ಸುಕ್ಕಾದ ಸ್ತ್ರೀ ವಾದಕ್ಕೆ ಇಸ್ತ್ರೀ ಬೇಕಾಗಿದೆ


Team Udayavani, Jul 19, 2017, 7:37 AM IST

19-ANKANA-2.gif

ಕೆಲವು ಮಹಿಳಾವಾದಿಗಳು ಕಮ್ಮಟಗಳಲ್ಲಿ ಸೆಮಿನಾರುಗಳಲ್ಲಿ ಸ್ತ್ರೀ ಮದುವೆಯಾಗದೇ ಉಳಿಯುವುದೊಂದೇ ಶೋಷಣೆಗಳಿಂದ ವಿಮೋಚನೆಯ ಹಾದಿ ಎಂದು ಬಿಂಬಿಸುತ್ತಾರೆ. ಒಂಟಿಯಾಗಿ ಸಮಾಜ ಎದುರಿಸುವ ಗಟ್ಟಿತನ ಇದ್ದವರು ಅದನ್ನೇ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಬೇರೆಯವರನ್ನೂ ಪ್ರೇರೇಪಿಸುವುದು ಅವರನ್ನು ತಪ್ಪು ದಾರಿಗೆಳೆದಂತೆಯೇ.

ಕಳೆದ ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಒಂದು ತೆಲುಗು ವೀಡಿಯೋ ತುಣುಕು ನೆನಪಿರಬಹುದು. ಯುವ ದಂಪತಿಗಳ ಜೀವನ ಶೈಲಿಯ ಕುರಿತಾದದ್ದು. ಆಕೆಯ ಯಾವ ಭಾವಗಳಿಗೂ ಸ್ಪಂದಿಸದ ಆತನಿಗೆ ಮೊಬೈಲ್‌, ಟಿವಿ, ಕ್ರಿಕೆಟ್‌ ಮತ್ತು ಆಫೀಸ್‌ ಮಾತ್ರ ತನ್ನ ಕಾರ್ಯ ಕ್ಷೇತ್ರ. ಆಕೆಯ ಆರೋಗ್ಯ ಕೈಕೊಟ್ಟಾಗಲೂ ಅಡಿಗೆ ತನ್ನ ಕಾರ್ಯ ವ್ಯಾಪ್ತಿಯಲ್ಲಿ ಬರುವುದಿಲ್ಲವೆಂಬಂತೆ ಆತ ಪೋಸ್‌ ಕೊಡುವುದು. ಆಕೆ ಕೊರಗುವುದೇ ತನ್ನ ಜನ್ಮ ಸಿದ್ಧ ಹಕ್ಕು ಎಂದೆಣಿಸುವುದು. ವಿಷಾದವೆಂದರೆ, ಆ ವಿಡಿಯೋ ತುಣುಕನ್ನು ಹೆಚ್ಚು ಜನರಿಗೆ ತಲುಪಿಸುವ ಜವಾಬ್ದಾರಿ ಮತ್ತು ಅವಶ್ಯಕತೆ ಇದ್ದದ್ದು ಪುರುಷರಿಗೆ. ತಮ್ಮವರಲ್ಲಿ ಸೂಕ್ಷ  ಪ್ರಜ್ಞೆಯನ್ನು ಬಡಿದೆಬ್ಬಿಸಬೇಕಾಗಿದ್ದ ಪುರುಷರು ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ತನ್ನಂತೆ ಕೊರಗುವ ನೂರಾರು ಜೀವಗಳಿವೆ ಎಂದು ಕೇವಲ ಮಹಿಳೆಯರು ಅದನ್ನು ಆದಷ್ಟೂ ಜನರಿಗೆ ಫಾರ್ವರ್ಡ್‌ ಮಾಡಿ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮೆರೆದಿರುವುದು!

ಈ ರೀತಿಯ ಸಂದೇಶ ಕೊಡುವ ವಿಡಿಯೋಗಳನ್ನು ನಾವು ಮಹಿಳೆಯರು ಫಾರ್ವರ್ಡ್‌ ಮಾಡುವ ಅವಶ್ಯಕತೆ ಇದೆಯೇ? ಎಂಬ ಗೆಳತಿಯ ಪ್ರಶ್ನೆಗೆ ಉತ್ತರ ಹುಡುಕಲು ಹೊರಟಾಗ ಮನಸ್ಸಿಗೆ ಬಂದ ವಿಚಾರಗಳು ಹೀಗಿವೆ. 

ಇಪ್ಪತ್ತನೆ ಶತಮಾನದಲ್ಲೇ ಆರಂಭವಾದ ಸ್ತ್ರೀ ನಿಷ್ಠ ಚಿಂತನೆಗಳು, ವಿಮರ್ಶೆಗಳು-ಆಂತರಿಕ ವಿರೋಧಗಳು ಹಾಗೂ ಭಿನ್ನಭಿಪ್ರಾಯಗಳಿಂದಾಗಿ ಕಾಲ ಕಾಲಕ್ಕೆ ಬದಲಾಗುತ್ತಾ ಬಂದಿವೆ. ಸರಳವಾಗಿ ವ್ಯಾಖ್ಯಾನಿಸುವುದಾದರೆ ಸ್ತ್ರೀವಾದವನ್ನು ಮಹಿಳೆಯರ ಹಕ್ಕುಗಳ ಸಮರ್ಥನೆ ಎನ್ನಬಹುದು. ಪಾಶ್ಚಾತ್ಯರಲ್ಲಿ  ಮೂರು ಅಲೆಗಳಲ್ಲಿ ಗುರುತಿಸಿಕೊಳ್ಳುವ ಸ್ತ್ರೀವಾದ (First wave, Second Wave and Third Wave Feminism) ಮಹಿಳೆಯರ ರಾಜಕೀಯ ಅರ್ಥಿಕ ಹಾಗೂ ಸಾಮಾಜಿಕ ಹಕ್ಕುಗಳಿಗಾಗಿ ನಡೆಸುವ ಹೋರಾಟ ಎಂದೆನಿಸಿಕೊಂಡಿತು. ಸಿಮೊನ್‌ ದೆ ಬೋವ, ಕೇಟ್‌ ಮಿಲ್ಲೆಟ್‌, ಎಲೆನ್‌ ಶೋವಾಲೆರ್‌, ಆಲಿಸ್‌ ವಾಕರ್‌, ಥರ್ಡ್‌ ವೇವ್‌ ಫೆಮಿನಿಸಂನ ಹರಿಕಾರಳಾದ ರೆಬೆಕ್ಕಾ ವಾಕರ್‌ವರೆಗೂ ವ್ಯಾಪ್ತಿ ಮತ್ತು ಮಿತಿಯಿಂದಾಗಿ ಸ್ತ್ರೀ ವಾದ ಬೇರೆ ಬೇರೆ ವ್ಯಾಖ್ಯಾನವನ್ನು ಕಂಡವು. ಅವರ ವಾದವೆಂದರೆ ಪ್ರಾಚೀನ ಕಾಲದಿಂದಲೂ ಮಹಿಳೆಯನ್ನು ಎರಡನೇ ದರ್ಜೆಯ ಪ್ರಜೆಯಾಗೇ ಎಲ್ಲ ಸಮಾಜದಲ್ಲೂ ಕಾಣುತ್ತಿದ್ದಾರೆ. ತಾವು ಅನ್ಯರು ತಾವು ಹೆಣ್ಣು ಎಂದು ಹೇಳಿ ಮುಂದುವರಿಯಬೇಕಾದ ಅನಿವಾರ್ಯತೆಯನ್ನು ಅವರು ಕಟುವಾಗಿ ಟೀಕಿಸುತ್ತಾರೆ. ಈ ವಾದವನ್ನು ಒಪ್ಪದ ಥರ್ಡ್‌ ವೇವ್‌ ಫೆಮಿನಿಸ್ಟ್‌ಗಳು ಸ್ತ್ರೀ ಪುರುಷ ದೈಹಿಕ ಭಿನ್ನತೆಗಳನ್ನು ಒಪ್ಪಿಕೊಂಡು, ನಮ್ಮ ಈ ದೇಹ ರಚನೆ (biological determination)ಯಿಂದಾಗಿ ನಾವು ಪುರುಷರಿಗಿಂತ ತುಸು ಹೆಚ್ಚೇ ಎಂದು ಬಿಂಬಿಸುವವರು. ಪ್ರಸ್ತುತದಲ್ಲಿ ಅವಶ್ಯಕತೆಯಿರುವುದು ಇಂಥದೊಂದು ಚಿಂತನೆಯೇ. ಇಬ್ಬರೂ ಸಮಾನರೇನಲ್ಲ ಎಂದು, ಸಮಾನತೆಯ ಹೋರಾಟವನ್ನು ದಾಟಿ ನಮ್ಮನ್ನು ನಾವು ಸ್ಥಾಪಿಸಿಕೊಳ್ಳುವುದು.

ಭಾರತದಲ್ಲೂ ಸ್ತ್ರೀವಾದವನ್ನು ಬೆಳೆಸುವಾಗ ಮಹಿಳೆಯರು ವೈಚಾರಿಕ ದ್ವಂದ್ವಕ್ಕೆ ಕಟ್ಟು ಬೀಳುತ್ತಾರೆ. ಸಮಾಜ ವಿಧಿಸಿದ ಕಟ್ಟುಪಾಡುಗಳಿಂದಾಗಿ ತನ್ನ ಅಸ್ತಿತ್ವವನ್ನೇ ಗಾಳಿಗೆ ತೂರಿದ್ದಾಳೆ ಎಂಬಂತೆ ವಾಸ್ತವವನ್ನು ಬಿಂಬಿಸಿ ಪುರುಷ ದ್ವೇಷವನ್ನು ಸಾಧಿಸುವ ಒಂದು ಪಂಥ. ವಿಶಿಷ್ಟವಾದ ಭಾರತೀಯ ಸಂಸ್ಕೃತಿ ಹಾಗು ಕುಟುಂಬ ಪದ್ಧತಿಯನ್ನು ಗೌರವಯುತವಾಗಿ ಕಾಣುವ ಇನ್ನೊಂದು ಪಂಥ. ಮೊದಲ ಪಂಥದವರ ವಾದ ಕೊನೆ ಮುಟ್ಟುವುದು ಸ್ತ್ರೀಯ ವಿಭಿನ್ನ ದೈಹಿಕ ರಚನೆಗೆ ಕಾರಣಕರ್ತನಾದ ಸೃಷ್ಟಿಕರ್ತ ಬ್ರಹ್ಮನೇ ತಮ್ಮೆಲ್ಲ ಬೇಸರ ವಿಷಾದ, ಅಸಹಾಯಕತೆ, ಅಸಮಾನತೆಗೆ ಕಾರಣವೆಂದು. ಅವರ ಪ್ರಕಾರ ನಂತರದ ಅಪರಾಧಿ ಸ್ಥಾನ ಪುರುಷರದ್ದು. ಆದರೆ ಸ್ತ್ರೀವಾದ ಅಧ್ಯಯನದ, ಕೆಲವು ಸಂಘಟನೆಗಳ ಚರ್ಚೆಗಳಲ್ಲಿ ನಡೆಯುವ ವಿಚಾರ ವಿನಿಮಯಕ್ಕೂ ವರ್ತಮಾನಕ್ಕೂ ತುಂಬಾ ವ್ಯತ್ಯಾಸವಿದೆ.. ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸುವುದು, ಅತ್ಯಾಚಾರಿಗಳೆಂಬ ದುಷ್ಟರಿಂದ ಹೆಣ್ಣನ್ನು ರಕ್ಷಿಸುವುದು, ಮಹಿಳೆಯರ ಅರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಬಲಪಡಿಸುವುದು ಮತ್ತು ಅವಶ್ಯವಿದ್ದಾಗ ಕಾನೂನಿನ ರಕ್ಷಣೆಯನ್ನು ಒದಗಿಸುವುದು ಹೀಗೆ ಕೆಲ ಮುಖ್ಯ ಅಜೆಂಡಾಗಳ ಹೊರತಾಗಿ ಉಳಿದ ಹೋರಾಟಗಳು ನಡೆಯುತ್ತಿವೆ. ಇಂದು ನಮ್ಮ ನಿಮ್ಮೆಲ್ಲರ ನಡುವೆ ಸ್ತ್ರೀವಾದಿಗಳೆಂದು ಕರೆಸಿಕೊಳ್ಳುವವರು ಚರ್ಚೆಗೆ ಆಯ್ದುಕೊಳ್ಳುವ ವಿಷಯಗಳನ್ನೇ ಗಮನಿಸಿ.

  • ಹೆಸರಿನ ಇನಿಷಿಯಲ್ಸ್‌ಗಳಲ್ಲಿ ಅಪ್ಪನ ಹೆಸರಿರುವುದು ಪ್ರಸ್ತುತ/ಅಪ್ರಸ್ತುತ 
  • ಮದುವೆಯಾದ ಹೆಣ್ಣು ತನ್ನ ಹೆಸರಿನೊಂದಿಗೆ ತನ್ನ ಗಂಡನ ಹೆಸರನ್ನೇಕೆ ಜೋಡಿಸಿಕೊಳ್ಳಬೇಕು? 

ಈ ವಿಚಾರದಲ್ಲಿ ಒಂದು ಅಂಶವನ್ನು ಗಮನಿಸಬೇಕು. ಯಾರೂ ತಮ್ಮ ಹೆಸರಿನೊಂದಿಗೆ ಗಂಡನ ಹೆಸರನ್ನು ಜೋಡಿಸಿಕೊಂಡು ಎಲ್ಲೂ ದಾಖಲಾತಿ ತಿದ್ದುವುದಿಲ್ಲ. ಕೇವಲ ಫೇಸ್ಬುಕ್‌ನಲ್ಲಿ ಹೆಸರು ದಾಖಲಿಸುವಾಗಲೋ ಮತ್ತೆಲ್ಲೋ ಸುರಕ್ಷತಾ ದೃಷ್ಟಿಯಿಂದ ತಮ್ಮ ಗಂಡನ ಹೆಸರನ್ನು ಸೇರಿಸಿಕೊಂಡಿರಬಹುದು. ಅದನ್ನವರು ಯಾರ ಒತ್ತಾಯಕ್ಕೂ ಮಾಡಿರುವುದಿಲ್ಲ. ಸುರಕ್ಷತಾ ದೃಷ್ಟಿಯಿಂದ ತಮ್ಮ ಖುಷಿಗೆ ತಾವು ಮಾಡಿಕೊಂಡ ವ್ಯವಸ್ಥೆಯಷ್ಟೇ. ಈ ವಿಷಯವಾಗಿ ಪುಟಗಟ್ಟಲೆ ಚರ್ಚಿಸುವವರ್ಯಾರೂ ಈಗ ಕಾನೂನಿನಲ್ಲಿ ಹೆಸರು ತಿದ್ದುವ, ಬದಲಿಸುವ ಅವಕಾಶವಿದ್ದರೂ ತಮ್ಮ ಹೆಸರಿನೊಂದಿಗೆ ತಂದೆಯ ಬದಲಾಗಿ ತಾಯಿಯ ಹೆಸರನ್ನು ಜೋಡಿಸಿಕೊಳ್ಳದಿರುವುದು ವಿಪರ್ಯಾಸವೇ ಸರಿ. ದಾಖಲಾತಿಗಳಲ್ಲಿ ಬಿಡಿ. ನಾವು ಸೇರಿಸಿಕೊಂಡಂತೆ ಖುಷಿಗಾದರೂ ತಂದೆ/ಗಂಡನ ಬದಲು ತಾಯಿಯ ಹೆಸರನ್ನು ಸೇರಿಸಿಕೊಳ್ಳಬಹುದಿತ್ತು. 

ಅವರ ಚರ್ಚೆಯ ಇನ್ನೊಂದು ವಿಷಯ ಬುರ್ಖಾ ಪದ್ಧತಿ ಮತ್ತು ಹಣೆ ಬಿಂದಿ.. ಈ ಎಲ್ಲ ವಿಷಯಗಳು ಕೊನೆಯಲ್ಲಿ ಸಮಾಪ್ತಿಗೊಳ್ಳುವುದು ಪುರುಷ ಪ್ರಧಾನ ಕುಟುಂಬ ಪದ್ಧತಿ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಹಿಳಾ ಅಸಮಾನತೆ ಎಂಬ ಪದಗುತ್ಛಗಳೊಂದಿಗೆ.
ಸ್ತ್ರೀ ವಾದಿಗಳಿಗೆ ಸಾಥ್‌ ಕೊಡುವ ಕೆಲವು ಸಂಘಟನೆಗಳೂ ಮಾಡುವ ಸಮಾಜ ಸೇವೆಯನ್ನೇ ಗಮನಿಸಿ…ಗಂಡ ಹೆಂಡತಿಯರಲ್ಲಿ ತುಸು ಭಿನ್ನಾಭಿಪ್ರಾಯ ಬಂದರೂ ಅವರ ರಕ್ಷಣೆಗಾಗಿಯೇ ತಾವಿದ್ದೇವೆಂದು ಆದಷ್ಟು ಬೇಗ ಅವರಿಗೆ ವಿಚ್ಛೇದನಕ್ಕೆ ಪ್ರೇರೇಪಿಸುವುದು. ಹೀಗೆ ವಿಚ್ಛೇದನಕ್ಕೆ ಪ್ರೇರೇಪಿಸಿ ತೀರ ಅವಸರವಾಗಿ ವಿಚ್ಛೇದನ ಕೊಡಿಸಿ ನಂತರ 2 ವರ್ಷಗಳಾದ ಮೇಲೆ ಮಹಿಳೆ ಅದೇ ವ್ಯಕ್ತಿಯೊಂದಿಗೆ ಪುನಃ ವಿವಾಹವಾದ ಉದಾಹರಣೆಗಳೂ ಕಣ್ಣ ಮುಂದಿವೆ. ಸ್ತ್ರೀ ವಾದ ಎಂದರೆ ಪುರುಷ ದ್ವೇಷ ಎಂದು ಭಾವಿಸಿರುವ ಕೆಲವು ಮಹಿಳೆಯರು ತಮ್ಮ ಮಕ್ಕಳಲ್ಲೂ ಪುರುಷ ದ್ವೇಷ ಬಿತ್ತುತ್ತಾರೆ. ಆಗ ಆ ಮಕ್ಕಳು ಸಮಾಜವನ್ನು ಗ್ರಹಿಸುವ ಪರಿಯೇ ಭಿನ್ನವಾಗಿರುತ್ತದೆ.

ನಮ್ಮ ಭಾರತೀಯ ಸಂಸ್ಕೃತಿ, ಕುಟುಂಬ ಪದ್ಧತಿ ತನ್ನ ವಿಶೇಷತೆಗಳಿಂದಾಗಿ ಪ್ರಪಂಚದ ಗಮನ ಸೆಳೆಯುತ್ತಿರಬೇಕಾದರೆ ಇಲ್ಲಿ ಕೆಲವು ಮಹಿಳಾವಾದಿಗಳು ಕಮ್ಮಟಗಳಲ್ಲಿ ಸೆಮಿನಾರುಗಳಲ್ಲಿ ಸ್ತ್ರೀ ಮದುವೆಯಾಗದೇ ಉಳಿಯುವುದೊಂದೇ ಎಲ್ಲ ಶೋಷಣೆಗಳಿಂದ  ವಿಮೋಚನೆಯ ಹಾದಿ ಎಂದು ಬಿಂಬಿಸುತ್ತಾರೆ. ಹುಟ್ಟಿದವರೆಲ್ಲರೂ ಮದುವೆಯಾಗಲೇಬೇಕೆಂದು ನಾ ಹೇಳುತ್ತಿಲ್ಲ. ಒಂಟಿಯಾಗಿ ಸಮಾಜ ಎದುರಿಸುವ ಗಟ್ಟಿತನ ಇದ್ದವರು ಅದನ್ನೇ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಬೇರೆಯವರನ್ನೂ ಪ್ರೇರೇಪಿಸುವುದು ಅವರನ್ನು ತಪ್ಪು ದಾರಿಗೆಳೆದಂತೆಯೇ. ಅವರ ಪ್ರಕಾರ ಪರಂಪರಾಗತವಾಗಿ ಬಂದ ಪಿತೃಪ್ರಧಾನ ವ್ಯವಸ್ಥೆಯಲ್ಲಿನ ಶೋಷಣೆಯಿಂದ ವಿಮುಕ್ತಿಗೆ ಹೆಣ್ಣು ಒಂಟಿ ಬದುಕಿಗೆ ಅಂಟಿಕೊಳ್ಳುವುದೊಂದೇ ಕೊನೆಯ ಪರಿಹಾರವಾಗಿದೆ. ಹಾಗಾದರೆ ಯಾರೂ ಹೆಂಡತಿಯಾಗಿ ತಾಯಿಯಾಗಿ ಏನನ್ನೂ ಸಾಧಿಸಿಲ್ಲವೇ ನಮ್ಮ ಸಮಾಜದಲ್ಲಿ? ನಮ್ಮ ಕಣ್ಣೆದುರೇ ಇರುವ ನೂರಾರು ಸಾಧಕಿಯರಿಗೆ ಇದು ಅವಮಾನವಲ್ಲವೆ? ಈ ರೀತಿಯ ಮೊಂಡು ಚರ್ಚೆಗಿಂತ ಮಹಿಳೆಯರಿಗೆ ಹೆರಿಗೆ ರಜೆಯನ್ನು ಎರಡು ವರ್ಷಕ್ಕೇರಿಸಿ, ಅಪ್ಪನಾಗುವ ಪುರುಷರಿಗೂ ಕನಿಷ್ಠ ಒಂದು ತಿಂಗಳಾದರೂ ಕಡ್ಡಾಯ ಪಿತೃತ್ವ ರಜೆ ನೀಡಿ ಎಂದು ಸರ್ಕಾರಕ್ಕೆ ಸವಾಲು ಹಾಕಿ ಧರಣಿ ಕೂತು ಹೋರಾಟ ಮಾಡಿದ್ದರೆ ಮಹಿಳೆಯರಿಗೆ ನಿಜವಾದ ನ್ಯಾಯ ಒದಗಿಸಿದಂತಾಗುತ್ತಿತ್ತು. ಸ್ತ್ರೀ ವಾದಕ್ಕೆ ಮಹಿಳಾಪರ ಸಂಘಟನೆಗಳಿಗೆ ಒಂದು ಅರ್ಥ ಇರುತ್ತಿತ್ತು.

ಮಹಿಳಾಪರ ಸಂಘಟನೆಗಳ ಮತ್ತೂಂದು ಧ್ಯೇಯವಾಗಬೇಕಾಗಿರುವುದು, ಹೆಣ್ಣು ತನ್ನನ್ನು ಹೆಂಡತಿಯಾಗಿ ತಾಯಿಯಾಗಿ ಕುಟುಂಬ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಾಗ ಅಲ್ಲಿ ಏಕತಾನತೆಯಿಂದ ಬಳಲಿ ತಾನು ಇನ್ನೂ ಏನೋ ಎಂದು ಹೆಣಗಾಡುತ್ತಿರುವಾಗ ಆಕೆಗೆ ನಮ್ಮ ಸಮಾಜದಲ್ಲಿ “ನಿನ್ನ ನೀನರಿಯಲು ನೂರಾರು ದಾರಿಗಳಿವೆ’ ಎಂದು ತೋರಿಸುವುದು. ಅದಕ್ಕೆ ಪೂರಕವಾದ ತರಬೇತಿ, ಕೌನ್ಸೆಲಿಂಗ್‌ ಏರ್ಪಡಿಸುವುದು. ಆದರೆ ಇವತ್ತಿನ ಸ್ಥಿತಿಯಲ್ಲಿ ಏನಾಗಿದೆಯೆಂದರೆ ಸರಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬಿಡುಗಡೆ ಮಾಡುವ ಅಲ್ಪ ಸ್ವಲ್ಪ ಹಣವನ್ನು ಕೊಳ್ಳೆ ಹೊಡೆದು ತಾವು ಆ ವೃತ್ತಿಯಲ್ಲೂ ಪುರುಷ ಸಮಾನರಂತೆ ಬೀಗುವುದು ನಮ್ಮ ಸಮಾಜದ ದುರಂತ. ಪುರುಷರೊಂದಿಗಿನ ಸಮಾನತೆಯ ಓಟದಲ್ಲಿ ಇಂದಿನ ಮಹಿಳಾ ಹೋರಾಟಗಾರರಿಗೆ ಅಲ್ಲೆಲ್ಲೋ ಅತ್ಯಾಚಾರಕ್ಕೊಳಗಾದ ಹೆಣ್ಣಿನ ಕೂಗು ಕಿವಿಗೆ ಕೇಳಿಸದಾಗಿದೆ. ನಿಜವಾಗಿಯೂ ಸಹಾಯ ಬಯಸುವ ಶೋಷಣೆಗೊಳಗಾದ ಹೆಣ್ಣು ಮಕ್ಕಳಿಗೆ ಇವರ ಸಹಾಯ ಹಸ್ತ ಕೈಗೆಟುಕದಂತಾಗಿದೆ. 

ಮತ್ತೂಂದು ಅಂಶವೆಂದರೆ ಈ “ಇಸಂ’ಗಳಿಗೆ ಕಟ್ಟಿಹಾಕಿಕೊಳ್ಳುವವರು ಹೊಂದಾಣಿಕೆ ಎಂಬ ನಾಲ್ಕಕ್ಷರವನ್ನು ಗಾಳಿಗೆ ತೂರಿದ ಸಮಾಜದ ಮೇಲ್‌ ಸ್ತರದವರೇ ಆಗಿದ್ದಾರೆ. ಸ್ವಾತಂತ್ರ್ಯ, ಸ್ವೇಚ್ಛೆ ಹಾಗೂ ಅದರ ಸಮರ್ಥನೆಯನ್ನು ಮಹಿಳಾ 
ವಾದದೊಂದಿಗೆ ತಳುಕು ಹಾಕಿ ಸಮಾಜದ ದಾರಿ ತಪ್ಪಿಸುವುದರಿಂದ ನಾವು ಇಂದು ಎಚ್ಚೆತ್ತು ಕೊಳ್ಳಬೇಕಾಗಿದೆ. ನಮ್ಮನ್ನು ನಾವು ಹೆಣ್ಣಾಗಿಯೇ ದೇವರ ಅದ್ಭುತ ಸೃಷ್ಟಿ ಎಂದು ಒಪ್ಪಿ ಮುನ್ನಡೆಯಬೇಕಾಗಿದೆ. ಹಾಗೆಂದ ಮಾತ್ರಕ್ಕೆ ನಾವು ಸೂಪರ್‌ ವುಮನ್‌ಗಳಾಗಲು ಹವಣಿಸಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಡೆಗಣಿಸಬೇಕೆಂದಿಲ್ಲ. ಸರಳವಾಗಿ ಹೇಳಬೇಕೆಂದರೆ ನಾವೆಲ್ಲರೂ ಕೆ .ಎಸ್‌.ನ. ದಾಂಪತ್ಯ ಗೀತೆಗಳ ಪ್ರತಿಮೆಗಳಾಗೋಣ, ಶ್ಯಾಮನ ತಾಯಿಯಂತೆ ಮಕ್ಕಳನ್ನು ತಿದ್ದಿ ತೀಡಿ ಸಮಾಜಕ್ಕೆ ಉತ್ತಮ-ಜವಾಬ್ದಾರಿಯುತ ಪ್ರಜೆಗಳನ್ನು ರೂಪಿಸುವ ಪ್ರೀತಿಯ ತಾಯಂದಿರಾಗೋಣ. ಗಂಡು ಮಕ್ಕಳಲ್ಲೂ ಹೆಣ್ಣು ಎಂದರೆ ಪ್ರೀತಿ ಗೌರವ ಭಾವನೆ ಮೊಳೆಯುವಂತೆ ಬೆಳೆಸಿ ಚಿಕ್ಕ ಮಕ್ಕಳಲ್ಲೇ ಪುರುಷ ದ್ವೇಷವೆಂಬ ವಿಷ ಬೀಜವನ್ನು ಬಿತ್ತದೇ ಉತ್ತಮ ಚಿಂತನೆಗಳನ್ನು ಹುಟ್ಟು ಹಾಕಿ ಸಾಮರಸ್ಯದ ಬೀಜ ಬಿತ್ತಿ “ಇಸಂ’ ಮುಕ್ತ ಸಮಾಜದ ರಚನೆಗೆ ನಾಂದಿ ಹಾಡೋಣ.

ವಿದ್ಯಾ ಹೊಸಕೊಪ್ಪ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.