ತ್ರಿವಳಿ ತಲಾಖ್ ಅಸಾಂವಿಧಾನಿಕ: ಸು. ಕೋ ಸಂವಿಧಾನ ಪೀಠದಿಂದ ತೀರ್ಪು
Team Udayavani, Aug 23, 2017, 5:50 AM IST
ಹೊಸದಿಲ್ಲಿ: ಸರಿಸುಮಾರು 1400 ವರ್ಷಗಳಷ್ಟು ಹಳೆಯ ತ್ರಿವಳಿ ತಲಾಖ್ ಅಥವಾ ತಲಾಖ್-ಎ-ಬಿದ್ದತ್ ಇಸ್ಲಾಂ ಸಂಪ್ರದಾಯಕ್ಕೆ ವಿರುದ್ಧ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಸಂವಿಧಾನ ಪೀಠ, ಈ ಪದ್ಧತಿಯನ್ನೇ ನಿಷೇಧಿಸಿದೆ. ಸಂವಿಧಾನ ಪೀಠದ ಐವರು ನ್ಯಾಯ ಮೂರ್ತಿಗಳಲ್ಲಿ ಮೂವರು ತ್ರಿವಳಿ ತಲಾಖ್ ನಿಷೇಧದ ಪರ ತೀರ್ಪು ನೀಡಿದರೆ, ಸಿಜೆಐ ಸಹಿತ ಇನ್ನಿಬ್ಬರು ತ್ರಿವಳಿ ತಲಾಖ್ ಇರಲಿ ಎಂಬರ್ಥದಲ್ಲಿ ತೀರ್ಪು ನೀಡಿದ್ದಾರೆ. ಆದರೆ, ತ್ರಿವಳಿ ತಲಾಖ್ ವಿರುದ್ಧವಾಗಿ ಮೂವರು ನ್ಯಾಯಮೂರ್ತಿಗಳು ನಿಂತಿದ್ದರಿಂದ, ಇನ್ನು ಮುಂದೆ ಈ ಪದ್ಧತಿಯನ್ನು ಬಳಕೆ ಮಾಡುವಂತಿಲ್ಲ ಎಂದು ಕೋರ್ಟ್ ಹೇಳಿದೆ.
ಅತ್ತ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ನಿಷೇಧಿಸಿ ತೀರ್ಪು ನೀಡುತ್ತಿದ್ದಂತೆ, ಕೇಂದ್ರ ಸರಕಾರ, ವಿಪಕ್ಷಗಳು, ಸಾಮಾಜಿಕ ಕಾರ್ಯಕರ್ತರು, ಸಂತ್ರಸ್ತರ ಸಹಿತ ಸಮಾಜದ ಎಲ್ಲ ಸ್ತರಗಳಿಂದ ತೀರ್ಪಿಗೆ ಸ್ವಾಗತ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇದೊಂದು ಐತಿಹಾಸಿಕ ಕ್ಷಣ ಎಂದರೆ, ಕಾಂಗ್ರೆಸ್ ಪ್ರಗತಿದಾಯಕ ತೀರ್ಪು ಎಂದು ಬಣ್ಣಿಸಿದೆ.
ಕುರಾನ್ನಲ್ಲಿ ಉಲ್ಲೇಖವೇ ಇಲ್ಲ: ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ಮತ್ತು ಶರಿಯಾ ಕಾನೂನಿನ ವಿವಿಧ ಆಯಾಮಗಳನ್ನು ಪರಿಶೀಲಿಸಿದ ಅನಂತರ ತ್ರಿವಳಿ ತಲಾಖ್ ನಿರ್ಬಂಧ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಂವಿಧಾನ ಪೀಠ ತನ್ನ ತೀರ್ಪಿನಲ್ಲಿ ಹೇಳಿದೆ. ಈ ಸಂಬಂಧ 395 ಪುಟಗಳ ಮೂರು ಪ್ರತ್ಯೇಕ ತೀರ್ಪುಗಳನ್ನು ನೀಡಲಾಗಿದೆ. ಸಿಜೆಐ ನೇತೃತ್ವದ ಇಬ್ಬರು ನ್ಯಾಯಮೂರ್ತಿಗಳು ಒಂದು ತೀರ್ಪು ಬರೆದಿದ್ದರೆ, ನ್ಯಾಯ ಮೂರ್ತಿಗಳಾದ ಕುರಿಯನ್ ಜೋಸೆಫ್ ಇನ್ನೊಂದು, ಯು.ಯು. ಲಲಿತ್ ಮತ್ತು ರೋಹಿಂಟನ್ ಫಾಲಿ ನಾರಿಮನ್ ಮತ್ತೂಂದು ತೀರ್ಪು ಬರೆದಿದ್ದಾರೆ.
ಸಿಜೆಐ ಜೆ.ಎಸ್. ಖೇಹರ್ ಮತ್ತು ನ್ಯಾ| ಎಸ್.ಎ. ನಜೀರ್ ಅವರು, ತ್ರಿವಳಿ ತಲಾಖ್ ಅನ್ನು ಮುಸ್ಲಿಂ ಸಮುದಾಯ ಸಾವಿರಾರು ವರ್ಷ ಗಳಿಂದ ಆಚರಿಸಿಕೊಂಡು ಬರುತ್ತಿದೆ. ನ್ಯಾಯಾಂಗದ ಮಧ್ಯಪ್ರವೇಶದಿಂದ ಈ ಆಚರಣೆಯನ್ನು ನಿಲ್ಲಿಸುವುದು ಬೇಡ. ಇದಕ್ಕೆ ಬದಲಾಗಿ ಸರಕಾರವೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಿ ಎಂದು ತೀರ್ಪು ಬರೆದಿದ್ದಾರೆ. ಆದರೆ, ನ್ಯಾ| ಕುರಿಯನ್ ಜೋಸೆಫ್, ನ್ಯಾ| ರೋಹಿಂಟನ್ ಫಾಲಿ ನಾರಿಮನ್ ಮತ್ತು ನ್ಯಾ| ಯು.ಯು. ಲಲಿತ್ ಅವರು, ಸಿಜೆಐ ಮತ್ತು ನ್ಯಾ| ನಜೀರ್ ಅವರ ಅಭಿಪ್ರಾಯವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರಲ್ಲದೆ, ಪ್ರತ್ಯೇಕವಾಗಿಯೇ ತೀರ್ಪು ಬರೆದರು.
ಈ ತೀರ್ಪಿನಿಂದ ಸುನ್ನಿ ಮುಸಲ್ಮಾನರು ಬಳಕೆ ಮಾಡುತ್ತಿರುವ ಈ ‘ತ್ರಿವಳಿ ತಲಾಖ್’ ಅರ್ಥಾತ್ ‘ತಲಾಖ್ -ಎ- ಬಿದ್ದತ್’ ಆಚರಣೆ ಅಕ್ರಮವಾಗಲಿದೆ. ಆದರೆ ತಲಾಖ್ನ ಇನ್ನೆರಡು ರೂಪಗಳಾದ ‘ತಲಾಖ್ ಹಸಾನ್’ ಮತ್ತು ‘ತಲಾಖ್ ಎಹ್ಸಾನ್’ ಬಳಕೆ ಮಾಡಬಹುದಾಗಿದೆ. ತಲಾಖ್ ಎಹ್ಸಾನ್ನಲ್ಲಿ ಮುಸಲ್ಮಾನ ವ್ಯಕ್ತಿ ತಿಂಗಳಿಗೊಮ್ಮೆಯಂತೆ ಮೂರು ಬಾರಿ ತಲಾಖ್ ಹೇಳಿ ವಿಚ್ಛೇದನ ತೆಗೆದುಕೊಳ್ಳ ಬಹುದು. ಆದರೆ ಇಲ್ಲಿ ಗಂಡ, ಹೆಂಡತಿ ಒಟ್ಟಾಗಿಯೇ ಇರಬಹುದು. ಆದರೆ ತಲಾಖ್ ಹಸಾನ್ನಲ್ಲೂ ತಿಂಗಳಿಗೊಮ್ಮೆಯಂತೆ ಮೂರು ಬಾರಿ ತಲಾಖ್ ಹೇಳಬೇಕು. ಆದರೆ ಈ ಸಮಯದಲ್ಲಿ ಪತಿ – ಪತ್ನಿ ದೈಹಿಕವಾಗಿ ಹತ್ತಿರ ಸೇರ ಕೂಡದು ಎಂಬ ನಿಯಮವಿದೆ. ಇಲ್ಲಿ ತಿಂಗಳುಗಳ ಲೆಕ್ಕಾಚಾರವನ್ನು ಮಹಿಳೆಯ ಋತುಚಕ್ರದಂತೆ ತೆಗೆದುಕೊಳ್ಳಲಾಗುತ್ತದೆ.
3:2ರಲ್ಲಿ ತ್ರಿವಳಿ ತಲಾಖ್ಗೆ ನಿಷೇಧ: ಆಸಕ್ತಿದಾಯಕ ಅಂಶವೆಂದರೆ ಸಂವಿಧಾನ ಪೀಠ ತ್ರಿವಳಿ ತಲಾಖ್ ಕುರಿತಂತೆ ತೀರ್ಪು ನೀಡುವಾಗ ಒಮ್ಮತದ ಅಭಿಪ್ರಾಯಕ್ಕೆ ಬಂದಿಲ್ಲ. ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಅವರು, ತ್ರಿವಳಿ ತಲಾಖ್ ನಿಷೇಧ ಮಾಡುವುದು ಬೇಡ ಎಂಬ ಅಭಿಪ್ರಾಯ ತಳೆದರು. ಇದಕ್ಕೆ ನ್ಯಾ| ನಜೀರ್ ಕೂಡ ಒಮ್ಮತ ವ್ಯಕ್ತಪಡಿಸಿದರು. ಆದರೆ ಸಿಜೆಐ ಅಭಿಪ್ರಾಯ ಒಪ್ಪಲು ಸಾಧ್ಯವಿಲ್ಲ ಎಂದು ತೀರ್ಪು ಓದಲು ಶುರು ಮಾಡಿದವರು ನ್ಯಾ| ಕುರಿಯನ್ ಜೋಸೆಫ್. ಅವರು ‘ವೈಯಕ್ತಿಕ ಕಾನೂನಿನಲ್ಲಿ ಇರುವ ಹಾಗೆ ಧಾರ್ಮಿಕ ಆಚರಣೆ ರೀತಿಯಲ್ಲಿ ಅನುಸರಿಸಿಕೊಂಡು ಬರುತ್ತಿರುವ ತ್ರಿವಳಿ ತಲಾಖ್ ಅನ್ನು ಪ್ರಶ್ನಿಸುವುದು ತರವಲ್ಲ ಎಂಬ ಸಿಜೆಐ ಮಾತನ್ನು ಒಪ್ಪುವುದು ನನಗೆ ತೀರಾ ಕಷ್ಟವಾಗುತ್ತಿದೆ’ ಎಂದರು. ಇದಕ್ಕೆ ನ್ಯಾ| ಲಲಿತ್ ಮತ್ತು ನ್ಯಾ| ನಾರಿಮನ್ ಸಹಮತ ವ್ಯಕ್ತಪಡಿಸಿದರು.
ಬಳಿಕ ಕುರಾನ್ನಲ್ಲಿ ತಲಾಖ್ ಬಗ್ಗೆ ಪ್ರಸ್ತಾವವಿಲ್ಲದ, ಮದುವೆಯ ಪವಿತ್ರ ಸಂಬಂಧದ ಬಗ್ಗೆ ಹೇಳಿರುವುದನ್ನು ಉಲ್ಲೇಖೀಸಿದರು. ಆದರೂ ಸಂಬಂಧ ಸರಿ ಹೋಗುವುದು ಕಷ್ಟ ಎಂಬ ಸಂದರ್ಭದಲ್ಲಿ ತಲಾಖ್ ಅನಿವಾರ್ಯವಾಗಬಹುದು. ಆದರೆ, ಒಂದು ಮನವೊಲಿಕೆ, ಸಂಧಾನವಿದ್ದಲ್ಲಿ ಆ ಸಂಬಂಧ ಸುಧಾರಣೆಯಾಗಲೂ ಬಹುದು. ಹೀಗಾಗಿ ತಲಾಖ್ಗೆ ಮುನ್ನ ಕುರಾನ್ನಲ್ಲಿ ಹೇಳಿದ ಹಾಗೆಯೇ ಕೆಲವು ಪದ್ಧತಿಗಳನ್ನು ಅನುಸರಿಸುವುದು ಸೂಕ್ತ ಎಂದು ನ್ಯಾ| ಜೋಸೆಫ್ ಹೇಳಿದರು. ಇನ್ನು ಪವಿತ್ರ ಕುರಾನ್ನಲ್ಲಿ ಪ್ರಸ್ತಾವವೇ ಇಲ್ಲದ ನಂಬಿಕೆಗಳಿಗೆ ವಿರುದ್ಧವಾದ ತ್ರಿವಳಿ ತಲಾಖ್ ಬಾಗಿಲು ಮುಚ್ಚಿದಂತೆಯೇ ಎಂದು ತೀರ್ಪಿನಲ್ಲಿ ಉಲ್ಲೇಖೀಸಿದರು.
ಇದರ ಜತೆಯಲ್ಲೇ ಇಸ್ಲಾಂ ಕಾನೂನಿನ ನಾಲ್ಕು ಮೂಲಗಳಾದ ಕುರಾನ್, ಹದೀಸ್, ಇಜ್ಮಾ ಮತ್ತು ಕಿಯಾಸ್ ಅನ್ನು ನ್ಯಾ| ಜೋಸೆಫ್ ಉಲ್ಲೇಖೀಸಿದರು. ಮುಸ್ಲಿಮರಲ್ಲಿ ಪವಿತ್ರ ಕುರಾನ್ ಗ್ರಂಥವೇ ಎಲ್ಲದಕ್ಕೂ ಮೂಲ ಎಂದು ಹೇಳಿದರು. ಅಂದರೆ ಪವಿತ್ರ ಕುರಾನ್ ಮೂಲವಾಗಿದ್ದು, ಹದೀಸ್, ಇಜ್ಮಾ ಮತ್ತು ಕಿಯಾಸ್ ಅದರ ಪೂರಕವಾದ ಮೂಲ ವಿಧಾನಗಳಾಗಿವೆ. ಹೀಗಾಗಿ ಇಸ್ಲಾಂ ಧರ್ಮ ಪವಿತ್ರ ಕುರಾನ್ ವಿರುದ್ಧವಾಗಿಲ್ಲ ಅಲ್ಲವೇ ಎಂದರು.
ನ್ಯಾ| ರೋಹಿಂಗ್ಟನ್ ಫಾಲಿ ನಾರಿಮನ್ ಅವರು, ನ್ಯಾ| ಜೋಸೆಫ್ ಹೇಳಿದ ತೀರ್ಪಿಗೆ ಸಹಮತ ವ್ಯಕ್ತಪಡಿಸಿದರಲ್ಲದೆ, ತ್ರಿವಳಿ ತಲಾಖ್ ಸಂವಿಧಾನದಲ್ಲಿ ಒದಗಿಸಲಾದ ಮೂಲಭೂತ ಹಕ್ಕಿನ ಪರಿಚ್ಛೇದ 14 (ಸಮಾನತೆಯ ಹಕ್ಕು) ಸ್ಪಷ್ಟ ಉಲ್ಲಂಘನೆಯಾಗಿದೆ ಎಂದರು. ಈ ಮೂಲಕ ಎನ್ಡಿಎ ಸರಕಾರ ತ್ರಿವಳಿ ತಲಾಖ್ ಕುರಿತಂತೆ ಸಲ್ಲಿಸಿದ್ದ ಅಫಿದವಿತ್ನ ಅಂಶಗಳನ್ನು ಅವರು ಎತ್ತಿಹಿಡಿದರು.
ಒಟ್ಟಾರೆಯಾಗಿ ತಲಾಖ್ ಬೇಕೇಬೇಕು ಎಂದು ಹೇಳಬಹುದಾದರೂ ಅಲ್ಲೊಂದು ಸಂಧಾನ ಮತ್ತು ಮನವೊಲಿಕೆ ಇರಲೇ ಬೇಕು. ವಿವಾಹ ಸಂಬಂಧಗಳಲ್ಲಿ ಇಂಥದ್ದಕ್ಕೆ ಆಸ್ಪದ ನೀಡದೇ ಹೋಗುವುದು ಸರಿಯಲ್ಲ. ಜತೆಗೆ ಇದಕ್ಕೆ ಸಂವಿಧಾನದ ರಕ್ಷಣೆ ಕೊಡುವುದು ಸಾಧ್ಯವಿಲ್ಲ ಎಂದು ಮೂವರು ನ್ಯಾಯಮೂರ್ತಿಗಳು ತೀರ್ಪು ಬರೆದರು.
ಇದೊಂದು ಐತಿಹಾಸಿಕ ತೀರ್ಪು. ಸಂವಿಧಾನ ಪೀಠದ ಐವರಲ್ಲಿ ಮೂವರು ತ್ರಿವಳಿ ತಲಾಖ್ ಬೇಡವೆಂದರೆ, ಸಿಜೆಐ ಸಹಿತ ಇನ್ನಿಬ್ಬರು ಇರಲಿ ಎಂದರು. ಆದರೆ 3:2ರ ಆಧಾರದಲ್ಲಿ ತ್ರಿವಳಿ ತಲಾಖ್ಗೆ ಆರು ತಿಂಗಳ ಕಾಲ ನಿಷೇಧ ಹೇರುವ ತೀರ್ಪು ಹೊರಬಿತ್ತು.
ಹನಫಿ ಸಿದ್ಧಾಂತ ಪ್ರತಿಪಾದಿಸುವ ಸುನ್ನಿಗಳಲ್ಲಿ ತ್ರಿವಳಿ ತಲಾಖ್ ಮಹತ್ವದ್ದು. ಅವರ ಸಂಸ್ಕೃತಿಯಲ್ಲೇ ಇದನ್ನು ಅತ್ಯಂತ ಪ್ರಮುಖವಾಗಿ ಪರಿಗಣಿಸಲಾಗಿದೆ. ತ್ರಿವಳಿ ತಲಾಖ್ ಸಂವಿಧಾನದ ಪರಿಚ್ಛೇದ 25, 14 ಮತ್ತು 21 ಅನ್ನು ಉಲ್ಲಂಘಿಸುವುದಿಲ್ಲ. ವೈಯಕ್ತಿಕ ಕಾನೂನಿನಲ್ಲಿ ಪಾಲಿಸಿಕೊಂಡು ಬರುತ್ತಿರುವಾಗ ಇದನ್ನು ನೈತಿಕ ನೆಲೆಗಟ್ಟಿನಲ್ಲಿ ಪಕ್ಕಕ್ಕಿಡಲು ಸಾಧ್ಯವಿಲ್ಲ. ಹಾಗೆಯೇ ಕೋರ್ಟ್ ಕೂಡ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಒಂದು ವೇಳೆ ತ್ರಿವಳಿ ತಲಾಖ್ ಪಕ್ಕಕ್ಕೆ ಇಡುವುದೇ ಆದರೆ, ಶಾಸಕಾಂಗದ ಮಧ್ಯಪ್ರವೇಶದಿಂದ ಮಾತ್ರ.
-ಜೆ.ಎಸ್.ಖೇಹರ್, ಮುಖ್ಯ ನ್ಯಾಯಮೂರ್ತಿ
ಸಿಜೆಐ ಜೆ.ಎಸ್. ಖೇಹರ್ ಅಭಿಪ್ರಾಯವೇ ನಮ್ಮದು ಕೂಡ.
-ನ್ಯಾ| ಎಸ್. ಅಬ್ದುಲ್ ನಜೀರ್
ಇಸ್ಲಾಮಿಕ್ ಕಾನೂನಿಗೆ ನಾಲ್ಕು ವಿಧದ ಮೂಲಗಳಿವೆ. ಆದರೆ ಕಾನೂನು ರಚಿತವಾಗಲು ಪ್ರಥಮವಾಗಿ ಬಳಕೆಯಾಗುವುದು ಕುರಾನ್ ಮಾತ್ರ. ಹೀಗಾಗಿ ಇತರ ಮೂಲಗಳು ಕುರಾನ್ಗೆ ಪೂರಕವಷ್ಟೆ. ಕುರಾನ್ನಲ್ಲಿ ಏನನ್ನು ಹೇಳಲಾಗಿದೆಯೋ ಅದೇ ಸತ್ಯ. ಅಲ್ಲದೆ, ಕುರಾನ್ ವಿವಾಹ ಸಂಬಂಧಗಳು ದೀರ್ಘಕಾಲದಲ್ಲಿ ಉಳಿಯುವಂತೆ ಇರಬೇಕು ಎಂದೇ ಪ್ರತಿಪಾದಿಸುತ್ತದೆ. ತಲಾಖ್ಗೂ ಮುನ್ನ ಕೆಲವು ಅಗತ್ಯ ನಿಯಮಗಳನ್ನು ಪಾಲಿಸಲೇಬೇಕು. ಹೀಗಾಗಿ ತ್ರಿವಳಿ ತಲಾಖ್ ಕುರಾನ್ನ ನಂಬಿಕೆಗಳಿಗೆ ವಿರುದ್ಧವಾಗಿದೆ. ಹಾಗೇ ಶರಿಯಾ ಕಾನೂನಿಗೂ ವಿರುದ್ಧವಾಗಿದೆ.
– ನ್ಯಾ| ಕುರಿಯನ್ ಜೋಸೆಫ್
ನ್ಯಾ| ಕುರಿಯನ್ ಜೋಸೆಫ್ ಅಭಿಪ್ರಾಯವೇ ನಮ್ಮದು ಕೂಡ.
-ನ್ಯಾ| ಯು.ಯು. ಲಲಿತ್
ವಿಚ್ಛೇದನದ ಒಪ್ಪಿಗೆಯಲ್ಲದ ಮಾರ್ಗ ಇದು. ಹನಫಿ ಕಾನೂನು ಕೂಡ ತ್ರಿವಳಿ ತಲಾಖ್ ಅನ್ನು ಪಾಪ ಕೃತ್ಯ ಎನ್ನುತ್ತೆ. 1937ರ ಕಾಯ್ದೆ ತ್ರಿವಳಿ ತಲಾಖ್ ಬಗ್ಗೆ ಪ್ರಸ್ತಾವಿಸುತ್ತದೆ ಮತ್ತು ಪರಿಚ್ಛೇದ 13ನ್ನು ಉಲ್ಲಂಘಿಸುವುದಿಲ್ಲ ಎನ್ನಲಾಗುತ್ತಿದೆ. ತ್ರಿವಳಿ ತಲಾಖ್ ಪರಿಚ್ಛೇದ 13(1)ರ ಪರಿಧಿಯೊಳಗೆ ಬೀಳುವುದೇ ಇಲ್ಲ. ಕೋರ್ಟ್ ತ್ರಿವಳಿ ತಲಾಖ್ ಸಿಂಧುವೋ ಅಥವಾ ಅಸಿಂಧುವೋ ಎಂಬುದನ್ನು ನಿರ್ಧರಿಸಲೇಬೇಕಾಗುತ್ತದೆ.
- ನ್ಯಾ| ರೋಹಿಂಟನ್ ಫಾಲಿ ನಾರಿಮನ್
ಸರಕಾರದಿಂದ ಕಾನೂನು ಇಲ್ಲ
ತ್ರಿವಳಿ ತಲಾಖ್ ಕುರಿತಂತೆ ಕೇಂದ್ರ ಸರಕಾರ ಕಾನೂನು ರಚನೆ ಮಾಡದಿರಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠದಲ್ಲಿ ಮೂವರು ನ್ಯಾಯಮೂರ್ತಿಗಳು ತ್ರಿವಳಿ ತಲಾಖ್ ಅಸಾಂವಿಧಾನಿಕ ಮತ್ತು ಕಾನೂನುಬಾಹಿರ ಎಂದು ಹೇಳಿದ್ದರಿಂದ ಸರಕಾರ ಕಾನೂನು ಮಾಡುವ ಅಗತ್ಯವೇ ಇಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದೆ ಎನ್ನಲಾಗಿದೆ. ಹೀಗಾಗಿ 1937ರ ಮುಸ್ಲಿಂ ವೈಯಕ್ತಿಕ ಕಾನೂನು(ಶರೀಅತ್) ಮಂಡಳಿ ಕಾಯ್ದೆಯಲ್ಲಿ ಕೆಲವು ತಿದ್ದುಪಡಿ ತರಲು ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳಿದೆ. ಅಲ್ಲದೆ ಕಳೆದ ಮೇಯಲ್ಲಿ ವಾದ ಮಂಡಿಸಿದ್ದ ಆಗಿನ ಅಟಾರ್ನಿ ಜನರಲ್ ಮುಕುಲ್ ರೋಹ್ಟಾಗಿ ಅವರು, ತ್ರಿವಳಿ ತಲಾಖ್ ಅನ್ನು ಸಂಪೂರ್ಣವಾಗಿ ರದ್ದು ಮಾಡುವ ಕುರಿತಂತೆ ವಾದ ಮಂಡಿಸಿದ್ದರು. ಇದೇ ನಮ್ಮ ವಾದವಾಗಿದೆ ಎಂದು ಕೇಂದ್ರ ಸರಕಾರದ ಮೂಲಗಳು ಹೇಳಿವೆ.