ಲಕ್ನೋ: ರಾಮ ಮಂದಿರ ನಿರ್ಮಾಣ ಬೆಂಬಲಿಸಿ ಮುಸ್ಲಿಮರಿಂದ ಬ್ಯಾನರ್
Team Udayavani, Mar 30, 2017, 8:18 PM IST
ಲಕ್ನೋ : ಬಿಜೆಪಿಯ ಫಯರ್ ಬ್ರಾಂಡ್ ನಾಯಕ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾದಂದಿನಿಂದ ಉತ್ತರ ಪ್ರದೇಶದಲ್ಲಿ ದಿನನಿತ್ಯ ಒಂದಲ್ಲ ಒಂದು ಹೊಸ ವಿಲಕ್ಷಣಕಾರಿ ಬೆಳವಣಿಗೆಗಳು ಸಂಭವಿಸುತ್ತಲೇ ಇವೆ.
ಇದೀಗ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕುರಿತಂತೆ ಪ್ರಮುಖ ಬೆಳವಣಿಗೆಯೊಂದು ಲಕ್ನೋದಲ್ಲಿ ಬೆಳಕಿಗೆ ಬಂದಿದೆ.
ರಾಮ ಮಂದಿರ ನಿರ್ಮಾಣಕ್ಕೆ ತಮ್ಮ ಬೆಂಬಲವನ್ನು ಘೋಷಿಸುವ ಕೆಲ ಮುಸ್ಲಿಂ ಸಂಘಟನೆಗಳ ಬೃಹತ್ ಬ್ಯಾನರ್ಗಳು ಈಗ ಲಕ್ನೋದಲ್ಲಿ ರಾರಾಜಿಸತೊಡಗಿವೆ.
ಈ ರೀತಿಯ ಹತ್ತು ಬ್ಯಾನರ್ಗಳನ್ನು ಲಕ್ನೋ ವಿವಿಧೆಡೆಗಳಲ್ಲಿ ಹಾಕಿರುವ ಆಜಂ ಖಾನ್ ಅವರು ಶ್ರೀ ರಾಮ ಮಂದಿರ ನಿರ್ಮಾಣ ಮುಸ್ಲಿಂ ಕರಸೇವಕ ಮಂಚ ದ ಅಧ್ಯಕ್ಷರಾಗಿದ್ದಾರೆ.
ರಾಮ ಮಂದಿರ ನಿರ್ಮಾಣ ಪರವಾಗಿರುವ ಬ್ಯಾನರ್ಗಳ ಹಿಂದಿರುವ ವ್ಯಕಿತಯು ತನ್ನ ಈ ದಿಟ್ಟ ಕ್ರಮಕ್ಕಾಗಿ ಪೊಲೀಸ್ ರಕ್ಷಣೆಯನ್ನು ಕೋರಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಅಯೋಧ್ಯೆಯಲ್ಲಿನ ವಿವಾದಿತ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸಬೇಕೆಂಬ ಕಟ್ಟಾ ಬೆಂಬಲಿಗರಲ್ಲಿ ಸ್ವತಃ ಯೋಗಿ ಆದಿತ್ಯನಾಥ್ ಅವರು ಪ್ರಮುಖರಾಗಿದ್ದಾರೆ.
ಸುಪ್ರೀಂ ಕೋರ್ಟ್ ಈಚೆಗಷ್ಟೇ ಅಯೋಧ್ಯೆ ವಿವಾದವು ಅತಿ ಸೂಕ್ಷ್ಮ ಹಾಗೂ ಭಾವನಾತ್ಮಕವಾಗಿರುವುದರಿಂದ ಸಂಬಂಧಪಟ್ಟವರು ಕೋರ್ಟ್ ಹೊರಗೆ ಸ್ನೇಹ ಸೌಹಾರ್ದದಿಂದ ವಿವಾದವನ್ನು ಬಗೆಹರಿಸಿಕೊಳ್ಳಬೇಕೆಂದು ಸೂಚಿಸಿತ್ತು.
ಆಜಂ ಖಾನ್ ಅವರು ಸಮಾನ ಮನಸ್ಕ ಮುಸ್ಲಿಮರ ಸಮೂಹವೊಂದನ್ನು ರಚಿಸಿದ್ದು ರಾಮ ಮಂದಿರ ನಿರ್ಮಾಣ ವಿಷಯದಲ್ಲಿ ಮುಸ್ಲಿಂ ಸಮುದಾಯದಲ್ಲಿ ಸಹಮತವನ್ನು ಮೂಡಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.