ವಾಕ್‌ – ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿಧಾನಮಂಡಲ ಅಡ್ಡ ಬರಬಹುದೇ?


Team Udayavani, Mar 29, 2017, 3:45 AM IST

vidhana.jpg

ಸುದ್ದಿ ಮಾಧ್ಯಮಗಳಿಗೆ ನಿಯಮ – ನಿರ್ಬಂಧ ರೂಪಿಸುವ ಪ್ರಸ್ತಾವ ರಾಜ್ಯದಲ್ಲಿ ಮಾಧ್ಯಮ ಮಂದಿಯ ನಡುವೆ ವಾಕ್‌ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯನ್ನು ಎತ್ತಿದೆ. ಈ ವಿಚಾರದಲ್ಲಿ ವಿಧಾನಮಂಡಲದ ಹಸ್ತಕ್ಷೇಪ ಅಸಾಧ್ಯ ನಿಜ. ಆದರೆ ಇದೇವೇಳೆ ಮಾಧ್ಯಮಗಳೂ ವಿವೇಚನೆಯಿಂದ ಇರಬೇಕಲ್ಲವೇ? ಜನಪ್ರತಿನಿಧಿಗಳು ವಿವೇಕಿಗಳೂ ವಿನೀತರೂ ಆಗಿರಬೇಕಲ್ಲವೆ?

“ಸುದ್ದಿ ಮಾಧ್ಯಮಗಳಿಗೆ ನಿಯಮ-ನಿರ್ಬಂಧಗಳನ್ನು ರೂಪಿಸುವುದಕ್ಕಾಗಿ’ ಸದನ ಸಮಿತಿಯೊಂದನ್ನು ಅಸ್ತಿತ್ವಕ್ಕೆ ತರುವ ಕುರಿತ ರಾಜ್ಯ ವಿಧಾನಸಭೆಯ ಸ್ಪೀಕರ್‌ ಕೆ.ಬಿ. ಕೋಳಿವಾಡ ಅವರ ಪ್ರಸ್ತಾವಕ್ಕೆ ವಿಪರೀತವೆಂಬಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಇಲ್ಲಿ ಮುಖ್ಯವಾದ ಪ್ರಶ್ನೆಯೊಂದಿದೆ. ಸಂವಿಧಾನ ಪ್ರಣೀತ ವಾಕ್‌ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದಂಥ ಮೂಲಭೂತ ಹಕ್ಕಿನ ವಿಚಾರದಲ್ಲಿ ಯಾವುದೇ ರಾಜ್ಯದ ವಿಧಾನಮಂಡಲ ಹಸ್ತಕ್ಷೇಪ ಮಾಡಲು ಸಾಧ್ಯವೆ?- ಇಲ್ಲ. ನಮ್ಮ ಸಂಸತ್ತು ಕೂಡ ಮೂಲಭೂತ ಹಕ್ಕುಗಳ ವಿಚಾರದಲ್ಲಿ ಕೈ ಹಾಕುವಂತಿಲ್ಲ. ವಿಶೇಷವಾಗಿ ಖ್ಯಾತಿವೆತ್ತಿರುವ ಕೇಶವಾನಂದ ಭಾರತಿ (ಎಡನೀರು ಮಠ)ಯವರ ಪ್ರಕರಣದ‌ ತೀರ್ಪಿನಲ್ಲಿ (1973) ಸರ್ವೋಚ್ಚ ನ್ಯಾಯಾಲಯ ಸಂವಿಧಾನ ಮೂಲಭೂತ ಲಕ್ಷಣಗಳನ್ನು ಸ್ಪಷ್ಟವಾಗಿ ನೆನಪಿಸಿಕೊಟ್ಟು ಆದೇಶ ಹೊರಡಿಸಿದ್ದು ಎಲ್ಲರಿಗೂ ನೆನಪಿದೆ. ಹೀಗಿರುತ್ತ ಸುದ್ದಿ ಮಾಧ್ಯಮದ ಮಂದಿಯ ಭೀತಿಗೆ ಯಾವುದೇ ಆಧಾರವಿಲ್ಲ ಎಂದೇ ಹೇಳಬೇಕಾಗುತ್ತದೆ. ಸುದ್ದಿ ಚಾನೆಲ್‌ಗ‌ಳ ಮೇಲೆ ನಿಯಂತ್ರಣ ಹೇರಬೇಕೆಂಬ ಯೋಚನೆ ನಮ್ಮ ವಿಧಾನಮಂಡಲಕ್ಕೆ ಹೊಳೆದಿರುವುದು ಇದೇ ಮೊದಲ ಬಾರಿ. ತುರ್ತು ಪರಿಸ್ಥಿತಿಯ ದಿನಗಳಲ್ಲಿ ಈ ಅಂಕಣಕಾರ ರಾಜ್ಯ ವಿಧಾನ ಮಂಡಲದ ಕಲಾಪಗಳನ್ನು ವರದಿ ಮಾಡುತ್ತಿದ್ದ ಸಂದರ್ಭಗಳಲ್ಲಿ ಕೂಡ, ಸದನವನ್ನು ಪ್ರವೇಶಿಸದಂತೆ ಪತ್ರಕರ್ತರಿಗೆ “ನಿಷೇಧ’ವಿತ್ತೇ ಹೊರತು, ಅವರ ಕೆಲಸವನ್ನು ನಿಯಂತ್ರಿಸುವ ಮಾತು ಕೇಳಿಬಂದಿಲ್ಲ. ಕೆಲವು ರಾಜ್ಯಗಳಲ್ಲಷ್ಟೇ ವಿಧಾನಮಂಡಲದ ಎರಡೂ ಸದನಗಳು ಮಾಧ್ಯಮ ಪ್ರತಿನಿಧಿಗಳ ಗ್ಯಾಲರಿಗಳನ್ನು ಸದನದ ಅವಿಭಾಜ್ಯ ಅಂಗವೆಂಬಂತೆ ಹೊಂದಿವೆ; ಇಂಥ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಎರಡೂ ಸದನಗಳಲ್ಲಿ ಸಚಿವರು ಹಾಗೂ ಶಾಸಕರಿಂದ ಪತ್ರಕರ್ತರನ್ನು ಪ್ರತ್ಯೇಕಿಸಿರುವುದು ಕೇವಲ ಮರದ ಒಂದು ತಡೆಗಟ್ಟೆಯಷ್ಟೆ. ಸದನದ ಸದಸ್ಯರ ಹಕ್ಕಿಗೆ ಚ್ಯುತಿ ತಂದದ್ದಕ್ಕಾಗಿ ಪತ್ರಕರ್ತರಿಗೆ “ಎಚ್ಚರಿಕೆ’ ನೀಡಲಾದ ಘಟನೆ ನಡೆದಿರುವುದು ಅಪರೂಪಕ್ಕಷ್ಟೆ. ಇಂಥ ಒಂದು ಪ್ರಕರಣ 1953ರಲ್ಲಿ ನಡೆದಿತ್ತು. ಸದನದ ಕಲಾಪ ಕುರಿತಂತೆ ಕೆಲ ಟೀಕೆಗಳನ್ನು ಮಾಡಿದ್ದಕ್ಕಾಗಿ ಪ್ರಸಿದ್ಧ ಪತ್ರಕರ್ತ ಪೋತನ್‌ ಜೋಸೆಫ್ ಅವರನ್ನು ಆಗಿನ ಮೈಸೂರು ವಿಧಾನ ಪರಿಷತ್ತಿನ ಸಭಾಧ್ಯಕ್ಷ ಕೆ.ಟಿ. ಭಾಷ್ಯಂ ಸದನ ವಕೀಲರ ಸಮಿತಿಗೆ ಕರೆಸಿಕೊಂಡು “ಎಚ್ಚರಿಕೆ’ ನೀಡಿದ್ದರು.

ಮಾಧ್ಯಮಗಳನ್ನು ಹತೋಟಿಯಲ್ಲಿಡುವ ವಿಧಾನ ಸಭಾಧ್ಯಕ್ಷರ ನಿರ್ಧಾರಕ್ಕೆ ಪ್ರೇರಣೆ ನೀಡಿದ್ದು, ಕೆಲ ಶಾಸಕರು, ಕೆಲವು ಕನ್ನಡ ಟಿ.ವಿ. ಸುದ್ದಿ ವಾಹಿನಿಗಳು ತಮ್ಮ ವಿರುದ್ಧ ಬಿತ್ತರಿಸಿದ ವರದಿಗಳ ಬಗ್ಗೆ ಪರೋಕ್ಷವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ ಪ್ರಸಂಗ. ಹೀಗೆ ಆಕ್ರೋಶ ತೋಡಿಕೊಂಡವರಲ್ಲಿ ಕರ್ನಾಟಕ ಜನತಾ ಪಾರ್ಟಿಯ ಬಿ.ಆರ್‌. ಪಾಟೀಲ್‌ ಹಾಗೂ ಬಿಜೆಪಿಯ ರಾಜು ಕಾಗೆಯಂಥವರಿದ್ದಾರೆ.  ಸುದ್ದಿ ಮಾಧ್ಯಮದ ಮಂದಿ ಅನಗತ್ಯವಾಗಿ ನಮ್ಮ ತೇಜೋವಧೆ ಮಾಡುತ್ತಿದ್ದಾರೆ; ಬೇಜವಾಬ್ದಾರಿಯಿಂದ ವರದಿ ಮಾಡುತ್ತಿದ್ದಾರೆಂದು ಶಾಸಕರು ಪಕ್ಷಭೇದ ಮರೆತು ಆರೋಪಿಸಿದ್ದರು.

ಹಿರಿಯ ಶಾಸಕ ಬಿ.ಆರ್‌. ಪಾಟೀಲ್‌ “”24×7 ಚಾನೆಲ್‌ಗ‌ಳು ದೂರುದಾರರ, ಅಡ್ವಕೇಟ್‌ಗಳ ಹಾಗೂ ನ್ಯಾಯಾಧೀಶರ ಪಾತ್ರಗಳನ್ನು ತಾವೇ ಖುದ್ದು ನಿರ್ವಹಿಸುತ್ತಿವೆ” ಎಂದು ಕೆಂಡಕಾರಿದ್ದರು. ಮೇಲ್ಮನೆಯ ಕಾಂಗ್ರೆಸ್‌ ಸದಸ್ಯ ವಿ. ಎಸ್‌. ಉಗ್ರಪ್ಪ, “”ಟಿ.ವಿ. ಚಾನೆಲ್‌ಗ‌ಳು ಬೇಕೆಂದೇ ರಾಜಕಾರಣಿಗಳ ಮೇಲೆ ವಾಗ್ಧಾಳಿ ನಡೆಸುತ್ತಿವೆ; ಅವು ತಮ್ಮ ಮೇಲೆ ಸ್ವನಿಯಂತ್ರಣ ಹೇರಿಕೊಳ್ಳಬೇಕಾಗಿದೆ ಎಂದು ನ್ಯಾಯವಾಗಿಯೇ ಆಗ್ರಹಿಸುತ್ತಿದ್ದೇನೆ” ಎಂದಿದ್ದರು.

ದುರ್ವರ್ತನೆ ಇಲ್ಲದಿಲ್ಲ: ಸುದ್ದಿ ಮಾಧ್ಯಮಗಳ ಮೇಲೆ ರೇಗಾಟ-ಗೊಣಗಾಟ ನಡೆಸುತ್ತಿರುವ ಕೆಲ ಶಾಸಕರು ಸಾರ್ವಜನಿಕರು, ಪೊಲೀಸ್‌ ಸಿಬ್ಬಂದಿ ಹಾಗೂ ಸರಕಾರಿ ಅಧಿಕಾರಿಗಳ ಮೇಲೆ ಅನಗತ್ಯವಾಗಿ ಹರಿಹಾಯ್ದವರೇ ಎಂಬುದು ನಿಸ್ಸಂದೇಹ. ಇವರೆಲ್ಲ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್‌ಸಾಲಿನಲ್ಲಿ ನಿಲ್ಲಬೇಕಾದವರು. ನಮ್ಮ ಹೆಚ್ಚಿನ ಶಾಸಕರ ಒಂದು ಸಮಸ್ಯೆಯೆಂದರೆ, ತಾವು ಕಾನೂನಿಗೆ ಅತೀತರೆಂದೂ ತಮ್ಮ ಕ್ಷೇತ್ರಗಳ ಮಹಾರಾಜರುಗಳೇ ತಾವೆಂದೂ ಭಾವಿಸಿರುವುದು. ಈ ಹಿಂದೆಯೂ ನಮ್ಮಲ್ಲಿ ನಯವಿನಯದ ಗಂಧಗಾಳಿಯಿಲ್ಲದಿದ್ದ ಶಾಸಕರು ಹಾಗೂ ಸಚಿವರಿದ್ದರು. ಈ ಹಿಂದೆಲ್ಲ ತಪ್ಪೆಸಗಿದ ಸಚಿವರು ಹಾಗೂ ಶಾಸಕರ ಲೀಲೆಗಳನ್ನು ವರದಿ ಮಾಡುವಾಗ ಅಂಜುಕುಳಿತನ ತೋರುತ್ತಿದ್ದ, ಯಾವ ಕಾರಣಕ್ಕೋ ಹಿಂಜರಿಯುತ್ತಿದ್ದ ಪತ್ರಿಕೆಗಳಿದ್ದವು. ಅಧಿಕಾರದಲ್ಲಿದ್ದ ಮಂದಿಯ ವಿರೋಧ ಕಟ್ಟಿಕೊಳ್ಳುವುದು ಅವುಗಳಿಗೆ ಬೇಕಿರಲಿಲ್ಲ. ತುರ್ತು ಪರಿಸ್ಥಿತಿಯ ಮಾತು ಬಿಡಿ, ಸಾಮಾನ್ಯ ದಿನಗಳಲ್ಲೂ ಅಧಿಕಾರಸ್ಥರೆದುರು ಅವು ಅಂಬೆಗಾಲಿಟ್ಟುಕೊಂಡೇ ಸಾಗುತ್ತಿದ್ದವು.  ಪತ್ರಿಕೋದ್ಯಮದಲ್ಲಿ ಎದೆಗಾರಿಕೆಯ ಸಂಸ್ಕೃತಿಯನ್ನು ಹುಟ್ಟು ಹಾಕಿದ್ದು ಸಚಿತ್ರ ನಿಯತಕಾಲಿಕೆಗಳು, ಆಮೇಲೆ ಸುದ್ದಿ ಚಾನೆಲ್‌ಗ‌ಳು. ದುರದೃಷ್ಟವಶಾತ್‌ ಇವುಗಳ ನಿರ್ಭೀತ ಕಾರ್ಯಶೈಲಿಯನ್ನು “ಪೀತ ಪತ್ರಿಕೋದ್ಯಮ’ವೆಂದು ಆಗಾಗ ಬಣ್ಣಿಸಲಾಗುತ್ತದೆ. 

ಮಾಧ್ಯಮಗಳೂ ಅಪವಾದವಲ್ಲ: ಆದರೆ ರಾಷ್ಟ್ರೀಯ ಚಾನೆಲ್‌ಗ‌ಳನ್ನೂ ಒಳಗೊಂಡಂತೆ ಕೆಲ ಸುದ್ದಿ ವಾಹಿನಿಗಳ ನಿರೂಪಕರು ವರ್ತಿಸುವ, ಕಾರ್ಯಧಿಕ್ರಮಧಿಗಳನ್ನು ನಡೆಸಿಕೊಡುವ ಕ್ರಮದ ಬಗ್ಗೆ ಕೆಲ ಗೌರವಾರ್ಹ ರಾಜಧಿಕಾರಣಿಗಳು ನೀಡಿರುವ ಅಭಿಪ್ರಾಯಗಳು ತುಂಬ ಅರ್ಥಪೂರ್ಣವಾಗಿವೆ. ತನ್ನ ಹಟಮಾರಿತನ ಹಾಗೂ ಅನಾಗರಿಕ ವರ್ತನೆಯಿಂದಲೇ ಸುಪರಿಚಿತವಾಗಿರುವ ಇಂಗ್ಲಿಷ್‌ ಚಾನೆಲ್‌ ಒಂದರ ಚರ್ಚಾ ಕಾರ್ಯಕ್ರಮ ನಿರೂಪಕನನ್ನು ಈಗ ಕನ್ನಡ ಸುದ್ದಿ ವಾಹಿನಿಗಳವರು ಮಾದರಿಯಾಗಿ ಸ್ವೀಕರಿಸಿರುವಂತಿದೆ. ಬಾಯ್ತುಂಬ ಸ್ವಂತ ಅಭಿಪ್ರಾಯಗಳನ್ನು ಉಗ್ಗಡಿಸುತ್ತಿದ್ದ ಈ ನಿರೂಪಕ, ಚರ್ಚೆಗೆ ಬಂದವರ‌ ಮೇಲೆ ಕಿರಿಧಿಚಾಡುತ್ತ, ತನ್ನ ಬಳಿ ಸಾಕಷ್ಟು ಪುರಾವೆಗಳಿರುವುದಾಗಿ ಹೇಳಿಕೊಳ್ಳುತ್ತಿದ್ದರು. ಆದರೆ ಲಿಖೀತ ಪುರಾವೆಗಳನ್ನು ಪ್ರದರ್ಶಿಸಿದ್ದು ಕಡಿಮೆ ಅಥವಾ ಅವುಗಳನ್ನು ಮಾತಿನ ನಡುವೆ ಝಳಪಿಸುತ್ತಿದ್ದರಾದರೂ ಹೆಚ್ಚಿನ ಸಂದರ್ಭಗಳಲ್ಲಿ ಅವು ಸಂದರ್ಭಕ್ಕೆ ಹೊಂದದ “ಮಾಹಿತಿ ಮೂಲ’ಗಳಾಗಿರುತ್ತಿದ್ದವು. ಇಂದು ಹೆಚ್ಚಿನ ಸುದ್ದಿ ಚಾನೆಲ್‌ಗ‌ಳು ಗಲಾಟೆ ಗೊಂದಲಗಳ ಸಂತೆಮಾಳಗಳಾಗಿವೆ. ನಮ್ಮ ಹೆಚ್ಚಿನ ಸುದ್ದಿ ಚಾನೆಲ್‌ಗ‌ಳು ಚಲನಚಿತ್ರ ಕಲಾವಿದರಿಗೇ ಆದ್ಯತೆ ನೀಡುತ್ತಿರುವುದು ಯಾರ ಗಮನಕ್ಕೂ ಬೀಳದೆ ಹೋಗಿಲ್ಲ! ಇಂಥ ಚಿತ್ರತಾರೆಯರ ಹುಟ್ಟು ಹಬ್ಬಗಳಿಗಾಗಿ ಪೆದ್ದು ಪೆದ್ದಾದ ಹಾಗೂ ಹಾಸ್ಯಾಸ್ಪದ ಹೇಳಿಕೆಗಳಿಗಾಗಿ ಇವು ಹೆಚ್ಚಿನ ಸಮಯವನ್ನು ಮೀಸಲಿಡುತ್ತವೆ. ಹೀಗೆ ಮಾಡಿದರೆ ತಮ್ಮ ಟಿಆರ್‌ಪಿ ಏರುತ್ತದೆ ಎಂಬ ಲೆಕ್ಕಾಚಾರ ಈ ಚಾನೆಲ್‌ಗ‌ಳದು.

ಚಾನೆಲ್‌ ವಿರುದ್ಧ ದೂರಿಗೆ ವೇದಿಕೆಯಿಲ್ಲ: ಯಾವುದಾದರೂ ಟಿ.ವಿ. ಚಾನೆಲ್‌ನಿಂದ ನಾಗರಿಕನೊಬ್ಬನಿಗೆ ಅನ್ಯಾಯವಾದರೆ ಈ ಬಗ್ಗೆ ದೂರು ಸಲ್ಲಿಸಲು ಸೂಕ್ತವಾದ ಸಂಸ್ಥೆಧಿಯೊಂದಿಲ್ಲ ಎಂಬ ವಾಸ್ತವವನ್ನು ನಾವು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಇರುವ ಒಂದೇ ದಾರಿಯೆಂದರೆ ಸಿವಿಲ್‌ ಅಥವಾ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸುವುದು. ಟಿವಿ ಚಾನೆಲ್‌ಗ‌ಳು ಸುದ್ದಿ ಪತ್ರಿಕೆಗಳಂತಲ್ಲ. ಅವು ತಮ್ಮ ಸುಳ್ಳು ವರದಿ ಪ್ರಸಾರಕ್ಕಾಗಿ ಕ್ಷಮೆಯನ್ನೂ ತೋರುವುದಿಲ್ಲ; “ಸರಿಪಡಿಸಿದ’ ವರದಿಯನ್ನೂ ಪ್ರಸಾರಿಸುವುದಿಲ್ಲ. ಭಾರತೀಯ ಮಾಧ್ಯಮ ಕ್ಷೇತ್ರದಲ್ಲಿನ ಕೆಲವು ಎಡವಟ್ಟಿನ ಅಥವಾ ವಕ್ರ ನಡೆಯ ಪ್ರಭೃತಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮಾತು ಬಂದಾಗ ಎದುರಾಗುವ ಅಚ್ಚರಿಯ ಅಂಶವೊಂದಿದೆ. ಅದೆಂದರೆ, ಟಿವಿ ಮತ್ತು ರೇಡಿಯೋ ವಾಹಿನಿಗಳು ಭಾರತೀಯ ಪತ್ರಿಕಾ ಮಂಡಳಿಯ ವ್ಯಾಪ್ತಿಯೊಳಗೆ ಬರುವುದಿಲ್ಲ. ಪತ್ರಿಕಾ ಮಂಡಳಿ ಕ್ರಮ ಕೈಗೊಳ್ಳುವುದು ದಿನಪತ್ರಿಕೆಗಳ ಮೇಲೆ ಮಾತ್ರ. ಟಿವಿ ಮಾಧ್ಯಮ ತನಗೆ ತನ್ನದೇ ಕಾನೂನು; ತಾನೇ ಕಾನೂನು ಎಂಬ ರೀತಿಯಲ್ಲಿ ವರ್ತಿಸುತ್ತಿದೆ. ಪತ್ರಿಕಾ ಮಂಡಳಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತ ಬಂದಿರುವ ಮಹನೀಯರು ಟಿವಿ ಹಾಗೂ ರೇಡಿಯೋಗಳನ್ನು ಮಂಡಳಿಯ ನಿಯಂತ್ರಣದ ವ್ಯಾಪ್ತಿಯೊಳಗೆ ಸೇರಿಸುವಂತೆ ವಿನಂತಿಸುತ್ತಲೇ ಬಂದಿದ್ದಾರೆ. ಮಂಡಳಿಯ ಹಿಂದಿನ ಅಧ್ಯಕ್ಷ ನ್ಯಾ. ಮಾರ್ಕಂಡೇಯ ಕಾಟುj ಅವರು ಈ ಬಗ್ಗೆ ಅತ್ಯಂತ ದೊಡ್ಡ ಗಂಟಲಲ್ಲಿ ಒತ್ತಾಯಿಸಿದರು. ಮಂಡಳಿಯ ಇನ್ನೊಬ್ಬ ಮಾಜಿ ಅಧ್ಯಕ್ಷ ನ್ಯಾ. ಪಿ.ಬಿ. ಸಾಮಂತ್‌ ಅವರು ಇಂಗ್ಲಿಷ್‌ ಚಾನೆಲ್‌ ವಿರುದ್ಧ 100 ಕೋ. ರೂ.ಗಳ ಮಾನನಷ್ಟ ಮೊಕದ್ದಮೆ ಹೂಡಿ ಗೆದ್ದಿದ್ದರು. ಇಂಗ್ಲಿಷ್‌ ಟಿವಿ ಸುದ್ದಿ ವಾಹಿನಿಗಳಿಗೆ ಸ್ವ-ನಿಯಂತ್ರಣ ಘಟಕವೊಂದು ಇದ್ದರೂ ಅದು ಇದ್ದರೂ ಇಲ್ಲದಂತೆಯೇ ಆಗಿದೆ. 

ರಾಜ್ಯದ್ದೇ ಪ್ರತ್ಯೇಕ ಪತ್ರಿಕಾ ಮಂಡಳಿ: ಕರ್ನಾಟಕ ಸರಕಾರ ಸುದ್ದಿ ಮಾಧ್ಯಮಕ್ಕಾಗಿ ನಿಯಮಾವಳಿ ರೂಪಿಸಲು ಸದನ ಸಮಿತಿಯೊಂದನ್ನು ಅಸ್ತಿತ್ವಕ್ಕೆ ತರುವ ಬದಲಿಗೆ, ತನ್ನದೇ ಪತ್ರಿಕಾ ಮಂಡಳಿ ಸ್ಥಾಪಿಸಲಿ ಎಂಬ ಸಲಹೆಯೂ ವ್ಯಕ್ತವಾಗಿದೆ. ಈ ಮಂಡಳಿ ಅಸ್ತಿತ್ವಕ್ಕೆ ಬಂದರೆ ಅದು ತನ್ನ ಶಿಸ್ತು-ನಿಯಂತ್ರಣದ ವ್ಯಾಪ್ತಿಯೊಳಗೆ ಟಿವಿ ಹಾಗೂ ಮುದ್ರಣ ಮಾಧ್ಯಮವನ್ನು ಸೇರಿಸಿಕೊಳ್ಳಬೇಕು. ಮಹಾರಾಷ್ಟ್ರದಲ್ಲಿ ಇದುವರೆಗೆ ಬಂದ ಎರಡು ಸರಕಾರಗಳು ಇಂಥ ಮಂಡಳಿಯೊಂದನ್ನು ಸ್ಥಾಪಿಸಲು ಎರಡು ಬಾರಿ ಯತ್ನಿಸಿದ್ದವು. ಆದರೆ, ಭಾರತೀಯ ಪತ್ರಿಕಾ ಮಂಡಳಿ ಈಗಾಗಲೇ ಅಸ್ತಿತ್ವದಲ್ಲಿರುವುದರಿಂದ ಇದರ ಅಗತ್ಯವಿಲ್ಲವೆಂಬ ಕಾರಣ ನೀಡಿ ಪತ್ರಿಕಾ ಸಂಪಾದಕರ ತಂಡವೊಂದು ವಿರೋಧ ವ್ಯಕ್ತಪಡಿಸಿತ್ತು.  ಈ ದೇಶದಲ್ಲಿ ಟಿವಿ ಸುದ್ದಿ ಚಾನೆಲ್‌ಗ‌ಳನ್ನು ನಿಯಂತ್ರಣಕ್ಕೊಳಪಡಿಸಕೂಡದು ಎಂಬ ವಾದ ಯಾವ ರೀತಿಯಲ್ಲೂ ಸಮರ್ಥನೀಯವಲ್ಲ. ಹಿಂದೆ ನಮ್ಮ ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ ಸರಕಾರ ಮಾನನಷ್ಟ ಕಾಯ್ದೆಯೊಂದನ್ನು ಜಾರಿಗೆ ತರಲು ಯೋಚಿಸಿದ್ದರೆಂಬುದನ್ನು ಹೇಗೆ ತಾನೆ ಮರೆಯೋಣ?

– ಅರಕೆರೆ ಜಯರಾಮ್‌

ಟಾಪ್ ನ್ಯೂಸ್

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.