ಉಲ್ಟಾ ಹೊಡೆದ ಕೇಂದ್ರ; ಸದ್ಯದ ಸ್ಥಿತಿಯಲ್ಲಿ ಲೋಕಪಾಲ್ ನೇಮಕ ಅಸಾಧ್ಯ
Team Udayavani, Mar 28, 2017, 2:33 PM IST
ನವದೆಹಲಿ: ದೇಶದ ಇತಿಹಾಸದಲ್ಲೇ ಅಪರೂಪದ ನಾಗರಿಕ ಹೋರಾಟದ ಮೂಲಕ ರೂಪುಗೊಂಡ ಲೋಕಪಾಲ ಮಸೂದೆ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡು ಮೂರು ವರ್ಷ ಕಳೆಯುತ್ತಾ ಬಂದಿದೆ. ಏತನ್ಮಧ್ಯೆ ಸದ್ಯದ ಪರಿಸ್ಥಿತಿಯಲ್ಲಿ ಲೋಕಪಾಲ ನೇಮಕ ಅಸಾಧ್ಯ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಲೋಕಪಾಲ್ ನೇಮಕ ಕುರಿತಂತೆ ಸಲ್ಲಿಕೆಯಾಗಿದ್ದ ಪಿಐಎಲ್ ಆದೇಶದ ತೀರ್ಪನ್ನು ಮಂಗಳವಾರ ಕಾಯ್ದಿರಿಸಿದೆ.
2013ರ ಲೋಕಪಾಲ್ ಕಾಯ್ದೆಯ ಅನ್ವಯ ಲೋಕಪಾಲರನ್ನು ನೇಮಕ ಮಾಡಬೇಕೆಂದು ಎನ್ ಜಿಒ ಸುಪ್ರೀಂಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ(ಪಿಐಎಲ್) ಅರ್ಜಿಯನ್ನು ದಾಖಲಿಸಿತ್ತು. ಎನ್ ಜಿಒ ಪರವಾಗಿ ಪ್ರಕರಣದ ಬಗ್ಗೆ ವಕೀಲ ಪ್ರಶಾಂತ್ ಭೂಷಣ್ ಹಾಜರಾಗಿ ವಾದ ಮಂಡಿಸಿದ್ದರು.
ಪಿಐಎಲ್ ಸಂಬಂಧವಾಗಿ ಹಿಂದಿನ ವಿಚಾರಣೆಯಲ್ಲಿ ಪ್ರಶಾಂತ್ ಭೂಷಣ್ ಅವರು ವಾದ ಮಂಡಿಸಿ, ಸುದೀರ್ಘ ಹೋರಾಟದ ನಂತರ ಸಂಸತ್ತಿನ ಉಭಯ ಸದನಗಳಲ್ಲಿ ಮಸೂದೆ ಅಂಗೀಕಾರವಾಗಿ ಮೂರು ವರ್ಷ ಕಳೆದರೂ ಕೇಂದ್ರ ಸರ್ಕಾರ ಯಾಕೆ ಲೋಕಪಾಲರ ನೇಮಕ ಮಾಡಿಲ್ಲ ಎಂದು ಪ್ರಶ್ನಿಸಿದ್ದರು. ಈ ವೇಳೆ ಸುಪ್ರೀಂ ಕೋರ್ಟ್, ಕೇಂದ್ರಕ್ಕೆ ಚಾಟಿ ಬೀಸಿ, ನೀವು ದೇಶದ ವ್ಯವಸ್ಥೆಯನ್ನು ಶುದ್ಧೀಕರಿಸುವ ಮಾತನಾಡುತ್ತಿದ್ದೀರಿ, ಅದೇ ತಮ್ಮ ದೊಡ್ಡ ಕಾಳಜಿ ಎನ್ನುತ್ತಿದ್ದೀರಿ. ವ್ಯವಸ್ಥೆ ಸರಿಪಡಿಸುವ ಬಗ್ಗೆ ನಿಜವಾಗಿಯೂ ಕಾಳಜಿ ಇದಿದ್ದರೆ, ಕಳೆದೆರಡು ವರ್ಷಗಳಿಂದ ಲೋಕಪಾಲ ನೇಮಕದ ಬಗ್ಗೆ ಯಾಕೆ ಗಮನ ಹರಿಸಿಲ್ಲ? ಎಂದು ಮುಖ್ಯ ನ್ಯಾ.ಟಿ ಎಸ್ ಠಾಕೂರ್ ಅವರನ್ನೊಳಗೊಂಡ ಪೀಠ ಕಟುವಾಗಿ ಪ್ರಶ್ನಿಸಿತ್ತು.