ಪುಣೆಯಲ್ಲಿ ಭಾರತ ಜಯಭೇರಿ


Team Udayavani, Jan 16, 2017, 3:45 AM IST

15-SP-2.jpg

ಪುಣೆ: ಇಂಗ್ಲೆಂಡಿನ ಬೃಹತ್‌ ಮೊತ್ತಕ್ಕೆ ಅಮೋಘ ರೀತಿಯಲ್ಲೇ ಜವಾಬು ನೀಡಿದ ಕ್ಯಾಪ್ಟನ್‌ ಕೊಹ್ಲಿ ಮತ್ತು ಲೋಕಲ್‌ ಹೀರೋ ಕೇದಾರ್‌ ಜಾಧವ್‌ ಸೇರಿಕೊಂಡು ಪುಣೆ ಏಕದಿನ ಪಂದ್ಯದಲ್ಲಿ ಭಾರತಕ್ಕೆ 3 ವಿಕೆಟ್‌ ಅಂತರದ ರೋಮಾಂಚಕ ಜಯವನ್ನು ತಂದಿತ್ತಿದ್ದಾರೆ. ಇವರಿಬ್ಬರ ಶತಕ ಸಾಹಸ ಹಾಗೂ 200 ರನ್‌ ಜತೆಯಾಟ ಏಕದಿನ ಕ್ರಿಕೆಟಿನ ವಿಸ್ಮಯ ಲೋಕವೊಂದನ್ನು ತೆರೆದಿರಿಸಿತು. ಕೊಹ್ಲಿ ಏಕದಿನ ತಂಡದ ಪೂರ್ಣ ಪ್ರಮಾಣದ ನಾಯಕತ್ವವನ್ನು ಅವಿಸ್ಮರಣೀಯ ಜಯದೊಂದಿಗೆ ಆರಂಭಿಸಿದರು.

ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಇಂಗ್ಲೆಂಡ್‌ 7 ವಿಕೆಟಿಗೆ 350 ರನ್‌ ಪೇರಿಸಿದರೆ, ಭಾರತ 48.1 ಓವರ್‌ಗಳಲ್ಲಿ 7 ವಿಕೆಟಿಗೆ 356 ರನ್‌ ಪೇರಿಸಿ ಜಯಭೇರಿ ಮೊಳಗಿಸಿತು. ಭಾರತ 350 ಪ್ಲಸ್‌ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿದ 3ನೇ ಸಂದರ್ಭ ಇದಾಗಿದೆ.

ಭಾರತದ ಶೋಚನೀಯ ಆರಂಭ ಕಂಡಾಗ ಈ ಪಂದ್ಯವನ್ನು ಇಂಗ್ಲೆಂಡ್‌ ಸುಲಭದಲ್ಲೇ ಗೆಲ್ಲುತ್ತದೆಂಬುದು ಎಲ್ಲರ ನಿರೀಕ್ಷೆ ಆಗಿತ್ತು. ಧವನ್‌, ರಾಹುಲ್‌, ಯುವರಾಜ್‌, ಧೋನಿ 63 ರನ್‌ ಆಗುವಷ್ಟರಲ್ಲಿ ಆಟ ಮುಗಿಸಿ ಮರಳಿದ್ದರು. ಆದರೆ ವಿರಾಟ್‌ ಕೊಹ್ಲಿ-ಕೇದಾರ್‌ ಜಾಧವ್‌ ಸೇರಿಕೊಂಡು ಇಡೀ ಪಂದ್ಯದ ಸಮೀಕರಣವನ್ನೇ ಬದಲಿಸತೊಡಗಿದರು. 350ರ ಗಡಿಯನ್ನೂ ಬಹಳ ಸಮೀಪಕ್ಕೆ ತಂದು ನಿಲ್ಲಿಸಿದರು. 

ಕೊಹ್ಲಿ-ಜಾಧವ್‌ ಜಬರ್ದಸ್ತ್ ಆಟ
ಕೊಹ್ಲಿ-ಜಾಧವ್‌ 24.3 ಓವರ್‌ಗಳ ಜತೆಯಾಟದಲ್ಲಿ 5ನೇ ವಿಕೆಟಿಗೆ ಸರಿಯಾಗಿ 200 ರನ್‌ ಪೇರಿಸಿದರು. ಓವರಿಗೆ 8.16ರ ಸರಾಸರಿಯಲ್ಲಿ ರನ್‌ ಹರಿದು ಬರತೊಡಗಿತು. ಕೊಹ್ಲಿ 122 ರನ್ನಿಗಾಗಿ ನಿಭಾಯಿಸಿದ್ದು 105 ಎಸೆತ ಮಾತ್ರ. ಈ ಬ್ಯಾಟಿಂಗ್‌ ಆರ್ಭಟದ ವೇಳೆ 5 ಸಿಕ್ಸರ್‌ ಹಾಗೂ 8 ಬೌಂಡರಿ ಸಿಡಿಯಲ್ಪಟ್ಟಿತು. ಸ್ಟ್ರೈಕ್‌ರೇಟ್‌ 116.19.

ವಿರಾಟ್‌ ಕೊಹ್ಲಿ 177ನೇ ಏಕದಿನ ಪಂದ್ಯದಲ್ಲಿ ಬಾರಿಸಿದ 27ನೇ ಸೆಂಚುರಿ ಇದಾಗಿದೆ. ಚೇಸಿಂಗ್‌ ವೇಳೆ ದಾಖಲಿಸಿದ 17ನೇ ಶತಕ. ಇದರೊಂದಿಗೆ ಅವರು ಸಚಿನ್‌ ತೆಂಡುಲ್ಕರ್‌ ಅವರ ವಿಶ್ವದಾಖಲೆಯನ್ನು ಸರಿದೂಗಿಸಿದರು. ಸಚಿನ್‌ ಕೂಡ ಚೇಸಿಂಗ್‌ ಸಂದರ್ಭದಲ್ಲಿ ಇಷ್ಟೇ ಶತಕ ಬಾರಿಸಿದ್ದರು.

ಪುಣೆಯವರೇ ಆದ ಕೇದಾರ್‌ ಜಾಧವ್‌ ಊರಿನಂಗಳ ದಲ್ಲಿ ಜೀವನಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಅವರು 13ನೇ ಏಕದಿನದಲ್ಲಿ 2ನೇ ಶತಕ ಸಂಭ್ರಮವನ್ನಾಚರಿಸಿದರು. 2015ರಲ್ಲಿ ಜಿಂಬಾಬ್ವೆ ಎದುರಿನ ಹರಾರೆ ಪಂದ್ಯದಲ್ಲಿ ಅಜೇಯ 105 ರನ್‌ ಬಾರಿಸಿದ್ದು ಜಾಧವ್‌ ಅವರ ಅತ್ಯುತ್ತಮ ಸಾಧನೆ. 

ಜಾಧವ್‌ ಶತಕ ಕೇವಲ 65 ಎಸೆತಗಳಿಂದ ದಾಖಲಾಯಿತು. ಎಸೆತಗಳ ಲೆಕ್ಕಾಚಾರದಲ್ಲಿ ಇದು ಭಾರತದ 5ನೇ ಅತಿ ವೇಗದ ಶತಕ. 120 ರನ್ನಿಗೆ ಒಟ್ಟು 76 ಎಸೆತ ಎದುರಿಸಿದ ಜಾಧವ್‌ 12 ಬೌಂಡರಿ, 4 ಸಿಕ್ಸರ್‌ ಬಾರಿಸಿ ತವರಿನ ಅಭಿಮಾನಿಗಳನ್ನು ರಂಜಿಸಿದರು. 

ಕೊಹ್ಲಿ ಔಟಾಗುವಾಗ ಭಾರತ 263ರಲ್ಲಿತ್ತು. ಗೆಲುವಿಗೆ ಇನ್ನೂ 88 ರನ್‌ ಅಗತ್ಯವಿತ್ತು. ಜಾಧವ್‌ ನಿರ್ಗಮಿಸುವಾಗ ಭರ್ತಿ 60 ರನ್‌ ಬೇಕಿತ್ತು. ಈ ಹಂತದಲ್ಲಿ ಹಾರ್ದಿಕ್‌ ಪಾಂಡ್ಯ ಆಪದಾºಂಧವ ರಾಗಿ ಮೂಡಿಬಂದರು (ಅಜೇಯ 40). ಅಶ್ವಿ‌ನ್‌ ಸಿಕ್ಸರ್‌ ಸಿಡಿಸಿ ಭಾರತದ ಗೆಲುವನ್ನು ಸಾರಿದರು.

ಆರಂಭದಿಂದಲೇ ಕುಸಿತ
ದೊಡ್ಡ ಮೊತ್ತವನ್ನು ಕಂಡೇ ದಿಗಿಲುಗೊಂಡಂತೆ ಆಡಿದ ಭಾರತ ಬಿಗ್‌ ಚೇಸಿಂಗ್‌ಗೆ ತಕ್ಕ ಆರಂಭವನ್ನು ಕಂಡುಕೊಳ್ಳುವಲ್ಲಿ ವಿಫ‌ಲವಾಯಿತು. ಓಪನರ್‌ಗಳಾದ ಶಿಖರ್‌ ಧವನ್‌ ಮತ್ತು ಕೆ.ಎಲ್‌. ರಾಹುಲ್‌ 24 ರನ್‌ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡರು. ಧವನ್‌ ಒಂಟಿ ರನ್ನಿಗೆ ಔಟಾದರೆ, ರಾಹುಲ್‌ ಎಂಟಕ್ಕೆ ಆಟ ಮುಗಿಸಿದರು. ಡೇವಿಡ್‌ ವಿಲ್ಲಿ ಈ ಎರಡೂ ಬೇಟೆಗಳನ್ನಾಡಿ ಇಂಗ್ಲೆಂಡಿಗೆ ಸ್ಪಷ್ಟ ಮೇಲುಗೈ ಒದಗಿಸಿದರು.

2013ರ ಬಳಿಕ ಏಕದಿನ ಆಡಲಿಳಿದ ಯುವರಾಜ್‌ ಸಿಂಗ್‌ ಅಬ್ಬರಿಸಿದರೂ ಬ್ಯಾಟಿಂಗ್‌ ವಿಸ್ತರಿಸಲು ವಿಫ‌ಲರಾದರು. 2 ಬೌಂಡರಿ, ಒಂದು ಸಿಕ್ಸರ್‌ ಬಾರಿಸಿದ ಯುವಿ 12 ಎಸೆತಗಳಿಂದ 15 ರನ್‌ ಮಾಡಿ 3ನೇ ವಿಕೆಟ್‌ ರೂಪದಲ್ಲಿ ಮೈದಾನ ತೊರೆದರು. ನಾಯಕತ್ವದ ಭಾರದಿಂದ ಮುಕ್ತರಾದರೂ ಇದರ ಪ್ರಯೋಜನ ವೆತ್ತಲು ಧೋನಿಗೆ ಸಾಧ್ಯವಾಗಲಿಲ್ಲ. ಅವರು ಆರಕ್ಕೆ ಆಟ ಕೊನೆಗೊಳಿಸಿದರು. ಮುಂದಿನದು ಕೊಹ್ಲಿ-ಜಾಧವ್‌ ಜೋಡಿಯ ಬೊಂಬಾಟ್‌ ಆಟ.

ಭಾರತದೆದುರು ಸರ್ವಾಧಿಕ ಸ್ಕೋರ್‌
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಇಂಗ್ಲೆಂಡ್‌ ಆರಂಭದಿಂದಲೇ ತನ್ನ ಬ್ಯಾಟಿಂಗ್‌ ಪರಾಕ್ರಮವನ್ನು ತೆರೆದಿಡುತ್ತ ಹೋಯಿತು. ಭಾರತ ದೆದುರು ಸರ್ವಾಧಿಕ ಮೊತ್ತ ಪೇರಿಸಿದ ಹೆಗ್ಗಳಿಕೆಗೆ ಪಾತ್ರವಾಯಿತು. 2011ರ ವಿಶ್ವಕಪ್‌ ವೇಳೆ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ 8ಕ್ಕೆ 338 ರನ್‌ ಗಳಿಸಿದ್ದು ಇಂಗ್ಲೆಂಡಿನ ಈ ಹಿಂದಿನ ಬೃಹತ್‌ ಸ್ಕೋರ್‌ ಆಗಿತ್ತು. ಆ ಪಂದ್ಯ ಟೈ ಆಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಸ್ಟೋಕ್ಸ್‌ ಸ್ಫೋಟಕ ಬ್ಯಾಟಿಂಗ್‌
ಇಂಗ್ಲೆಂಡ್‌ ಇನ್ನಿಂಗ್ಸ್‌ನಲ್ಲಿ 3 ಅರ್ಧ ಶತಕಗಳು ದಾಖಲಾದವು. ಜೋ ರೂಟ್‌ ಸರ್ವಾಧಿಕ 78, ಆರಂಭಕಾರ ಜಾಸನ್‌ ರಾಯ್‌ 73 ಹಾಗೂ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ 62 ರನ್‌ ಬಾರಿಸಿದರು. ಇವರಲ್ಲಿ ಸ್ಟೋಕ್ಸ್‌ ಬ್ಯಾಟಿಂಗ್‌ ಅತ್ಯಂತ ಸ್ಫೋಟಕವಾಗಿತ್ತು. 62 ರನ್ನಿಗೆ ಅವರು ಕೇವಲ 40 ಎಸೆತ ತೆಗೆದುಕೊಂಡರು. ಸಿಡಿಸಿದ್ದು 5 ಸಿಕ್ಸರ್‌ ಹಾಗೂ 2 ಬೌಂಡರಿ. ಸ್ಟ್ರೈಕ್‌ರೇಟ್‌ 155.00.

ಸ್ಟೋಕ್ಸ್‌ ಸಾಹಸದಿಂದ ಇಂಗ್ಲೆಂಡ್‌ ಅಂತಿಮ 8 ಓವರ್‌ಗಳಲ್ಲಿ 105 ರನ್‌ ರಾಶಿ ಹಾಕಿತು. ಇದು ವಿದೇಶಿ ಅಂಗಳದಲ್ಲಿ ಇಂಗ್ಲೆಂಡ್‌ ಕೊನೆಯ 8 ಓವರ್‌ಗಳಲ್ಲಿ ಪೇರಿಸಿದ 2ನೇ ಅತೀ ಹೆಚ್ಚಿನ ಸ್ಕೋರ್‌ ಆಗಿದೆ. 42ನೇ ಓವರ್‌ ಅಂತ್ಯಕ್ಕೆ 245ರಲ್ಲಿದ್ದ ಮಾರ್ಗನ್‌ ಪಡೆ ಉಳಿದ 8 ಓವರ್‌ಗಳಲ್ಲಿ ಈ ಮೊತ್ತವನ್ನು 350ಕ್ಕೆ ವಿಸ್ತರಿಸಿತ್ತು!

ಸ್ಟೋಕ್ಸ್‌ ಕೇವಲ 33 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದ್ದು ಕೂಡ ಭಾರತದೆದುರು ಇಂಗ್ಲೆಂಡಿನ ದಾಖಲೆಯಾಗಿದೆ. ಓವೇಸ್‌ ಶಾ ಮತ್ತು ಆ್ಯಂಡ್ರೂé ಫ್ಲಿಂಟಾಫ್ 35 ಎಸೆತಗಳಿಂದ 50 ರನ್‌ ಬಾರಿಸಿದ ದಾಖಲೆ ಪತನಗೊಂಡಿತು.

ಇಂಗ್ಲೆಂಡ್‌ ಸರಿಯಾಗಿ ಓವರಿಗೆ ಏಳರ ಸರಾಸರಿಯಲ್ಲಿ ರನ್‌ ಗಳಿಸುತ್ತ ಸಾಗಿತು. ಭಾರತ 7 ಮಂದಿ ಬೌಲರ್‌ಗಳನ್ನು ಕಣಕ್ಕಿಳಿಸಿದರೂ ಲಾಭವಾಗಲಿಲ್ಲ. ಆಂಗ್ಲರು ಯಾರಿಗೂ ರಿಯಾಯಿತಿ ತೋರಲಿಲ್ಲ. ಇದ್ದುದರಲ್ಲೇ ಹಾರ್ದಿಕ್‌ ಪಾಂಡ್ಯ “ಬೆಟರ್‌’ ಎನಿಸಿಕೊಂಡರು. ಅವರು 9 ಓವರ್‌ಗಳಲ್ಲಿ ಕೇವಲ 46 ರನ್‌ ನೀಡಿ 2 ವಿಕೆಟ್‌ ಕಿತ್ತರು. ಬುಮ್ರಾ ಕೂಡ 2 ವಿಕೆಟ್‌ ಉರುಳಿಸಿದರೂ ಇದಕ್ಕಾಗಿ 79 ರನ್‌ ಬಿಟ್ಟುಕೊಟ್ಟರು. ಒಂದೊಂದು ವಿಕೆಟ್‌ ಯಾದವ್‌ ಮತ್ತು ಜಡೇಜ ಪಾಲಾಯಿತು. ಪ್ರಧಾನ ಸ್ಪಿನ್ನರ್‌ ಅಶ್ವಿ‌ನ್‌ ವಿಕೆಟ್‌ ಕೀಳಲು ವಿಫ‌ಲರಾದರಷ್ಟೇ ಅಲ್ಲ, 8 ಓವರ್‌ಗಳಲ್ಲಿ 63 ರನ್‌ ನೀಡಿ ದುಬಾರಿಯಾದರು. ಇಂಗ್ಲೆಂಡ್‌ ಸರದಿಯಲ್ಲಿ ಒಟ್ಟು 25 ಬೌಂಡರಿ ಹಾಗೂ 11 ಸಿಕ್ಸರ್‌ ಸಿಡಿಯಲ್ಪಟ್ಟಿತು.

ಫಾರ್ಮ್ಗೆ ತಕ್ಕ ಆಟ
ಆರಂಭಕಾರ ಜಾಸನ್‌ ರಾಯ್‌, ವನ್‌ಡೌನ್‌ ಬ್ಯಾಟ್ಸ್‌ ಮನ್‌ ಜೋ ರೂಟ್‌ ತಮ್ಮ ಛಾತಿಗೆ ತಕ್ಕ ಆಟವಾಡುತ್ತ ಹೋದರು. ಅಪಾಯಕಾರಿ ಎಂದೇ ಗುರುತಿಸಲ್ಪಡುವ ರಾಯ್‌ 73 ರನ್ನಿಗೆ 61 ಎಸೆತ ತೆಗೆದುಕೊಂಡರು. ಇದರಲ್ಲಿ 12 ಬೌಂಡರಿಗಳು ಒಳಗೊಂಡಿದ್ದವು. ರೂಟ್‌ 95 ಎಸೆತ ಎದುರಿಸಿ 78 ರನ್‌ ಬಾರಿಸಿದರು. ಬೀಸಿದ್ದು 4 ಬೌಂಡರಿ, ಒಂದು ಸಿಕ್ಸರ್‌. ರೂಟ್‌ ಕಳೆದ 8 ಇನ್ನಿಂಗ್ಸ್‌ಗಳಲ್ಲಿ ಹೊಡೆದ 6ನೇ “50 ಪ್ಲಸ್‌’ ಮೊತ್ತ ಇದಾಗಿದೆ.

ಹೇಲ್ಸ್‌ (9), ಮಾರ್ಗನ್‌ (28), ಬಟ್ಲರ್‌ (31), ಅಲಿ (28) ಅವರಿಗೆ ಬ್ಯಾಟ್‌ ವಿಸ್ತರಿಸಲು ಸಾಧ್ಯವಾಗಲಿಲ್ಲ.

ರಹಾನೆ, ಪಾಂಡೆ, ಭುವಿಗೆ ಜಾಗವಿಲ್ಲ
ಪುಣೆ ಪಂದ್ಯಕ್ಕಾಗಿ ಭಾರತ ತಂಡದಿಂದ ಹೊರಗುಳಿದವ ರೆಂದರೆ ಬ್ಯಾಟ್ಸ್‌ಮನ್‌ಗಳಾದ ಅಜಿಂಕ್ಯ ರಹಾನೆ, ಮನೀಷ್‌ ಪಾಂಡೆ, ಸೀಮರ್‌ ಭುವನೇಶ್ವರ್‌ ಕುಮಾರ್‌ ಮತ್ತು ಲೆಗ್‌ಸ್ಪಿನ್ನರ್‌ ಅಮಿತ್‌ ಮಿಶ್ರಾ. ಇವರಲ್ಲಿ ರಹಾನೆ ದ್ವಿತೀಯ ಅಭ್ಯಾಸ ಪಂದ್ಯ ಗೆಲ್ಲಿಸಿಕೊಟ್ಟ ನಾಯಕನಾಗಿದ್ದರು. ಈ ಸಾಧನೆಯಿಂದ ಅವರು ಹನ್ನೊಂದರ ಬಳಗದಲ್ಲಿ, ಅದೂ ಆರಂಭಿಕನಾಗಿ ಸ್ಥಾನ ಪಡೆಯಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಈ ಜಾಗಕ್ಕೆ ಶಿಖರ್‌ ಧವನ್‌-ಕೆ.ಎಲ್‌. ರಾಹುಲ್‌ ಗಟ್ಟಿಗೊಂಡರು. ಇಂಗ್ಲೆಂಡ್‌, ಬ್ಯಾಟ್ಸ್‌ಮನ್‌ಗಳಾದ ಸ್ಯಾಮ್‌ ಬಿಲ್ಲಿಂಗ್ಸ್‌, ಜಾನಿ ಬೇರ್‌ಸ್ಟೊ, ವೇಗಿ ಲಿಯಮ್‌ ಪ್ಲಂಕೆಟ್‌ ಮತ್ತು ಆಲ್‌ರೌಂಡರ್‌ ಲಿಯಮ್‌ ಡಾಸನ್‌ ಅವರನ್ನು ಕೈಬಿಟ್ಟಿತು.

ಸ್ಕೋರ್‌ ಪಟ್ಟಿ
ಇಂಗ್ಲೆಂಡ್‌

ಜಾಸನ್‌ ರಾಯ್‌    ಸ್ಟಂಪ್ಡ್ ಧೋನಿ ಬಿ ಜಡೇಜ    73
ಅಲೆಕ್ಸ್‌ ಹೇಲ್ಸ್‌    ರನೌಟ್‌    9
ಜೋ ರೂಟ್‌    ಸಿ ಪಾಂಡ್ಯ ಬಿ ಬುಮ್ರಾ    78
ಇಯಾನ್‌ ಮಾರ್ಗನ್‌    ಸಿ ಧೋನಿ ಬಿ ಪಾಂಡ್ಯ    28
ಜಾಸ್‌ ಬಟ್ಲರ್‌    ಸಿ ಧವನ್‌ ಬಿ ಪಾಂಡ್ಯ    31
ಬೆನ್‌ ಸ್ಟೋಕ್ಸ್‌    ಸಿ ಯಾದವ್‌ ಬಿ ಬುಮ್ರಾ    62
ಮೊಯಿನ್‌ ಅಲಿ    ಬಿ ಯಾದವ್‌    28
ಕ್ರಿಸ್‌ ವೋಕ್ಸ್‌    ಔಟಾಗದೆ    9
ಡೇವಿಡ್‌ ವಿಲ್ಲಿ    ಔಟಾಗದೆ    10

ಇತರ        22
ಒಟ್ಟು  (50 ಓವರ್‌ಗಳಲ್ಲಿ 7 ವಿಕೆಟಿಗೆ)    350
ವಿಕೆಟ್‌ ಪತನ: 1-39, 2-108, 3-157, 4-220, 5-244, 6-
317, 7-336.

ಬೌಲಿಂಗ್‌:
ಉಮೇಶ್‌ ಯಾದವ್‌        7-0-63-1
ಹಾರ್ದಿಕ್‌ ಪಾಂಡ್ಯ        9-0-46-2
ಜಸ್‌ಪ್ರೀತ್‌ ಬುಮ್ರಾ        10-0-79-2
ರವೀಂದ್ರ ಜಡೇಜ        10-0-50-1
ಆರ್‌. ಅಶ್ವಿ‌ನ್‌        8-0-63-0
ಕೇದಾರ್‌ ಜಾಧವ್‌        4-0-23-0
ಯುವರಾಜ್‌ ಸಿಂಗ್‌        2-0-14-0 

ಭಾರತ
ಕೆ.ಎಲ್‌. ರಾಹುಲ್‌    ಬಿ ವಿಲ್ಲಿ    8
ಶಿಖರ್‌ ಧವನ್‌    ಸಿ ಅಲಿ ಬಿ ವಿಲ್ಲಿ    1
ವಿರಾಟ್‌ ಕೊಹ್ಲಿ    ಸಿ ವಿಲ್ಲಿ ಬಿ ಸ್ಟೋಕ್ಸ್‌    122
ಯುವರಾಜ್‌ ಸಿಂಗ್‌    ಸಿ ಬಟ್ಲರ್‌ ಬಿ ಸ್ಟೋಕ್ಸ್‌    15
ಎಂ.ಎಸ್‌. ಧೋನಿ    ಸಿ ವಿಲ್ಲಿ ಬಿ ಬಾಲ್‌    6
ಕೇದಾರ್‌ ಜಾಧವ್‌    ಸಿ ಸ್ಟೋಕ್ಸ್‌ ಬಿ ಬೆಲ್‌    120
ಹಾರ್ದಿಕ್‌ ಪಾಂಡ್ಯ    ಔಟಾಗದೆ    40
ರವೀಂದ್ರ ಜಡೇಜ    ಸಿ ರಶೀದ್‌ ಬಿ ಬಾಲ್‌    13
ಆರ್‌. ಅಶ್ವಿ‌ನ್‌    ಔಟಾಗದೆ    15

ಇತರ        16
ಒಟ್ಟು  (48.1 ಓವರ್‌ಗಳಲ್ಲಿ 7 ವಿಕೆಟಿಗೆ)    356
ವಿಕೆಟ್‌ ಪತನ: 1-13, 2-24, 3-56, 4-63, 5-263, 6-291, 7-318.

ಬೌಲಿಂಗ್‌:
ಕ್ರಿಸ್‌ ವೋಕ್ಸ್‌        8-0-44-0
ಡೇವಿಡ್‌ ವಿಲ್ಲಿ        6-0-47-2
ಜೇಕ್‌ ಬಾಲ್‌        10-0-67-3
ಬೆನ್‌ ಸ್ಟೋಕ್ಸ್‌        10-0-73-2
ಆದಿಲ್‌ ರಶೀದ್‌        5-0-50-0
ಮೊಯಿನ್‌ ಅಲಿ        6.1-0-48-0
ಜೋ ರೂಟ್‌        3-0-22-0

ಪಂದ್ಯಶ್ರೇಷ್ಠ: ಕೇದಾರ್‌ ಜಾಧವ್‌
2ನೇ ಪಂದ್ಯ: ಕಟಕ್‌ (ಜ. 19)

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.