ರೈಲ್ವೆ ಕಾಲು ಸೇತುವೆ ಸುಧಾರಣೆಗೆ 2 ಕೋಟಿ ನೀಡಿದ ತೆಂಡುಲ್ಕರ್
Team Udayavani, Oct 23, 2017, 4:39 PM IST
ಮುಂಬಯಿ : ಭಾರತೀಯ ಹಾಗೂ ವಿಶ್ವ ಕ್ರಿಕೆಟ್ ರಂಗದ ದಿಗ್ಗಜ ಮತ್ತು ರಾಜ್ಯಸಭಾ ಸದಸ್ಯರಾಗಿರುವ ಸಚಿನ್ ತೆಂಡುಲ್ಕರ್ ತನ್ನ ಸಂಸದರ ಸ್ಥಳೀಯಾಭಿವೃದ್ಧಿ ನಿಧಿಯಿಂದ ಮುಂಬಯಿ ರೈಲು ನಿಲ್ದಾಣಗಳಲ್ಲಿನ ಪ್ರಯಾಣಿಕರ ಕಾಲ್ನಡಿಗೆ ಸೇತುವೆಗಳ ಸುಧಾರಣೆಗೆ 2 ಕೋಟಿ ರೂ. ಮಂಜೂರು ಮಾಡಿದ್ದಾರೆ.
ಕಳೆದ ಸೆ.29ರಂದು ಮುಂಬಯಿಯ ಅಗಲ ಕಿರಿದಾದ ಎಲ್ಫಿನ್ಸ್ಟನ್ ರೋಡ್ ರೈಲು ನಿಲ್ದಾಣದಲ್ಲಿನ ಪ್ರಯಾಣಿಕರ ಕಾಲ್-ಸೇತುವೆಯಲ್ಲಿ ಸಂಭವಿಸಿದ ಕಾಲ್ ತುಳಿತಕ್ಕೆ 23 ಮಂದಿ ಬಲಿಯಾಗಿರುವ ಹಿನ್ನೆಲೆಯಲ್ಲಿ ತೆಂಡುಲ್ಕರ್, ಈ ರೀತಿಯ ಅಗಲ ಕಿರಿದಾದ ಮತ್ತು ಜೀರ್ಣಾವಸ್ಥೆಗೆ ತಲುಪಿರುವ ಇತರ ಹಲವು ರೈಲ್ವೇ ಕಾಲ್ ಸೇತುವೆಗಳ ಸುಧಾರಣೆ, ನವೀಕರಣಕ್ಕೆ 2 ಕೋಟಿ ರೂ. ಒದಗಿಸಿರುವುದು ಗಮನಾರ್ಹವಾಗಿದೆ.
ತೆಂಡುಲ್ಕರ್ ಅವರು ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರಬರೆದು ಮುಂಬಯಿ ಹೊರವಲಯ ಜಿಲ್ಲಾಧಿಕಾರಿಗೆ ಈ ಸಂಬಂಧ 2 ಕೋಟಿ ರೂ. ವಿನಿಯೋಗಕ್ಕೆ ಅನುಮೋದನೆ ನೀಡುವಂತೆ ತಾನು ಕೇಳಿಕೊಂಡಿರುವುದಾಗಿ ಹೇಳಿದ್ದಾರೆ.
ವೆಸ್ಟರ್ನ್ ಮತ್ತು ಸೆಂಟ್ರಲ್ ರೈಲ್ವೆಗೆ ತನ್ನ ಎಂಪಿಲ್ಯಾಡ್ ನಿಧಿಯಿಂದ ತಲಾ 1 ಕೋಟಿ ರೂ. ನೀಡಬಹುದಾಗಿದೆ ಎಂದು ತೆಂಡುಲ್ಕರ್ ಹೇಳಿದ್ದಾರೆ.