ಪುತ್ತೂರು: ರಾಷ್ಟ್ರೀಯ ಅಂಚೆ ಸಪ್ತಾಹ ಆಚರಣೆ
Team Udayavani, Oct 22, 2017, 3:26 PM IST
ಪುತ್ತೂರು: ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ವತಿಯಿಂದ ರಾಷ್ಟ್ರೀಯ ಅಂಚೆ ಸಪ್ತಾಹ ಕಾರ್ಯಕ್ರಮ ಪ್ರಧಾನ ಅಂಚೆ ಕಚೇರಿಯಲ್ಲಿ ನಡೆಯಿತು.
ಪುತ್ತೂರು ಪ್ರಧಾನ ಅಂಚೆ ಪಾಲಕ ಶಶಿಧರ ರೈ ಮಾತನಾಡಿ, ಅಂಚೆ ಇಲಾಖೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ. ಇಲಾಖೆಯ ಮೂಲಕ ನೀಡುವ ಸೇವೆಗಳನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಹಾಯಕ ಅಂಚೆ ಅಧೀಕ್ಷಕ ಎಂ. ಲೋಕನಾಥ, ಅಂಚೆ ಸಪ್ತಾಹದ ಕುರಿತು ಮಾಹಿತಿ ನೀಡಿದರು. ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಮಂಜುನಾಥ ಎಲ್. ಸಪ್ತಾಹದ ಅಧ್ಯಕ್ಷತೆ ವಹಿಸಿದ್ದರು.
ಸಮ್ಮಾನ
ರಾಷ್ಟ್ರಮಟ್ಟದಲ್ಲಿ ಜರಗಿದ ಪತ್ರ ಲೇಖನ ಸ್ಪರ್ಧೆಯಲ್ಲಿ ಕರ್ನಾಟಕ ಅಂಚೆ ವಲಯ ಮಟ್ಟದಲ್ಲಿ 18ರಿಂದ ಕಡಿಮೆ ವಯೋಮಾನದ ಅಂಚೆ ಲಕೋಟೆ ವಿಭಾಗದಲ್ಲಿ ಸರ್ವೆ ಗೌರಿ ಮೆಮೋರಿಯಲ್ ಹೈಸ್ಕೂಲ್ನ ವಿದ್ಯಾರ್ಥಿಗಳಾದ ಪ್ರಥಮ ಬಹುಮಾನ ಪಡೆದ ಆಯಿಷತ್ ಶಮಾ ಎ. ಮತ್ತು ದ್ವಿತೀಯ ಬಹುಮಾನ ಗಳಿಸಿದ ಪ್ರತೀಕ್ಷಾ ಎ. ಅವರನ್ನು ಸಮ್ಮಾನಿಸಲಾಯಿತು. ಪ್ರಥಮ ಬಹುಮಾನ 25 ಸಾವಿರ ರೂ. ನಗದು ಮತ್ತು ಪ್ರಮಾಣ ಪತ್ರ, ದ್ವಿತೀಯ ಬಹುಮಾನ 10 ಸಾವಿರ ರೂ. ನಗದು ಮತ್ತು ಪ್ರಮಾಣ ಪತ್ರವನ್ನು ನೀಡಲಾಯಿತು.ಸಹಾಯಕ ರಾಜೇಶ್ ಕುಮಾರ್ ಸ್ವಾಗತಿಸಿ, ವಂದಿಸಿದರು. ಎಂ. ಜಗನ್ನಾಥ ನಿರ್ವಹಿಸಿದರು.