ದೇಶದ ಹಾದಿ ತಪ್ಪಿಸುತ್ತಿದೆ ದ್ವೇಷ
Team Udayavani, Jun 12, 2017, 6:57 PM IST
‘ನರೇಂದ್ರ ಮೋದಿ ಸರ್ಕಾರದ ಅಡಿ ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದ್ದು ಪ್ರಧಾನಿ ತಮ್ಮ ಭರವಸೆಯನ್ನು ಈಡೇರಿಸಲು ವಿಫಲರಾಗಿದ್ದಾರೆ. ಬಿಜೆಪಿ, ಆರ್ಎಸ್ಎಸ್ ಜನರಲ್ಲಿನ ಆತಂಕ ಮತ್ತು ಅಭದ್ರತೆಯನ್ನು ಬಳಸಿಕೊಂಡು ಜನರ ನಡುವೆ ದ್ವೇಷ ಬಿತ್ತುವ ಕೆಲಸ ಮಾಡುತ್ತಿವೆ’ ಎನ್ನುತ್ತಾರೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ. ಅವರು ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆಗೆ ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ…
ದ್ವೇಷವನ್ನು ತಡೆಯುವ ಆಸಕ್ತಿ ತಮಗಿಲ್ಲ ಎನ್ನುವುದನ್ನು ಪ್ರಧಾನಿ ಸ್ಪಷ್ಟವಾಗಿ ಜಾಹೀರುಗೊಳಿಸಿದ್ದಾರೆ. ಬದಲಾಗಿ ಅವರು ಈ ದ್ವೇಷದ ಮೇಲೆಯೇ ಬೆಳೆಯುತ್ತಿದ್ದಾರೆ. ತಮ್ಮ ಭಾಷಣಗಳಲ್ಲಿ ಮೋದಿ 5,000 ವರ್ಷಗಳ ಹಿಂದೆ ಭಾರತ ಗ್ರೇಟೆಸ್ಟ್ ದೇಶವಾಗಿತ್ತು ಎಂದು ಹೇಳುತ್ತಾರೆ. ಬಹಳ ಹುರುಪಿನಿಂದ ಅವರು ಪುರಾಣದ ಹಾರುವ ರಥಗಳು, ಪುರಾತನ ಯುಗದ ಪ್ಲಾಸ್ಟಿಕ್ ಸರ್ಜರಿ ಮತ್ತು ಜೆನಿಟಿಕ್ ಸೈನ್ಸ್ ಬಗ್ಗೆ ಮಾತನಾಡುತ್ತಾರೆ. ಭವಿಷ್ಯವಿರುವುದು ಭೂತ ಕಾಲದಲ್ಲಿ ಎಂದು ನಮ್ಮ ಪ್ರಧಾನಿ ಪದೇ ಪದೇ ಹೇಳುತ್ತಾರೆ. ಆದರೆ ಕೇವಲ ಗತದ ನೆನಪಿನ ಮೇಲೆಯೇ ದೇಶವನ್ನು ನಿರ್ಮಿಸಲು ಸಾಧ್ಯವಿಲ್ಲ.
ನಿಮ್ಮ ಪ್ರಕಾರ ಇಂದು ದೇಶ ಎದುರಿಸುತ್ತಿರುವ ಅತಿದೊಡ್ಡ ಸವಾಲುಗಳೇನು?
– ಅತಿದೊಡ್ಡ ಸವಾಲು ಯಾವುದೆನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ: ದೇಶದಲ್ಲಿ ಅಗತ್ಯ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಇಂದು ಜಗತ್ತಿನಲ್ಲಿ ಅತಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ರಾಷ್ಟ್ರಗಳ ಪೈಕಿ ಚೀನಾ ಮೊದಲನೆಯ ಸ್ಥಾನದಲ್ಲಿದೆ. ಕಳೆದ ಐದು ವರ್ಷಗಳಿಂದ ಅದು ವಾರ್ಷಿಕ 1 ಕೋಟಿ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ಈ ವಿಷಯದಲ್ಲಿ ಭಾರತ ಮತ್ತು ಪಶ್ಚಿಮ ರಾಷ್ಟ್ರಗಳು ವಿಫಲವಾಗಿವೆೆ. ಭಾರತದಲ್ಲಿ ಪ್ರತಿವರ್ಷ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ ಎಂದು ನರೇಂದ್ರ ಮೋದಿ ಭರವಸೆ ನೀಡಿದ್ದರು. ಆ ಭರವಸೆ ಏನಾಯಿತು ಎಂದು ಮೋದಿಯವರನ್ನು ಯುವ ಜನರು ಪ್ರಶ್ನಿಸುತ್ತಿದ್ದಾರೆ. ಇದಷ್ಟೇ ಅಲ್ಲದೆ, ಮೋದಿ ತಮ್ಮ ಪ್ರತಿ ಎರಡನೇ ವಾಕ್ಯದಲ್ಲೂ ಅತ್ಯುತ್ಸಾಹದಿಂದ ನೀಡುವ ಭರವಸೆಗಳೆಲ್ಲ ಈಡೇರಿಲ್ಲವೇಕೆ ಎಂದವರು ಕೇಳುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚು ನಿರುದ್ಯೋಗವನ್ನು ಕೊಟ್ಟಿದ್ದಾರೆ ಪ್ರಧಾನಿ. ವರ್ಷಕ್ಕೆ 1 ಅಥವಾ 2 ಲಕ್ಷ ಉದ್ಯೋಗ ಸೃಷ್ಟಿಯಿಂದ ನಮ್ಮ ಜನರ ಆಕಾಂಕ್ಷೆಗಳು ಈಡೇರವು.
ಉದ್ಯೋಗರಹಿತ ಬೆಳವಣಿಗೆಯು ಒಂದು ರೀತಿಯ ಸಾಮಾಜಿಕ ಅಶಾಂತಿಯೆಂಬ ಅಪಾಯದತ್ತ ನಮ್ಮನ್ನು ದೂಡುತ್ತಿದೆ ಅನಿಸುತ್ತದಾ?
– ಇದು ಯಾವುದೋ ಒಂದು ರೀತಿಯ ಅಪಾಯವಲ್ಲ, ಬದಲಾಗಿ ಇದು ನಮ್ಮನ್ನು ‘ದೌರ್ಬಲ್ಯತೆಯ’ ಅಪಾಯಕಾರಿ ಸ್ಥಿತಿಗೆ ತಂದು ನಿಲ್ಲಿಸುತ್ತಿದೆ. ಕಳೆದ 40-50 ವರ್ಷಗಳಲ್ಲಿ ಭಾರತ ಮತ್ತು ಚೀನಾದಲ್ಲಿ ಹಳ್ಳಿಯಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುವವರ ಸಂಖ್ಯೆ ಅಪಾರ ಪ್ರಮಾಣ ಮುಟ್ಟಿದೆ. ಉತ್ತಮ ಜೀವನ ಮತ್ತು ಉದ್ಯೋಗವನ್ನು ಅರಸಿ ಜನರು ಹಳ್ಳಿಯಿಂದ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಆದರೆ ಇದು ನಿಜಕ್ಕೂ ಭಯ ಹುಟ್ಟಿಸುವಂಥ ಅನುಭವ. ಏಕೆಂದರೆ ಒಮ್ಮೆ ನಗರಗಳಿಗೆ ತಲುಪಿದ ನಂತರ ಈ ಜನರಿಗೆ ತಮಗೆ ಉದ್ಯೋಗ, ಶಿಕ್ಷಣ ಅಥವಾ ಆರೋಗ್ಯ ಸೌಲಭ್ಯಗಳಿಲ್ಲ ಎನ್ನುವುದು ಗೊತ್ತಾಗುತ್ತದೆ.
ಅವರೆಲ್ಲ ತಮ್ಮ ಊರನ್ನು, ಸಮಾಜವನ್ನು, ಸ್ನೇಹ ವಲಯವನ್ನು ಬಿಟ್ಟು ನಗರಗಳಿಗೆ ಬಂದಿರುತ್ತಾರೆ. ಅವರಿಗೆ ವಾಪಸ್ ಹೋಗುವ ದಾರಿಯೇ ಉಳಿದಿರುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಈ ಆಂತರಿಕ ವಲಸಿಗರು ಯಾವ ಮಟ್ಟದ ಭಯ ಮತ್ತು ಆತಂಕ ಎದುರಿಸುತ್ತಿರಬಹುದೋ ಯೋಚಿಸಿ? ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಭಾರತೀಯ ಜನತಾ ಪಾರ್ಟಿಯನ್ನು ಮುನ್ನಡೆಸುತ್ತಿರುವ ಸಿದ್ಧಾಂತವಿದೆಯಲ್ಲ, ಅದು, ಜನರಲ್ಲಿರುವ ಈ ಆತಂಕ ಮತ್ತು ಅಭದ್ರತೆಯನ್ನು ಬಳಸಿಕೊಳ್ಳುತ್ತದೆ. ಆ ಮೂಲಕ ಸಿಟ್ಟು ಮತ್ತು ದ್ವೇಷವನ್ನು ಹರಡುತ್ತಿದೆ. ಈ ಆತಂಕವನ್ನು ಮುಸಲ್ಮಾನರು, ದಲಿತರು, ಇತರೆ ಅಲ್ಪಸಂಖ್ಯಾತರೆಡೆಗಿನ ದ್ವೇಷವಾಗಿ ಅವರು ಬದಲಿಸುತ್ತಿದ್ದಾರೆ. ಒಂದೇ ಆಸಕ್ತಿ ಮತ್ತು ಕನಸಿರುವ ಸಹೋದರರು ಪರಸ್ಪರ ಹೊಡೆದಾಡುವಂತೆ ಮಾಡುತ್ತಿದ್ದಾರೆ. ಆದರೆ ಸಿಟ್ಟು ಮತ್ತು ದ್ವೇಷ ಉದ್ಯೋಗಗಳಾಗಿ ಅಥವಾ ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವಾಗಿ ಪರಿವರ್ತನೆಯಾಗುವುದಿಲ್ಲ. ಒಮ್ಮೆ ಈ ದ್ವೇಷದ ಯಂತ್ರ ಆರಂಭವಾಯಿತೆಂದರೆ ಅದನ್ನು ನಿಯಂತ್ರಿಸುವುದಕ್ಕೆ ಸಾಧ್ಯವಾಗುವುದಿಲ್ಲ.
ಈ ದ್ವೇಷವನ್ನು ತಡೆಯುವ ಆಸಕ್ತಿ ತಮಗಿಲ್ಲ ಎನ್ನುವುದನ್ನು ಪ್ರಧಾನಿ ಸ್ಪಷ್ಟವಾಗಿ ಜಾಹೀರುಗೊಳಿಸಿದ್ದಾರೆ. ಬದಲಾಗಿ ಅವರು ಈ ದ್ವೇಷದ ಮೇಲೆಯೇ ಬೆಳೆಯುತ್ತಿದ್ದಾರೆ. ತಮ್ಮ ಭಾಷಣಗಳಲ್ಲಿ ಮೋದಿ 5,000 ವರ್ಷಗಳ ಹಿಂದೆ ಭಾರತ ಗ್ರೇಟೆಸ್ಟ್ ದೇಶವಾಗಿತ್ತು ಎಂದು ಹೇಳುತ್ತಾರೆ. ಬಹಳ ಹುರುಪಿನಿಂದ ಅವರು ಪುರಾಣದ ಹಾರುವ ರಥಗಳು, ಪುರಾತನ ಯುಗದ ಪ್ಲಾಸ್ಟಿಕ್ ಸರ್ಜರಿ ಮತ್ತು ಜೆನಿಟಿಕ್ ಸೈನ್ಸ್ ಬಗ್ಗೆ ಮಾತನಾಡುತ್ತಾರೆ. ಭವಿಷ್ಯವಿರುವುದು ಭೂತ ಕಾಲದಲ್ಲಿ ಎಂದು ನಮ್ಮ ಪ್ರಧಾನಿ ಪದೇ ಪದೇ ಹೇಳುತ್ತಾರೆ. ಆದರೆ ಕೇವಲ ನೆನಪಿನ ಆಧಾರದ ಮೇಲೆಯೇ ದೇಶವನ್ನು ನಿರ್ಮಿಸಲು ಸಾಧ್ಯವಿಲ್ಲ. ನಮಗೆ ಮುಂದೆ ಸಾಗಲು ಕಲ್ಪನೆಯ ಅಗತ್ಯವಿದೆ. ಭಾರತಕ್ಕಾಗಿ ಇಂಥ ಕಲ್ಪನೆ ಈಗ ಎಲ್ಲಿದೆ? ನನಗಂತೂ ಪ್ರಸಕ್ತ ಸರ್ಕಾರದಲ್ಲಿ ದೂರದೃಷ್ಟಿ ಅಥವಾ ಸಹಾನುಭೂತಿಯ ಗುಣ ಕಾಣಿಸುತ್ತಿಲ್ಲ.
ಹಾಗಿದ್ದರೆ ಯುಪಿಎ ಸರ್ಕಾರಕ್ಕೆ ಈ ಸವಾಲನ್ನು ನಿಭಾಯಿಸಲು ಸಾಧ್ಯವಾಗಿತ್ತೇ?
– ಯುಪಿಎ ಸರ್ಕಾರ ಪ್ರತಿಯೊಬ್ಬ ಭಾರತೀಯನಿಗೆ ಭದ್ರತೆ ಒದಗಿಸುವ, ದೇಶವನ್ನು ಶಾಂತಿಯುತವಾಗಿ ಮುಂದಕ್ಕೆ ಕರೆದೊಯ್ಯುವಂಥ ಯಂತ್ರವನ್ನು ಅಸ್ತಿತ್ವಕ್ಕೆ ತಂದಿತು. ಇದರಲ್ಲಿ ಅನೇಕ ಯೋಜನೆಗಳಿದ್ದವು. ವರ್ಷದಲ್ಲಿ ಕನಿಷ್ಠ 100 ದಿನ ಉದ್ಯೋಗ ಖಾತ್ರಿ ನೀಡುವ ‘ಮಹತ್ಮಾಗಾಂಧಿ ನರೇಗಾ’ ಯೋಜನೆಯನ್ನು ಅದು ಜಾರಿಗೆ ತಂದಿತು. ಹಳ್ಳಿಯ ತನ್ನ ಬದುಕನ್ನು ತೊರೆದು ನಗರಕ್ಕೆ ಬಂದ ಯುವಕನೊಬ್ಬ ಕಳೆದುಹೋಗದಂತೆ, ಅವಕಾಶ ಮತ್ತು ಆಶಾಭಾವನೆಯಿಂದ ವಂಚಿತನಾಗದಂತೆ ನರೇಗಾ ಯೋಜನೆ ಭದ್ರತೆ ನೀಡಿತು. ದೇಶದ ಯಾವುದೇ ಮಗು ರಾತ್ರಿ ಊಟವಿಲ್ಲದೇ ಹಸಿವಿನಿಂದ ಮಲಗಬಾರದು ಎಂಬುದನ್ನು ಖಾತ್ರಿ ಪಡಿಸಿತು ‘ಆಹಾರ ಹಕ್ಕು’. ‘ಶಿಕ್ಷಣ ಹಕ್ಕು’ ಜನರಿಗೆ ಭವಿಷ್ಯ ನೀಡಿತು. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವ ಆಶಾಭಾವನೆಯನ್ನು ಪೋಷಕರಲ್ಲಿ ಬಿತ್ತಿತು. ದೇಶದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಮಾಹಿತಿ ಪಡೆಯುವ ಸ್ವಾತಂತ್ರ್ಯವನ್ನು ನೀಡಿತು ‘ಮಾಹಿತಿ ಹಕ್ಕು’.
ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳಿಂದ ನಮ್ಮ ಯೋಜನೆಗಳನ್ನು, ನೀತಿಗಳನ್ನು ತಮ್ಮ ಗದ್ದಲದ ಭಾಷಣಗಳಲ್ಲಿ ಟೀಕಿಸುತ್ತಾ ಬರುತ್ತಿದೆ. ಆದರೂ ಸಂತೋಷದ ಸಂಗತಿಯೆಂದರೆ ಯುಪಿಎ ಸರ್ಕಾರ ಜಾರಿಗೆ ತಂದ ಪ್ರಮುಖ ಕಾರ್ಯಕ್ರಮಗಳಲ್ಲಿ ಕೆಲವುಗಳ ಹೆಸರನ್ನು ಈ ಸರ್ಕಾರ ಬದಲಿಸಿದೆಯಾದರೂ ಮನರೆಗಾ, ಯುಐಡಿ, ಆರ್ಟಿಐ, ಆರ್ಟಿಇ ಮತ್ತು ಆರ್ಟಿಎಫ್ನಂಥ ಯೋಜನೆಗಳನ್ನು ನಿಲ್ಲಿಸುವುದಕ್ಕೆ ಅದಕ್ಕೆ ಆಗಿಲ್ಲ.
ಕಾಂಗ್ರೆಸ್ ಪಾರ್ಟಿಯ ಬಗ್ಗೆ ದೃಷ್ಟಿಕೋನ ಹೇಗಿದೆ?
– ಕಾಂಗ್ರೆಸ್ ಪಕ್ಷ ರಾಜಕೀಯವನ್ನು ಒಂದು ‘ಪ್ರಕ್ರಿಯೆ’ ಎಂಬಂತೆ ನೋಡುತ್ತದೆ. ಇದು ಒಂದು ಒಮ್ಮತದ ರಚನೆಯಾಗಿದ್ದು, ಎಲ್ಲರ ಧ್ವನಿಯನ್ನೂ ಕೇಳಿಸಿಕೊಳ್ಳುತ್ತದೆ. ಕಾಲದ ಅಗತ್ಯಗಳಿಗೆ ತಕ್ಕಂತೆ ಬದಲಾದ ಏಕೈಕ ಪಾರ್ಟಿ ಬಹುಶಃ ನಮ್ಮದೊಂದೆ. ದೇಶಕ್ಕೆ ಬ್ಯಾಂಕ್ ರಾಷ್ಟ್ರೀಕರಣವನ್ನು ನೀಡಿದ ನಮ್ಮ ಪಕ್ಷ ಅದಾದ ಎರಡು ದಶಕಗಳಲ್ಲಿ ದೇಶದ ಆರ್ಥಿಕತೆಯನ್ನು ಉದಾರೀಕರಣಗೊಳಿಸಿತು. ನಾವು ಯಶಸ್ವಿಯಾಗಿದ್ದಕ್ಕೆ ಕಾರಣವಾಗಿದ್ದೇಕೆ? ಏಕೆಂದರೆ ನಾವು ಜನರ ಮಾತನ್ನು ಕೇಳಿಸಿಕೊಂಡೆವು. ಕಾಂಗ್ರೆಸ್ ಸಂಸ್ಕೃತಿಯಲ್ಲಿನ ಪ್ರಮುಖ ಅಂಶವಿದು. ನಾವು ಜನರ ಮಾತನ್ನು ಕೇಳಿಸಿಕೊಂಡು, ಅದಕ್ಕೆ ತಕ್ಕಂತೆ ನೀತಿಗಳನ್ನು ರಚಿಸುವವರು.
ಇನ್ನೊಂದೆಡೆ ಬಿಜೆಪಿ ಬರೀ ಮಾತನಾಡುತ್ತದಷ್ಟೇ ಹೊರತು, ಯೋಚಿಸುವುದಿಲ್ಲ. ಅದು ಹೋಗಲಿ, ಬಿಜೆಪಿಯವರು ಜನರ ಮಾತನ್ನು ಕೇಳಿಸಿಕೊಳ್ಳುವುದಕ್ಕೂ ನಿರಾಕರಿಸಿಬಿಡುತ್ತಾರೆ. ಭೂತಕಾಲದಲ್ಲೇ ಬದುಕುತ್ತಿರುವ, ಭವಿಷ್ಯತ್ತಿನ ಬಗ್ಗೆ ಭಯಪಡುತ್ತಿರುವ ಬಿಜೆಪಿಗೆ ಒಂದು ಸಂಗತಿ ಅರಿವಾಗುತ್ತಿಲ್ಲ. ಅದರ ಪೊಳ್ಳು ಮಾತುಗಳು ಮತ್ತು ಈಡೇರಿಸದ ಭರವಸೆಗಳನ್ನು ನೋಡಿ ನಿಧಾನಕ್ಕೆ ಜನ ಸಹನೆ ಕಳೆದುಕೊಳ್ಳುತ್ತಾರೆ.
ನಿಮ್ಮ ಪ್ರಕಾರ ಅಭಿವೃದ್ಧಿ ಅನ್ನುವುದು ಹೇಗಿರಬೇಕು? ಅದರೆಡೆಗಿನ ಸಮತೋಲಿತ ವಿಧಾನ ಯಾವುದು?
– ಪ್ರಸಕ್ತ ಸರ್ಕಾರ ಅಭಿವೃದ್ಧಿಯ ಬಗ್ಗೆ ಬಹಳ ಸಂಕುಚಿತ ಐಡಿಯಾ ಹೊಂದಿದೆ. ಕೆಲವೇ ಕೆಲವರಿಗೆ ಮತ್ತು ಉದ್ಯಮಪತಿಗಳಿಗೆ ಲಾಭ ಮಾಡಿಕೊಟ್ಟರೆ ಇಡೀ ದೇಶ ಅಭಿವೃದ್ಧಿಯಾದಂತೆ ಎಂದು ಅದು ಭಾವಿಸುತ್ತಿದೆ. ನಾನಂತೂ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ನನಗೆ ಈ ವಿಷಯದಲ್ಲಿ ಮಹತ್ಮಾ ಗಾಂಧಿಯವರು ಸ್ಫೂರ್ತಿ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಲ್ಯಾಣವೇ ನನ್ನ ಆದ್ಯತೆ.
ಆದರೆ ಈಗಾಗಲೇ ಆಗಿರುವ ಹಾನಿಯನ್ನು ಕಾಂಗ್ರೆಸ್ ಪಕ್ಷ ಹೇಗೆ ನಿಭಾಯಿಸುತ್ತದೆ? ಆ ಮೂಲಕ ಹೇಗೆ ಅದು ಪ್ರಸಕ್ತ ವ್ಯಾಖ್ಯಾನವನ್ನು ಬದಲಿಸುತ್ತದೆ?
– ನಾನೊಬ್ಬ ಬಿಲೀವರ್ (ನಂಬಿಕೆಯುಳ್ಳವನು). ನಮ್ಮ ದೇಶ ಪುಟಿದೇಳಬಲ್ಲದು ಎನ್ನುವ ನಂಬಿಕೆ ನನಗಿದೆ. ಭಾರತವೆಂಬ ಪರಿಕಲ್ಪನೆಯ ಮೂಲವಿರುವುದೇ ವೈವಿಧ್ಯತೆಯನ್ನು ಒಪ್ಪಿಕೊಳ್ಳುವುದರಲ್ಲಿ. ಇದು ಹಿಂದೂ ಧರ್ಮದ ಮೂಲಭೂತ ಐಡಿಯಾ ಕೂಡ ಹೌದು. ಗಾಂಧೀಜಿ ಯಾರನ್ನೂ ದ್ವೇಷಿಸಲಿಲ್ಲ. ಬ್ರಿಟಿಷರನ್ನೂ ಕೂಡ ಅವರು ದ್ವೇಷಿಸಲಿಲ್ಲ. ಕೋಪದ ಕೈಗೆ ಎಂದಿಗೂ ಅವರು ಬುದ್ಧಿ ಕೊಡಲಿಲ್ಲ. ನಿಜವಾದ ‘ಕಾಂಗ್ರೆಸ್ಸಿಗ’ ಯಾರು ಎಂದು ಜನರು ಕೇಳುತ್ತಾರೆ. ದ್ವೇಷ ಮತ್ತು ಸಿಟ್ಟನ್ನು ಹೊರದವನು ನಿಜವಾದ ಕಾಂಗ್ರೆಸ್ಸಿಗ. ಭಾರತದ ಬಹುತ್ವವನ್ನು ಪ್ರೀತಿಸುವವನು – ಗೌರವಿಸುವವನು ನಿಜವಾದ ಕಾಂಗ್ರೆಸ್ಸಿಗ. ದ್ವೇಷವೆನ್ನುವುದು ದೇಶದ ಗಮನವನ್ನು ನಿಜವಾದ ಸಮಸ್ಯೆಗಳಿಂದ ಬೇರೆಡೆ ಸೆಳೆದುಬಿಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ