ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿ ದಂಪತಿ ಆತ್ಮಹತ್ಯೆ ಯತ್ನ
Team Udayavani, Oct 24, 2017, 7:45 AM IST
ತಿರುನಲ್ವೇಲಿ: ಲೇವಾದೇವಿದಾರ ಮತ್ತು ಪೊಲೀಸರ ಕಿರುಕುಳದಿಂದ ನೊಂದ ದಂಪತಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ತಮ್ಮಿಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿ, ತಾವೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಮುಂದಾದ ಆಘಾತಕಾರಿ ಘಟನೆ ತಮಿಳುನಾಡಿನ ತಿರುನಲ್ವೇಲಿಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ನಾಲ್ವರನ್ನೂ ಆಸ್ಪತ್ರೆಗೆ ದಾಖಲಿ ಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆ ಯಿಂದ ಆಘಾತಕ್ಕೆ ಒಳಗಾದ ಜಿಲ್ಲಾಡಳಿತವು ತನಿಖೆಗೆ ಆದೇಶಿಸಿದೆ. ಜತೆಗೆ ಲೇವಾದೇವಿದಾರರಿಂದ ನೊಂದವರಿಗೆ ಸಹಾಯ ನೀಡಲು ಕೇಂದ್ರ ಸ್ಥಾಪಿಸಲು ನಿರ್ಧರಿಸಿದೆ.
ಇಸಾಕಿ ಮುತ್ತು (32) ಎಂಬಾತ ಉದ್ದಿಮೆ ಶುರು ಮಾಡುವ ನಿಟ್ಟಿನಲ್ಲಿ ಲೇವಾದೇವಿದಾರನೊಬ್ಬನಿಂದ 1.40 ಲಕ್ಷ ರೂ. ಸಾಲ ಪಡೆದಿದ್ದ. ಬಡ್ಡಿ ಸಹಿತ 2.34 ಲಕ್ಷ ರೂ. ಮೊತ್ತ ಪಾವತಿಸಿದ್ದರೂ ಸಾಲ ನೀಡಿದ ವ್ಯಕ್ತಿ ಕಿರುಕುಳ ನೀಡುತ್ತಿದ್ದ ಎಂದು ಮುತ್ತು ಅವರ ಸಹೋದರ ಆರೋಪ ಮಾಡಿದ್ದಾರೆ. ಪೊಲೀಸರು ಮತ್ತು ಜಿಲ್ಲಾಡಳಿತಕ್ಕೆ ಈ ಬಗ್ಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ ಎಂದೂ ಹೇಳಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಅದರ ಆಧಾರದಲ್ಲಿ ತನಿಖೆ ಆರಂಭಿಸಲಾಗಿದೆ.