ರಾಜ್ಯ ರಾಜಕೀಯಕ್ಕೆ ಬರಲ್ಲ : ಸದಾನಂದ ಗೌಡ
Team Udayavani, May 16, 2017, 4:52 PM IST
ಪುತ್ತೂರು: ವಾಪಸ್ ರಾಜ್ಯ ರಾಜಕೀಯಕ್ಕೆ ಬರುವ ಬಯಕೆಯನ್ನು ಹೊಂದಿಲ್ಲ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ. ಬಿಜೆಪಿಯಲ್ಲಿ ವರಿಷ್ಠರು ಸೂಚಿಸಿದಂತೆ ನಾಯಕರು ನಡೆದುಕೊಳ್ಳುತ್ತಾರೆ. ಪಕ್ಷದ ರಾ.0 ಅಧ್ಯಕ್ಷ ಅಮಿತ್ ಶಾ ಅವರು ತೆಗೆದುಕೊಳ್ಳುವ ನಿರ್ಧಾರಗಳು ಸಹಮತದಿಂದ ಕೂಡಿರು ತ್ತದೆ ಎಂದು ಅವರು ಸ್ಪಷ್ಪಪಡಿಸಿದರು.
ಪುತ್ತೂರು ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶದ ಅಭಿವೃದ್ಧಿಯ ನಿಟ್ಟಿನಲ್ಲಿ ತೆಗೆದುಕೊಳ್ಳುತ್ತಿರುವ ದಿಟ್ಟ ನಿರ್ಧಾರಗಳು ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಗಿವೆ ಎಂದರು.
ಜಿಡಿಪಿಯಲ್ಲಿ ಮುಂಚೂಣಿ
ಕೇಂದ್ರ ಸರಕಾರ ದೇಶದ ಹಿತಾ ಸಕ್ತಿಯಲ್ಲಿ ಹೆಜ್ಜೆಯಿಡುತ್ತಿದೆ. ದೇಶ ದಲ್ಲಿನ ಆರ್ಥಿಕ ಶಿಸ್ತನ್ನು ಜಗತ್ತೇ ಕೊಂಡಾಡುತ್ತಿದೆ. ಈ ಶಿಸ್ತಿನ ಕಾರಣ ದಿಂದ ಭಾರತದ ಜಿಡಿಪಿ ಜಗತ್ತಿನಲ್ಲೇ ಮುಂಚೂಣಿಯಲ್ಲಿದೆ ಎಂದರು.
ಪಕ್ಷದಲ್ಲಿನ ಭಿನ್ನಮತದ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ವಿರೋಧಿಗಳ ನಿರೀಕ್ಷೆಯನ್ನು ಹುಸಿ ಮಾಡಿ ಸಂಘಟಿತ ಪಕ್ಷ ಹೇಗೆ ಕಾರ್ಯಕಾರಿಣಿ ಮಾಡಬಹುದು ಎಂಬುದನ್ನು ಮೈಸೂರಿನಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ತೋರಿಸಿಕೊಟ್ಟಿದೆ. ವಿರೋಧ ಪಕ್ಷದ ನಾಯಕರು ಪ್ರತ್ಯೇಕ ಬರ ಸಮೀಕ್ಷೆಗೆ ಹೋಗುವುದು ಸಹಜ. ಅಭಿವೃದ್ಧಿಯ ವಿಚಾರ ಬಂದಾಗ ಎಲ್ಲಾ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಾರೆ ಎಂದರು.
ನಿದ್ರೆಯಲ್ಲಿ 4 ವರ್ಷ
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅವಧಿಯ 4 ವರ್ಷವನ್ನು ನಿದ್ರೆಯಲ್ಲೇ ಕಳೆದಿದ್ದಾರೆ ಎಂದು ವ್ಯಂಗ್ಯ ವಾಡಿದ ಡಿ.ವಿ., ರಾಜ್ಯದ ಹಿತಾಸಕ್ತಿಯ ಕೆಲಸ ಕಾಂಗ್ರೆಸ್ ಸರಕಾರದಲ್ಲಿ ನಡೆದಿಲ್ಲ. ಡಿಕೆಶಿ, ಖರ್ಗೆ, ಪರಮೇಶ್ವರ್, ಸಿದ್ದರಾಮಯ್ಯ ಅವರ ತಂಡಗಳ ಪೈಪೋಟಿಯಷ್ಟೇ ಕಾಣಿಸುತ್ತಿದೆ. ಭವಿಷ್ಯವನ್ನು ತಿಳಿದೇ ಮುಂದಿನ ಮುಖ್ಯಮಂತ್ರಿಯನ್ನು ಮೇಲಿನವರು ನಿರ್ಧರಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ ಎಂದು ವಿಶ್ಲೇಷಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಬಿಜೆಪಿ ಪುತ್ತೂರು ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್, ಅಪ್ಪಯ್ಯ ಮಣಿಯಾಣಿ ಉಪಸ್ಥಿತರಿದ್ದರು.