ಹುತಾತ್ಮ ಯೋಧರಿಗೆ ನಮನ ಸಲ್ಲಿಸಲು ಮ್ಯಾರಥಾನ್
Team Udayavani, Apr 24, 2017, 1:06 PM IST
ಮೈಸೂರು: ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರಿಗೆ ನಮನ ಸಲ್ಲಿಸುವ ಉದ್ದೇಶದಿಂದ ನಗರದ ಮೈಸೂರು-ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಎಂಜಿನಿಯರಿಂಗ್ ಕಾಲೇಜಿನ ವತಿಯಿಂದ ಅಮರ್ ಜವಾನ್ ಶೀರ್ಷಿಕೆಯಡಿಯಲ್ಲಿ ಭಾನುವಾರ ಮ್ಯಾರಥಾನ್ ನಡೆಸಲಾಯಿತು.
ಕಾಲೇಜಿನಲ್ಲಿ ನಡೆಯುತ್ತಿರುವ ಎಟಿಎಮಿ 2017 ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಹಿಂದೂಸ್ಥಾನ್ ಪೆಟ್ರೋಲಿಯಂ ಸಯೋಗದಲ್ಲಿ ಮೈಸೂರು ವಿವಿ ಮೈದಾನದಲ್ಲಿ ಆಯೋಜಿಸಿದ್ದ ಮ್ಯಾರಥಾನ್ ಓಟಕ್ಕೆ ಮೇಜರ್ ಜನರಲ್ ಕುರಂಬಯ್ಯ ಚಾಲನೆ ನೀಡಿ ಮಾತನಾಡಿ, ಯುವಜನತೆ ಇಂತಹ ಮ್ಯಾರಥಾನ್ಗಳಲ್ಲಿ ಹೆಚ್ಚಾಗಿ ಭಾಗವಹಿಸುವುದರಿಂದ ಯುವಜನರಲ್ಲಿ ದೇಶಾಭಿಮಾನ ಮೂಡಲಿದೆ ಎಂದರು.
ದೇಶದ ಪ್ರತಿಯೊಬ್ಬ ಪ್ರಜೆಯು ದೇಶದ ಬಗ್ಗೆ ಹೆಮ್ಮೆ, ಗೌರವ ಪ್ರೀತಿಯನ್ನು ಹೊಂದಿರಬೇಕಿದ್ದು, ವಿಶೇಷವಾಗಿ ಯುವಜನರು ದೇಶಭಕ್ತಿ ಬೆಳೆಸಿಕೊಳ್ಳುವ ಮೂಲಕ ದೇಶದ ರಕ್ಷಣೆಗೆ ಸಿದ್ಧರಾಗಿರಬೇಕು. ಆ ಮೂಲಕ ದೇಶಕ್ಕೆ ಯಾವುದೇ ಸಂದರ್ಭದಲ್ಲಿ ಅಪಾಯ ಬಂದರು ಹಿಂಜರಿಯದೆ ದೇಶದ ರಕ್ಷಣೆಗೆ ನಿಲ್ಲಬೇಕು ಎಂದು ಕರೆ ನೀಡಿದರು.
5 ಕಿ.ಮೀ. ಮ್ಯಾರಥಾನ್ ಓವೆಲ್ ಮೈದಾನ ದಿಂದ ಪ್ರಾರಂಭವಾಗಿ ಸರಸ್ವತಿಪುರಂನ ಅಗ್ನಿ ಶಾಮಕ ಠಾಣೆ, ನ್ಯೂ ಕಾಂತ್ರಾಜ್ ರಸ್ತೆ, ಕುವೆಂಪುನಗರ ಮೂಲಕ ವಿಶ್ವಮಾನವ ಜೋಡಿರಸ್ತೆ ಮಾರ್ಗವಾಗಿ ಸಂಚರಿಸಿ ಕುಕ್ಕರಹಳ್ಳಿ ಮೂಲಕ ಓವೆಲ್ ಮೈದಾನದಲ್ಲಿ ಅಂತ್ಯಗೊಂಡಿತು.
ಇದೇ ಸಂದ¸ìದಲ್ಲಿ ಮೈಸೂರು ಜಿಲ್ಲೆ ವ್ಯಾಪ್ತಿಯಲ್ಲಿ ಹುತ್ಮಾತ ಯೋಧರ ಕುಟುಂಬಗಳನ್ನು ಗುರುತಿಸಿ ಅವರ ಕುಟುಂಬಕ್ಕೆ ಧನ ಸಹಾಯ ಮಾಡುವ ಉದ್ದೇಶದಿಂದ ಮ್ಯಾರಥಾನ್ನಲ್ಲಿ ಭಾಗವಹಿಸಿದ್ದ ಜನರಿಂದ ನೋಂದಣಿ ಶುಲ್ಕ ಸಂಗ್ರಹಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಗ್ರಹವಾಗುವ ಹಣವನ್ನು ಏ. 27ರಂದು ಕಾಲೇಜಿನಲ್ಲಿ ನಡೆಯುವ ಸಮಾರಂಭದಲ್ಲಿ ಹುತ್ಮಾತ ಯೋಧರ ಕುಟುಂಬಕ್ಕೆ ನೀಡಲಾಗುವುದು ಎಂದು ಕಾಲೇಜಿನ ಅಧಿಕಾರಿಯೊಬ್ಬರು ತಿಳಿಸಿದರು.
ಕ್ರಿಕೆಟಿಗ ಎನ್.ಸಿ. ಅಯ್ಯಪ್ಪ, ಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಎಲ್. ಅರುಣ್ ಕುಮಾರ್, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಡಾ. ಪಾರ್ಥಸಾರಥಿ, ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ ಕೆ. ಶಿವಶಂಕರ್, ಖಜಾಂಚಿ ವೀರೇಶ್ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.