮಾಜಿಕ ಕಾರ್ಯ ಕ್ರಮ ಗಳ ಆಯೋಜನೆಯ ಮೂಲಕ ತಮ್ಮ ಪರವಾಗಿ ಒಂದು ಅಲೆಯನ್ನು ಸೃಷ್ಟಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದರಲ್ಲಿ ಹಿಂದಿನ ಬಾರಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಜತೆಗೆ ಹೊಸಬರು ಕೂಡ ಒಳಗೊಂಡಿದ್ದಾರೆ. ಆಂತರಿಕ ಸಮೀಕ್ಷೆಯಲ್ಲಿ ತಮ್ಮ ಹೆಸರು ಇದೆ ಎಂಬ ಮಾತುಗಳನ್ನು ಕೂಡ ಹರಿಯಬಿಡುವುದು ಕಂಡುಬರುತ್ತಿದೆ.
ಸವಾಲಿನ ಮುನ್ಸೂಚನೆ
ಹೊಸಬರಿಗೆ ಮಣೆ ಹಾಕುವ ತಂತ್ರಗಾರಿಕೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿರೋಧ ಎದುರಾಗುವ ಮುನ್ಸೂಚನೆಗಳು ಈಗಾಗಲೇ ಕೇಳಿಬಂದಿವೆ. ಜಿಲ್ಲೆಯಲ್ಲಿ ಎರಡು ಪ್ರಭಾವಿ ಕ್ಷೇತ್ರಗಳಲ್ಲಿ ಈ ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಈ ಬಾರಿಯೂ ಟಿಕೆಟು ಆಕಾಂಕ್ಷಿಗಳಾಗಿದ್ದು ಅವಕಾಶ ದೊರೆಯುವ ನಿರೀಕ್ಷೆಯಲ್ಲಿ ಈಗಾಗಲೇ ಕ್ಷೇತ್ರದಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಈ ಹಿಂದಿನ ಚುನಾ ವಣೆ ಯಲ್ಲಿ ನಾವು ಪಕ್ಷಕ್ಕೆ ಪ್ರತಿಕೂಲದ ಪರಿಸ್ಥಿತಿ ಇದ್ದರೂ ವರಿಷ್ಠರ ಆದೇಶಕ್ಕೆ ತಲೆಬಾಗಿ ಸ್ಪರ್ಧಿಸಿದ್ದೇವೆ. ಒಂದಷ್ಟು ಹಣವನ್ನು ಕಳೆದುಕೊಂಡಿದ್ದೇವೆ. ಈ ಬಾರಿ ಪಕ್ಷಕ್ಕೆ ಪೂರಕವಾದ ವಾತಾವರಣ ಕ್ಷೇತ್ರದಲ್ಲಿ ಕಂಡುಬರುತ್ತಿದೆ. ಈ ಸನ್ನಿವೇಶದಲ್ಲಿ ಹೊಸಬರನ್ನು ತಂದು ಹಾಕುವುದು ಸರಿಯಲ್ಲ ಎಂಬುದಾಗಿ ತಮ್ಮ ಆಪ್ತ ವಲಯದಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿರುವುದಾಗಿ ತಿಳಿದುಬಂದಿದೆ.
ಬಿಜೆಪಿ ಕಾರ್ಯಕರ್ತರ ಪಕ್ಷ. ಸಂಘಟನಾತ್ಮವಾಗಿ ಬೆಳೆದು ಬಂದಿದೆ. ಇಲ್ಲಿ ಅಭ್ಯರ್ಥಿಗಳು ಯಾರು ಆಗುತ್ತಾರೆ ಎಂಬ ಬಗ್ಗೆ ಕಾರ್ಯಕರ್ತರು ತಲೆ ಕೆಡಿಸಿ ಕೊಳ್ಳುವುದಿಲ್ಲ. ಪಕ್ಷ ಆಯ್ಕೆ ಮಾಡುವ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಿ ಅವರನ್ನು ಗೆಲ್ಲಿಸುವತ್ತ ಶ್ರಮಿಸುತ್ತಾರೆ. ಹಾಗಾಗಿ ನಮಗೆ ಅಭ್ಯರ್ಥಿಗಳ ಕುರಿತಂತೆ ಯಾವುದೇ ಸಮಸ್ಯೆ ಎದುರಾಗದು ಎಂಬುದು ಪಕ್ಷದ ಜಿಲ್ಲಾ ಪ್ರಮುಖ ನಾಯಕರೋರ್ವರ ಅಭಿಪ್ರಾಯ.
ದಿಲ್ಲಿಯಲ್ಲಿ ಏನಾಗಿತ್ತು?
ದಿಲ್ಲಿಯ ಮಹಾನಗರ ಪಾಲಿಕೆಗೆ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ 272 ಕ್ಷೇತ್ರಗಳ ಪೈಕಿ 267 ಕ್ಷೇತ್ರಗಳಲ್ಲಿ ಬಿಜೆಪಿ ಹೊಸಬರಿಗೆ ಪಕ್ಷದ ಟಿಕೆಟು ನೀಡಿತ್ತು. ಅಭ್ಯರ್ಥಿಗಳ ಆಯ್ಕೆ ಮೊದಲು ಆಯಾಯ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪೈಕಿ ಆಂತರಿಕ ಮೂಲಗಳಿಂದ ಅಭಿಪ್ರಾಯ ಸಂಗ್ರಹಿಸಿತ್ತು. ಚುನಾವಣೆಯಲ್ಲಿ 181 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಈ ಪ್ರಯೋಗದಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿತ್ತು.
- ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ