ಪಟಾಕಿ ಹೊಡೆದವರಿಂದಲೇ ರಸ್ತೆ ಸ್ವಚ್ಛಗೊಳಿಸಿದ ಎಸ್ಪಿ!
Team Udayavani, Jan 14, 2017, 3:45 AM IST
ಚಿಕ್ಕಮಗಳೂರು: ರಸ್ತೆಯಲ್ಲಿ ಪಟಾಕಿ ಸಿಡಿಸಿದವರಿಂದಲೇ ಜಿಲ್ಲಾ ಪೊಲೀಸ್ ವರಿಷ್ಠ ಕೆ.ಅಣ್ಣಾಮಲೈ ರಸ್ತೆ ಸ್ವಚ್ಛ ಗೊಳಿಸಿದ ಅಪರೂಪದ ಪ್ರಸಂಗ ಶುಕ್ರವಾರ ನಗರದಲ್ಲಿ ನಡೆಯಿತು. ಜಿಲ್ಲಾ ಒಕ್ಕಲಿಗರ ಸಂಘದ ಶಾಲೆಯಲ್ಲಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಎಸ್.ಪಿ. ಅಣ್ಣಾಮಲೈ ತೆರಳುತ್ತಿದ್ದಾಗ ಐ.ಜಿ.ರಸ್ತೆಯಲ್ಲಿರುವ ನಾಗಲಕ್ಷ್ಮೀ ಚಿತ್ರಮಂದಿರದಲ್ಲಿ “ಲೀ’ ಕನ್ನಡ ಚಲನಚಿತ್ರ ಪ್ರದರ್ಶನ ನಡೆಯುತ್ತಿತ್ತು. ಅಭಿಮಾನಿಗಳು ಚಿತ್ರಮಂದಿರದ ಎದುರು ಪಟಾಕಿ ಸಿಡಿಸುತ್ತಿದ್ದರು.
ಇದನ್ನು ಗಮನಿಸಿದ ಅಣ್ಣಾಮಲೈ ತಮ್ಮ ವಾಹನ ನಿಲ್ಲಿಸಿ ಸ್ಥಳಕ್ಕೆ ತೆರಳಿದರು. ಪಟಾಕಿ ಸಿಡಿಸಲು ಅನುಮತಿ ನೀಡಿದ್ದು ಯಾರು? ಪಟಾಕಿ ಸಿಡಿಸಿ ನೀವು ಹೋಗುತ್ತೀರ, ರಸ್ತೆ ಸ್ವಚ್ಛ ಗೊಳಿಸುವವರು ಯಾರು ಎಂದು ಪ್ರಶ್ನಿಸಿದರು. ಅಭಿಮಾನಿಗಳು ನಾವು ಪಟಾಕಿ ಸಿಡಿಸಿಲ್ಲ ಎಂಬ ಸಮರ್ಥನೆಗೆ ಮುಂದಾದಾಗ ಅಸಮಾಧಾನ ವ್ಯಕ್ತಪಡಿಸಿದ ಅಣ್ಣಾಮಲೈ, ಸ್ಥಳದಲ್ಲಿದ್ದ ಸಂಚಾರಿ ಪೊಲೀಸರನ್ನು ಕರೆದು ಇವರನ್ನು ಠಾಣೆಗೆ ಕರೆದೊಯ್ಯಿರಿ ಎಂದು ಸೂಚಿಸಿದರು. ಆ ನಂತರ ಲೀ ಚಿತ್ರದ ಪೋಸ್ಟರ್ಗಳಿರುವ ಟೀ ಶರ್ಟ್ ಧರಿಸಿದ್ದವರನ್ನು ಕರೆದು ಕೂಡಲೇ ರಸ್ತೆ ಸ್ವಚ್ಛಗೊಳಿಸುವಂತೆ ಆದೇಶಿಸಿದರು. ಆ ನಂತರ ಅಭಿಮಾನಿಗಳು ರಸ್ತೆಯನ್ನು ಸ್ವಚ್ಛಗೊಳಿಸಿದರು.