ಸಮುದಾಯಗಳ ಅಭಿವೃದ್ಧಿಗೆ ಶಿಕ್ಷಣ ಅತ್ಯಗತ್ಯ
Team Udayavani, Jul 24, 2017, 12:05 PM IST
ಮೈಸೂರು: ಸಮಾಜದ ಯಾವುದೇ ಸಮುದಾಯವನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಶಿಕ್ಷಣದ ಮಹತ್ವ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕಾದ ಅಗತ್ಯವಿದೆ ಎಂದು ಶಾಸಕ ಕೆ.ಜೆ.ಬೋಪಯ್ಯ ಹೇಳಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಕೊಡಗು ಗೌಡ ಸಮಾಜದಿಂದ ವಿಜಯನಗರ 2ನೇ ಹಂತದಲ್ಲಿರುವ ಕೊಡುಗು ಗೌಡ ಸಮಾಜ ಸಭಾಂಗಣದಲ್ಲಿ ಆಯೋಜಿಸಿದ್ದ ಅರೆಭಾಷೆ ಸಂಸ್ಕೃತಿ ಪರಿಪಾಲಕರ ಸಮಾಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದ ಯಾವುದೇ ಒಂದು ಸಮುದಾಯಕ್ಕೆ ಮಾನ್ಯತೆ ದೊರೆಯಬೇಕಾದರೆ ಅದಕ್ಕೆ ಶಿಕ್ಷಣವೇ ಮೂಲ ಕಾರಣವಾಗಿದೆ. ಹೀಗಾಗಿ ಪ್ರತಿ ಪೋಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದ್ದು, ಆ ಮೂಲಕ ಮಕ್ಕಳನ್ನು ಐಎಎಸ್ ಹಾಗೂ ಕೆಎಎಸ್ ಅಧಿಕಾರಿಯನ್ನಾಗಿ ಮಾಡಿ ಜೀವನದಲ್ಲಿ ಉನ್ನತ ಸ್ಥಾನ ಪಡೆಯುವಂತೆ ಮಾಡಬೇಕಿದೆ ಎಂದರು.
ಆದರೆ ಅರೆಭಾಷೆ ಸಮುದಾಯದ ಜನರು ಮುಖ್ಯಮಂತ್ರಿ, ಸಚಿವ ಹಾಗೂ ಶಾಸಕ ಸ್ಥಾನ ಸೇರಿದಂತೆ ರಾಜಕೀಯದ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಈ ಸಮುದಾಯಕ್ಕೆ ಸೇರಿದ ಯಾರೊಬ್ಬರು ಶಿಕ್ಷಣದ ಮೂಲಕ ಯಾವುದೇ ಉನ್ನತ ಹುದ್ದೆಯನ್ನು ಪಡೆದಿಲ್ಲ.
ಈ ಹಿನ್ನೆಲೆ ಕೊಡಗು ಗೌಡ ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವಂತೆ ಪ್ರೇರೇಪಿಸಬೇಕಿದೆ. ಕಾಲ ಬದಲಾದಂತೆ ನಮ್ಮ ಸಂಸ್ಕೃತಿಗಳು ಬದಲಾಗುತ್ತಿವೆ. ಹೀಗಾಗಿ ಎಲೆಮಾರೆ ಕಾಯಂತಿರುವ ಸಮುದಾಯಗಳು ತಮ್ಮ ಸಮುದಾಯವನ್ನು ಉಳಿಸಿ-ಬೆಳಸಲು ಮುಂದಾಗಬೇಕು ಎಂದು ತಿಳಿಸಿದರು.
ಶಾಸಕ ವಾಸು ಮಾತನಾಡಿ, ದಕ್ಷಿಣ ಕನ್ನಡ ಹಾಗೂ ಕೊಡಗು ಪ್ರದೇಶಗಳಲ್ಲಿ ಅರೆಬಾಷೆ ಸಂಸ್ಕೃತಿ ಹೆಚ್ಚಾಗಿ ಕಂಡು ಬರುತ್ತದೆ. ಆದರೆ ಈ ಸಮುದಾಯದ ಬಗ್ಗೆ ತಿಳಿವಳಿಕೆ ಕಡಿಮೆ ಇದ್ದು, ಈ ಜನಾಂಗದ ಬಾಷೆ, ಸಂಸ್ಕೃತಿ ಭಿನ್ನವಾಗಿದೆ. ಆದ್ದರಿಂದ ಅಮೂಲ್ಯವಾಗಿರುವ ಈ ಜನಾಂಗದ ಬಾಷೆ, ಸಂಸ್ಕೃತಿಯನ್ನು ಉಳಿಸಬೇಕಾದ ಜವಾಬ್ದಾರಿ ಇಂದಿನ ಯುವಪೀಳಿಗೆಯ ಮೇಲಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಕೊಡಗು ಅರಭಾಷೆ ಗೌಡ ಜನಾಂಗದ ಸಂಸ್ಕೃತಿ, ಹುಟ್ಟು ಮತ್ತು ಆಚರಣೆ, ಪ್ರೌಢಾವಸ್ಥೆ, ಮದುವೆ ಆಚರಣೆ, ಸಾವು ಮತ್ತು ವಿಧಿವಿಧಾನಗಳ ಆಚರಣೆ, ಹಬ್ಬ ಹರಿದಿನ ಮತ್ತು ಆಚರಣೆಗಳ ಕುರಿತ ವಿಚಾರಗೋಷ್ಠಿ ಹಾಗೂ ಸಂವಾದ ನಡೆಯಿತು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೋಲ್ಯದ ಗಿರೀಶ್, ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಕೊಡಗು ಗೌಡ ಸಮಾಜದ ಅಧ್ಯಕ್ಷ ಚೆಟ್ಟಿಮಾಡು ಜನಾರ್ದನ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಕುಂಜಿಲನ ಮುತ್ತಮ್ಮ, ಸಮಾಜದ ಕಾರ್ಯದರ್ಶಿ ಕುಂಟಿಕಾನ ಗಣಪತಿ, ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ ಇನ್ನಿತರರು ಹಾಜರಿದ್ದರು.