ತಲಾಖ್ಗೆ ಸುಪ್ರೀಂ ಲಾಕ್!
Team Udayavani, Aug 23, 2017, 6:59 AM IST
ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸುವ ಮೂಲಕ ಸರ್ವೋಚ್ಚ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ. ಮಹಿಳಾ ಸಬಲೀಕರಣಕೆR ಬಲ ತುಂಬಿರುವ ಈ ತೀರ್ಪಿನ ಹಿಂದೆ ದಶಕಗಳ ಹೋರಾಟವಿದೆ. ಆದರೆ ಈಗಲೂ ತ್ರಿವಳಿ ತಲಾಖ್ ನಿಷೇಧಕ್ಕೆ ತಕರಾರಿನ ಧ್ವನಿಗಳು ಕೇಳಿಬರುತ್ತಲೇ ಇವೆ…
ಪ್ರಮುಖ ಅರ್ಜಿದಾರರಿವರು
ಟ್ರಿಪಲ್ ತಲಾಖ್ ವಿರುದ್ಧ ನಡೆದ ನಿರಂತರ ಹೋರಾಟದ ಹಿಂದೆ ಸಾಕಷ್ಟು ಕೈಗಳಿವೆ. ದೇಶದ ಸಾವಿರಾರು ಸಂತ್ರಸ್ತೆಯರ ಪರವಾಗಿ ಕೆಲವರು ಟೊಂಕಕಟ್ಟಿ ಸುಪ್ರೀಂಕೋರ್ಟ್ ಬಾಗಿಲು ತಟ್ಟಿದ್ದಾರೆ. ನ್ಯಾಯದೇಗುಲದಲ್ಲಿ ವಿಚಾರಣೆ ನಡೆಸಿರುವ ನ್ಯಾಯಪೀಠಕ್ಕೆ ವಾಸ್ತವ ಬಿಚ್ಚಿಟ್ಟಿದ್ದಾರೆ. ಒಟ್ಟಾರೆ ಈ ತೀರ್ಪಿನ ಹಿಂದೆ ಕಟ್ಟಡಕ್ಕೆ ಕಂಬದಂತೆ ನಿಂತ ಪ್ರಮುಖ ಆರು ಮಂದಿ ಅರ್ಜಿದಾರರು ಯಾರ್ಯಾರು ಎನ್ನುವುದರ ಪೂರ್ಣ ಮಾಹಿತಿ ಇಲ್ಲಿದೆ.
ಶಾಯರ ಬಾನೊ: ಪ್ರಕರಣದ ಪ್ರಮುಖ ಅರ್ಜಿದಾರರಲ್ಲಿ ಒಬ್ಬರು. 36 ವರ್ಷದ ಶಾಯರ ಬಾನೊ ಪತಿಯಿಂದ ತ್ರಿವಳಿ ತಲಾಖ್ ಮೂಲಕ ವಿಚ್ಛೇದನಕ್ಕೊಳಗಾಗಿ, 15 ವರ್ಷಗಳನ್ನೇ ಕಳೆದಿದ್ದಾರೆ. ನಾಲ್ಕಾರು ಬಾರಿ ಗರ್ಭಪಾತ ಮಾಡಿಸಿಕೊಳ್ಳುವಂಥ ಕ್ರೂರವಾದ ಕಿರುಕುಳ ಅನುಭವಿಸಿ, ನೋವು ಸಹಿಸಿಕೊಳ್ಳಲಾಗದೇ ಕೋರ್ಟ್ ಮೆಟ್ಟಿಲೇರಿರುವ ಉತ್ತರಾಖಂಡದ ಕಾಶಿಪುರದ ಹೆಣ್ಮಗಳು ಈಕೆ. ಸದ್ಯ ಸಣ್ಣದಾದ ಗುಡಿಸಲಿನಲ್ಲಿ ತನ್ನ ಹೆತ್ತವರೊಂದಿಗೆ ದಿನಕಳೆಯುತ್ತಿದ್ದಾರೆ.
ಹೋರಾಟ: ಅಸಾಂವಿಧಾನಿಕವಾದ ವಿಚ್ಛೇದನ ಈ ತ್ರಿವಳಿ ತಲಾಖ್. ಏಕಪಕ್ಷೀಯ, ತಾರ್ಕಿಕವಾಗಿಯೂ ಒಪ್ಪಿಕೊಳ್ಳದಂಥ, ಮಾರ್ಗದರ್ಶಿಯೂ ಆಗದ, ಧರ್ಮ ಕಾನೂನಿಗೂ ವಿರುದ್ಧವಾದ ಪದ್ಧತಿ ಎಂದು ಬಲವಾಗಿ ಪ್ರತಿಪಾದಿಸಿದ ಶಾಯರ ಬಾನೊ ಅವರು ನೇರವಾಗಿ ಪದ್ಧತಿಯನ್ನೇ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದರು. ತ್ರಿವಳಿ ತಲಾಖ್ ಮುಸ್ಲಿಂ ಸಂಸ್ಕೃತಿ, ಧರ್ಮಕ್ಕೂ ಮಾರಕವಾದದ್ದು ಎಂದೇ ಪ್ರತಿಪಾದಿಸಿದರು.
ಇಶ್ರತ್ ಜಹಾನ್: ದೂರವಾಣಿಯಲ್ಲೇ ಮೂರು ಬಾರಿ ತಲಾಖ್ ಎಂದ ಪತಿಯ ವಿರುದ್ಧ ಸಿಡಿದೆದ್ದ ಇನ್ನೊಬ್ಟಾಕೆ ಗಟ್ಟಿಗಿತ್ತಿ. ಪತಿಯ ಈ ನಿರ್ಧಾರದಿಂದ ಕಠಿಣ ಸವಾಲು ಎದುರಿಸುವಂತಾದ 30 ವರ್ಷದ ಇಶ್ರತ್ ಹಠಾತ್ತಾಗಿ ತನ್ನ ಮೂವರು ಮಕ್ಕಳು ಹಾಗೂ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಅವಿಭಕ್ತ ಕುಟುಂಬದಿಂದಲೇ ಇಶ್ರತ್ ದೂರ ಹೋಗಬೇಕಾಗಿ ಬಂತು.
ಹೋರಾಟ: ಸೋತು ಸುಣ್ಣವಾದ ಇಶ್ರತ್ ಸುಮ್ಮನಾಗಲಿಲ್ಲ. ತ್ರಿವಳಿ ತಲಾಖ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದರು. ಕೋರ್ಟ್ನಲ್ಲಿ ನ್ಯಾಯವಾದಿಗಳ ಮೂಲಕ ತನಗಾಗಿರುವ ಅನ್ಯಾಯದ ವಿರುದ್ಧ ನ್ಯಾಯವಾದಿಗಳ ಮೂಲಕ ವಾದ ಮಂಡಿಸಿದರು. ಸಮಾಜದಲ್ಲಿ ಎದುರಿಸಿದ ಸಂಕಷ್ಟಗಳನ್ನೆಲ್ಲ ಬಿಚ್ಚಿಟ್ಟರು.
ಬಿಎಂಎಂಎ: ತಲಾಖ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಮೂರನೇ ಅರ್ಜಿದಾರರು. ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ (ಬಿಎಂಎಂಎ) ಮುಸ್ಲಿಂ ಮಹಿಳೆಯರ ಪರ ಸಮಾನತೆಯ ಹಕ್ಕಿಗಾಗಿ ಹೋರಾಡುವ ಸಂಘಟನೆ ಇದು.
ಹೋರಾಟ: ಮುಸ್ಲಿಂ ಮಹಿಳೆಯರ ಪರ ಸಮಾನತೆಗಾಗಿ ಧ್ವನಿ ಎತ್ತಿ ತಲಾಖ್ ವಿರುದ್ಧ ಅರ್ಜಿ ಸಲ್ಲಿಸಿದ ಬಿಎಂಎಂಎ, “ಪುರುಷ ಮತ್ತು ಮಹಿಳೆ ಸಮಾನರು ಎಂದು ಅಲ್ಲಾಹ್ ಹೇಳುತ್ತಾರೆ. ಆದರೆ ತಲಾಖ್ ಪದ್ಧತಿಯಿಂದಾಗಿ ಮಹಿಳೆಯರು ಸಮಾಜದಲ್ಲಿ ಸಮಾನತೆಯಿಂದ ವಂಚನೆಗೆ ಒಳಗಾಗುತ್ತಿದ್ದಾರೆ. ಕನಿಷ್ಠ 90 ದಿನಗಳ ಅವಧಿಯಲ್ಲಿ ಪ್ರಕ್ರಿಯೆ ಹಾಗೂ ಮಾತುಕತೆಗಳು ಹೇಗೆ ತಾನೇ ನಡೆಯಲು ಸಾಧ್ಯವಾಗುತ್ತದೆ. ಭಾರತೀಯ ಸಂವಿಧಾನದಲ್ಲಿ ಎಲ್ಲರೂ ಸಮಾನರು. ಹಾಗಿರುವಾಗ ಪುರುಷನ ತೀರ್ಮಾನವೇ ಅಂತಿಮ ಎಂದು ಹೇಗೆ ತಾನೇ ಒಪ್ಪಿಕೊಳ್ಳಲು ಸಾಧ್ಯ?’ ಎಂದು ಕೋರ್ಟ್ನಲ್ಲಿ ವಾದ ಮಂಡಿಸಿತು.
ಗುಲ್ಷನ್ ಪರ್ವೀನ್, ಅಫ್ರೀನ್ ರೆಹಮಾನ್ ಮತ್ತು ಅತಿಯಾ ಸಾಬ್ರಿ: ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ಮೆಟ್ಟಿಲೇರಿದ ಉಳಿದ ಮೂವರು ಅರ್ಜಿದಾರರು ಗುಲ್ಷನ್ ಪರ್ವೀನ್, ಅಫ್ರೀನ್ ರೆಹಮಾನ್ ಮತ್ತು ಅತಿಯಾ ಸಾಬ್ರಿ. ಪರ್ವೀನ್ ಅವರು ಉತ್ತರ ಪ್ರದೇಶದ ರಾಮಪುರದವರು. ರೆಹಮಾನ್ ಜೈಪುರದವರು. ಅತಿಯಾ ಸಾಬ್ರಿ ಅವರು ಉತ್ತರ ಪ್ರದೇಶದ ಶಹರಾಣಪುರದವರು. ಈ ಪ್ರಕರಣದ ಕೊನೆಯ ಅರ್ಜಿದಾರರಾಗಿದ್ದಾರೆ.
ಮೊದಲು ತೀರ್ಪು ನೀಡಿದ್ದು ನ್ಯಾ. ತಿಲ್ಹಾರಿ
ದೇಶದಲ್ಲಿ ತ್ರಿವಳಿ ತಲಾಖ್ ರದ್ದುಗೊಳಿಸಿ ಮೊಟ್ಟ ಮೊದಲ ಬಾರಿ ತೀರ್ಪು ನೀಡಿದವರು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಹರಿನಾಥ್ ತಿಲ್ಹಾರಿ. ವಿಶೇಷವೆಂದರೆ ಅವರು ನಂತರದಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿಯೂ ಕೆಲಸ ಮಾಡಿದ್ದರು.
ಹರಿನಾಥ್ ತಿಲ್ಹಾರಿ ಅವರು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದಾಗ ರೆಹಮತ್ತುಲ್ಲಾ ಮತ್ತು ಖಾತೂನ್ನೀಸಾ ವರ್ಸಸ್ ಉತ್ತರ ಪ್ರದೇಶ ಸರ್ಕಾರದ ನಡುವಿನ ವ್ಯಾಜ್ಯದಲ್ಲಿ 1994ರ ಏ. 15ರಂದು ತ್ರಿವಳಿ ತಲಾಖ್ ರದ್ದುಗೊಳಿಸಿ ತೀರ್ಪು ನೀಡಿದ್ದರು. ಈ ಮಧ್ಯೆ ಮತ್ತೂಂದು ಪ್ರಕರಣದಲ್ಲಿ ಆಯೋಧ್ಯೆಯ ವಿವಾದಿತ ಜಾಗದಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆಯೂ ಅವರು ಆದೇಶಿಸಿದ್ದರು. ಈ ಎರಡೂ ತೀರ್ಪುಗಳು ಉತ್ತರ ಪ್ರದೇಶದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ ಅವರನ್ನು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ವರ್ಗಾವಣೆ ಮಾಡಲಾಗಿತ್ತು. ರಾಜ್ಯದಲ್ಲಿ ಅವರು ಸುಮಾರು ಏಳು ವರ್ಷ ಕಾಲ ಸೇವೆ ಸಲ್ಲಿಸಿದ್ದರು.
ಗೊಂದಲವೋ ಗೊಂದಲ
ತ್ರಿವಳಿ ತಲಾಖ್ ತೀರ್ಪು ಒಮ್ಮತಧ್ದೋ ಅಥವಾ ಭಿನ್ನ ಅಭಿಪ್ರಾಯಗಳನ್ನು ಒಳಗೊಂಡಧ್ದೋ ಎಂಬ ಬಗ್ಗೆ ಗೊಂದಲ ಆರಂಭವಾಗಿತ್ತು. ಕೋರ್ಟ್ ಹಾಲ್ನಲ್ಲಿದ್ದವರು ತೀರ್ಪು ಕೇಳುವಾಗ ಇದು ಒಮ್ಮತದ್ದು ಎಂದೇ ಭಾವಿಸಿದ್ದರು. ಸಿಜೆಐ ಅವರು ತೀರ್ಪು ಹೇಳುವ ಮುನ್ನ “ನಾವು’… ಎಂದು ಹೇಳಿದ ತಕ್ಷಣ ಆಂಗ್ಲ ಸುದ್ದಿವಾಹಿನಿಗಳೆಲ್ಲವೂ ಸರ್ವಸಮ್ಮತ ತೀರ್ಪು ಎಂಬ ಬ್ರೇಕಿಂಗ್ ನ್ಯೂಸ್ ಕೊಟ್ಟೇ ಬಿಟ್ಟವು. ಆದರೆ ನ್ಯಾ. ಕುರಿಯನ್ ಜೋಸೆಫ್ ಅವರು ಸಿಜೆಐ ಅವರ ತೀರ್ಪು ಒಪ್ಪಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಂತೆ ಗೊಂದಲಕ್ಕೆ ಬಿದ್ದವು. ಮೊದಲಿಗೆ ಸಿಜೆಐ ತೀರ್ಪು ಓದಿ, ಇದಕ್ಕೆ ನ್ಯಾ. ನಜೀರ್ ಸಹಮತವಿದೆ ಎಂಬ ಕಡೆ ಸಾಲನ್ನು ಉಲ್ಲೇಖೀಸಿದರು. ಬಳಿಕ ನ್ಯಾ. ಕುರಿಯನ್ ಜೋಸೆಫ್ ಓದಿದರು. ಕಡೆಯದಾಗಿ ನ್ಯಾ. ರೋಹಿಂಗ್ಟನ್ ಫಾಲಿ ನಾರಿಮನ್ ಅವರು ಓದಿ, ಕಡೆ ಸಾಲಲ್ಲಿ ನ್ಯಾ. ಯು.ಯು.ಲಲಿತ್ ಅವರ ಸಹಮತವಿದೆ ಎಂದು ಹೇಳಿದರು. ಆಗ ಕೋರ್ಟ್ ಹಾಲ್ನಲ್ಲಿ ಇದ್ದವರೆಲ್ಲಾ ಗೊಂದಲಕ್ಕೆ ಬಿದ್ದರು. ಕಡೆಗೆ ಸಿಜೆಐ ಅವರು ಓದಿದ ತೀರ್ಪು ಅಲ್ಪಮತಕ್ಕೆ ಬಿದ್ದಿದೆ ಎಂಬ ಅರಿವಾಯಿತು. ಕಡೆಗೆ ತೀರ್ಪಿನ ಪ್ರತಿ ಹಿಡಿದ ಸಿಜೆಐ 3-2ರ ಅಂತರದಿಂದ ತ್ರಿವಳಿ ತಲಾಖ್ ಅನ್ನು ನಿಷೇಧಿಸಲಾಗಿದೆ ಎಂದು ಓದಿದರು. ಅಷ್ಟರೊಳಗೆ ತಪ್ಪು ತಪ್ಪಾಗಿ ಬ್ರೇಕಿಂಗ್ ನ್ಯೂಸ್ ಕೊಟ್ಟವರೆಲ್ಲಾ ಸರಿಪಡಿಸಿಕೊಳ್ಳಲು ಓಡಿದರು.
ಇಲ್ಲಿ ಕೇವಲ ಸಿಜೆಐ ಹೇಳಿದ 6 ತಿಂಗಳ ಕಾಲ ನಿಷೇಧ ಮತ್ತು ಸರ್ಕಾರವೇ ಕಾನೂನು ಮಾಡಬೇಕು ಎಂಬುದು ಬೆಳಗ್ಗೆಯಿಂದ ಪ್ರಾಮುಖ್ಯತೆ ಪಡೆದಿತ್ತು. ಆದರೆ, ಸಂಪೂರ್ಣವಾಗಿ ನಿಷೇಧಿಸುವ ತೀರ್ಪು ಹೊರಬಿದ್ದ ಮೇಲೆ ಎಲ್ಲ ಸರಿಯಾಯಿತು.
ಪಂಚ ಸದಸ್ಯ ಪೀಠದ ನ್ಯಾಯಮೂರ್ತಿಗಳಿವರು
ಮುಖ್ಯ ನ್ಯಾ. ಜೆ.ಎಸ್.ಖೆಹರ್ (ಸಿಖ್)
ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮುಖ್ಯ ನ್ಯಾಯಮೂರ್ತಿ ಹುದ್ದೆಗೇರಿದ ಸಿಖ್ ಸಮುದಾಯದ ಮೊದಲಿಗರಾಗಿದ್ದಾರೆ ಜೆ.ಎಸ್.ಖೆಹರ್. ಕಳೆದ ಐದು ವರ್ಷಗಳ ಅವಧಿಯ 2ಜಿ ಸ್ಪೆಕ್ಟ್ರಮ್, ಸಹಾರಾ ಅವ್ಯವಹಾರ ಸೇರಿ ಸಾಕಷ್ಟು ಪ್ರಮುಖ ಪ್ರಕರಣಗಳ ತೀರ್ಪು ನೀಡಿದ ನ್ಯಾಯಪೀಠದಲ್ಲಿ ಭಾಗಿಯಾಗಿದ್ದವರು. ಖೆಹರ್, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ.
ನ್ಯಾ. ಕುರಿಯನ್ ಜೋಸೆಫ್ (ಕ್ರಿಶ್ಚಿಯನ್)
ಕೇರಳದ ಹೈಕೋರ್ಟ್ನಲ್ಲಿ 1979ರಿಂದ ನ್ಯಾಯಾಂಗ ಕ್ಷೇತ್ರದ ಮಹತ್ವದ ಹುದ್ದೆಯಲ್ಲಿ ವೃತ್ತಿ ಆರಂಭಿಸಿದವರಿವರು. 1994ರಲ್ಲಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗುವುದಕ್ಕೂ ಮುನ್ನ 1987ರಲ್ಲಿ ಸರ್ಕಾರಿ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. 2010ರಿಂದ 2013ರ ತನಕ ಹಿಮಾಚಲ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದರು. 2013, ಮಾರ್ಚ್ 8ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದರು.
ನ್ಯಾ. ಆರ್.ಎಫ್. ನಾರಿಮನ್ (ಪಾರ್ಸಿ)
ಜನಪ್ರಿಯ ನ್ಯಾಯಮೂರ್ತಿ ಫಾಲಿ ಎಸ್. ನಾರಿಮನ್ ಅವರ ಪುತ್ರರಾದ ನ್ಯಾಯಮೂರ್ತಿ ಆರ್.ಎಫ್. ನಾರಿಮನ್. 1979ರಲ್ಲಿ ವೃತ್ತಿ ಆರಂಭಿಸಿದ ನಾರಿಮನ್ಗೆ ಈಗ 60 ವರ್ಷ ಪ್ರಾಯ. 2014, ಜುಲೈ 7ರಲ್ಲಿ ಅಪೆಕ್ಸ್ ಕೋರ್ಟ್ನ ನ್ಯಾಯಾಧೀಶರಾಗಿದ್ದರು. ಇದಕ್ಕೂ ಮೊದಲು 2011, ಜುಲೈ 27ರಿಂದ 2013, ಫೆಬ್ರವರಿ 4ರ ತನಕ ಭಾರತದ ಸಾಲಿಸಿಟರ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ನ್ಯಾ. ಯು.ಯು.ಲಲಿತ್ (ಹಿಂದೂ)
ಮಹಾರಾಷ್ಟ್ರದವರಾದ ನ್ಯಾಯಮೂರ್ತಿ ಯು.ಯು.ಲಲಿತ್ ಅವರು 2014ರ ಜುಲೈನಲ್ಲಿ ಅಪೆಕ್ಸ್ ಕೋರ್ಟ್ನ ನ್ಯಾಯಮೂರ್ತಿ ಆಗಿ ನೇಮಕಗೊಂಡರು. ತುಳಸಿ ಪ್ರಜಾಪತಿ ಎನ್ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ಪರ ವಾದಮಂಡಿಸಿದ್ದರು. ಈ ಹಿಂದೆ ಭ್ರಷ್ಟಾಚಾರ ಪ್ರಕರಣದಲ್ಲಿ ಪಂಜಾಬ್ನ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪರವಾಗಿಯೂ ವಾದ ಮಂಡಿಸಿದ್ದರು.
ನ್ಯಾ. ಅಬ್ದುಲ್ ನಜೀರ್ (ಮುಸ್ಲಿಂ)
ಕರ್ನಾಟಕದ ಮೂಡಬಿದಿರೆಯವರಾದ ಅಬ್ದುಲ್ ನಜೀರ್ ಎಸ್ಡಿಎಂ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. 1983ರಲ್ಲಿ ವೃತ್ತಿಜೀವನ ಆರಂಭಿಸಿದ ಇವರು 2003ರಲ್ಲಿ ಕರ್ನಾಟಕ ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ, 2004ರಲ್ಲಿ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿಗಳಾಗಿ ಬಡ್ತಿ ಪಡೆದರು. 2017, ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!
Pan India: ಯಶ್ ʼಟಾಕ್ಸಿಕ್ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ
ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ
Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್