ಶರತ್ ಮಡಿವಾಳ ಕೊಲೆ ಪ್ರಕರಣ ಪ್ರಮುಖ ಆರೋಪಿ ಪೊಲೀಸ್ ವಶ?
Team Udayavani, Aug 22, 2017, 6:10 AM IST
ಮಂಗಳೂರು: ಆರ್.ಎಸ್.ಎಸ್. ಕಾರ್ಯಕರ್ತ ಬಂಟ್ವಾಳದ ಸಜಿಪ ಮುನ್ನೂರು ಕಂದೋಡಿಯ ಶರತ್ ಮಡಿವಾಳ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಬಂಟ್ವಾಳ ಆಲಾಡಿಯ ಶರೀಫ್ನನ್ನು ಸಿಸಿಬಿ ಪೊಲೀಸರು ಮತ್ತು ಜಿಲ್ಲಾ ವಿಶೇಷ ತನಿಖಾ ತಂಡದ ಪೊಲೀಸರು ಸೋಮವಾರ ಚಾಮರಾಜನಗರದಲ್ಲಿ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈತನ ಬಂಧನದೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದವರ ಸಂಖ್ಯೆ 9ಕ್ಕೆ ಏರಿದೆ. ಇನ್ನುಳಿದ ಇಬ್ಬರು ಆರೋಪಿಗಳಲ್ಲಿ ಒಬ್ಟಾತ ವಿದೇಶಕ್ಕೆ ಪರಾರಿ ಯಾಗಿದ್ದಾನೆಂಬ ಊಹಾಪೋಹಗಳಿದ್ದು, ಶೋಧ ಕಾರ್ಯ ಮುಂದುವರಿದಿದೆ. ಶರೀಫ್ ವೃತ್ತಿಯಲ್ಲಿ ಎಲೆಕ್ಟ್ರೀಶಿಯನ್ ಆಗಿದ್ದು, ಹಳೆ ಆರೋಪಿ ಯಾಗಿದ್ದಾನೆ. ಆತನ ವಿರುದ್ಧ ಮಂಗಳೂರಿನ ಪಾಂಡೇಶ್ವರ ಮತ್ತು ಬಂಟÌಳ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆ ಪ್ರಕರಣ ದಾಖಲಾಗಿವೆ.
ಕಾಲೇಜಿನಿಂದ ಸಸ್ಪೆಂಡ್ ಆಗಿದ್ದ
ನಗರದ ಸರಕಾರಿ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಶರೀಫ್ ಹುಡುಗಿಯರ ವಿಷಯಕ್ಕೆ ಸಂಬಂ ಧಿಸಿ ನಡೆದ ಗಲಾಟೆಯಲ್ಲಿ ಆರೋಪಿಯಾದ ಕಾರಣ ಆತನನ್ನು ಕಾಲೇಜಿನಿಂದ ಸಸ್ಪೆಂಡ್ ಮಾಡಲಾಗಿತ್ತು.
ಶರತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಬಂಟ್ವಾಳದ ರಹೀಂ ಆಲಾಡಿ ಹಾಗೂ ಹಾಸನದ ಸಲೇಹ ಯಾನೆ ಸ್ವಲೇಹ್ ಮತ್ತು ಸಾದಿಕ್ ಪಾಷ ಅವರನ್ನು ಶನಿವಾರ ಬಂಧಿಸಲಾಗಿತ್ತು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಒಂದು ವಾರ ಅವಧಿಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.
ಬಂಟ್ವಾಳ ತಾಲೂಕು ಸಜಿಪ ಮುನ್ನೂರು ಗ್ರಾಮದ ಆಲಾಡಿ ಇಂದಿರಾ ನಗರದ ಅಬ್ದುಲ್ ಶಾಫಿ ಯಾನೆ ಶಾಫಿ ಹಾಗೂ ಚಾಮರಾಜನಗರ ಜಿಲ್ಲೆಯ ಗಾಳಿಪುರ ಗ್ರಾಮದ ನಿವಾಸಿ ಚಾಮರಾಜನಗರ ಪಿಎಫ್ಐ ಸಂಘಟನೆ ಅಧ್ಯಕ್ಷ ಖಲೀಲ್ವುಲ್ಲಾ ಅವರನ್ನು ಆ.15ರಂದು ಹಾಗೂ ಬೆಳ್ತಂಗಡಿ ಪಾರೆಂಕಿಯ ರಿಯಾಜ್, ನೆಲ್ಯಾಡಿಯ ಸಿದ್ದಿಕ್, ಚಾಮರಾಜನಗರದ ಕಲೀಂ ಯಾನೆ ಕಲೀಂಮುಲ್ಲಾ ಅವರನ್ನು ಆ.16ರಂದು ಬಂಧಿಸಲಾಗಿತ್ತು.
ಬಂಧಿತರಾದ ಎಲ್ಲ ಆರೋಪಿಗಳು ಪಿಎಫ್ಐ ಸಂಘಟನೆಗೆ ಸೇರಿದವರು ಎನ್ನಲಾಗಿದೆ. ಆರೋಪಿಗಳಿಗೆ ಸಹಾಯ ಮಾಡಿದವರು ಇನ್ನೂ ಯಾರಾದರೂ ಇದ್ದಾರೆಯೇ ಎನ್ನುವುದು ಹಾಗೂ ಹತ್ಯೆಗೆ ಪ್ರಮುಖ ಕಾರಣ ಏನೆಂಬುದು ಆರೋಪಿಗಳ ವಿಚಾರಣೆಯಿಂದ ತಿಳಿದು ಬರಬೇಕಾಗಿದೆ.
ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಏಳು ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆಗೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲೂ ತನಿಖೆ ನಡೆಸಿದ್ದರು.