ಮಣೂರಿನಲ್ಲಿ ಮನಸೆಳೆಯುವ ಭತ್ತದ ತಿರಿ
Team Udayavani, Nov 22, 2017, 2:36 AM IST
ದಶಕಗಳ ಹಿಂದೆ ಕರಾವಳಿಗರಿಗೆ ಕೃಷಿಯೇ ಮೂಲ ಕಸುಬಾಗಿದ್ದ ಸಂದರ್ಭ ಬೆಳೆದ ಭತ್ತವನ್ನು ಜೋಪಾನವಾಗಿಡುವ ಸಲುವಾಗಿ ಮನೆಯ ಮುಂದೆ ದೊಡ್ಡದಾದ ಭತ್ತದ ತಿರಿ ನಿರ್ಮಿಸಲಾಗುತಿತ್ತು. ಆದರೆ ಇದೀಗ ಆಧುನಿಕರಣದ ಪರಿಣಾಮ ಕೃಷಿ ಚಟುವಟಿಕೆ ಕುಂಠಿತಗೊಂಡಿದ್ದು, ಬೆಳೆದ ಬೆಳೆಯನ್ನು ನೇರವಾಗಿ ಗದ್ದೆಯಿಂದಲೇ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಭತ್ತದ ತಿರಿ ಎಲ್ಲಾ ಕಡೆ ಮಾಯವಾಗಿದೆ. ಆದರೆ ಕೋಟ ಮಣೂರಿನ ಪ್ರಗತಿಪರ ಕೃಷಿಕ ನರಸಿಂಹ ಅಡಿಗ ಹಾಗೂ ಅವರ ಮಗ ಶಿವಾನಂದ ಅಡಿಗರು ಎಷ್ಟೇ ಕಷ್ಟವಾದರು ತನ್ನ ಹಿಂದಿನವರು ಮಾಡಿಕೊಂಡ ಬಂದ ಕೃಷಿ ಚಟುವಟಿಕೆಯನ್ನು ಮುಂದುವರಿಸಿಕೊಂಡು ಬಂದಿದ್ದು, ಮನೆಯ ಮುಂದೆ
ಬೃಹತ್ ಗಾತ್ರದ ತಿರಿಯನ್ನು ಇಂದಿಗೂ ನಿರ್ಮಿಸುತ್ತಿದ್ದಾರೆ.
ಈ ಬಾರಿ ಭಾರೀ ಗಾತ್ರದ ತಿರಿ
ನರಸಿಂಹ ಅಡಿಗರ ಮನೆಯಲ್ಲಿ ಈ ಬಾರಿ 600ಮುಡಿ (180) ಕ್ವಿಂಟಾಲ್ ಭತ್ತವನ್ನು ಬಳಸಿ, 10ಪೀಟ್ ಉದ್ದ, 46ಪೀಟ್ ಸುತ್ತಳತೆಯ ಭಾರೀ ಗಾತ್ರದ ತಿರಿಯನ್ನು ನ.18ರಂದು ನಿರ್ಮಿಸಲಾಯಿತು. 10ಮಂದಿ ಕೆಲಸದವರು ಹಾಗೂ 40ಮಂದಿ ಕೃಷಿಯಲ್ಲಿ ಆಸಕ್ತಿ ಹೊಂದಿದ ರೈತರು ಇದರ ನಿರ್ಮಾಣದಲ್ಲಿ ಸ್ವಯಂ ಸೇವಕರಾಗಿ ಕೈಜೋಡಿಸಿದರು ಹಾಗೂ ಇದಕ್ಕಾಗಿ ಪರಿಸರದ ಐದು ಮಂದಿ ರೈತರ ಭತ್ತವನ್ನು ಸಂಗ್ರಹಿಸಲಾಯಿತು. ಮುಂದಿನ ತಲೆಮಾರಿಗೆ ದಾಖಲೆಯಾಗಿಡುವ ಸಲುವಾಗಿ ಸಂಪೂರ್ಣ ದಾಖಲೀಕರಣ ಮಾಡಲಾಯಿತು.
ತಿರಿ ನಿರ್ಮಿಸುವ ವಿಧಾನ
ಭತ್ತದ ತಿರಿಯನ್ನು ನಿರ್ಮಿಸಲು ಪ್ರಾವೀಣ್ಯತೆ ಅಗತ್ಯ ಹಾಗೂ ಇದು ಸಂಪೂರ್ಣ ಬೈಹುಲ್ಲಿನಿಂದ ನಿರ್ಮಾಣವಾಗುತ್ತದೆ. ಮೊದಲಿಗೆ ಹುಲ್ಲಿನಿಂದ ಅಡಿಪಾಯ ನಿರ್ಮಿಸಿಕೊಂಡು ಅನಂತರ ಉದ್ದನೆಯ ಬೈಹುಲ್ಲನ್ನು ಮೇಲ್ಮುಖವಾಗಿ ಜೋಡಿಸಲಾಗುತ್ತದೆ ಹಾಗೂ ಬೈಹುಲ್ಲಿನಿಂದ ತಯಾರಿಸಿದ ಹಗ್ಗವನ್ನು ವೃತ್ತಾಕರವಾಗಿ ಸುತ್ತಿ ಮಧ್ಯ ಭಾಗದಲ್ಲಿ ಭತ್ತವನ್ನು ಸಂಗ್ರಹಿಸಲು ವ್ಯವಸ್ಥೆ ಮಾಡಲಾಗುತ್ತದೆ. ಇದರ ಅಡಿ ಭಾಗಕ್ಕೆ ಭತ್ತದ ಹೊಟ್ಟನ್ನು ಹಾಕಿ ಅದರ ಮೇಲೆ ಭತ್ತವನ್ನು ಸುರಿಯಲಾಗುತ್ತದೆ. ತಲೆಯ ಭಾಗಕ್ಕೆ ಹುಲ್ಲಿನಿಂದ ಹೊಡಿಕೆ ನಿರ್ಮಿಸಲಾಗುತ್ತದೆ ಹಾಗೂ ಬುಡಕ್ಕೆ ಮಣ್ಣನ್ನು ಮೆತ್ತಲಾಗುತ್ತದೆ. ಕೊನೆಯದಾಗಿ ರಥದಾಕಾರದ ಆಕರ್ಷಕ ತಿರಿ ಸಿದ್ಧಗೊಳ್ಳುತ್ತದೆ. ಹೀಗೆ ನಿರ್ಮಿಸಿದ ಭತ್ತದ ತಿರಿ ಮನೆಯ ಸೌಂದರ್ಯವನ್ನು ಹೆಚ್ಚಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.
ಭತ್ತಕ್ಕೆ ಭದ್ರತೆ
ತಿರಿಯೊಳಗೆ ಸಂರಕ್ಷಿಸಲ್ಪಟ್ಟ ಭತ್ತ ವರ್ಷ ಕಳೆದರೂ ಹಾಳಾಗುವುದಿಲ್ಲ ಹಾಗೂ ಅದರ ಒಳಗೆ ಸಣ್ಣ ಇರವೆ ಕೂಡ ಪ್ರವೇಶವಾಗದಷ್ಟು ಭದ್ರತೆ ಇರುತ್ತದೆ. ಬೆಲೆ ಕುಸಿತ ಮುಂತಾದ ಸಂದರ್ಭದಲ್ಲಿ ಸಂಗ್ರಹಕ್ಕೆ ಇದೊಂದು ಉತ್ತಮ ವ್ಯವಸ್ಥೆಯಾಗಿದೆ. ಬದಲಾದ ಕಾಲಘಟ್ಟದಲ್ಲಿ ನಮ್ಮ ಸಂಸ್ಕೃತಿ, ಆಚರಣೆಗಳು ಬದಲಾಗುತ್ತಿರುವ ಸಂದರ್ಭ ಭತ್ತದ ತಿರಿಗಳು ಪ್ರದರ್ಶನದ ವಸ್ತುಗಳಾಗಿ ಮಾರ್ಪಟ್ಟಿದೆ. ಮೊದಲು
ಪ್ರತಿ ಮನೆಗಳಲ್ಲಿ ಕಾಣಸಿಗುತ್ತಿದ್ದು ತಿರಿ ಇದೀಗ ನಾಲ್ಕಾರು ಗ್ರಾಮಗಳನ್ನು ಹುಡುಕಿದರು ಕಾಣದಾಗಿದೆ. ಇಂತಹ ಸಂದರ್ಭ ನರಸಿಂಹ ಅಡಿಗ ಹಾಗೂ ಶಿವಾನಂದ ಅಡಿಗರು ಸಾವಿರಾರು ರೂ ವ್ಯಯಿಸಿ 600ಮುಡಿ ತಿರಿ ನಿರ್ಮಿಸಿರುವುದು ದಾಖಲೆಯಾಗಿದೆ.
ತಿರಿ ನೋಡಿ ಹೆಣ್ಣು ಕೊಡುತ್ತಿದ್ದರು !
ಹಿಂದೆ ತಿರಿ ಎನ್ನುವಂತಹದ್ದು ವ್ಯಕ್ತಿಯ ಗೌರವದ ಪ್ರತೀಕವಾಗಿತ್ತು ಹಾಗೂ ಶ್ರೀಮಂತಿಕೆ ಅಳೆಯಲು ಮಾಪನವಾಗಿತ್ತು. ಹೆಣ್ಣು – ಗಂಡಿನ ಸಂಬಂಧ ಬೆಸೆಯುವ ಸಂದರ್ಭ ಮನೆಯ ಮುಂದಿನ ತಿರಿ, ಬೈಹುಲ್ಲಿನ ಕುತ್ತರಿಗಳನ್ನು ನೋಡಿ ಹೆಣ್ಣು ಕೊಡುವ ಸಂಪ್ರದಾಯ ಇತ್ತು. ಆದರೆ ದುಬಾರಿ ವೆಚ್ಚ ತಗಲುವುದರಿಂದ ಹಾಗೂ ಕಾರ್ಮಿಕರ ಕೊರತೆಯಿಂದ ಇದನ್ನು ನಿರ್ಮಿಸುವವರ ಸಂಖ್ಯೆ ಇದೀಗ ತುಂಬಾ ಕ್ಷೀಣಿಸಿದೆ.
ಹಿಂದೆ ಭತ್ತದ ತಿರಿ ರೈತನ ಪ್ರತಿಷ್ಠೆಯ ಸಂಕೇತವಾಗಿತ್ತು. ಭತ್ತವನ್ನು ಹಾಳಾಗದಂತೆ ಸಂಗ್ರಹಿಸಲು ಇದೊಂದು ಉತ್ತಮ ವ್ಯವಸ್ಥೆಯಾಗಿದೆ. ಇದೀಗ ಆಧುನೀಕರಣದ ಪರಿಣಾಮ ಭತ್ತದ ತಿರಿ, ಹುಲ್ಲು ಕುತ್ತರಿ, ಮೇಟಿ ಕಂಬ ಎಲ್ಲವೂ ಮಾಯವಾಗಿದೆ. ನಮ್ಮ ಮುಂದಿನ ಜನಾಂಗಕ್ಕೆ ಇದನ್ನು ಪರಿಚಯಿಸಬೇಕು ಎನ್ನುವ ಉದ್ದೇಶದಿಂದ ನಮ್ಮ ಮನೆಯಲ್ಲಿ ಪ್ರತಿ ವರ್ಷ ಸಾವಿರಾರು ರೂ ಖರ್ಚು ಮಾಡಿ ತಿರಿ ನಿರ್ಮಿಸ್ತುತೇವೆ. ಈ ಬಾರಿ ದಾಖಲೀಕರಣಗೊಳಿಸುವ ಸಲುವಾಗಿ 5ಮಂದಿ ರೈತರಿಂದ ಭತ್ತ ಸಂಗ್ರಹಿಸಿ 600ಮುಡಿ ತಿರಿ ನಿರ್ಮಿಸಿದ್ದೇವೆ.
– ಶಿವಾನಂದ ಅಡಿಗ ಮಣೂರು, ಕೃಷಿಕ
-ರಾಜೇಶ ಗಾಣಿಗ ಅಚ್ಲಾಡಿ, ಕೋಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್