ಅಮಾನ್ಯ ಬಳಿಕ ಗ್ಯಾಸ್ ಚೇಂಬರ್ ಸ್ಥಿತಿ
Team Udayavani, Sep 25, 2017, 7:35 AM IST
ಚೆನ್ನೈ: ನೋಟುಗಳ ಅಮಾನ್ಯ ಪ್ರಕ್ರಿಯೆ ಬಳಿಕ ಪರಿಸ್ಥಿತಿ ಗ್ಯಾಸ್ ಚೇಂಬರ್ನಂತಾಗಿದೆ. ಅದುವೇ ಮೊದಲ ವೈಫಲ್ಯ ಎಂದು ಆರೆಸ್ಸೆಸ್ ಸಿದ್ಧಾಂತ ಪ್ರತಿಪಾದಕ, ಖ್ಯಾತ ಆರ್ಥಿಕ ವಿಶ್ಲೇಷಕ ಎಸ್.ಗುರುಮೂರ್ತಿ ಹೇಳಿದ್ದಾರೆ. ಚೆನ್ನೈನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಮುಂಚಿತವಾಗಿಯೇ ತೆರಿಗೆ ಸಂಗ್ರಹಿಸುವ ಬದಲು ಕೇಂದ್ರ ಸರ್ಕಾರ ತೆರಿಗೆಗಾಗಿ ಕಪ್ಪುಹಣದ ಹಿಂದೆ ಓಡುವಂತಾಗಿದೆ ಎಂದು ಹೇಳಿದ್ದಾರೆ.
ಬ್ಯಾಂಕ್ಗಳ ಅನು ತ್ಪಾದಕ ಆಸ್ತಿ ನಿಯಂತ್ರಿಸಲು ನಿಯಮಗಳು ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಮುಂದಿನ 6 ತಿಂಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೇ ಇದ್ದರೆ ಅರ್ಥ ವ್ಯವಸ್ಥೆಯ ಪರಿಸ್ಥಿತಿ ಕೈಮೀರಿ ಹೋದೀತು ಎಂದು ಎಚ್ಚರಿಸಿದ್ದಾರೆ.
ನೋಟು ಅಮಾನ್ಯ, ಜಿಎಸ್ಟಿ, ದಿವಾಳಿ ಕಾಯ್ದೆ, ಎನ್ಪಿಎ ನಿಯಮಗಳು ಹೀಗೆ ಒಂದರ ಹಿಂದೆ ಒಂದು ನಿರ್ಧಾರಗಳನ್ನು ಕೇಂದ್ರ ಸರ್ಕಾರ ಕೈಗೊಂಡಿತು. ಒಂದು ನಿರ್ಧಾರ ಘೋಷಣೆ ಮಾಡಿ ಅದರ ಪರಿ ಣಾಮ ಏನು ಎಂದು ತಿಳಿದುಕೊಳ್ಳುವುದರ ಮೊದಲೇ ಮತ್ತೂಂದನ್ನು ಜಾರಿಗೊಳಿಸ ಲಾಯಿತು. ಹೀಗಾಗಿ ಅದು ಅರ್ಥ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿತು ಎಂದರು.
ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮ ಸಮರ್ಥಿಸಿಕೊಳ್ಳುತ್ತಿಲ್ಲವೆಂದು ಹೇಳಿದ ಅವರು, ಅದನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗಿಲ್ಲ. ವಿತ್ತ ಖಾತೆ ಮತ್ತು ರಹಸ್ಯ ನಿರ್ಧಾರಗಳ ಕೇಂದ್ರದ ನಡುವಿನ ಸಂಪರ್ಕ ಕೊರತೆಯಿಂದಾಗಿ ಅಮಾನ್ಯ ಘೋಷಣೆ ಜಾರಿ ಮಾಡುವ ಅವಸರದಲ್ಲಿ ಕಪ್ಪುಹಣ ಹೊಂದಿರುವ ಭಾರಿ ಕುಳಗಳು ತಪ್ಪಿಸಿಕೊಂಡಿ ದ್ದಾರೆ ಎಂದರು ಎಸ್.ಗುರುಮೂರ್ತಿ.
ಆರ್ಬಿಐಗೆ ಟೀಕೆ: ನೋಟು ಅಮಾನ್ಯ ಉತ್ತಮ ನಿರ್ಧಾರ ಎಂದು ಹೇಳಿದರೂ, ಆರ್ಬಿಐ ಅದನ್ನು ಸರಿಯಾಗಿ ಜಾರಿಗೊಳಿಸಲಿಲ್ಲ ಎಂದು ಆಕ್ಷೇಪಿಸಿದರು.
ಕೇಂದ್ರ ಸರ್ಕಾರ ಆರಂಭದಲ್ಲಿ ಮುದ್ರಾ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ವಿಫಲ ವಾಯಿತು. ಅದಕ್ಕೆ ಆರ್ಬಿಐ ತಡೆಯೊಡ್ಡಿತು ಎಂದರು. ಕೇಂದ್ರದ ಮೇಲಿದ್ದ ರಾಜಕೀಯ ಒತ್ತಡ ಅಮಾನ್ಯದ ಒಟ್ಟು ಉದ್ದೇಶವನ್ನೇ ಹಾಳುಗೆಡವಿತು. ನಿರ್ಧಾರ ಜಾರಿಗೊಳಿಸುವಲ್ಲಿ ಸರ್ಕಾರದ ನಡುವೆಯೇ ಸಮನ್ವಯದ ಕೊರತೆ ಇತ್ತು ಎಂದರು. ಜಿಎಸ್ಟಿ ಉತ್ತಮ ಯೋಜನೆಯಾದರೂ, ಶೀಘ್ರವೇ ಅದರ ಜಾರಿ ಯಿಂದ ಉತ್ತಮ ಫಲಿತಾಂಶ ದೊರೆ ಯದು. ಅದು ದೀರ್ಘ ಕಾಲೀನವಾದದ್ದು ಎಂದರು.
ತೊಂದರೆಯಾಗಿದೆ
ನಗದು ತೆಗೆಯುವುದರ ಮೇಲೆ ಮಿತಿ ಹೇರಿದ್ದರಿಂದ ಶೇ.90ರಷ್ಟು ಉದ್ಯೋಗ ನೀಡುವ ಅಸಂಘಟಿತ ವಲಯಕ್ಕೆ ತೊಂದರೆಯಾಗಿದೆ. ಈ ಕ್ಷೇತ್ರದ ಶೇ.95ರಷ್ಟು ಹಣಕಾಸಿನ ವ್ಯವಸ್ಥೆ ಬ್ಯಾಂಕಿಂಗ್ ಕ್ಷೇತ್ರದಿಂದ ಹೊರಗಿನಿಂದಲೇ ಬರುತ್ತದೆ. ಅಮಾನ್ಯ ನಿರ್ಧಾರದಿಂದ ಈ ಕ್ಷೇತ್ರದಲ್ಲಿನ ಉದ್ಯೋಗ ಸೃಷ್ಟಿಗೆ ತೊಂದರೆಯಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಇದೊಂದು ದೊಡ್ಡ ಹೊಡೆತ ಎಂದಿದ್ದಾರೆ.